ಭಾರತೀಯ ಚಿತ್ರರಂಗದಲ್ಲಿ ಗಂಭೀರ ಸಮಸ್ಯೆಗಳು ತಲೆದೋರಿವೆ. ಮಲಯಾಳಂ ಚಿತ್ರರಂಗದ ಪ್ರದರ್ಶಕರು ಈಗಾಗಲೇ ಪ್ರತಿಭಟನೆ ಘೋಷಿಸಿದ್ದು, ಶೀಘ್ರವೇ ಎಲ್ಲ ಚಿತ್ರರಂಗದ ಚಟುವಟಿಕೆಗಳು ಸ್ಥಗಿತಗೊಳ್ಳಲಿವೆ. ಇದರ ಜೊತೆಗೆ, ದೇಶದ ಅತ್ಯಂತ ಲಾಭದಾಯಕ ಚಿತ್ರರಂಗವೆಂದೇ ಖ್ಯಾತಿಯಾಗಿರುವ ತೆಲುಗು ಚಿತ್ರರಂಗದಲ್ಲಿಯೂ ಸಮಸ್ಯೆಗಳು ಶುರುವಾಗಿವೆ. ತೆಲುಗು ಸಿನಿಮಾ ಪ್ರದರ್ಶಕರು ಜೂನ್ 1 ರಿಂದ ಚಿತ್ರಮಂದಿರಗಳನ್ನು ಬಂದ್ ಮಾಡುವುದಾಗಿ ಘೋಷಿಸಿದ್ದಾರೆ.
ತೆಲುಗು ಚಿತ್ರರಂಗದಲ್ಲಿ ಸತತ ನಷ್ಟ
ತೆಲುಗು ಚಿತ್ರರಂಗವು ಭಾರತದಲ್ಲಿ ಅತಿ ಹೆಚ್ಚು ಲಾಭ ಗಳಿಸುವ ಚಿತ್ರರಂಗವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಸಿನಿಮಾಗಳು ಸತತವಾಗಿ ವಿಫಲವಾಗುತ್ತಿವೆ. ಇದರಿಂದಾಗಿ ಸಿನಿಮಾ ವಿತರಕರು ಮತ್ತು ಪ್ರದರ್ಶಕರು ದೊಡ್ಡ ಪ್ರಮಾಣದ ನಷ್ಟವನ್ನು ಅನುಭವಿಸುತ್ತಿದ್ದಾರೆ. ವಿಶೇಷವಾಗಿ ಈಸ್ಟ್ ಗೋಧಾವರಿ ಭಾಗದ ಸಿನಿಮಾ ಪ್ರದರ್ಶಕರು ಈ ಸಮಸ್ಯೆಯಿಂದ ಬೇಸತ್ತು, ಜೂನ್ 1 ರಿಂದ ಚಿತ್ರಮಂದಿರಗಳನ್ನು ಬಂದ್ ಮಾಡಲು ನಿರ್ಧರಿಸಿದ್ದಾರೆ.
ಆಂಧ್ರ ಪ್ರದೇಶ ಮತ್ತು ತೆಲಂಗಾಣವನ್ನು ವಿತರಕರು ನಾಲ್ಕು ವಿಭಾಗಗಳಾಗಿ ವಿಂಗಡಿಸಿದ್ದಾರೆ: ನಿಜಾಮ್, ಸೀಡೆಡ್, ಈಸ್ಟ್ ಗೋಧಾವರಿ, ಮತ್ತು ಆಂಧ್ರ. ಈಸ್ಟ್ ಗೋಧಾವರಿಯ ಸಿನಿಮಾ ಪ್ರದರ್ಶಕರು ಇತ್ತೀಚೆಗೆ ವಿತರಕರೊಂದಿಗೆ ಸಭೆ ನಡೆಸಿ, ಚಾಲ್ತಿಯಲ್ಲಿರುವ ಬಾಡಿಗೆ ಪದ್ಧತಿಯನ್ನು ಮುಂದುವರೆಸಲು ಮತ್ತು ಬಾಡಿಗೆಯನ್ನು ಹೆಚ್ಚಿಸಲು ಬೇಡಿಕೆ ಇಟ್ಟಿದ್ದರು. ಆದರೆ, ವಿತರಕರು ಇದಕ್ಕೆ ಒಪ್ಪದೆ, ಬದಲಿಗೆ ಲಾಭ ಹಂಚಿಕೆ (ಪ್ರಾಫಿಟ್ ಶೇರ್) ಮಾದರಿಯನ್ನು ಒಪ್ಪಿಕೊಂಡಿದ್ದಾರೆ. ಈ ನಿರ್ಧಾರಕ್ಕೆ ಒಪ್ಪದ ಪ್ರದರ್ಶಕರು, ಚಿತ್ರಮಂದಿರಗಳನ್ನು ಬಂದ್ ಮಾಡುವ ಘೋಷಣೆ ಮಾಡಿದ್ದಾರೆ.
ಜೂನ್ ತಿಂಗಳು ತೆಲುಗು ಚಿತ್ರರಂಗಕ್ಕೆ ಅತ್ಯಂತ ಮಹತ್ವದ್ದಾಗಿದೆ. ಮೆಗಾಸ್ಟಾರ್ ಚಿರಂಜೀವಿಯವರ ‘ವಿಶ್ವಂಭರ’, ರವಿತೇಜ ಮತ್ತು ನಿತಿನ್ ಅವರ ಹೊಸ ಸಿನಿಮಾಗಳು ಈ ತಿಂಗಳಲ್ಲಿ ಬಿಡುಗಡೆಯಾಗಲಿವೆ. ಆದರೆ, ಚಿತ್ರಮಂದಿರಗಳು ಬಂದ್ ಆದರೆ ಈ ಸಿನಿಮಾಗಳಿಗೆ ಭಾರಿ ಹೊಡೆತ ಬೀಳುವ ಸಾಧ್ಯತೆಯಿದೆ. ಈ ಪ್ರತಿಭಟನೆಯಿಂದ ಚಿತ್ರರಂಗದ ಒಟ್ಟಾರೆ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ.