ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದರೆ, ಕನ್ನಡಿಗರ ಬಗ್ಗೆ ಹಗುರವಾಗಿ ಮಾತನಾಡಿದ್ರೆ ಏನಾಗುತ್ತೆ ಅನ್ನೋದಕ್ಕೆ ಸೋನು ನಿಗಮ್ ಬೆಸ್ಟ್ ಎಕ್ಸಾಂಪಲ್. ಹೌದು.. ಇತ್ತೀಚೆಗೆ ಕನ್ನಡ ಹಾಡು ಕೇಳಿದವರನ್ನ ಪಹಲ್ಗಾಮ್ ಉಗ್ರರಿಗೆ ಹೋಲಿಸಿದ್ದ ಖ್ಯಾತ ಗಾಯಕ, ಕನ್ನಡ ಚಿತ್ರರಂಗ ಹಾಗೂ ಕರ್ನಾಟಕದಿಂದ ಅಫಿಶಿಯಲಿ ಬ್ಯಾನ್ ಆಗಿದ್ದಾರೆ. ಫಿಲ್ಮ್ ಚೇಂಬರ್ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಈ ಕುರಿತ ರಿಪೋರ್ಟ್ ಇಲ್ಲಿದೆ.
900 ಕನ್ನಡ ಹಾಡುಗಳನ್ನ ಹಾಡಿರೋ ಸೋನು ನಿಗಮ್, ಕನ್ನಡಿಗನಂತೆ ಕನ್ನಡಿಗರ ಹೃದಯ ಗೆದ್ದಿದ್ದರು. ಆದ್ರೀಗ ಅವರು ತಿನ್ನೋ ಅನ್ನಕ್ಕೆ ಸ್ವತಃ ಅವರೇ ಕಲ್ಲು ಹಾಕಿಕೊಂಡಿದ್ದಾರೆ. ಹೌದು.. ಬೆಂಗಳೂರಿನಲ್ಲಿ ಕಾರ್ಯಕ್ರಮ ನೀಡುವಾಗ ಕನ್ನಡ ಹಾಡು ಹಾಡಿ ಎಂದ ಕನ್ನಡಿಗನನ್ನ ಪಹಲ್ಗಾಮ್ ಉಗ್ರನಿಗೆ ಹೋಲಿಸಿ, ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಇಡೀ ಕರುನಾಡಿನ ಮಂದಿತ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಒಂದ್ಕಡೆ ಆವಲಹಳ್ಳಿ ಠಾಣೆಯಲ್ಲಿ ಎಫ್ಐಆರ್, ಮತ್ತೊಂದ್ಕಡೆ ಕನ್ನಡಪರ ಹೋರಾಟಗಾರರು ಹಾಗೂ ಕನ್ನಡಿಗರಿಂದ ಬಾಯ್ಕಾಟ್ ಬಿಸಿ. ಎರಡೂ ಜೋರಾಗೇ ಸೋನು ನಿಗಮ್ಗೆ ತಟ್ಟಿವೆ. ವೇವ್ಸ್ ಸಮ್ಮಿಟ್ ಮುಗಿಸಿ ಬೆಂಗಳೂರಿಗೆ ಬರ್ತಿದ್ದಂತೆ ಫಿಲ್ಮ್ ಚೇಂಬರ್, ನಿರ್ದೇಶಕರು, ನಿರ್ಮಾಪಕರು ಹಾಗೂ ಸಂಗೀತ ಸಂಯೋಜಕರ ಸಂಘಗಳ ಪ್ರತಿನಿಧಿಗಳನ್ನ ಕರೆಸಿ ಸಭೆ ನಡೆಸಿತು. ಅದರಲ್ಲಿ ಸೋನು ನಿಗಮ್ ಕನ್ನಡಿಗರಿಗೆ ಕ್ಷಮೆ ಕೇಳುವವರೆಗೆ ಅಸಹಕಾರ ತೋರುವುದಾಗಿ ಫಿಲ್ಮ್ ಚೇಂಬರ್ ಅಧ್ಯಕ್ಷರು ಅಧಿಕೃತವಾಗಿ ಘೋಷಿಸಿದ್ದಾರೆ.
ಅಂದಹಾಗೆ ಅಸಹಕಾರ ಅಂದ್ರೆ ಪರೋಕ್ಷವಾಗಿ ಬ್ಯಾನ್ ಎಂದರ್ಥ. ಇನ್ಮೇಲೆ ಕನ್ನಡ ಸಿನಿಮಾಗಳಲ್ಲಿ ಸೋನು ನಿಗಮ್ ಹಾಡುವಂತಿಲ್ಲ. ಕರ್ನಾಟಕದಲ್ಲಿ ಖಾಸಗಿ ಕಾರ್ಯಕ್ರಮಗಳಲ್ಲಿ ಕೂಡ ಭಾಗಿ ಆಗುವಂತಿಲ್ಲ ಅಂತ ತಾಕೀತು ಮಾಡಿದೆ. ಇದಕ್ಕೆ ಮ್ಯೂಸಿಕ್ ಕಂಪೋಸರ್ಸ್ ಸಂಘದಿಂದ ಧರ್ಮವಿಶ್ ಭಾಗಿಯಾಗಿ ಸಂಪೂರ್ಣ ಸಹಕಾರ ನೀಡೋದಾಗಿ ಹೇಳಿದ್ದಾರೆ. ಕ್ಷಮೆ ಕೇಳಿ ಸಮಸ್ಯೆಯನ್ನ ಬಗೆಹರಿಸಿಕೊಳ್ಳೋದು ಬಿಟ್ಟು ಬಿಗ್ ಎಡವಟ್ಟು ಮಾಡಿಕೊಂಡಿದ್ದಾರೆ ಸೋನು ನಿಗಮ್.
ಕನ್ನಡಿಗರಿಂದ ನೇಮು ಫೇಮ್ ಜೊತೆ ಕೋಟ್ಯಂತರ ರೂಪಾಯಿ ದುಡಿದು, ಸುಖದ ಸುಪ್ಪೊತ್ತಿಗೆಯಲ್ಲಿರೋ ಸೋನು ನಿಗಮ್ಗೆ ಅಹಂಕಾರ ತಾಂಡವಾಡ್ತಿದೆ. ದುರಹಂಕಾರದ ಪರಮಾವಧಿ ಎಂದಂತೆ ಕನ್ನಡಿಗರು ಮುಂಬೈಗೇ ಹೋಗಿ ಕನ್ನಡ ಸಾಂಗ್ಸ್ ರೆಕಾರ್ಡಿಂಗ್ ಮಾಡಿಸಬೇಕಿತ್ತು. ಅಲ್ಲಿಗೆ ಹೋದ್ರೂ ಸಹ ಕನಿಷ್ಟ 8 ಗಂಟೆಗಳ ಕಾಲ ಕಾಯಿಸ್ತಿದ್ರಂತೆ ಈ ಮಹಾನುಭಾವ. ಇನ್ನು ನಡುವೆ ಕರೆಕ್ಷನ್ಸ್ ಹೇಳಿದ್ರೆ ಕಥೆ ಮುಗೀತು. ನಾನು ಹಾಡೋದೇ ಇಲ್ಲ ಅಂತ ಕೋಪಿಸಿಕೊಂಡು ಹೋಗಿಬಿಡ್ತಿದ್ರಂತೆ. ಇಷ್ಟೆಲ್ಲಾ ಮದವೇರಿರೋ ಆತನ ಕಂಠದ ಹಾಡುಗಳು ನಮಗೆ ಬೇಕೇ..? ನೀವೇ ಹೇಳಿ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್