ಶ್ರಮ ಮತ್ತು ಹಣದಿಂದ ಮಾತ್ರ ಸಿನಿಮಾ ಆಗೋಕೆ ಸಾಧ್ಯವಿಲ್ಲ. ಕೆಲವೊಮ್ಮೆ ತ್ಯಾಗ, ಬಲಿದಾನಗಳಿಂದಲೂ ಅವು ನಿರ್ಮಾಣ ಆಗುತ್ತವೆ. ಸದ್ಯ ಇಂದು ರಿಲೀಸ್ ಆಗಿರೋ ‘ದಿ ರೈಸ್ ಆಫ್ ಅಶೋಕ’ ಚಿತ್ರ ನೀನಾಸಂ ಸತೀಶ್ ಕರಿಯರ್ನಲ್ಲಿ ಹೊಸ ಅಧ್ಯಾಯ ಬರೆದಿದೆ. ಸತೀಶ್ ಸಾಮರ್ಥ್ಯಕ್ಕೂ ಮೀರಿದ ಸಿನಿಮಾದಿಂದ ಚಿತ್ರಪ್ರೇಮಿಗಳ ಹೃದಯ ಸಾಮ್ರಾಟನಾಗಿದ್ದಾರೆ ಅಶೋಕ.
ದಿ ರೈಸ್ ಆಫ್ ಅಶೋಕ.. ಒಂದಷ್ಟು ಏರಿಳಿತಗಳ ನಡುವೆಯೂ ತೆರೆಕಂಡ ಕನ್ನಡದ ಬಹುನಿರೀಕ್ಷಿತ ಹಾಗೂ ಭರವಸೆಯ ಸಿನಿಮಾ. ಅಭಿನಯ ಚತುರ ನೀನಾಸಂ ಸತೀಶ್ ನಟಿಸಿ, ನಿರ್ಮಿಸಿರೋ ಈ ಸಿನಿಮಾ ಬರೀ ಸಿನಿಮಾ ಅಲ್ಲ. ಸಮಾಜದ ಅಂಕು ಡೊಂಕುಗಳನ್ನ ತಿದ್ದುವ ದೃಶ್ಯಕಾವ್ಯವಾಗಿ ಹೊರಹೊಮ್ಮಿದೆ. ನಿರ್ದೇಶಕ ವಿನೋದ್ ಧೋಂಡಾಳೆ ಆತ್ಮಹತ್ಯೆಯ ನಂತರ ಕೂಡ ಈ ಸಿನಿಮಾದ ಆಶಯ ಈಡೇರಿದೆ ಅಂದ್ರೆ ಆ ತಂಡದ ಸಂಕಲ್ಪ, ಶ್ರಮಕ್ಕೆ ಸಂದ ಪ್ರತಿಫಲವಿದು.
ಸಾಮರ್ಥ್ಯ ಮೀರಿದ ಸತೀಶ್..
ಚಿತ್ರಪ್ರೇಮಿಗಳ ಹೃದಯ ಸಾಮ್ರಾಟ ಅಶೋಕ
ಅಸಮಾನತೆ ವಿರುದ್ಧ ಹೋರಾಡುವ ರೆಬೆಲಿಯನ್ ಕಥಾನಕ
ಸ್ವತಂತ್ರ್ಯ ಭಾರತದಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕಿತಾದ್ರೂ ಜಾತಿ ವ್ಯವಸ್ಥೆಯ ಸಂಕೋಲೆಯಿಂದ ಜನಕ್ಕೆ ಬಿಡುಗಡೆ ಭಾಗ್ಯ ಸಿಗಲೇ ಇಲ್ಲ. ಅಂಥದ್ದೊಂದು ಕಾಲಘಟ್ಟದಲ್ಲಿ ಆವರತ್ತಿ ಅನ್ನೋ ಊರಲ್ಲಿ ನಡೆಯೋ ಕಥೆ ಈ ಸಿನಿಮಾ. ಕ್ಷೌರಿಕರ ಬೀದಿ, ಅಗ್ರಹಾರ ಬೀದಿಗಳಿರೋ ಅಂತಹ ಆ ಊರಲ್ಲಿ ಕುಟ್ಟಿ ಬಾಬ್ಜಿ ಅನ್ನೋ ರಾಕ್ಷಸ. ಮುಡಿಕಟ್ಟೆಯಲ್ಲಿ ಕ್ಷೌರಿಕರ ಶ್ರಮ, ಭಕ್ತಾದಿಗಳ ಕೂದಲನ್ನೇ ಬಂಡವಾಳ ಮಾಡಿಕೊಂಡು, ತಾನು ತನ್ನ ಮಗ ಇಬ್ಬರೂ ದೊಡ್ಡ ಸಾಮ್ರಾಜ್ಯ ಕಟ್ಟಿಕೊಂಡು, ಇಡೀ ಊರನ್ನ ತಮ್ಮ ಕಪಿಮುಷ್ಠಿಯಲ್ಲಿ ಇಟ್ಟಿಕೊಂಡಿರ್ತಾರೆ.
ಅದ್ಯಾವುದರ ಗೋಜಲಗ ಇಲ್ಲದೆ, ಅದೇ ಮುಡಿಕಟ್ಟೆಯಲ್ಲಿ ಕೆಲಸ ಮಾಡುವಂತಹ ಗಂಗರಾಜು ಅನ್ನೋರ ಮಗ ಅಶೋಕ ಚೆನ್ನಾಗಿ ಓದಿಕೊಂಡು ಆಫೀಸರ್ ಆಗುವ ಮಟ್ಟಕ್ಕೆ ಬೆಳೆಯುತ್ತಾನೆ. ಹೆಸರಲ್ಲಷ್ಟೇ ಅಶೋಕ ಅಲ್ಲ, ತನ್ನ ಬುದ್ಧಿವಂತಿಕೆಯಿಂದಲೂ ಆತ ಸಾಮ್ರಾಟನಷ್ಟೇ ಪವರ್ಫುಲ್ ಅನ್ನೋದನ್ನ ಈ ಚಿತ್ರ ತೋರಿಸುತ್ತೆ. ಆತ ಆ ಇಡೀ ಸಮುದಾಯಕ್ಕಾಗಿ ನಿಂತುಕೊಂಡು, ಅವರ ಬದುಕುಗಳನ್ನ ಬದಲಿಸುವಲ್ಲಿ ಆತನ ಓದನ್ನ ಹೇಗೆ ಬಳಸಿಕೊಳ್ತಾನೆ ಅನ್ನೋದೇ ಸಿನಿಮಾ.
ಆವರತ್ತಿ ಮುಡಿಕಟ್ಟೆ.. ಕುಟ್ಟಿ ಬಾಬ್ಜಿ v/s ಕ್ಷೌರಿಕ ಸಮುದಾಯ
ನಂಜನಗೂಡಿನ ನೈಜ ಕಥೆಗೆ ಸಿನಿಮಾ ರೂಪ ಕೊಟ್ಟ ಸತೀಶ್
ಕುಟ್ಟಿ ಬಾಬ್ಜಿ ಆಗಿ ಸಂಪತ್ ಅಬ್ಬರಿಸಿ ಬೊಬ್ಬರಿದಿದ್ದಾರೆ. ಆತನ ಮಗನಾಗಿ ಯಶ್ ಶೆಟ್ಟಿ ಮೊದಲ ನೋಟದಲ್ಲೇ ಟೈಗರ್ ಪ್ರಭಾಕರ್ನ ನೆನಪಿಸ್ತಾರೆ. ಗೋಪಾಲಕೃಷ್ಣ ದೇಶಪಾಂಡೆ, ಬಿ ಸುರೇಶ್ ಪಾತ್ರಗಳು ಚಿತ್ರದಲ್ಲಿ ಗಮನ ಸೆಳೆಯುತ್ತವೆ. ಕುರುವತ್ತಿ ಯಾಲೆಸ್ವಾಮಿ ಮಗಳು ಅಂಬಿಕಾ ಪಾತ್ರದಲ್ಲಿ ಸಪ್ತಮಿ ಕಾಣಸಿಗಲಿದ್ದು, ಕ್ಲೈಮ್ಯಾಕ್ಸ್ನಲ್ಲಿ ಆಕೆ ತೆಗೆದುಕೊಂಡ ಆ ನಿರ್ಧಾರ ನಿಜಕ್ಕೂ ಕಣ್ಣಲ್ಲಿ ನೀರು ತರಿಸುತ್ತೆ. ಜಿಲ್ಲಾಧಿಕಾರಿಯಾಗಿ ಆರ್ಮುಗಂ ರವಿಶಂಕರ್ ಗಮನಾರ್ಹ ಅಭಿನಯ ನೀಡಿದ್ದಾರೆ
ನಿರ್ದೇಶಕರನ್ನ ಕಳೆದುಕೊಂಡು ತಾಯಿ ಇಲ್ಲದ ತಬ್ಬಲಿಯಂತಾದ ನೀನಾಸಂ ಸತೀಶ್, ತಮಗಿರೋ ಸಿನಿಮೋತ್ಸಾಹದಿಂದ ಈ ಸಿನಿಮಾನ ದಡ ಸೇರಿಸೋಕೆ ಸಾಕಷ್ಟು ಅವಮಾನ, ಅಪಮಾನಗಳನ್ನ ಎದುರಿಸಿದ್ರು. ಟಿಕೆ ದಯಾನಂದ್ ಬರೆದ ಕಥೆಗೆ ಇಡೀ ಟೀಂ ಸ್ಕ್ರೀನ್ ಪ್ಲೇ ಮಾಡಿಕೊಂಡು ಬೆಳ್ಳಿತೆರೆಗೆ ತಂದಿದೆ. ಇನ್ನೂ ಶೇಕಡಾ 20 ರಷ್ಟು ಶೂಟಿಂಗ್ ಬಾಕಿ ಇರುವಂತೆ ನಿರ್ದೇಶಕ ವಿನೋದ್ ಧೋಂಡಾಳೆ ತೀರಿಕೊಂಡರೂ ಸಹ ಸಿನಿಮಾನ ಪ್ರೇಕ್ಷಕರ ಮುಂದೆ ತರೋಕೆ ಹರಸಾಹಸ ಮಾಡಿದ್ದಾರೆ.
ಗೀತ ರಚನಕಾರರಾಗಿ ಸತೀಶ್ ತಮ್ಮಲ್ಲಿರೋ ಪಾಂಡಿತ್ಯಕ್ಕೆ ಸಾಕ್ಷಿ ಆಗಿದ್ದಾರೆ. ಇನ್ನೂ ಈ ರೀತಿಯ ಬಿಗ್ ಸ್ಕೇಲ್, ಬಿಗ್ ಬಜೆಟ್ ಮಾಸ್ ಮೂವಿಗೆ ಪೂರ್ಣಚಂದ್ರ ತೇಜಸ್ವಿ ಸಂಗೀತ ಹಾಗೂ ಹಿನ್ನೆಲೆ ಸಂಗೀತವನ್ನ ಮೆಚ್ಚುವಂತೆ ನೀಡಿದ್ದಾರೆ. ಚಿತ್ರಕಥೆಯಲ್ಲಿ ಎಡವಿರೋ ತಂಡ, ಮುಂದೆ ಏನಾಗುತ್ತೆ ಅನ್ನೋದನ್ನ ಊಹಿಸುವಂತೆ ಸಿನಿಮಾನ ಕಟ್ಟಿದ್ದಾರೆ. ಅದೊಂದು ಬಿಟ್ಟರೆ ಕನ್ನಡ ಚಿತ್ರರಂಗದ ಮಟ್ಟಿಗೆ ಇದೊಂದು ಅದ್ಭುತ ಪ್ರಯೋಗ. ಕನ್ನಡದ ಜೊತೆ ತೆಲುಗಿನಲ್ಲೂ ಇಂದು ತೆರೆಕಂಡಿದ್ದು, ಸದ್ಯದಲ್ಲೇ ತಮಿಳಲ್ಲಿ ತೆರೆಗಪ್ಪಳಿಸಲಿದೆ. ಅರಬ್ ದೇಶಗಳಲ್ಲೂ ಚಿತ್ರತಂಡ ಈ ಸಿನಿಮಾನ ತೆರೆಗೆ ತರೋ ಧಾವಂತದಲ್ಲಿದೆ.
ಇನ್ನೂ ಸಿನಿಮಾ ರಿಲೀಸ್ಗೂ ಮೊದಲೇ ಸ್ಪೆಷಲ್ ಪ್ರೀಮಿಯರ್ ಶೋನಲ್ಲಿ ದಿ ರೈಸ್ ಆಫ್ ಅಶೋಕ ಕಣ್ತುಂಬಿಕೊಂಡ ಚಿತ್ರರಂಗದ ತಾರೆಯರು ಸಿನಿಮಾ ಹಾಗೂ ಅದಕ್ಕಾಗಿ ಸತೀಶ್ ಹಾಕಿರೋ ಎಫರ್ಟ್ಗಳನ್ನ ಕೊಂಡಾಡಿದ್ರು. ಒಟ್ಟಾರೆ ಲ್ಯಾಂಡ್ಲಾರ್ಡ್ ಬಳಿಕ ಸ್ಯಾಂಡಲ್ವುಡ್ ದುನಿಯಾಗೆ ಬಂದ ಮತ್ತೊಂದು ರೆಬೆಲಿಯನ್ ಮೂವಿ ಇದಾಗಿದೆ. ಇದು ರೈಸ್ ಆಫ್ ಅಶೋಕ ಇರಬಹುದು. ಆದ್ರೆ ಮಾಸ್ ಹೀರೋ ಆಗಿ ದಿ ರೈಸ್ ಆಫ್ ಸತೀಶ್ ಅಂದ್ರೆ ತಪ್ಪಾಗಲ್ಲ.





