ಅಪ್ಪು ನಿಧನದ ಬಳಿಕ ಯಾವುದೇ ಸ್ಟಾರ್ಗೆ ಅನಾರೋಗ್ಯ ಅಂದಾಕ್ಷಣ ಫ್ಯಾನ್ಸ್ ಸಿಕ್ಕಾಪಟ್ಟೆ ಪ್ಯಾನಿಕ್ ಆಗ್ತಾರೆ. ಅದು ಸರ್ವೇ ಸಾಮಾನ್ಯ. ಅದರಲ್ಲೂ ಕನ್ನಡದ ಜೊತೆ ಪರಭಾಷೆಗಳಲ್ಲೂ ಛಾಪು ಮೂಡಿಸಿರೋ ಸೂಪರ್ ಸ್ಟಾರ್ ಉಪೇಂದ್ರ ಆನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಅಂದ್ರೆ ಆತಂಕ ಮನೆ ಮಾಡದೆ ಇರುತ್ತದೆಯೇ..? ಇಷ್ಟಕ್ಕೂ ಉಪ್ಪಿಗೆ ಏನಾಗಿತ್ತು..? ಈಗ ಹೇಗಿದ್ದಾರೆ ಅನ್ನೋದ್ರ ಕಂಪ್ಲೀಟ್ ಕಹಾನಿ ಇಲ್ಲಿದೆ.
ರಿಯಲ್ ಸ್ಟಾರ್, ಸೂಪರ್ ಸ್ಟಾರ್ ಉಪೇಂದ್ರ ನಟರಾಗಿ ಅಷ್ಟೇ ಅಲ್ಲದೆ ಭಾರತೀಯ ಚಿತ್ರರಂಗದ ಬೆಸ್ಟ್ ಡೈರೆಕ್ಟರ್ಗಳ ಸಾಲಿನಲ್ಲಿ ಹೆಸರು ಮಾಡಿರೋ ಮಾಸ್ಟರ್ಮೈಂಡ್. ಕ್ರಿಯೇಟಿವಿಟಿಗೆ ಇವರು ಕೇರ್ ಆಫ್ ಅಡ್ರೆಸ್. ಇವರ ಆಲೋಚನಾ ಲಹರಿ ಕಂಪ್ಯೂಟರ್ಗಳನ್ನ ಮೀರಿದ್ದು. ಹತ್ತು ವರ್ಷಗಳ ನಂತರ ಭವಿಷ್ಯದಲ್ಲಿ ಏನಾಗಲಿದೆ ಅನ್ನೋದನ್ನ ಇಂದೇ ತನ್ನ ಸಿನಿಮಾಗಳಲ್ಲಿ ಅಳವಡಿಸಿರೋ ಮಹಾನ್ ಮಾಂತ್ರಿಕ.
ಇವರ ನಟನೆ, ನಿರ್ದೇಶನ, ನಿರ್ಮಾಣ, ಬರವಣಿಗೆ ಹಾಗೂ ಗಾಯನಕ್ಕೆ ಲಕ್ಷಾಂತರ ಅಲ್ಲ ಕೋಟ್ಯಂತರ ಮಂದಿ ಫ್ಯಾನ್ಸ್ ಇದ್ದಾರೆ. ಫಾಲೋವರ್ಸ್ ಇದ್ದಾರೆ. ಅಲ್ಲದೆ ಒಂದೊಳ್ಳೆ ಕುಟುಂಬವಿದೆ. ಪತ್ನಿ ಪ್ರಿಯಾಂಕಾ ಉಪೇಂದ್ರ ಕೂಡ ನಟಿ. ಐಶ್ವರ್ಯ- ಆಯುಷ್ ಅನ್ನೋ ಮಗಳು-ಮಗ ಕೂಡ ಇರೋ 57 ವರ್ಷದ ಉಪ್ಪಿಗೆ ಅನಾರೋಗ್ಯ ಅಂದ್ರೆ ಫ್ಯಾನ್ಸ್ ಜೊತೆ ಕುಟುಂಬಸ್ಥರು, ಆಪ್ತರು, ಮಾಧ್ಯಮಗಳು ಹಾಗೂ ಕನ್ನಡ ಕಲಾಭಿಮಾನಿಗಳು ಆತಂಕಕ್ಕೆ ಒಳಗಾಗುತ್ತಾರೆ.
ಅದರಲ್ಲೂ ರಾಜರತ್ನ ಡಾ. ಪುನೀತ್ ರಾಜ್ಕುಮಾರ್ ತೀವ್ರ ಹೃದಯಾಘಾತದಿಂದ ಇನ್ನಿಲ್ಲವಾದ ಬಳಿಕ ಯಾವುದೇ ಸ್ಟಾರ್ ನಟನಿಗೆ ಹುಷಾರಿಲ್ಲ ಅಂದ್ರೆ ಜನ ಪ್ಯಾನಿಕ್ ಆಗ್ತಾರೆ. ಸದ್ಯ ನಿನ್ನೆ ಉಪೇಂದ್ರ ಅವರ ವಿಚಾರದಲ್ಲೂ ಆದೇ ಆಯ್ತು. ಹೌದು.. ನೆಗಡಿ ಜೊತೆಗೆ ಗ್ಯಾಸ್ಟ್ರಿಕ್ ಸಮಸ್ಯೆ ಎದುರಿಸುತ್ತಿರೋ ಉಪ್ಪಿಗೆ ನಿನ್ನೆ ಮಧ್ಯಾಹ್ನದ ಊಟದ ಬಳಿಕ ಎದೆಯಲ್ಲಿ ಉರಿ ಕಾಣಿಸಿಕೊಂಡಿದೆ. ಅಲ್ಲದೆ ಉಸಿರಾಟ ತೊಂದರೆ ಕೂಡ ಆಗಿದೆ. ಕೂಡಲೇ ಮನೆಯಲ್ಲಿದ್ದ ಪ್ರಿಯಾಂಕಾ ಉಪೇಂದ್ರ ಹಾಗೂ ಹಿತೈಷಿಗಳು ಉಪ್ಪಿಯನ್ನ ಯಶವಂತಪುರದಲ್ಲಿರೋ ಸ್ಪರ್ಶ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ವೈದ್ಯರು ತಪಾಸಣೆ ಮಾಡಿದ ಬಳಿಕ ಅದು ಅಸಿಡಿಟಿಯಿಂದ ಹೀಗಾಗಿರೋದು ಪತ್ತೆಯಾಗಿದೆ. ಕೂಡಲೇ ಇಸಿಜಿ, ಎಕೋ ಸೇರಿದಂತೆ ಎಲ್ಲಾ ಟೆಸ್ಟ್ಗಳನ್ನ ಮಾಡಿ ಆರೋಗ್ಯವಾಗಿರೋ ರಿಯಲ್ ಸ್ಟಾರ್ನ ಮನೆಗೆ ಕಳುಹಿಸಿದ್ದಾರೆ. ಈ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರ ಆಗ್ತಿದ್ದಂತೆ ಉಪ್ಪಿ ಫ್ಯಾನ್ಸ್ ಸಾಕಷ್ಟು ಆತಂಕಕ್ಕೆ ಒಳಗಾದರು. ಅದಕ್ಕೆ ಸ್ವತಃ ಉಪ್ಪಿಯೇ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ, ನಾನು ಆರೋಗ್ಯವಾಗಿದ್ದೇನೆ. ಯಾವುದೇ ಊಹಾಪೋಹಗಳಿಗೆ ಕಿವಿಗೊಡಬೇಡಿ, ನಿಮ್ಮ ಪ್ರೀತಿ, ಕಾಳಜಿಗೆ ಧನ್ಯವಾದ ಅಂತ ಸ್ಪಷ್ಟನೆ ನೀಡಿದ್ದಾರೆ.
ಅಂದಹಾಗೆ ಡಸ್ಟ್ನಲ್ಲಿ ಕೆಲಸ ಮಾಡ್ತಿದ್ದ ಉಪೇಂದ್ರ ಅವ್ರಿಗೆ ಈ ಹಿಂದೆ ಯುಐ ಸಿನಿಮಾದ ಶೂಟಿಂಗ್ ವೇಳೆ ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಒಮ್ಮೆ ಉಸಿರಾಟ ತೊಂದರೆಯಾಗಿತ್ತು. ಕಫ ಹೆಚ್ಚಾಗಿದ್ದ ಕಾರಣ ಅವ್ರಿಗೆ ಹಾಗಾಗಿತ್ತು ಅನ್ನೋದನ್ನ ವೈದ್ಯರು ಸ್ಪಷ್ಟಪಡಿಸಿದ್ದರು. ಅದ್ರಂತೆ ಈ ಬಾರಿಯೂ ಅಸಿಡಿಟಿ ಹಾಗೂ ಗ್ಯಾಸ್ಟ್ರಿಕ್ನಿಂದ ಉಪ್ಪಿ ಆರೋಗ್ಯ ತಪ್ಪಿದ್ದರಷ್ಟೇ.
ಶಿವಣ್ಣ ಹಾಗೂ ರಾಜ್ ಬಿ ಶೆಟ್ಟಿ ಜೊತೆ 45 ಸಿನಿಮಾ ಮಾಡಿರೋ ಉಪೇಂದ್ರ, ಅದ್ರ ಪ್ರಮೋಷನ್ಸ್ಗಾಗಿ ದೇಶ ಸುತ್ತಿ ಬಂದರು. ಅಲ್ಲದೆ, ತಲೈವಾ ರಜನೀಕಾಂತ್ರ ಕೂಲಿ ಸಿನಿಮಾದಲ್ಲಿ ಕೂಡ ಪ್ರಮುಖ ಪಾತ್ರವೊಂದರಲ್ಲಿ ಬಣ್ಣ ಹಚ್ಚಿ ಬಂದಿದ್ದಾರೆ. ಈ ಹಿಂದೆ ಸನ್ ಆಫ್ ಸತ್ಯಮೂರ್ತಿ ಅನ್ನೋ ಅಲ್ಲು ಅರ್ಜುನ್ರ ತೆಲುಗು ಸಿನಿಮಾದಲ್ಲಿ ನಟಿಸಿ, ವಿಲನ್ ಖದರ್ ತೋರಿದ್ದ ಉಪ್ಪಿ, ಸದ್ಯ ಮತ್ತೊಂದು ಬಿಗ್ ಬಜೆಟ್ ತೆಲುಗು ಸಿನಿಮಾದಲ್ಲಿ ನಟಿಸೋದು ಬಹುತೇಕ ಖಚಿತವಾಗಿದೆ ಎನ್ನಲಾಗ್ತಿದೆ. ಅದೇನೇ ಇರಲಿ, ಅವರು ಆರೋಗ್ಯವಾಗಿದ್ದಾರೆ ಅನ್ನೋದೇ ಸಮಾಧಾನ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್