ಕನ್ನಡ ಚಿತ್ರರಂಗದ ಬಾದ್ಷಾ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾ “ಮಾರ್ಕ್” ಇದೇ ಡಿಸೆಂಬರ್ 25ರಂದು ರಾಜ್ಯಾದ್ಯಂತ ಭರ್ಜರಿಯಾಗಿ ತೆರೆಕಾಣಲಿದೆ. ಚಿತ್ರದ ಪ್ರಚಾರ ಕಾರ್ಯಗಳು ಜೋರಾಗಿದ್ದು, ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿದ್ದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ನೀಡಿದ ಭಾಷಣ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ವೇದಿಕೆಯಲ್ಲಿ ಮಾತನಾಡುವ ವೇಳೆ ಕಿಚ್ಚ ಸುದೀಪ್ ಅವರು ತಮ್ಮ ವಿರೋಧಿಗಳಿಗೆ ಸ್ಪಷ್ಟ ಹಾಗೂ ಕಠಿಣ ಎಚ್ಚರಿಕೆ ನೀಡಿದ್ದಾರೆ.
ಹುಬ್ಬಳ್ಳಿ ವೇದಿಕೆಯಲ್ಲಿ ಮಾತನಾಡಿದ ಸುದೀಪ್, “ನನಗೆ ಮಾತನಾಡೋಕೆ ತುಂಬಾ ಆಸೆ ಇದೆ. ಆದ್ರೆ ನಾನು ಕಂಟ್ರೋಲ್ ಮಾಡಿಕೊಂಡು ಮಾತಾಡ್ತಿದ್ದೀನಿ. ಕೆಲವು ಮಾತುಗಳನ್ನು ಇಲ್ಲೇ, ಈ ವೇದಿಕೆಯಲ್ಲಿ ಹೇಳಿದ್ರೆ, ಇಡೀ ಕರ್ನಾಟಕಕ್ಕೆ ಎಲ್ಲಿ ತಟ್ಟಬೇಕೋ ಅಲ್ಲಿಗೆ ತಟ್ಟುತ್ತೆ. ಅದಕ್ಕಾಗಿಯೇ ಈ ಕಾರ್ಯಕ್ರಮವನ್ನು ಹುಬ್ಬಳ್ಳಿಯಲ್ಲಿ ಮಾಡಿದ್ದೇವೆ” ಎಂದು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ‘ಮಾರ್ಕ್’ ಚಿತ್ರದ ವಿರುದ್ಧ ನೆಗೆಟಿವ್ ಪ್ರಚಾರ ನಡೆಯುತ್ತಿದೆ ಎಂಬ ಆರೋಪಗಳ ನಡುವೆಯೇ, ಸುದೀಪ್ ಅವರು ಈ ರೀತಿಯ ಹೇಳಿಕೆ ನೀಡಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. “ಡಿಸೆಂಬರ್ 25ಕ್ಕೆ ಬಾಗಿಲು ತಟ್ಟುತ್ತೇನೆ ಅಂತ ಜುಲೈ 5ಕ್ಕೆ ಪ್ರಾಮಿಸ್ ಮಾಡಿದ್ದೆ. ಅದರಂತೆ ನಮ್ಮ ಸಿನಿಮಾ ಥಿಯೇಟರ್ಗೆ ಬರ್ತಿದೆ. ಆದ್ರೆ ಹೊರಗಡೆ ಒಂದು ಪಡೆ ಯುದ್ಧಕ್ಕೆ ರೆಡಿಯಾಗ್ತಿದೆ. ಈ ವೇದಿಕೆಯಿಂದಲೇ ಹೇಳ್ತಿದ್ದೀನಿ.. ಯುದ್ಧಕ್ಕೆ ನಾವು ಸಿದ್ಧ. ಯಾಕಂದ್ರೆ ನಾವು ನಮ್ಮ ಮಾತಿಗೆ ಬದ್ಧ” ಎಂದು ಸುದೀಪ್ ಸವಾಲು ಹಾಕಿದ್ದಾರೆ.
ಇದೇ ವೇಳೆ ತಮ್ಮ ಮೌನದ ಬಗ್ಗೆ ಮಾತನಾಡಿದ ಅವರು, “ನಾನು ಸೈಲೆಂಟ್ ಆಗಿದ್ದೇನೆ ಅಂದ್ರೆ ನನಗೆ ಬಾಯಿ ಇಲ್ಲ ಅಂತ ಅರ್ಥವಲ್ಲ. ಕೆಲವೊಮ್ಮೆ ಸೈಲೆಂಟ್ ಆಗಿ ಇರೋದು ಒಳ್ಳೆಯದೋ ಕೆಟ್ಟದ್ದೋ ಗೊತ್ತಿಲ್ಲ. ಆದರೆ ನಿಮ್ಮೆಲ್ಲರಿಗಾಗಿ, ನೀವು ಚೆನ್ನಾಗಿ ಇರಬೇಕು ಅನ್ನೋ ಕಾರಣಕ್ಕೆ ನಾನು ಎಲ್ಲವನ್ನೂ ಮುಚ್ಕೊಂಡು ಇದ್ದೆ” ಎಂದು ಅಭಿಮಾನಿಗಳ ಮೇಲೆ ಇರುವ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರು.
ಸುದೀಪ್ ಅವರ ಸಹನೆಯಿಂದಾಗಿ ತಮ್ಮ ಅಭಿಮಾನಿಗಳ ಮೇಲೆ ಅನಗತ್ಯ ಟೀಕೆಗಳು ಹಾಗೂ ಕಲ್ಲು ತೂರಾಟವಾಗುತ್ತಿದೆ ಎಂಬ ನೋವನ್ನೂ ಅವರು ಹಂಚಿಕೊಂಡರು. “ನನ್ನ ಸಹನೆಯಿಂದಾಗಿ ಬಹಳಷ್ಟು ಕಲ್ಲಿನ ತೂರಾಟ ನಿಮ್ಮ ಮೇಲೆ ಬೀಳುತ್ತಿದೆ. ಅದನ್ನೆಲ್ಲ ನೀವು ಸಹಿಸಿಕೊಂಡು ಬಂದಿದ್ದೀರಿ. ನಾನು ಈಗ ಹೇಳೋದು ಒಂದೇ.. ತಡೆಯೋ ತನಕ ತಡೀರಿ, ಮಾತಾಡೋ ಸಮಯ ಬಂದಾಗ ಮಾತಾಡಿ” ಎಂದು ಅಭಿಮಾನಿಗಳಿಗೆ ಸ್ಪಷ್ಟ ಸಂದೇಶ ನೀಡಿದರು.
ಇನ್ನು ಸಿನಿಮಾ ಬಗ್ಗೆ ಮಾತನಾಡಿದ ಸುದೀಪ್, “‘ಮಾರ್ಕ್’ ಒಂದು ಅದ್ಭುತವಾದ ಸಿನಿಮಾ. ಇದರಲ್ಲಿ ಹಲವರ ಕನಸುಗಳಿವೆ. ಈ ಸಿನಿಮಾವನ್ನು ನೀವು ಎಲ್ಲರೂ ಸೊಗಸಾಗಿ ಸ್ವಾಗತಿಸುತ್ತೀರಿ ಎಂಬ ಭರವಸೆ ನನಗಿದೆ. ಡಿಸೆಂಬರ್ 25ರಂದು ಮಾರ್ಕ್ ನೋಡಿದ ಹುಬ್ಬಳ್ಳಿ ಜನರ ಕೂಗಾಟ ಬೆಂಗಳೂರಿನಲ್ಲಿ ಕೇಳಿಸಬೇಕು” ಎಂದು ಅಭಿಮಾನಿಗಳಿಗೆ ಮನವಿ ಮಾಡಿದರು.
ವಿಜಯ್ ಕಾರ್ತಿಕೇಯ ನಿರ್ದೇಶನದಲ್ಲಿ ಮೂಡಿಬಂದಿರುವ ‘ಮಾರ್ಕ್’ ಒಂದು ಪಕ್ಕಾ ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಈಗಾಗಲೇ ಚಿತ್ರದ ಟ್ರೇಲರ್ ಹಾಗೂ ‘ಮಸ್ತ್ ಮಲೈಕಾ’ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಶೇಷವಾಗಿ ಸುದೀಪ್ ಅವರ ಪುತ್ರಿ ಸಾನ್ವಿ ಹಾಡಿರುವ ಹಾಡು ಅಭಿಮಾನಿಗಳ ಮನ ಗೆದ್ದಿದೆ.





