ಅದ್ಯಾಕೋ ಈ ಭಾಷೆ, ಕನ್ನಡಾಭಿಮಾನ ವಿಷಯದಲ್ಲಿ ನ್ಯಾಷನಲ್ ಕ್ರಶ್ ರಶ್ಮಿಕಾ ಎಡವಟ್ ಮೇಲೆ ಎಡವಟ್ ಮಾಡ್ಕೋತಾನೇ ಇದ್ದಾರೆ. ವೇದಿಕೆಗಳಲ್ಲಿ ಕನ್ನಡ ಮಾತಾಡೋಕೆ ಮೀನಾಮೇಷ ಎಣಿಸೋ ಈಕೆ, ಕನ್ನಡದ ಹೊರತಾಗಿ ಎಲ್ಲಾ ಭಾಷೆಗಳನ್ನ ನೀರು ಕುಡಿದಷ್ಟೇ ಸರಾಗವಾಗಿ, ಸುಲಲಿತವಾಗಿ ಮಾತಾಡ್ತಾರೆ. ಅದ್ರಲ್ಲೂ ನಾನು ಕಲಿತ ಮೊದಲ ಭಾಷೆ ತಮಿಳು ಅಂತ ಹೇಳಿ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ ಭಾರತೀಯ ಚಿತ್ರರಂಗದ ಮೋಸ್ಟ್ ಡಿಮ್ಯಾಂಡಿಂಗ್ ನಟೀಮಣಿ. ಖಾನ್, ಕಪೂರ್ಗಳಿಂದ ಹಿಡಿದು, ಟಾಲಿವುಡ್, ಕಾಲಿವುಡ್ ಸೌತ್ ಮೂವಿಗಳವರೆಗೆ ಈಕೆಗೆ ಎಲ್ಲಿಲ್ಲದ ಬೇಡಿಕೆ. ಯಾಕಂದ್ರೆ ಈಕೆ ಸಿನಿಮಾದಲ್ಲಿ ಇದ್ರೆ ಸಾಕು ಆ ಚಿತ್ರ ಬ್ಲಾಕ್ ಬಸ್ಟರ್ ಹಿಟ್. ಸದ್ಯ ಕುಬೇರ ಚಿತ್ರದ ಪ್ರಮೋಷನ್ಸ್ನಲ್ಲಿ ಬ್ಯುಸಿ ಇರೋ ನ್ಯಾಷನಲ್ ಕ್ರಶ್, ಅದ್ಯಾಕೋ ಮತ್ತೊಮ್ಮೆ ಕನ್ನಡ ವಿಚಾರದಲ್ಲಿ ವಿವಾದ ಮೈ ಮೇಲೆ ಎಳೆದುಕೊಂಡಿದ್ದಾರೆ.
ನಾನು ಕಲಿತ ಮೊದಲ ಭಾಷೆ ತಮಿಳು ಅಂತ ಸ್ಟೇಟ್ಮೆಂಟ್ ಕೊಡೋ ಮೂಲಕ ಮತ್ತೊಮ್ಮೆ ಕನ್ನಡಿಗರ ಭಾವನೆಗಳನ್ನ ಕೆಣಕಿದ್ದಾರೆ. ಕನ್ನಡದ ಕೂರ್ಗ್ ಬ್ಯೂಟಿ ಕಿರಿಕ್ ಪಾರ್ಟಿ ಅನ್ನೋ ಇಲ್ಲಿನ ಕನ್ನಡ ಸಿನಿಮಾದಿಂದಲೇ ಬೆಳಕಿಗೆ ಬಂದರಾದ್ರೂ, ಸದ್ಯ ಭಾರತೀಯ ಚಿತ್ರರಂಗವನ್ನು ಆಳುತ್ತಿದ್ದಾರೆ. ಸಲ್ಮಾನ್ ಖಾನ್, ಅಮಿತಾಬ್, ರಣ್ಬೀರ್ ಕಪೂರ್, ಮಹೇಶ್ ಬಾಬು, ವಿಕ್ಕಿ ಕೌಶಲ್ ಅಂತಹ ಸೂಪರ್ ಸ್ಟಾರ್ಸ್ ಜೊತೆ ಮಿಂಚು ಹರಿಸುತ್ತಿದ್ದಾರೆ.
ಸದ್ಯ ಕುಬೇರ ಸಿನಿಮಾದಲ್ಲಿ ಧನುಷ್ ಹಾಗೂ ನಾಗಾರ್ಜುನ ಜೊತೆ ತೆರೆಹಂಚಿಕೊಂಡಿರೋ ರಶ್ಮಿಕಾ, ಆ ಚಿತ್ರದ ಪ್ರಮೋಷನ್ಸ್ ವೇಳೆ ಪೋಸ್ಟ್ ಮೂಲಕ ಮತ್ತೆ ಕಿರಿಕ್ ಮಾಡಿಕೊಂಡಿದ್ದಾರೆ. ನಾನು ನನ್ನ ಬಾಲ್ಯ ಕಳೆದಿದ್ದು ಚೆನ್ನೈನಲ್ಲೇ. ಹಾಗಾಗಿ ಚೆನ್ನೈಗೆ ನನ್ನ ಹೃದಯದಲ್ಲಿ ವಿಶೇಷವಾದ ಸ್ಥಾನವಿದೆ ಎಂದಿದ್ದಾರೆ. ಈ ಹಿಂದೆಯೂ ಕೂಡ ಒಮ್ಮೆ ನಾನು ಚೆನ್ನೈನಲ್ಲೇ ಬಾಲ್ಯ ಕಳೆದಿದ್ದೇನೆ. ಅಪ್ಪ ಆಗ ಅಲ್ಲಿಯೇ ಕೆಲಸ ಮಾಡ್ತಿದ್ರು. ನಾನು ರಸ್ಕಿನ್ ಅನ್ನೋ ಶಾಲೆಯಲ್ಲಿ ಓದುತ್ತಿದ್ದೆ. ಆನಂತ್ರ ನಾವು ಕೂರ್ಗ್ಗೆ ಶಿಫ್ಟ್ ಆದ್ವಿ ಅಂತ ಹೇಳಿದ್ದರು.
ಅಂದಹಾಗೆ ಇತ್ತೀಚೆಗೆ ಒಮ್ಮೆ ಮುಂಬೈನಲ್ಲಿ ಛಾವಾ ಸಿನಿಮಾದ ಪ್ರಚಾರದ ವೇಳೆ ನಾನು ಬೇಸಿಕಲಿ ಹೈದ್ರಾಬಾದ್ ಮೂಲದವಳು ಎಂದಿದ್ದ ರಶ್ಮಿಕಾ ಮೇಲೆ ಕನ್ನಡಿಗರು ಅಸಮಾಧಾನ ವ್ಯಕ್ತಪಡಿಸಿದ್ರು. ಅಲ್ಲದೆ, ಕನ್ನಡ ಮಾತಾಡೋಕೆ ಹಿಂದು ಮುಂದು ನೋಡುವ ಈಕೆ ತಮಿಳು, ತೆಲುಗು ಹಾಗೂ ಹಿಂದಿಯನ್ನ ನಿರರ್ಗಳವಾಗಿ ಮಾತನಾಡ್ತಾರೆ. ರಕ್ಷಿತ್ ಶೆಟ್ಟಿ ಜೊತೆ ನಿಶ್ಚಿತಾರ್ಥ ಬ್ರೇಕಪ್ ಮಾಡಿಕೊಂಡ ರಶ್ಮಿಕಾ ಒಂಥರಾ ಕನ್ನಡ ವಿರೋಧಿ ಅಂತಲೇ ಲೇಬಲ್ ಆಗಿಬಿಟ್ಟಿದ್ದಾರೆ.
ಅದರಲ್ಲೂ ಕಮಲ್ ಹಾಸನ್ ಕನ್ನಡ ವಿರೋಧಿ ಹೇಳಿಕೆ ನೀಡಿ ಸುಪ್ರೀಂ ಕೋರ್ಟ್ವರೆಗೂ ಹೋಗಿ ಛೀಮಾರಿ ಹಾಕಿಸಿಕೊಂಡ ಈ ಸಂದರ್ಭದಲ್ಲಿ ಈಕೆ ಇಂತಹ ಮಾತು ಆಡಬಾರದಿತ್ತು ಅನ್ನೋದು ಹಲವರ ಮಾತಾಗಿದೆ. ಎಷ್ಟೇ ಎತ್ತರಕ್ಕೆ ಬೆಳೆದರೂ, ಆಂಧ್ರ ಹುಡುಗನನ್ನೇ ಮದ್ವೆ ಆದ್ರೂ ಸಹ ಮಾತೃಭಾಷೆ, ತಾಯಿ ನೆಲವನ್ನು ಬಿಟ್ಟುಕೊಡಬಾರದು. ಎಲ್ಲವನ್ನೂ ಕಲಿಯೋ ಈಕೆಗೆ ಕನ್ನಡ ಅದ್ಯಾಕೆ ಕಷ್ಟವಾಗಿದೆಯೋ ಗೊತ್ತಿಲ್ಲ. ಆದ್ರೂ ಕೂಡ ಮುಂಬೈನಲ್ಲಿ ನಡೆದ ಕುಬೇರ ಇವೆಂಟ್ನಲ್ಲಿ ನಾಗಾರ್ಜುನ್ ಅವರಿಗೆ ಎಲ್ಲರಿಗೂ ನಮಸ್ಕಾರ ಅಂತ ಕನ್ನಡ ಪಾಠ ಹೇಳಿಕೊಟ್ಟು, ಆಗಿರೋ ಎಡವಟ್ನ ಸರಿಮಾಡಿಕೊಳ್ಳೋ ಕಾರ್ಯ ಮಾಡಿದ್ದಾರೆ.
ಒಟ್ಟಾರೆ ಈಕೆ ಎಷ್ಟೇ ವಿವಾದಗಳನ್ನು ಮಾಡಿಕೊಂಡ್ರೂ, ಸಿನಿಮಾಗಳ ಸಕ್ಸಸ್ ರೇಟ್ ಮಾತ್ರ ಕಮ್ಮಿ ಆಗ್ತಿಲ್ಲ. ಆಕೆಯನ್ನ ಆಡಿಕೊಂಡಷ್ಟೂ ಎತ್ತರಕ್ಕೆ ಬೆಳೆಯುತ್ತಾ ಹೋಗ್ತಿದ್ದಾರೆ. ಸೋ ಕುಬೇರ ಸಿನಿಮಾ ಕೂಡ ಜೂನ್ 20ಕ್ಕೆ ಜನರಿಗೆ ಇಷ್ಟವಾಗಲಿದೆ ಅನ್ನೋದು ಸದ್ಯದ ಟಾಕ್.