ಬೆಂಗಳೂರು: ಮಲಯಾಳಂ ಸೂಪರ್ ಸ್ಟಾರ್ ಮೋಹನ್ಲಾಲ್ ಮತ್ತು ಕನ್ನಡದ ಯುವ ಪ್ರತಿಭೆ ಸಮರ್ಜಿತ್ ಲಂಕೇಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಬಹುಭಾಷಾ ಚಿತ್ರ ‘ವೃಷಭ’ ಇದೇ ಡಿಸೆಂಬರ್ 25 ರಂದು ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಈ ಚಿತ್ರದ ಪ್ರಚಾರ ಸಮಾರಂಭಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಲಂಕೇಶ್ ಅವರ ಮೊಮ್ಮಗ ಮತ್ತು ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಅವರು ಅಂತರರಾಷ್ಟ್ರೀಯ ಮಟ್ಟದ ನಟ ಮೋಹನ್ ಲಾಲ್ ಅವರೊಂದಿಗೆ ನಟಿಸುತ್ತಿರುವುದು ಹೆಮ್ಮೆಯ ವಿಷಯ. ‘ವೃಷಭ’ ಚಿತ್ರವು ಹೆಸರಿಗೆ ತಕ್ಕಂತೆ ದೇಶದಾದ್ಯಂತ ಗೂಳಿಯಂತೆ ಮುನ್ನುಗ್ಗಲಿ. ಕನ್ನಡ ಚಿತ್ರಗಳು ಇಂದು ಬಾಲಿವುಡ್ ಸೇರಿದಂತೆ ದೇಶಾದ್ಯಂತ ಸದ್ದು ಮಾಡುತ್ತಿರುವುದು ನಮಗೆಲ್ಲ ಸಂತೋಷದ ವಿಷಯ ಎಂದು ಸಂತಸ ವ್ಯಕ್ತಪಡಿಸಿದರು.
ತಂದೆ-ಮಗನ ಎಮೋಷನಲ್ ಕಥೆ
ನಂದಕಿಶೋರ್ ನಿರ್ದೇಶನದ ಈ ಚಿತ್ರವು ತಂದೆ ಮತ್ತು ಮಗನ ನಡುವಿನ ಗಾಢವಾದ ಬಾಂಧವ್ಯದ ಎಮೋಷನಲ್ ಕಥೆಯನ್ನು ಹೊಂದಿದೆ. ಕೇವಲ ಭಾವನೆಗಳಲ್ಲದೆ, ಅದ್ಧೂರಿ ಸೆಟ್ಗಳು ಮತ್ತು ರೋಚಕ ಸಾಹಸ ದೃಶ್ಯಗಳು ಈ ಸಿನಿಮಾದ ಹೈಲೈಟ್ ಆಗಿರಲಿವೆ. ಏಕಕಾಲದಲ್ಲಿ ಮಲಯಾಳಂ ಮತ್ತು ತೆಲುಗಿನಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿಯೂ ತೆರೆಕಾಣುತ್ತಿದೆ.
ಘಟಾನುಘಟಿಗಳ ತಾರಾಗಣ
ಚಿತ್ರದಲ್ಲಿ ರಾಗಿಣಿ ದ್ವಿವೇದಿ, ನಯನ್ ಸಾರಿಕಾ, ಅಜಯ್, ನೇಹಾ ಸಕ್ಸೇನಾ, ಗರುಡ ರಾಮ್, ಅಯ್ಯಪ್ಪ ಪಿ. ಶರ್ಮಾ ಮತ್ತು ಕಿಶೋರ್ ಸೇರಿದಂತೆ ದೊಡ್ಡ ತಾರಾಗಣವೇ ಇದೆ. ತಾಂತ್ರಿಕವಾಗಿಯೂ ಸಿನಿಮಾ ಅತ್ಯಂತ ಬಲಿಷ್ಠವಾಗಿದ್ದು, ಆಸ್ಕರ್ ಪ್ರಶಸ್ತಿ ವಿಜೇತ ರೇಸುಲ್ ಪೂಕುಟ್ಟಿ ಅವರ ಧ್ವನಿ ವಿನ್ಯಾಸ ಮತ್ತು ಸ್ಯಾಮ್ ಸಿ.ಎಸ್. ಅವರ ಸಂಗೀತವಿದ್ದು, ಪೀಟರ್ ಹೆನ್ ಮತ್ತು ಸ್ಟಂಟ್ ಸಿಲ್ವಾ ಅವರ ಸಾಹಸ ನಿರ್ದೇಶನದಿಂದ ಚಿತ್ರ ಮೂಡಿಬಂದಿದೆ.
ಭಾರೀ ವೆಚ್ಚದಲ್ಲಿ ನಿರ್ಮಾಣ
ಬಾಲಾಜಿ ಟೆಲಿಫಿಲ್ಮ್ಸ್ ಅಡಿಯಲ್ಲಿ ಏಕ್ತಾ ಕಪೂರ್ ಸೇರಿದಂತೆ ದೊಡ್ಡ ನಿರ್ಮಾಪಕರ ತಂಡ ಈ ಚಿತ್ರವನ್ನು ನಿರ್ಮಿಸಿದೆ. ಡಿಸೆಂಬರ್ 25 ರ ಕ್ರಿಸ್ಮಸ್ ರಜೆಯ ಸಂಭ್ರಮದಲ್ಲಿ ‘ವೃಷಭ’ ಸಿನಿಮಾ 2025ರ ಅತಿದೊಡ್ಡ ಸಿನಿಮೀಯ ಅನುಭವ ನೀಡಲು ಸಜ್ಜಾಗಿದೆ.
