ಬೆಂಗಳೂರಿನಲ್ಲಿ ಮತ್ತೊಮ್ಮೆ ರೋಡ್ ರೇಜ್ ಅತಿರೇಕದ ವರ್ತನೆ ಭೀಕರ ರೂಪ ತಾಳಿದೆ. ಸೈಡ್ ಕೊಡುವ ಸಣ್ಣ ವಿಚಾರಕ್ಕೆ ಮೂವರು ದುಷ್ಕರ್ಮಿಗಳು ಒಟ್ಟಾಗಿ 17 ವರ್ಷದ ಪಿಯುಸಿ ವಿದ್ಯಾರ್ಥಿಯ ಮೇಲೆ ದಾಳಿ ನಡೆಸಿ ಚಾಕುವಿನಿಂದ ಇರಿದ ಘಟನೆ ನಗರದಲ್ಲಿ ನಡೆದಿದೆ. ಯುವಕನ ಪ್ರಾಣ ಉಳಿದಿದ್ದು, ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಘಟನೆಯ ವಿವರ :
ದ್ವಿತೀಯ ಪಿಯುಸಿ ಓದುತ್ತಿರುವ 17 ವರ್ಷದ ಯುವಕ ತನ್ನ ಸ್ನೇಹಿತರೊಂದಿಗೆ ಜ್ಯೂಸ್ ಅಂಗಡಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಬೈಕ್ ಟ್ಯಾಕ್ಸಿ ಓಡಿಸುತ್ತಿದ್ದ ಆತನ ಬೈಕ್ಗೆ ಹಿಂದಿನಿಂದ ಬಂದ ಇನ್ನೊಬ್ಬ ಬೈಕ್ ಸವಾರ ಹಲವು ಬಾರಿ ಹಾರ್ನ್ ಮಾಡಿ ಸೈಡ್ ಕೊಡುವಂತೆ ಆಗ್ರಹಿಸಿದ್ದಾನೆ. ವಿದ್ಯಾರ್ಥಿ ದಾರಿ ಬಿಟ್ಟುಕೊಟ್ಟರೂ ಸುಮ್ಮನಿರದ ಸವಾರ ಜಗಳಕ್ಕಿಳಿದನು.
ಇಬ್ಬರು ದುಷ್ಕರ್ಮಿಗಳು ಸೇರಿ ವಿದ್ಯಾರ್ಥಿಯ ಬೈಕ್ ಅನ್ನು ಅಡ್ಡಗಟ್ಟಿ, ಕೀಲಿ ಕಸಿದುಕೊಂಡು ಅವನನ್ನು ಸಮೀಪದ ಬಾರ್ ಬಳಿ ಕರೆದೊಯ್ದು ಥಳಿಸಿದ್ದಾರೆ. ಸಂಬಂಧಿಕರು ಮಧ್ಯಪ್ರವೇಶಿಸಿದ್ದರಿಂದ ಮೊದಲು ಪರಾರಿಯಾದ ದುಷ್ಕರ್ಮಿಗಳು, ಕೆಲವು ನಿಮಿಷಗಳ ನಂತರ ಮತ್ತೆ ಬಂದು ಯುವಕನನ್ನು ರಸ್ತೆ ಬದಿಗೆ ಎಳೆದುಕೊಂಡು ಎದೆ, ಕುತ್ತಿಗೆ ಮತ್ತು ಬೆನ್ನಿಗೆ ಚಾಕುವಿನಿಂದ ಭೀಕರವಾಗಿ ಇರಿದಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವಕನನ್ನು ಸ್ಥಳೀಯರು ತಕ್ಷಣವೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯಕೀಯ ಮೂಲಗಳ ಪ್ರಕಾರ ಅವನ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ.
ಪೊಲೀಸ್ ಕ್ರಮ
ಗಾಯಾಳು ವಿದ್ಯಾರ್ಥಿಯ ಪೋಷಕರು ನೀಡಿದ ದೂರಿನ ಮೇರೆಗೆ ಪೊಲೀಸರು ಕೊಲೆಯತ್ನ ಸೇರಿದಂತೆ ವಿವಿಧ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಿದ್ದಾರೆ. ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಲು ವಿಶೇಷ ತಂಡ ರಚಿಸಿ ಜಾಲ ಬೀಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಸಣ್ಣಪುಟ್ಟ ರಸ್ತೆ ವಿವಾದಗಳು ಮಾರಕಾಸ್ತ್ರಗಳ ಬಳಕೆಯವರೆಗೆ ತಲುಪುತ್ತಿರುವುದು ನಗರದ ಜನರಲ್ಲಿ ತೀವ್ರ ಆತಂಕವನ್ನು ಹುಟ್ಟಿಸಿದೆ.





