ಶ್ರೀನಿಧಿ ಶೆಟ್ಟಿ ಸ್ಯಾಂಡಲ್ವುಡ್ ಕೆಜಿಎಫ್ ಪಾಲಿನ ಅಸಲಿ ನಿಧಿ. ಈ ಚೆಂದುಳ್ಳಿ ಚೆಲುವೆ ಅದ್ಯಾಕೋ ಅವಕಾಶಗಳಿಲ್ಲದೆ ತೆರೆಹಿಂದೆ ಸರಿದಿದ್ದರು. ಆದ್ರೀಗ ಮತ್ತೆ ಲೈಮ್ಲೈಟ್ಗೆ ಬಂದಿದ್ದಾರೆ. ಇಂಟರೆಸ್ಟಿಂಗ್ ಮ್ಯಾಟರ್ ಅಂದ್ರೆ, ಸೀತೆ ಆಗಬೇಕಿದ್ದ ಶ್ರೀನಿಧಿ ಆ ಆಫರ್ನ ಅವ್ರೇ ಕೈಚೆಲ್ಲಿಕೊಂಡಿದ್ದಾರೆ.
ಕರಾವಳಿಯ ಕುವರಿ, ಕೆಜಿಎಫ್ ಪೋರಿ ಶ್ರೀನಿಧಿ ಶೆಟ್ಟಿ ಮೇಲೆ ಅದೆಷ್ಟು ಮಂದಿಗೆ ಪ್ಯಾರ್ ಆಗಿದೆಯೋ ಗೊತ್ತಿಲ್ಲ. ಯಾಕಂದ್ರೆ ಈಕೆ ಬಣ್ಣ ಹಚ್ಚಿ, ಬೆಳ್ಳಿತೆರೆ ಮೇಲೆ ಮಿಂಚಿದ್ದು ಕೆಜಿಎಫ್ ಸಿನಿಮಾದಿಂದ. ಚಾಪ್ಟರ್-1 ಹಾಗೂ ಚಾಪ್ಟರ್-2ನಲ್ಲಿ ರೀನಾ ಆಗಿ ಖದರ್ ತೋರಿದ್ದ ಚೆಂದುಳ್ಳಿ ಚೆಲುವೆ, ಕೆಜಿಎಫ್ ಫ್ರಾಂಚೈಸ್ ಸಿನಿಮಾಗಳ ಬಳಿಕ ಮಾಡಿದ್ದು ಕೇವಲ ಒಂದೇ ಒಂದು ಸಿನಿಮಾ.
ಚಿಯಾನ್ ವಿಕ್ರಾಮ್ ಜೊತೆ ಕೋಬ್ರಾ ಅನ್ನೋ ಚಿತ್ರದಲ್ಲಿ ಬಣ್ಣ ಹಚ್ಚಿದ್ರು ಶ್ರೀನಿಧಿ ಶೆಟ್ಟಿ. ಇದೀಗ ನ್ಯಾಚುರಲ್ ಸ್ಟಾರ್ ನಾನಿಯ ಹಿಟ್-3ನಲ್ಲಿ ನಟಿಸಿದ್ದು, ಸಿನಿಮಾ ಇದೇ ಮೇ-1ಕ್ಕೆ ವಿಶ್ವದಾದ್ಯಂತ ಬಿಡುಗಡೆ ಆಗ್ತಿದೆ. ಎಲ್ಲಾ ಓಕೆ.. ಆದ್ರೆ ಇಷ್ಟು ದಿನ ಶ್ರೀನಿಧಿ ಶೆಟ್ಟಿ ಸುಮ್ಮನೆ ಇದ್ದಿದ್ದು ಯಾಕೆ ಅನ್ನೋ ಪ್ರಶ್ನೆ ಎಲ್ಲರಲ್ಲಿ ಮೂಡಿದೆ. ಅಲ್ಲದೆ, ಸ್ವತಃ ಶ್ರೀನಿಧಿ ಶೆಟ್ಟಿಯೇ ಬಹಿರಂಗಪಡಿಸಿರೋ ಒಂದು ವಿಷಯ ಸದ್ಯ ಟಾಕ್ ಆಫ್ ದಿ ಟೌನ್ ಆಗಿದೆ.
ಬಾಲಿವುಡ್ ಅಂಗಳದಲ್ಲಿ ತಯಾರಾಗ್ತಿರೋ ಬಹುನಿರೀಕ್ಷಿತ ರಾಮಾಯಣ ಸಿನಿಮಾದಲ್ಲಿ ಸೀತೆಯಾಗಿ ಬಣ್ಣ ಹಚ್ಚಬೇಕಿತ್ತು ನಮ್ಮ ಕನ್ನಡತಿ ಶ್ರೀನಿಧಿ ಶೆಟ್ಟಿ. ಆದ್ರೀಗ ರಾಮನ ಪಾತ್ರಧಾರಿ ರಣ್ಬೀರ್ ಕಪೂರ್ ಎದುರು ಸೀತೆಯಾಗಿರೋದು ಸಾಯಿ ಪಲ್ಲವಿ. ದಂಗಲ್ ಡೈರೆಕ್ಟರ್ ನಿತೇಶ್ ತಿವಾರಿ, ಸಾಯಿ ಪಲ್ಲವಿಗೂ ಮುನ್ನ ಆಲಿಯಾ ಭಟ್ ಹಾಗೂ ಶ್ರೀನಿಧಿ ಶೆಟ್ಟಿಯನ್ನ ಆಡಿಷನ್ ಮಾಡಿದ್ದರಂತೆ.
ರಾಮಾಯಣ ಆಡಿಷನ್ಗೆ ತೆರಳಿದ್ದ ಶ್ರೀನಿಧಿ ಶೆಟ್ಟಿ ಮೂರು ಸೀನ್ಗಳನ್ನ ಅದ್ಭುತವಾಗಿ ನಟಿಸಿದ್ದರು. ಎಲ್ಲರೂ ಚಪ್ಪಾಳೆ ತಟ್ಟೋದ್ರ ಜೊತೆಗೆ ಆಕೆಯ ಪರ್ಫಾಮೆನ್ಸ್ಗೆ ಭೇಷ್ ಅಂದಿದ್ದರಂತೆ. ನಿರ್ದೇಶಕರು ಯೆಸ್.. ನನ್ನ ಸಿನಿಮಾದ ಸೀತಾದೇವಿ ಈಕೆಯೇ ಅಂತ ಫಿಕ್ಸ್ ಕೂಡ ಆಗಿದ್ದರಂತೆ. ಇಷ್ಟೆಲ್ಲಾ ಆದ ಬಳಿಕವೂ ಸೀತೆ ಪಾತ್ರಕ್ಕೆ ಶ್ರೀನಿಧಿ ಬದಲಿಗೆ ಸಾಯಿ ಪಲ್ಲವಿ ಆಯ್ಕೆ ಆಗಿದ್ದಾರೆ ಅಂದ್ರೆ ಅದಕ್ಕೆ ಕಾರಣ ಬೇರಾರು ಅಲ್ಲ, ಸ್ವತಃ ಶ್ರೀನಿಧಿ ಶೆಟ್ಟಿ. ತಾನೇ ಬೇಡ ಅಂತ ಈ ಸಿನಿಮಾನ ಕೈಬಿಟ್ಟಿದ್ದಾರೆ. ಯಾಕೆ ಅಂತ ಆಕೆಯ ಹೇಳ್ತಾರೆ ನೋಡಿ.
ಇದು ಅಕ್ಷರಶಃ ನಿಜ. ಶ್ರೀನಿಧಿ ಶೆಟ್ಟಿ ರಾಮಾಯಣ ಚಿತ್ರಕ್ಕೆ ಆಡಿಷನ್ ಕೊಟ್ಟಾಗ, ಯಶ್ ರಾವಣ ಪಾತ್ರಕ್ಕೆ ಬಣ್ಣ ಹಚ್ಚೋದು ಗೊತ್ತಿಲ್ಲ. ಅಷ್ಟೇ ಯಾಕೆ, ಆತನೇ ಒನ್ ಆಫ್ ದಿ ಪ್ರೊಡ್ಯೂಸರ್ ಅಂತಲೂ ಗೊತ್ತಿಲ್ಲ. ಆ ಸಮಯದಲ್ಲಿ ಕೆಜಿಎಫ್-2 ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಯಶ್- ಶ್ರೀನಿಧಿ ಜೋಡಿಯನ್ನ ಎಲ್ಲೆಡೆ ಕೊಂಡಾಡ್ತಿದ್ರು. ಯಾವಾಗ ರಾವಣ ಯಶ್ ಅಂತ ಗೊತ್ತಾಯ್ತೋ, ಕೂಡಲೇ ಆಪೋಸಿಟ್ ಪಾತ್ರದಲ್ಲಿ ಬೇಡ ಅನ್ನೋ ನಿರ್ಧಾರಕ್ಕೆ ಬಂದು, ಅದನ್ನ ತಾವೇ ಕೈ ಬಿಟ್ಟಿದ್ದಾರೆ ಶ್ರೀನಿಧಿ.
ಇಲ್ಲಿಯವರೆಗೆ ಶ್ರೀನಿಧಿಗೆ ಆಫರ್ಗಳಿಲ್ಲ ಅಂತ ಎಲ್ರೂ ಆಡಿಕೊಳ್ತಿದ್ರು. ಆದ್ರೀಗ ಸ್ವತಃ ಅವರೇ ರಾಮಾಯಣ ಆಫರ್ನ ಬಿಟ್ಟುಕೊಟ್ಟಿರೋದು ಕೇಳಿ ಇಡೀ ಭಾರತೀಯ ಚಿತ್ರರಂಗ ಶಾಕ್ ಆಗಿದೆ. ಆಕೆಯ ನಿರ್ಧಾರ ಸರಿಯೋ ತಪ್ಪೋ ಸೆಕೆಂಡರಿ. ಆದ್ರೆ ವೈಯಕ್ತಿಕ ನಿರ್ಧಾರಗಳನ್ನ ಗೌರವಿಸಬೇಕು. ಇಂತಹ ಟ್ಯಾಲೆಂಟೆಡ್ ನಟಿಗೆ ಮತ್ತಷ್ಟು ಒಳ್ಳೆಯ ಪಾತ್ರಗಳು ಹರಸಿ ಬರಲಿ ಅನ್ನೋದು ನಮ್ಮ ಆಶಯ.