ಸಾಹಸಸಿಂಹ, ಅಭಿನಯ ಭಾರ್ಗವ, ಕನ್ನಡದ ಮರೆಯಲಾಗದ ಮುತ್ತು ಡಾ. ವಿಷ್ಣುವರ್ಧನ್ ನಟನೆಯ ಕೋಟಿಗೊಬ್ಬ ಚಿತ್ರಕ್ಕೆ ಬೆಳ್ಳಿ ಹಬ್ಬದ ಸಂಭ್ರಮ. ಯೆಸ್.. ಕನ್ನಡಿಗರ ಹೃದಯ ಗೆದ್ದ ಕೋಟಿಗೊಬ್ಬನಿಗೆ 25 ವರ್ಷಗಳಾದ ಹಿನ್ನೆಲೆ ಆ ಸಂಭ್ರಮವನ್ನ ಅವಿಸ್ಮರಣೀಯವಾಗಿಸಲು ಸೂರಪ್ಪ ಬಾಬು ಒಂದು ಕಾರ್ಯಕ್ರಮ ಮಾಡಿದ್ರು. ಉಪೆಂದ್ರ ದಂಪತಿ, ಗೋಲ್ಡನ್ ಸ್ಟಾರ್ ಗಣೇಶ್, ದೇವರಾಜ್ ಅದಕ್ಕೆ ಸಾಕ್ಷಿ ಆದರು.
- ಡಾ. ವಿಷ್ಣುವರ್ಧನ್ ‘ಕೋಟಿಗೊಬ್ಬ’ಗೆ ಬೆಳ್ಳಿಹಬ್ಬದ ಸಂಭ್ರಮ..!
- ಟೌನ್ಹಾಲ್ನಲ್ಲಿ ಸೂರಪ್ಪ ಬಾಬು ಅವಿಸ್ಮರಣೀಯ ಫಂಕ್ಷನ್
- ಉಪ್ಪಿ, ಗಣೇಶ್, ದೇವರಾಜ್.. ಆ ದಿನಗಳು ನೆನೆದ ಸ್ಟಾರ್ಸ್..!
- ಬದಲಾದ ತಂತ್ರಜ್ಞಾನದಲ್ಲಿ ರೀ-ರಿಲೀಸ್ ಆಗ್ತಿದೆ ಕೋಟಿಗೊಬ್ಬ
ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅಭಿನಯದ ಕೋಟಿಗೊಬ್ಬ ಚಿತ್ರ ಬಿಡುಗಡೆಯಾಗಿ 25 ವರ್ಷಗಳಾಗಿದೆ. ಈ ಸಂದರ್ಭದಲ್ಲಿ ಆ ಚಿತ್ರದ ನಿರ್ಮಾಪಕ ಸೂರಪ್ಪಬಾಬು ಒಂದು ವಿಶೇಷವಾದ ಅವಿಸ್ಮರಣೀಯ ಸಮಾರಂಭ ಆಯೋಜಿಸಿದ್ರು. ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ನಿರ್ದೇಶಕ ನಾಗಣ್ಣ, ಹಿರಿಯನಟ ದೇವರಾಜ್, ರಿಯಲ್ ಸ್ಟಾರ್ ಉಪೇಂದ್ರ, ಪ್ರಿಯಾಂಕಾ ಉಪೇಂದ್ರ, ಗೋಲ್ಡನ್ ಸ್ಟಾರ್ ಗಣೇಶ್, ಚಿತ್ರ ಸಾಹಿತಿ ಪ್ರೇಮಕವಿ ಕೆ. ಕಲ್ಯಾಣ್ ಅದಕ್ಕೆ ಸಾಕ್ಷಿಯಾದರು.
ತಮ್ಮ ಹಾಗೂ ವಿಷ್ಣುವರ್ಧನ್ ಅವರ ಜೊತೆಗಿನ ಸಂಬಂಧ ಹೇಗಿತ್ತು..? ಅವರು ತನ್ನನ್ನು ಎಷ್ಟು ಇಷ್ಟ ಪಡ್ತಿದ್ರು ಅನ್ನೋದನ್ನ ವಿವರಿಸಿದರು ಹಿರಿಯ ನಿರ್ಮಾಪಕ ಕಮ್ ವಿಷ್ಣುದಾದಾ ಆಪ್ತ ಸೂರಪ್ಪ ಬಾಬು.
ಸಾಮಾನ್ಯವಾಗಿ ನಾನು ಸಿನಿಮಾ ಸಮಾರಂಭಗಳಿಗೆ ಹೋಗುವುದಿಲ್ಲ ಎಂದ ಸಂತೋಷ್ ಹೆಗ್ಡೆ, 25 ವರ್ಷಗಳ ನಂತ್ರ ನೀವೆಲ್ಲಾ ಅವ್ರನ್ನ ನೆನಪಿಸಿಕೊಳ್ಳುತ್ತಿರೋದು ವಿಶೇಷ ಎನಿಸಿತು. ಅದಕ್ಕಾಗೇ ನಾನಿಲ್ಲಿಗೆ ಬಂದೆ. ವಿಷ್ಣುವರ್ಧನ್ ಅವರ ಬಗ್ಗೆ ನಾನು ಪುಸ್ತಕಗಳಲ್ಲಿ ಓದಿ ತಿಳಿದುಕೊಂಡಿದ್ದೇನೆ. ಇಡೀ ಕುಟುಂಬ ಕೂತು ನೋಡುವಂಥ ಚಿತ್ರಗಳನ್ನಷ್ಟೇ ಮಾಡ್ತಿದ್ರು ಅವರು ಅಂತ ಗುಣಗಾನ ಮಾಡಿದ್ರು.
ನಾನು ಯಾವಾಗ ಮನೆಗೆ ಹೋದ್ರೂ ಸಹ, ಒಬ್ಬ ತಮ್ಮನ ರೀತಿ ಆತ್ಮೀಯತೆಯಿಂದ ಬರಮಾಡಿಕೊಂಡು, ಅವರ ಮನೆಯ ತೂಗುಯ್ಯಾಲೆಯಲ್ಲಿ ಕೂರಿಸಿಕೊಳ್ಳುತ್ತಿದ್ರು. ಅಲ್ಲಿ ಭಾರತಿ ಅವರು ಕೈ ತುತ್ತು ನೀಡುತ್ತಿದ್ದರು. ಅವರ ಶಿಸ್ತು ಸಂಯಮಗಳನ್ನೇ ನನ್ನ ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ. ಮುಂಬೈನಲ್ಲಿ ಈ ಚಿತ್ರದ ಶೂಟಿಂಗ್ಗಾಗಿ 30 ದಿನಗಳ ಕಾಲ ಅವರ ಜತೆ ಕಳೆದಿದ್ದೆ ಅಂತ ಹಿರಿಯ ನಟ ದೇವರಾಜ್ ಆ ನೆನಪುಗಳನ್ನ ಮೆಲುಕು ಹಾಕಿದ್ರು.
ವಿಷ್ಣು ಸಾರ್ ಅವರ ಬಗ್ಗೆ ಹೇಳೊದು ತುಂಬಾ ಇದೆ ಎಂದ ಉಪೆಂದ್ರ, ಅವರನ್ನು ಮಾತಾಡಿಸಬೇಕೆಂದೇ ನಾನು ಅವ್ರ ಮನೆಗೆ ಹೋಗ್ತಿದ್ದೆ. ಆಧ್ಯಾತ್ಮ, ದೇವರ ಬಗ್ಗೆ ತುಂಬಾ ಹೇಳ್ತಿದ್ರು. ಅಂತಹ ಮಹಾನ್ ವ್ಯಕ್ತಿ ಮಾತು ಕೇಳೋದೇ ಪುಣ್ಯ. ಅವರಿಂದ ನಾನು ಸ್ಪೂರ್ತಿ ಪಡೆಯುತ್ತಿದ್ದೆ ಎಂದ್ರು ಉಪ್ಪಿ.
ನಾನು ವಿಷ್ಣು ಸಾರ್ ದೊಡ್ಡ ಅಭಿಮಾನಿ ಎಂದ ಗೋಲ್ಡನ್ ಸ್ಟಾರ್ ಗಣೇಶ್, ಅವರಂತೇ ನನ್ನ ಕೈಗೂ ಕಡಗ ಹಾಕ್ಕೊಂಡಿದ್ದೇನೆ. ಅವ್ರ ಸಿನಿಮಾಗಳನ್ನು ಬ್ಲಾಕ್ ಟಿಕೆಟ್ ತಗೊಂಡು ನೋಡ್ತಿದ್ದೆ. ನೀನು ಯಾವಾಗಲೂ ಸಂತೋಷವಾಗಿರುವಂತೆ ಇರಬೇಡ.. ಆದ್ರೆ ಸಂತೋಷವಾಗಿರು ಎನ್ನುತ್ತಿದ್ರು ಎಂದರು.
ಚಿ ಉದಯ್ ಶಂಕರ್ ಮಗ ಗುರುದತ್ ಮಾತನಾಡುತ್ತಾ ಶಿವಣ್ಣ ಹಾಹಾ ವಿಷ್ಣು ಸಾರ್ ಒಂದು ಚಿತ್ರದಲ್ಲಿ ಅಭಿನಯಿಸಬೇಕಿತ್ತು. ಸ್ಕ್ರಿಪ್ಟ್ ಲೇಟಾಗಿದ್ದರಿಂದ ಆಗಲಿಲ್ಲ. ಶಿವಣ್ಣನ ಮೇಲೆ ಅವರು ತುಂಬಾ ಅಭಿಮಾನ ಇಟ್ಕೊಂಡಿದ್ರು ಅಂತ ಅಶೋಕ ಹೋಟೆಲ್ ಪ್ರಸಂಗವನ್ನ ನೆನೆದರು.
ಚಿತ್ರ ಸಾಹಿತಿ ಕೆ. ಕಲ್ಯಾಣ್, ನಿರ್ದೇಶಕ ನಾಗಣ್ಣ ಕೂಡ ವಿಷ್ಣುದಾದಾ ಜೊತೆಗಿನ ಒಡನಾಟದ ದಿನಗಳನ್ನು ಹಂಚಿಕೊಂಡರು. ಒಟ್ಟಾರೆ ಕೋಟಿಗೊಬ್ಬ ಚಿತ್ರದ ಬೆಳ್ಳಿ ಹಬ್ಬ ಮಾಡಿರೋ ಪ್ರೊಡ್ಯೂಸರ್ ಸೂರಪ್ಪ ಬಾಬು, ಸದ್ಯದಲ್ಲೇ ಈ ಸಿನಿಮಾನ ಬದಲಾದ ತಂತ್ರಜ್ಞಾನದಲ್ಲಿ ರೀ-ರಿಲೀಸ್ ಮಾಡೋ ಯೋಜನೆಯಲ್ಲಿದ್ದಾರೆ. ಇದು ನಿಜಕ್ಕೂ ವಿಷ್ಣು ಫ್ಯಾನ್ಸ್ಗೆ ಖುಷಿ ತರುವ ವಿಷಯ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
