ಕೇರಳಾದ ಭಗವತಿ ಟೆಂಪಲ್ ದಿನದಿಂದ ದಿನಕ್ಕೆ ಸಿಕ್ಕಾಪಟ್ಟೆ ಫೇಮಸ್ ಆಗ್ತಿದೆ. ಅದಕ್ಕೆ ಕಾರಣ ಒನ್ ಅಂಡ್ ಓನ್ಲಿ ಡಿಬಾಸ್ ದರ್ಶನ್. ಇಷ್ಟಕ್ಕೂ ಕರುನಾಡ ದಾಸನಿಗೂ ಕೇರಳ ದೇವಸ್ಥಾನಕ್ಕೂ ಏನು ಸಂಬಂಧ ಅಂತೀರಾ..? ಈ ಸ್ಪೆಷಲ್ ಇಂಟರೆಸ್ಟಿಂಗ್ ಸ್ಟೋರಿ ಒಮ್ಮೆ ನೋಡಿ.
ಮಾಡಾಯಿಕಾವು ಶ್ರೀ ತಿರುವರ್ ಕಾಟ್ ಕಾವು ಭಗವತಿ ದೇವಸ್ಥಾನ. ಇದು ಕೇರಳದ ಕಣ್ಣೂರು ಜಿಲ್ಲೆಯಲ್ಲಿರೋ ಶ್ರೀ ಕ್ಷೇತ್ರ. ಅದರಲ್ಲೂ ಶತ್ರು ಸಂಹಾರ ಪೂಜೆಗೆ ಪ್ರಸಿದ್ಧಿ ಪಡೆದಿರೋ ಪವಾಡ ಕ್ಷೇತ್ರ. ಭಗವತಿಯ ಶಕ್ತಿಯು ಕ್ಷಣಮಾತ್ರದಲ್ಲೇ ಗೋಚರವಾಗುವ ಪರಮ ಪುಣ್ಯ ಕ್ಷೇತ್ರಕ್ಕೆ ಇತ್ತೀಚೆಗೆ ನಟ ದರ್ಶನ್, ಕುಟುಂಬ ಸಮೇತ ಭೇಟಿ ನೀಡಿದ್ದರು.
ತನ್ನ ಕಷ್ಟಗಳೆನ್ನೆಲ್ಲಾ ದೂರ ಮಾಡು ಅಂತಾ ದೇವಿಗೆ ಮೊರೆ ಹೋಗಿದ್ದರು. ಅಲ್ಲದೇ ಭಗವತಿಗೆ ಶತ್ರು ಸಂಹಾರ ಪೂಜೆಯನ್ನೂ ಸಲ್ಲಿಸಿದ್ದರು. ಪುತ್ರ ವಿನೀಶ್, ಪತ್ನಿ ವಿಜಯಲಕ್ಷ್ಮೀ, ನಟ ಧನ್ವೀರ್ ಗೌಡ ಸೇರಿದಂತೆ ಆಪ್ತ ವಲಯ ಕೂಡ ಇದಕ್ಕೆ ಸಾಕ್ಷಿಯಾಗಿತ್ತು. ದರ್ಶನ್ ಈ ದೇವಸ್ಥಾನಕ್ಕೆ ಭೇಟಿ ನೀಡಿದ ಸುದ್ದಿ ಹಬ್ಬಿದ್ದೇ ತಡ, ಸಾಲು ಸಾಲು ಭಕ್ತರ ದಂಡು ಹರಿದು ಬರುತ್ತಿದೆ.
ದರ್ಶನ್ ಶತ್ರು ಸಂಹಾರ ಪೂಜೆ ಮಾಡಿಸಿದ್ದರಿಂದ ಹೆಚ್ಚಾಗಿರುವ ಭಕ್ತರಿಗೆ ಕುತೂಹಲ ಹೆಚ್ಚಾಗಿದೆ. ಕರ್ನಾಟಕದ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಮಾಡಾಯಿಕಾವು ದೇವಸ್ಥಾನಕ್ಕೆ ಭಕ್ತಾದಿಗಳು ಆಗಮಿಸುತ್ತಿದ್ದಾರೆ. ಈವರೆಗೆ ಕೇರಳದ ಹಲವು ಭಾಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಭಕ್ತರು ಮಾತ್ರ ಈ ಕ್ಷೇತ್ರಕ್ಕೆ ಆಗಮಿಸುತ್ತಿದ್ದರಂತೆ. ಆದ್ರೀಗ ದಕ್ಷಿಣದ ಬೇರೆ ಬೇರೆ ಭಾಗಗಳಿಂದ ಜನ ಹರಿದು ಬರ್ತಿದ್ದಾರೆ.
ಶತ್ರು ಸಂಹಾರ ಪೂಜೆಯ ವೇಳೆಗೆ ಭಕ್ತರಿಗೆ ದೇಗುಲದ ಒಳಭಾಗಕ್ಕೆ ಪ್ರವೇಶ ಇರುವುದಿಲ್ಲ. ದೇವಿಯ ಎದುರು ಜನ್ಮ ನಕ್ಷತ್ರ, ಹೆಸರು ಹೇಳಿ ವಿಶೇಷವಾದ ಅರ್ಚನೆ ಮಾಡಲಾಗುತ್ತದೆ. ಶತ್ರು ಸಂಹಾರದ ಪೂಜಾ ಪ್ರಸಾದವಾಗಿ ಕೋಳಿ ಖಾದ್ಯ ನೀಡಲಾಗುತ್ತದೆ. ಭಗವತಿಯ ಭಸ್ಮ ಪ್ರಸಾದ ಅತೀ ಶ್ರೇಷ್ಠವಾಗಿದ್ದು, ಭಕ್ತರು ನಂಬಿಕೆಯಿಂದ ಸ್ವೀಕಾರ ಮಾಡ್ತಾರೆ. ಅದನ್ನ ದರ್ಶನ್, ಕುಟುಂಬಸ್ಥರು ಹಾಗೂ ಆಪ್ತ ವಲಯ ಕೂಡ ಸ್ವೀಕರಿಸಿದೆ.