ಕಲಬುರಗಿ: ಮಾದಕದ್ರವ್ಯ ಸಾಗಾಣಿಕೆ ಆರೋಪದಡಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಶಾಸಕ ಅಲ್ಲಮಪ್ರಭು ಪಾಟೀಲ್ ಅವರ ಆಪ್ತ ಲಿಂಗರಾಜ್ ಕಣ್ಣಿಯನ್ನು ಮಹಾರಾಷ್ಟ್ರದ ಕಲ್ಯಾಣ ಪೊಲೀಸರು ಬಂಧಿಸಿದ್ದಾರೆ.
ಹೌದು, ಕಲಬುರಗಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ್ ಕಣ್ಣಿ ಅವರನ್ನು ಥಾಣೆ ನಗರದಲ್ಲಿ ಮಾದಕದ್ರವ್ಯ ಮಾರಾಟದ ಆರೋಪದ ಮೇಲೆ ಬಂಧಿಸಲಾಗಿದೆ. ಬಂಧನ ಸಂದರ್ಭದಲ್ಲಿ 120 ನಿಷೇಧಿತ ಕೊಡೆನೈನ್ ಸಿರಪ್ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಪ್ರಕರಣವನ್ನು ಮಾದಕ ವಸ್ತುಗಳು ಮತ್ತು ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ (NDPS) ಅಡಿಯಲ್ಲಿ ಕಲ್ಯಾಣ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.
ಡ್ರಗ್ಸ್ ಕೇಸ್ನಲ್ಲಿ ಮಾಲಯಳಂನ ಇಬ್ಬರು ನಿರ್ದೇಶಕರ ಬಂಧನ
ಮಲಯಾಳಂ ಚಿತ್ರರಂಗದಲ್ಲಿ ಕಳೆದ ಕೆಲ ದಿನಗಳಿಂದ ನಟರು ಮತ್ತು ನಿರ್ದೇಶಕರ ಮೇಲೆ ಡ್ರಗ್ಸ್ ಸಂಬಂಧಿತ ಆರೋಪಗಳು ಬೆಳಕಿಗೆ ಬರುತ್ತಿವೆ. ಇದೀಗ ಮಲಯಾಳಂ ಚಿತ್ರರಂಗದ ಇಬ್ಬರು ಪ್ರತಿಭಾವಂತ ನಿರ್ದೇಶಕರನ್ನು ಕೇರಳ ಪೊಲೀಸರು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿದ್ದಾರೆ.
‘ಉಂಡ’, ‘ಲವ್’, ‘ತಲ್ಲುಮಾಲ’ ಹಾಗೂ ಇತ್ತೀಚೆಗೆ ಬಿಡುಗಡೆಯಾದ ‘ಅಲಪುಳಲ್ ಜಿಮ್ಕಾನಾ’ ಸಿನಿಮಾಗಳನ್ನು ನಿರ್ದೇಶನ ಮಾಡಿ ಖ್ಯಾತಿ ಪಡೆದ ಖಲೀದ್ ರೆಹಮಾನ್ ಹಾಗೂ ‘ತಮಾಶಾ’, ‘ಭೀಮಂಟೆ ವಾಳಿ’ ಸಿನಿಮಾಗಳ ಮೂಲಕ ಹೆಸರು ಮಾಡಿರುವ ಹಶ್ರಫ್ ಹಮ್ಜಾ ಬಂಧಿತ ನಿರ್ದೇಶಕರಾಗಿದ್ದಾರೆ. ಈ ಇಬ್ಬರೂ ನಿರ್ದೇಶಕರು ಕೊಚ್ಚಿಯಲ್ಲಿರುವ ನಿರ್ದೇಶಕ ಸಮೀರ್ ತಾಹಿರ್ ಅವರ ಅಪಾರ್ಟ್ಮೆಂಟ್ನಲ್ಲಿ ಡ್ರಗ್ಸ್ ಸೇವನೆ ಮಾಡುತ್ತಿದ್ದಾಗ ಪೊಲೀಸರ ದಾಳಿಗೆ ಸಿಕ್ಕಿಬಿದ್ದಿದ್ದಾರೆ.
ಶನಿವಾರ ತಡರಾತ್ರಿ 3 ಗಂಟೆಗೆ ನಡೆದ ದಾಳಿಯಲ್ಲಿ, ಖಲೀದ್ ರೆಹಮಾನ್, ಹಶ್ರಫ್ ಹಮ್ಜಾ ಮತ್ತು ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಪೊಲೀಸರಿಗೆ ಈ ಸಂದರ್ಭ 1.5 ಗ್ರಾಂ ಹೈಡ್ರೋ ಗಾಂಜಾ ಸಿಕ್ಕಿದ್ದು, ಇದನ್ನು ಜಪ್ತಿ ಮಾಡಲಾಗಿದೆ. ಬಂಧಿತರನ್ನು ಭಾನುವಾರ ಬೆಳಗ್ಗೆ 7 ಗಂಟೆಗೆ ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಲಾಗಿದೆ. ಮೂವರ ವಿರುದ್ಧ ಡ್ರಗ್ಸ್ ಸೇವನೆ ಪ್ರಕರಣ ದಾಖಲಾಗಿದೆ. ಹೈಡ್ರೋ ಗಾಂಜಾದ ಮೂಲದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಹಿಂದೆ, ನಟ ಶೈನ್ ಟಾಮ್ ಚಾಕೊ ಕೂಡ ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿದ್ದರು. ಜಾಮೀನು ಮೇಲೆ ಬಿಡುಗಡೆಯಾದ ಬಳಿಕ, ಚಾಕೊ ಕೇರಳ ಪೊಲೀಸ್ ಅಧಿಕಾರಿಗಳಿಗೆ ಮಲಯಾಳಂ ಚಿತ್ರರಂಗದಲ್ಲಿ ಡ್ರಗ್ಸ್ ಬಳಕೆ ಸಂಬಂಧಿತ ಮಾಹಿತಿ ನೀಡಲಾಗಿದೆ. ಖಲೀದ್ ರೆಹಮಾನ್ ನಿರ್ದೇಶನದ ‘ತಲ್ಲುಮಾಲ’ ಸಿನಿಮಾದಲ್ಲಿ ಶೈನ್ ಟಾಮ್ ಚಾಕೊ ಪ್ರಮುಖ ಪಾತ್ರವಹಿಸಿದ್ದರು.
ಮಲಯಾಳಂ ಚಿತ್ರರಂಗದಲ್ಲಿ ಈ ಹಿಂದೆ ಸಹ ಡ್ರಗ್ಸ್ ಪ್ರಕರಣಗಳು ಬೆಳಕಿಗೆ ಬಂದಿದ್ದವು. ನಟ ಶೇನ್ ನಿಗಮ್ ಮತ್ತು ಶ್ರೀನಾಥ್ ಬಾಸಿ ಅವರ ಮೇಲೆ ಡ್ರಗ್ಸ್ ಸೇವನೆ ಆರೋಪದಿಂದಾಗಿ ಚಿತ್ರರಂಗದಿಂದ ತಾತ್ಕಾಲಿಕ ನಿಷೇಧ ಹೇರಲಾಗಿತ್ತು.





