ಕಾಮಿಡಿ ಕಿಲಾಡಿಗಳ ಸೀಸನ್ 3ರ ವಿಜೇತ ರಾಕೇಶ್ ಪೂಜಾರಿ ಅವರ ಅಕಾಲಿಕ ನಿಧನ ಕನ್ನಡ ಚಿತ್ರರಂಗ ಮತ್ತು ಅವರ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿತ್ತು. ಹೃದಯಾಘಾತದಿಂದ ಮೃತಪಟ್ಟ ರಾಕೇಶ್, ತಮ್ಮ ಹಾಸ್ಯದ ಮೂಲಕ ಎಲ್ಲರ ಹೃದಯವನ್ನು ಗೆದ್ದಿದ್ದರು. ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ’ ಚಿತ್ರದಲ್ಲಿ ನಟಿಸಿದ್ದ ರಾಕೇಶ್, ತಮ್ಮ ಅಭಿನಯದಿಂದ ಗಮನ ಸೆಳೆದಿದ್ದರು. ಆದರೆ, ಅವರ ಅಂತಿಮ ದರ್ಶನಕ್ಕೆ ರಿಷಬ್ ಶೆಟ್ಟಿ ಆಗಮಿಸದಿರುವುದು ವಿವಾದಕ್ಕೆ ಕಾರಣವಾಗಿತ್ತು. ಇದೀಗ, ರಾಕೇಶ್ ನಿಧನದ 20 ದಿನಗಳ ನಂತರ, ರಿಷಬ್ ಶೆಟ್ಟಿ ಮತ್ತು ಪತ್ನಿ ಪ್ರಗತಿ ಶೆಟ್ಟಿ ಅವರು ರಾಕೇಶ್ ಅವರ ಮನೆಗೆ ಭೇಟಿ ನೀಡಿ, ಅವರ ತಾಯಿ, ಸಹೋದರಿ ಮತ್ತು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ರಾಕೇಶ್ ಪೂಜಾರಿ ಉಡುಪಿಯ ಹೂಡೆಯವರು. ಬಾಲ್ಯದಿಂದಲೇ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದ ರಾಕೇಶ್, ಹಲವು ತುಳು ಮತ್ತು ಕನ್ನಡ ನಾಟಕಗಳಲ್ಲಿ ತಮ್ಮ ಹಾಸ್ಯ ಪಾತ್ರಗಳ ಮೂಲಕ ಜನಮನ್ನಣೆ ಗಳಿಸಿದ್ದರು. ಜೀ ಕನ್ನಡದ ‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದ ಮೂಲಕ ರಾಕೇಶ್ ರಾಜ್ಯಾದ್ಯಂತ ಜನಪ್ರಿಯರಾದರು. ಸೀಸನ್ 3ರಲ್ಲಿ ಅವರ ಅದ್ಭುತ ಪ್ರದರ್ಶನ ವಿಜೇತರ ಪಟ್ಟವನ್ನು ತಂದುಕೊಟ್ಟಿತ್ತು. ಇದರ ಜೊತೆಗೆ, ‘ಕಾಂತಾರ ಚಾಪ್ಟರ್ 1’ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದರು.
ಮೇ 11ರಂದು ಗೆಳೆಯನ ಮೆಹೆಂದಿ ಕಾರ್ಯಕ್ರಮದಲ್ಲಿ ರಾಕೇಶ್ ಖುಷಿಯಿಂದ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದರು. ಆದರೆ, ಆ ಸಂದರ್ಭದಲ್ಲಿ ಏಕಾಏಕಿ ಕುಸಿದು ಬಿದ್ದ ರಾಕೇಶ್ರನ್ನು ಕಾರ್ಕಳದ ಗಾಜ್ರಿಯಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದರು. ಲೋ ಬಿಪಿಯಿಂದಾಗಿ ಹೃದಯಾಘಾತವೇ ಅವರ ಸಾವಿಗೆ ಕಾರಣ ಎಂದು ತಿಳಿದುಬಂದಿತ್ತು. ಈ ದುರ್ಘಟನೆ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿತು.
ರಿಷಬ್ ಶೆಟ್ಟಿ ದಂಪತಿಯ ಭೇಟಿಯ ಸಂದರ್ಭದಲ್ಲಿ, ರಾಕೇಶ್ ಅವರ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ರಾಕೇಶ್ ಅವರ ಸಹೋದರಿಯ ಮದುವೆಗೆ ಆರ್ಥಿಕ ಸಹಾಯ ಮಾಡುವ ಭರವಸೆಯನ್ನು ರಿಷಬ್ ಶೆಟ್ಟಿ ದಂಪತಿ ನೀಡಿದ್ದಾರೆ. ಇದರ ಜೊತೆಗೆ, ರಾಕೇಶ್ ಅವರ ಸ್ಮರಣಾರ್ಥ ನಿರ್ಮಾಣವಾಗಲಿರುವ ಪುತ್ತಳಿಯ ಲೋಕಾರ್ಪಣ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕುಟುಂಬದೊಂದಿಗೆ ಯಾವಾಗಲೂ ಇರುತ್ತೇವೆ ಭರವಸೆಯನ್ನು ನೀಡಿದ್ದಾರೆ.





