ಹಾಸನ: ಸ್ಯಾಂಡಲ್ವುಡ್ನ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಾ ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಹಾಸನದಲ್ಲಿ ಕಳೆದ ಎರಡು ದಿನಗಳಿಂದ ನಿವೇಶನದ ಮಾಲೀಕತ್ವದ ವಿಚಾರವಾಗಿ ಪುಷ್ಪಾ ಮತ್ತು ಜಾಗದ ಮಾಲೀಕ ದೇವರಾಜು ಎಂಬುವವರ ನಡುವೆ ಭಾರೀ ಜಟಾಪಟಿ ನಡೆಯುತ್ತಿದೆ.
ಏನಿದು ಘಟನೆ ?
ಹಾಸನದ ಹೊರವಲಯದಲ್ಲಿರುವ ನಿವೇಶನವೊಂದರ ವಿಚಾರವಾಗಿ ಈ ಗಲಾಟೆ ಶುರುವಾಗಿದೆ. ಈ ಹಿಂದೆ ಕೆಡವಲಾಗಿದ್ದ ಕಾಂಪೌಂಡ್ ಅನ್ನು ಪುಷ್ಪಾ ಅವರು ಮತ್ತೆ ನಿರ್ಮಿಸಲು ಮುಂದಾದಾಗ ಜಗಳ ವಿಕೋಪಕ್ಕೆ ತಿರುಗಿದೆ. ಆರು ವರ್ಷಗಳ ಹಿಂದೆಯೇ ಈ ಜಾಗವನ್ನು ತಾವು ಖರೀದಿ ಮಾಡಿರುವುದಾಗಿ ಪುಷ್ಪಾ ವಾದಿಸುತ್ತಿದ್ದರೆ, ಇತ್ತ ದೇವರಾಜು ಎಂಬುವವರು ಇದು ತಮ್ಮ ಜಾಗ ಎಂದು ಗಲಾಟೆ ಮಾಡಿದ್ದಾರೆ.
ಘಟನಾ ಸ್ಥಳದಲ್ಲಿ ಮಾತಿನ ಚಕಮಕಿ ಜೋರಾಗುತ್ತಿದ್ದಂತೆ, ಪುಷ್ಪಾ ಅವರು ದೇವರಾಜು ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಜಾಗದ ದಾಖಲೆಗಳಿದ್ದರೆ ತೋರಿಸಿ. ಇಲ್ಲಿಗೆ ಜಡ್ಜ್ ಅವರನ್ನೇ ಕರೆಸಿ, ಅವರು ಇಲ್ಲಿಗೆ ಬಂದು ತೀರ್ಮಾನ ಮಾಡಲಿ ಎಂದು ಸವಾಲು ಹಾಕಿದ್ದಾರೆ. ಅಲ್ಲದೆ, ನೀವು ಬರಿ ಯಶ್ ಮನೆ ಮುಂದೆ ಕ್ಯಾಮೆರಾ ಹಿಡಿದು ಬಿಲ್ಡಪ್ ಕೊಡಲು ಬಂದಿದ್ದೀರಾ ? ಎಂದು ವ್ಯಂಗ್ಯವಾಡಿ ಮಾತನಾಡಿದ್ದಾರೆ.
ಇನ್ನೊಂದೆಡೆ ದೇವರಾಜು ಅವರು, ನಾವು ಕೋರ್ಟ್ ಆದೇಶದಂತೆಯೇ ನಡೆದುಕೊಳ್ಳುತ್ತಿದ್ದೇವೆ. ಈ ಜಾಗ ನಮ್ಮದು ಎಂದು ಸಾಬೀತಾಗಿದೆ ಎಂದು ಕಿಡಿಕಾರಿದ್ದಾರೆ. ನಿನ್ನೆ ತಾನೆ ದೇವರಾಜು ಅವರು ಹಾಕಿದ್ದ ತಂತಿಬೇಲಿಯನ್ನು ಪುಷ್ಪಾ ಅವರು ತೆರವುಗೊಳಿಸಿದ್ದರು. ಇದರಿಂದ ಆಕ್ರೋಶಗೊಂಡ ದೇವರಾಜು ತಂಡ ಮತ್ತು ಪುಷ್ಪಾ ಬೆಂಬಲಿಗರ ನಡುವೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಈ ಪ್ರಕರಣವು ಪ್ರಸ್ತುತ ನ್ಯಾಯಾಲಯದ ವಿಚಾರಣೆಯಲ್ಲಿದೆ. ಕೋರ್ಟ್ನಲ್ಲಿ ಕೇಸ್ ನಡೆಯುತ್ತಿದ್ದರೂ ಸಹ, ಸ್ಥಳದಲ್ಲಿ ಕಾಂಪೌಂಡ್ ನಿರ್ಮಾಣಕ್ಕೆ ಪುಷ್ಪಾ ಅವರು ಮುಂದಾಗಿರುವುದು ವಿವಾದವನ್ನು ಮತ್ತಷ್ಟು ಗಂಭೀರಗೊಳಿಸಿದೆ. ಕಳೆದ ಆರು ವರ್ಷಗಳಿಂದ ನಾವೇ ಇಲ್ಲಿ ಕಾಂಪೌಂಡ್ ಹಾಕಿಕೊಂಡು ಜಾಗ ಬಳಸುತ್ತಿದ್ದೇವೆ ಎಂಬುದು ಪುಷ್ಪಾ ಅವರ ವಾದ. ಆದರೆ ಕಾನೂನುಬದ್ಧವಾಗಿ ಯಾರು ಜಯಗಳಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಒಟ್ಟಾರೆಯಾಗಿ, ಸೂಪರ್ ಸ್ಟಾರ್ ಯಶ್ ಅವರ ಕುಟುಂಬ ಈ ವಿವಾದದಲ್ಲಿ ಸಿಲುಕಿರುವುದು ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.





