ಲ್ಯಾಂಡ್ಲಾರ್ಡ್ ಅಂದಾಕ್ಷಣ ಆಳಿದವರ ಕಥೆ ಅನಿಸುತ್ತೆ. ಆದ್ರೆ ಇದು ಅಳಿದು ಉಳಿದವರ ಕಥೆ. ಯೆಸ್.. ದುನಿಯಾ ವಿಜಯ್ ಸಿನಿ ದುನಿಯಾದಲ್ಲಿ ಬರ್ತಿರೋ ಮಹತ್ವದ ಸಿನಿಮಾ ಅನಿಸಿಕೊಂಡಿರೋ ಲ್ಯಾಂಡ್ಲಾರ್ಡ್ನ ಹೊಚ್ಚ ಹೊಸ ಟೀಸರ್ ಲಾಂಚ್ ಆಗಿದೆ. ಧನುಷ್ ಕರ್ಣನ್ ನೆನಪಿಸ್ತಿರೋ ಇದರಲ್ಲಿ ಅಂಥದ್ದೇನಿದೆ..? ವಿಜಯ್, ರಚಿತಾ, ಉಮಾಶ್ರೀ ಸೇರಿದಂತೆ ಯಾರೆಲ್ಲಾ ಏನೆಲ್ಲಾ ಮಾತಾಡಿದ್ರು ಅನ್ನೋದ್ರ ಕಂಪ್ಲೀಟ್ ಕಹಾನಿ ಇಲ್ಲಿದೆ.
ಅಂದು ಧನುಷ್.. ಇಂದು ವಿಜಯ್..
ಕರ್ಣನ್ ಶೈಲಿಯ ಲ್ಯಾಂಡ್ಲಾರ್ಡ್
ಆಳಿದವರ ಕಥೆ ಅಲ್ಲ.. ಅಳಿದು ಉಳಿದವರ ರೆಬೆಲ್ ಕಥೆ
ಇದು ಸ್ಯಾಂಡಲ್ವುಡ್ನ ಈ ವರ್ಷದ ಮೋಸ್ಟ್ ಎಕ್ಸ್ಪೆಕ್ಟೆಡ್ ಮೂವಿ ಲ್ಯಾಂಡ್ಲಾರ್ಡ್ ಚಿತ್ರದ ಹೊಚ್ಚ ಹೊಸ ಟೀಸರ್ ಝಲಕ್. ಇಲ್ಲಿಯವರೆಗೂ ಕ್ಯಾರೆಕ್ಟರ್ಗಳನ್ನ ಮಾತ್ರ ಇಂಟ್ರಡ್ಯೂಸ್ ಮಾಡಿಸಿದ್ದ ಚಿತ್ರತಂಡ, ಇದೇ ಮೊದಲ ಬಾರಿಗೆ ಕಥೆಯಲ್ಲಿರೋ ಗಮ್ಮತ್ತನ್ನು ಗೊತ್ತು ಮಾಡಿಸೋ ಕಾರ್ಯ ಮಾಡಿದೆ. ಯೆಸ್.. ಕನ್ನಡ ರಾಜ್ಯೋತ್ಸವ ವಿಶೇಷ ನವರಂಗ್ ಥಿಯೇಟರ್ನಲ್ಲಿ ಟೀಸರ್ ಬಿಡುಗಡೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.
ಪುರಾಣದ ರಾಮ-ಕೃಷ್ಣರು ದೇವರಾದರು. ಪಂಚತಂತ್ರದ ಹುಲಿ-ಸಿಂಹಗಳು ದಂತಕಥೆ ಆದವು. ಇತಿಹಾಸದ ರಾಜರುಗಳು ನನೆಪಿನಲ್ಲಿ ಉಳಿದರು. ಆಳಿದವರ ಎದುರು.. ಅಳಿಯದೆ ಉಳಿದವನು ಒಬ್ಬ ಮಾತ್ರ ಮಾರಿಯಾದನು. ತಲೆ ಎತ್ತಿ ಚರಿತ್ರೆಯಾದನು. ಅವನೇ ನಾಯಕನಟ ಲ್ಯಾಂಡ್ಲಾರ್ಡ್.
ತಲೆ ತಗ್ಗಿಸೋಕೆ ಮತ್ತು ತಲೆ ಬಾಗೋಕೆ ತುಂಬಾ ವ್ಯತ್ಯಾಸ ಇದೆ. ಸ್ವಾಭಿಮಾನದ ಮುಂದೆ ತಲೆ ಬಾಗೋದು ನನ್ನ ರಕ್ತದಲ್ಲೇ ಇದೆ. ಸ್ವಾರ್ಥಿಗಳ ಮುಂದೆ ತಲೆ ತಗ್ಗಿಸೋದು ನನ್ನ ಒಂದು ಹನಿ ಬೆವರಿನಲ್ಲೂ ಇಲ್ಲ.. ಅನ್ನೋ ದುನಿಯಾ ವಿಜಯ್ ಮಾಸ್ ಡೈಲಾಗ್ ಪ್ರೇಕ್ಷಕರಿಗೆ ಮಸ್ತ್ ಕಿಕ್ ಕೊಡ್ತಿದೆ. ಹಳ್ಳಿ ಬ್ಯಾಕ್ಡ್ರಾಪ್, ಬಾಳೆ ತೋಟ, ಮಧ್ಯೆಯೊಂದು ಕೆಸರು ಕೊಂಡ. ರೆಟ್ರೋ ಕಾರ್, ಅದ್ರಿಂದ ಬಂದಿಳಿಯೋ ಸಾಹುಕಾರನ ಫೇಸ್ ತೋರಿಸದೆ ಟೀಸರ್ ಸಾಕಷ್ಟು ಕುತೂಹಲ ಮೂಡಿಸಿದೆ.
ಅಂದಹಾಗೆ ಈ ಟೀಸರ್, ಮೇಕಿಂಗ್ ಹಾಗೂ ಕಥೆಯನ್ನ ಅವಲೋಕಿಸುತ್ತಿದ್ರೆ, ನಿರ್ದೇಶಕ ಜಡೇಶ್ ಕೆ ಹಂಪಿ ಹಂಡ್ರೆಂಡ್ ಪರ್ಸೆಂಟ್ ರೆಬೆಲಿಯನ್ ಸ್ಟೋರಿ ಕಟ್ಟಿರೋದು ಸ್ಪಷ್ಟವಾಗ್ತಿದೆ. ಈ ಹಿಂದೆ ದರ್ಶನ್ರ ಕಾಟೇರ ಚಿತ್ರಕ್ಕೆ ಕಥೆ ಹೆಣೆದಿದ್ದ ಇದೇ ಜಡೇಶ್, ಈ ಬಾರಿ ಕೂಡ ಅಂಥದ್ದೇ ರೆಟ್ರೋ, ಹಳ್ಳಿ ಸೊಗಡಿನ ರೆಬೆಲ್ ಕಥೆ ಸಿದ್ಧಗೊಳಿಸಿದ್ದಾರೆ. ಆದ್ರೆ ಇದು ತಮಿಳಿನ ಬ್ಲಾಕ್ ಬಸ್ಟರ್ ಹಿಟ್ ಕರ್ಣನ್ ಚಿತ್ರವನ್ನು ನೆನಪಿಸ್ತಿದೆ.
ಯೆಸ್.. ಮಾರಿ ಸೆಲ್ವರಾಜ್ ನಿರ್ದೇಶನದ 2021ರ ತಮಿಳಿನ ಹಿಟ್ ಮೂವಿಯಲ್ಲಿ ಧನುಷ್ ಅಬ್ಬರಿಸಿ, ಆರ್ಭಟಿಸಿದ್ದರು. ಉಳ್ಳವರು, ಇಲ್ಲದವರ ನಡುವಿನ ಹೋರಾಟ, ಜಾತಿ ಸಂಘರ್ಷದ ಕಥೆಗೆ ಕರ್ಣನ್ ಕಿಚ್ಚು ಹೊತ್ತಿಸಿತ್ತು. ಇದೀಗ ಅದರದ್ದೇ ಶೇಡ್ಸ್ ಲ್ಯಾಂಡ್ಲಾರ್ಡ್ ಚಿತ್ರದಲ್ಲೂ ಕಾಣಿಸ್ತಿದೆ. ಅದರಲ್ಲೂ ಕಲ್ಲೊಂದರ ಮೇಲೆ ನಾಯಕನಟ ಹತ್ತಿ, ನಿಮ್ಮೊಂದಿಗೆ ನಾನಿದ್ದೇನೆ ಅನ್ನೋ ಭರವಸೆ ಮೂಡಿಸೋ ದೃಶ್ಯ ಸೇಮ್ ಟು ಸೇಮ್ ಧನುಷ್ ರೀತಿ ದುನಿಯಾ ವಿಜಯ್ ಕೂಡ ಮಾಡ್ತಿರೋದು ಇಂಟರೆಸ್ಟಿಂಗ್.
- ಟೀಸರ್ ಜೊತೆ ಲ್ಯಾಂಡ್ಲಾರ್ಡ್ ರಿಲೀಸ್ ಡೇಟ್ ಅನೌನ್ಸ್
- 2026ರ ಜನವರಿ 23ಕ್ಕೆ ವಿಜಯ್-ರಚಿತಾ ಬರೋದು ಖಚಿತ
- ನವರಂಗ್ ಥಿಯೇಟರ್ನಲ್ಲಿ ಲ್ಯಾಂಡ್ಲಾರ್ಡ್ ಟೀಮ್..!
- ಫ್ಯಾನ್ಸ್ ಜೊತೆ ವಿಜಯ್, ರಚ್ಚು, ಉಮಾಶ್ರೀ ಖಾಸ್ಬಾತ್
ಲ್ಯಾಂಡ್ಲಾರ್ಡ್ ಟೀಸರ್ ಜೊತೆಗೆ ರಿಲೀಸ್ ಡೇಟ್ ಕೂಡ ಅಫಿಶಿಯಲಿ ಅನೌನ್ಸ್ ಮಾಡಿದೆ ಚಿತ್ರತಂಡ. 2026ರ ಜನವರಿ 23ರಂದು ಸಿನಿಮಾ ತೆರೆಗಪ್ಪಳಿಸಲಿದ್ದು, ನೋಡುಗರಿಗೆ ಹೊಸ ಅನುಭವ ನೀಡಲಿದೆ. ಯಾಕಂದ್ರೆ ಈ ಚಿತ್ರ ಕಥೆ, ಪಾತ್ರಗಳು ಹಾಗೂ ಮೇಕಿಂಗ್ನಿಂದ ಸಿಕ್ಕಾಪಟ್ಟೆ ವೈವಿಧ್ಯಮಯ ಅನಿಸಿಕೊಂಡಿದೆ. ಅದಕ್ಕೆ ಕಾರಣ ನಿರ್ಮಾಪಕ ಸತ್ಯ ಪ್ರಕಾಶ್ ಹಾಗೂ ಹೇಮಂತ್ ಗೌಡ. ಯಾವುದರಲ್ಲೂ ಕಾಂಪ್ರಮೈಸ್ ಆಗದ ಪ್ರೊಡ್ಯೂಸರ್, ಕಥೆಗೆ ಪೂರಕವಾಗಿ ತುಂಬಾ ರಿಚ್ ಆಗಿ ಮೂಡಿಬರೋಕೆ ಕಾರಣರಾಗಿದ್ದಾರೆ.
ಈ ಹಿಂದೆ ದರ್ಶನ್ ಜೊತೆ ಸಾರಥಿ ಸಿನಿಮಾ ಮಾಡಿದ್ದ ಸತ್ಯ ಪ್ರಕಾಶ್, ಇದೀಗ ಮಗ ಹೇಮಂತ್ ಜೊತೆ ಫುಲ್ ಆಗಿ ಅಪ್ಡೇಟ್ ಆಗಿ ಬಂದಿದ್ದಾರೆ. ಹಾಗಾಗಿ ಈ ಬಾರಿ ಸಾರಥಿಗಿಂತ ದೊಡ್ಡ ಹಿಟ್ ನೀಡೋ ಭರವಸೆ ಮೂಡಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಸ್ವಾಮಿ ಸಿನಿಮಾಟೋಗ್ರಫಿ ಹಾಗೂ ಕೆ ಎಂ ಪ್ರಕಾಶ್ ಶಾರ್ಪ್ ಎಡಿಟಿಂಗ್ ಮೆಚ್ಚುವಂತಿದೆ.
ದುನಿಯಾ ವಿಜಯ್ ಕಥೆ ಮುಗೀತು ಗುರು ಅಂದಾಗ ಸಲಗನಾಗಿ ಬಂದ ವಿಜಯ್ರನ್ನ ಜನ ಕೈ ಹಿಡಿದರು. ಹಾಗಾಗಿ ಸಲಗಾಭಿಮಾನಿಗಳಿಗೆ ವಿಜಯ್ ಧನ್ಯವಾದ ತಿಳಿಸಿದರು. ಕನ್ನಡಿಗರಿಗೆ ಕೋಪ ಬಂದ್ರೆ ಯಾರೂ ತಡೆಯೋಕೆ ಆಗಲ್ಲ ಹುಷಾರ್ ಎಂದ ವಿಜಯ್, ಹೆಣ್ಣು ಯಾವುದೋ ದೇವತೆ ರೂಪದಲ್ಲಿ ಬಂದು ಕೈ ಹಿಡೀತಾಳೆ ಅನ್ನೋದನ್ನ ಸ್ಮರಿಸಿದರು. ಈ ಮೂಲಕ ನಾನು ನನ್ನ ಮಗಳನ್ನ ನಿಮ್ಮ ಮಡಿಲಿಗೆ ಹಾಕ್ತಿದ್ದೀನಿ ಅಂದ್ರು. ಅಣ್ಣಾವ್ರು, ಅಪ್ಪುನ ನೆನೆದ ವಿಜಯ್, ಮಗಳು ರಿತನ್ಯಾಳನ್ನ ವೇದಿಕೆ ಕರೆದು, ಮುತ್ತಿಟ್ಟು, ಭಾವುಕರಾದ್ರು.
18 ವರ್ಷದ ಮಗಳಿಗೆ ತಾಯಿಯಾಗಿ ಕಾಣಿಸಿಕೊಳ್ತಿರೋ ರಚಿತಾ, ನಿಂಗವ್ವನಾಗಿ ಮಚ್ಚು ಹಿಡಿದು ಖದರ್ ತೋರಲಿದ್ದಾರೆ. ಅಂದಹಾಗೆ ನಿರ್ದೇಶಕ ಜಡೇಶ್ ಹೇಳಿದ ಲ್ಯಾಂಡ್ಲಾರ್ಡ್ ಕಥೆಯನ್ನ ರಚಿತಾ ತಮ್ಮ ಗಾಡ್ಫಾದರ್ಗಳಾದ ದರ್ಶನ್ ಹಾಗೂ ಲೋಕೇಶ್ ಕನಕರಾಜ್ ಬಳಿ ಹೇಳಿದ್ರಂತೆ. ಅವರು ಮಿಸ್ ಮಾಡ್ಕೊಳ್ಳದೆ ಈ ಚಿತ್ರ ಮಾಡು ಅಂದಿದ್ದಕ್ಕೆ ಲ್ಯಾಂಡ್ಲಾರ್ಡ್ನಲ್ಲಿ ಬಣ್ಣ ಹಚ್ಚಿದ್ರಂತೆ ಡಿಂಪಲ್ ಕ್ವೀನ್.
ಸ್ಯಾಂಡಲ್ವುಡ್ ಭೀಮ ವಿಜಯ್ ಕುಮಾರ್ ತಾಯಿ ಪಾತ್ರದಲ್ಲಿ ನಟಿಸಿರೋ ಹಿರಿಯನಟಿ ಉಮಾಶ್ರೀ, ವಿಜಯ್ ಕುಮಾರ್ ಈ ಧರೆಯ ದೊರೆಯಾಗಲಿ ಅಂತ ಆಶೀರ್ವಾದ ಮಾಡಿದ್ರು.
ನಟ ಮಿತ್ರ, ದುನಿಯಾ ವಿಜಯ್ ಮಗಳು ರಿತನ್ಯಾ, ಶಿಶಿರ್ ಬೈಕಾಡಿ, ರಾಕೇಶ್ ಅಡಿಗ, ನಿರ್ಮಾಪಕ ಸತ್ಯ ಪ್ರಕಾಶ್, ನಿರ್ದೇಶಕ ಜಡೇಶ್ ಕೆ ಹಂಪಿ ಹೀಗೆ ಎಲ್ಲರೂ ಚಿತ್ರದ ಬಗ್ಗೆ ಸಾಕಷ್ಟು ವಿಷಯಗಳನ್ನ ಶೇರ್ ಮಾಡಿದ್ದು ವಿಶೇಷ.
ಒಟ್ಟಾರೆ ಲ್ಯಾಂಡ್ಲಾರ್ಡ್ ನಿಜಕ್ಕೂ ಈ ಟೀಸರ್ನಿಂದ ಸಿಕ್ಕಾಪಟ್ಟೆ ಭರವಸೆ ಮೂಡಿಸಿದ್ದು, ಸ್ಯಾಂಪಲ್ನಿಂದಲೇ ಗೆಲ್ಲುವ ಸೂಚನೆ ನೀಡಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





