ಸಪ್ತಪದಿ ತುಳಿದು, ಸತಿಪತಿ ಆಗಿಯೇಬಿಟ್ರು ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ

ದೇವರಕೊಂಡ ಮನೆ ಬೆಳಗೋ ಮಹಾಲಕ್ಷ್ಮೀ ಆದ ಕನ್ನಡತಿ..!

ನ್ಯಾಷನಲ್ ಕ್ರಶ್ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಸಪ್ತಪದಿ ತುಳಿಯೋ ಮೂಲಕ ತಮ್ಮ ಬ್ಯಾಚುಲರ್ ಲೈಫ್‌ಗೆ ಗುಡ್‌ಬೈ ಹೇಳಿದ್ದಾರೆ. ಇಷ್ಟಕ್ಕೂ ಉದಯಪುರದ ಐಟಿಸಿ ಹೋಟೆಲ್‌‌ನಲ್ಲಿ ನಡೆದ ರಾಯಲ್ ವೆಡ್ಡಿಂಗ್ ಹೇಗಿತ್ತು..? ಯಾರೆಲ್ಲಾ ಬಂದಿದ್ರು ಅನ್ನೋದ್ರ ಜೊತೆಗೆ ಅವಕಾಶ ಕೊಟ್ಟು ನಟಿ ಮಾಡಿದ ಶೆಟ್ರ ಗ್ಯಾಂಗ್‌‌ನೇ ಮರೆತಿದ್ಯಾಕೆ ರಶ್ಮಿಕಾ..? ನೆಟ್ಟಿಗರು ಏನಂತಿದ್ದಾರೆ ಅನ್ನೋದ್ರ ಫುಲ್‌ ಡಿಟೈಲ್ಸ್‌ ಇಲ್ಲಿದೆ ನೋಡಿ…

ಅರ್ಜುನ್ ರೆಡ್ಡಿ ಚಿತ್ರದ ಸೆನ್ಸೇಷನಲ್ ಆ್ಯಕ್ಟರ್ ರೌಡಿ ವಿಜಯ್ ದೇವರಕೊಂಡ ಹಾಗೂ ನಮ್ಮ ಕನ್ನಡತಿ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಇಂದು ಉದಯಪುರದ ಐಟಿಸಿ ಹೋಟೆಲ್‌‌ನಲ್ಲಿ ಸಪ್ತಪದಿ ತುಳಿಯೋ ಮೂಲಕ ನೂತನ ದಂಪತಿಗಳಾಗಿದ್ದಾರೆ. ವಿಜಯ್ ಮನ ಬೆಳಗುತ್ತಿದ್ದ ರಶ್ಮಿಕಾ ಇನ್ಮೇಲೆ ಮನೆ ಕೂಡ ಬೆಳಗುವ ಮಹಾಲಕ್ಷ್ಮೀ ಅನಿಸಿಕೊಂಡಿದ್ದಾರೆ. ಹೊಸ ಬಾಳಿಗೆ ಕಾಲಿಟ್ಟ ನೂತನ ದಂಪತಿಗೆ ಅಂಬಾನಿ ಕುಟುಂಬ ಸೇರಿದಂತೆ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ, ನಿರ್ದೇಶಕ ರಾಹುಲ್ ರವೀಂದ್ರನ್, ಆಶಿಕಾ ರಂಗನಾಥ್ ಸೇರಿದಂತೆ ಸಾಕಷ್ಟು ಮಂದಿ ಶುಭ ಕೋರಿದ್ದಾರೆ.

ರಶ್ಮಿಕಾಗೆ ಇಲ್ಲಿಯವರೆಗೆ ಒಂದು ಲೆಕ್ಕ ಆದ್ರೆ ಇನ್ಮೇಲೆ ಹೊಸ ಲೆಕ್ಕ. ಹೌದು.. ಇಲ್ಲಿಯವರೆಗೆ ಸ್ವತಂತ್ರವಾಗಿ ತನಗಿಷ್ಟ ಬಂದಂತೆ ಓಡಾಡ್ಕೊಂಡು, ಸಿನಿಮಾ ಶೂಟಿಂಗ್, ಡಬ್ಬಿಂಗ್ ಅಂತ ಸುತ್ತಾಡ್ತಿದ್ರು ರಶ್ಮಿಕಾ. ಆದ್ರೀಗ ಆಕೆ ಅಫಿಶಿಯಲಿ ದೇವರಕೊಂಡ ಕುಟುಂಬದ ಸೊಸೆ. ಹೀಗಾಗಿ ಜವಾಬ್ದಾರಿ ಹೆಚ್ಚಲಿದೆ. ಅತ್ತೆ, ಮಾವ, ಮೈದುನ ಸೇರಿದಂತೆ ಎಲ್ಲರಿಗೂ ಉತ್ತರಿಸಬೇಕಿದೆ. ಈಗಾಗ್ಲೇ ವಿಜಯ್ ಕುಟುಂಬದ ಜೊತೆ ಬಹಳ ದಿನಗಳ ಹಿಂದೆಯೇ ಬೆರೆತುಹೋಗಿರೋ ರಶ್ಮಿಕಾ, ಒಂದೊಳ್ಳೆ ಬಾಂಧವ್ಯ ಕೂಡ ಏರ್ಪಡಿಸಿಕೊಂಡಿದ್ರು.

ಇಂಟರೆಸ್ಟಿಂಗ್ ಅಂದ್ರೆ ರಶ್ಮಿಕಾಗೆ ವಿಜಯ್ ದೇವರಕೊಂಡ ತಾಯಿ ಮಾಧವಿ ಒಂದು ಕಂಡಿಷನ್ ಹಾಕಿದ್ದಾರೆ. ತನ್ನ ಮಗನನ್ನ ಹೆಚ್ಚಾಗಿ ಪ್ರೀತಿಸುವ ಹಾಗೂ ಚೆನ್ನಾಗಿ ನೋಡಿಕೊಳ್ಳುವಂತಹ ಸೊಸೆ ಆಗಬೇಕು. ಅಲ್ಲದೆ, ವಿಜಯ್ ಚಿತ್ರರಂಗದ ಕಲಾವಿದ ಆಗಿರೋದ್ರಿಂದ ಆತನ ಪ್ರೊಫೆಷನ್ ಅರ್ಥೈಸಿಕೊಳ್ಳೋ ಎಂದಿದ್ದಾರೆ. ರಶ್ಮಿಕಾ ಕೂಡ ನಟಿ ಆಗಿರೋದ್ರಿಂದ ಈ ಕಂಡಿಷನ್ ಬೇಗನೇ ಅರ್ಥ ಆಗಿದೆ ಅನಿಸುತ್ತೆ.

ಉದಯಪುರದಿಂದ 25-30 ಕಿಲೋ ಮೀಟರ್ ದೂರದಲ್ಲಿರೋ ಐಟಿಸಿ ಮೆಮೆಂಟೋಸ್ ಹೋಟೆಲ್‌‌‌ನಲ್ಲಿ ವಿರೋಶ್ ಕಲ್ಯಾಣ ನಡೆದಿದ್ದು, ಪ್ರಕೃತಿಯ ಮಡಿಲಲ್ಲಿರೋ ಕಲ್ಯಾಣ ಮಂಟಪ ಸಖತ್ ಕಲರ್‌‌ಫುಲ್ ಆಗಿತ್ತು. ಸುಮಾರು 117 ವಿಲ್ಲಾಗಳನ್ನ ಕಲ್ಯಾಣಕ್ಕಾಗಿಯೇ ಬಂದಿರೋ ಗೆಸ್ಟ್‌ಗಳಿಗಾಗಿ ಬುಕ್ ಮಾಡಲಾಗಿತ್ತು. ಹಳದಿ, ಮೆಹಂದಿ, ಸಂಗೀತ್ ಪಾರ್ಟಿಯ ಫೋಟೋಗಳು ಕೂಡ ಹಂಚಿಕೊಂಡಿರೋ ರಶ್ಮಿಕಾ, ವಿಜಯ್ ಹಾಗೂ ಆಶಿಕಾ ಸಾಮಾಜಿಕ ಜಾಲತಾಣಗಳಲ್ಲಿ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಅಲ್ಲದೆ, ಕೊಡಗಿನ ವಿರಾಜಪೇಟೆಯ ರಶ್ಮಿಕಾ ಮನೆ ಮುಂದೆ ಚಪ್ಪರ ಹಾಕಿ, ತಳಿರು, ತೋರಣಗಳಿಂದ ಕಂಗೊಳಿಸುತ್ತಿದೆ ಮಂದಣ್ಣ ಸೆರೆನಿಟಿ.

2016ರಲ್ಲಿ ತೆರೆಕಂಡ ಕಿರಿಕ್ ಪಾರ್ಟಿ ಸಿನಿಮಾ ರಶ್ಮಿಕಾ ಮಂದಣ್ಣಗೆ ನಾಯಕಿ ಪಟ್ಟ ತಂದುಕೊಟ್ಟ ಮೊಟ್ಟ ಮೊದಲ ಸಿನಿಮಾ. ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ನಟ ಕಮ್ ನಿರ್ಮಾಪಕ ರಕ್ಷಿತ್ ಶೆಟ್ಟಿ ಈಕೆಯನ್ನ ಅಂದು ಕಾಸ್ಟ್ ಮಾಡಿಲ್ಲ ಅಂದಿದ್ರೆ ಇಂದು ನ್ಯಾಷನಲ್ ಕ್ರಶ್ ಆಗಿ ಮೆರೆಯೋಕೆ ಆಗ್ತಿರಲಿಲ್ಲ ರಶ್ಮಿಕಾ. ಹಾಗಾಗಿ ಅವಕಾಶ ಕೊಟ್ಟು ಹೀರೋಯಿನ್ ಮಾಡಿದಂತಹ ಶೆಟ್ರ ಗ್ಯಾಂಗ್‌ನೇ ವಿರೋಶ್ ಕಲ್ಯಾಣಕ್ಕೆ ಆಹ್ವಾನಿಸಿಲ್ಲ ಕಿರಿಕ್ ಬ್ಯೂಟಿ. ಇದ್ರಿಂದ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ರಶ್ಮಿಕಾಗೆ ಸಿಕ್ಕಾಪಟ್ಟೆ ತರಾಟೆಗೆ ತೆಗೆದುಕೊಂಡಿದ್ದಾರೆ.

ರಶ್ಮಿಕಾ ಭವಿಷ್ಯದಲ್ಲಿ ಇನ್ನೂ ಬಹು ಎತ್ತರಕ್ಕೆ ಬೆಳೆಯಬಹುದು. ಆದ್ರೆ ಆಕೆ ಎಲ್ಲೇ ಹೋದ್ರೂ ಸಹ ಜನ ಗುರ್ತಿಸುವುದು ಮಾತ್ರ ಕಿರಿಕ್ ಪಾರ್ಟಿ ಸಿನಿಮಾದ ನಟಿ ಅನ್ನೋದನ್ನ ಮರೆಯಬಾರದು. ಈ ಸಿನಿಮಾ ಮುಗಿಯುತ್ತಿದ್ದಂತೆ ಮರು ವರ್ಷವೇ ಅಂದ್ರೆ 2017ರಲ್ಲಿ ರಕ್ಷಿತ್-ರಶ್ಮಿಕಾ ಎಂಗೇಜ್ ಕೂಡ ಆದ್ರು. ಆದ್ರೆ ಬಹುಬೇಗ ಮದುವೆ ಮುರಿದುಕೊಂಡು, ಸಂಬಂಧ ಕೂಡ ಕಡಿದುಕೊಂಡರು.

ಕನ್ನಡದಿಂದ ಕೇವಲ 11 ಮಂದಿಗೆ ರಶ್ಮಿಕಾ ತಮ್ಮ ಮದುವೆ ಹಾಗೂ ಆರತಕ್ಷತೆಗೆ ಆಹ್ವಾನ ನೀಡಿದ್ದಾರೆ. ಶಿವಣ್ಣ, ರವಿಚಂದ್ರನ್, ಸುದೀಪ್, ಯಶ್, ಗಣೇಶ್, ಧ್ರುವ ಸರ್ಜಾ, ಅಶ್ವಿನಿ ಪುನೀತ್ ರಾಜ್‌ಕುಮಾರ್, ಎ ಹರ್ಷ, ನಂದಕಿಶೋರ್, ಸಿಂಪಲ್ ಸುನಿ ಹಾಗೂ ಆಶಿಕಾ.. ಇಷ್ಟೇ ಮಂದಿಗೆ ರಶ್ಮಿಕಾ ಇನ್ವೈಟ್ ಮಾಡಿರೋದು ವಿಶೇಷ. ಆಶಿಕಾ ಮಾತ್ರ ಮದ್ವೆ ಮನೆಯಲ್ಲಿ ಕಾಣಿಸಿಕೊಂಡಿದ್ದು, ಉಳಿದಂತೆ ಇವರೆಲ್ಲರೂ ಸಹ ಮಾರ್ಚ್‌ 4ಕ್ಕೆ ಹೈದ್ರಾಬಾದ್‌ನ ಬಂಜಾರ ಹಿಲ್ಸ್‌ನಲ್ಲಿರೋ ತಾಜ್ ಕೃಷ್ಣದಲ್ಲಿ ನಡೆಯೋ ಆರತಕ್ಷತಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version