ಎಲ್ಲಾ ಅಂದುಕೊಂಡಂತೆ ಆಗಿದ್ದಿದ್ರೆ ಇಂದಿಗೆ ಕರ್ಣ ಸೀರಿಯಲ್ನ ಮೂರನೇ ಸಂಚಿಕೆ ಪ್ರಸಾರವಾಗಬೇಕಿತ್ತು. ಆದ್ರೀಗ ಆ ದಾನವೀರ ಶೂರ ಕರ್ಣನಂತೆ, ಅದ್ರ ಟೈಟಲ್ ಇಟ್ಕೊಂಡು ಸಿನಿಮಾ, ಸೀರಿಯಲ್ ಮಾಡೋರಿಗೂ ಸಂಕಷ್ಟ ತಪ್ಪಿಲ್ಲ. ಕೋರ್ಟ್ ಮೆಟ್ಟಿಲೇರುವ ಮೂಲಕ ಕಾನೂನಿನ ಬಲೆಗೆ ಬಿದ್ದಿದೆ ಕರ್ಣ. ಅದ್ಯಾಕೆ ಏನು..? ಅದಕ್ಕೆ ನಟ, ನಟಿಯರು ಏನಂತಾರೆ ಅನ್ನೋದನ್ನ ನೀವು ತಿಳಿಯಲೇ ಬೇಕು.
- ಕೋರ್ಟ್ನಲ್ಲಿ ‘ಕರ್ಣ’.. ವ್ಯಕ್ತಿ ಜೊತೆ ಟೈಟಲ್ಗೂ ತಪ್ಪಿಲ್ಲ ಕಷ್ಟ
- ಪ್ರೋಮೋದಲ್ಲಿ ಅಬ್ಬರಿಸಿ, ಪ್ರಸಾರದ ದಿನವೇ ಕೈಕೊಟ್ಟ ‘ಕರ್ಣ’
- ಗ್ಯಾರಂಟಿ ನ್ಯೂಸ್ನಲ್ಲಿ ಕಿರಣ್ ರಾಜ್ & ನಮ್ರತಾ ಖಾಸ್ಬಾತ್
- ವಾಹಿನಿಗಳ ನಡುವೆ ತಿಕ್ಕಾಟ.. ಪ್ರೊಡ್ಯೂಸರ್ಗೆ ಪ್ರಾಣ ಸಂಕಟ
ಕಿರುತೆರೆ ಸೀರಿಯಲ್ಗಳ ಮೂಲಕ ಪ್ರೇಕ್ಷಕರ ಮನದ ರಾಜನಾಗಿರೋ ಕಿರಣ್ ರಾಜ್ ಹಾಗೂ ಬಿಗ್ಬಾಸ್ ಬ್ಯೂಟಿ, ಸೋಶಿಯಲ್ ಮೀಡಿಯಾ ಕ್ಯೂಟಿ ನಮ್ರತಾ ಗೌಡ ಮುಖ್ಯಭೂಮಿಕೆಯ ಹೊಚ್ಚ ಹೊಸ ಸೀರಿಯಲ್ ಕರ್ಣ. ಇದು ಮುದ್ದಾದ ಪ್ರೋಮೋಗಳ ಮೂಲಕವೇ ಎಲ್ಲರ ಕಾಯುವಿಕೆಗೆ ಪಾತ್ರವಾಗಿತ್ತು. ಎಲ್ಲಾ ಅಂದುಕೊಂಡಂತೆ ಆಗಿದ್ದಿದ್ರೆ ಇದೇ ಜೂನ್ 16ರಿಂದ ಅಂದ್ರೆ ಮೊನ್ನೆ ಸೋಮವಾರದಿಂದ ಪ್ರಸಾರವಾಗಬೇಕಿತ್ತು. ಇಂದು ಮೂರನೇ ಸಂಚಿಕೆಗೆ ಎಲ್ಲರೂ ಕಾಯಬೇಕಿತ್ತು.
ಎಡವಟ್ ಆದ ಸಮಯದಿಂದಾಗಿ ಎಲ್ಲವೂ ಉಲ್ಟಾ ಪಲ್ಟಾ ಆಗೋಗಿದೆ. ಅದಕ್ಕೆ ಕಾರಣ ನಟಿ ಭವ್ಯ ಗೌಡ. ಈಕೆ ಕರ್ಣ ಪ್ರಸಾರವಾಗಬೇಕಿದ್ದ ವಾಹಿನಿ ಹಾಗೂ ಕೋರ್ಟ್ನಿಂದ ಸೀರಿಯಲ್ಗೆ ಸ್ಟೇ ತಂದಿರೋ ಎರಡೂ ವಾಹಿನಿಗಳಲ್ಲಿ ಕಾಂಟ್ರಾಕ್ಟ್ಗೆ ಸಹಿ ಹಾಕಿದ್ದಾರೆ. ಒಂದ್ಕಡೆ ಕಾಂಟ್ರಾಕ್ಟ್ ಮುಗಿಯೋಕೆ ಮೊದಲೇ ಮತ್ತೊಂದು ಕಡೆ ಹೋಗಿ ನಟಿಸ್ತಿರೋದಕ್ಕೆ ಸ್ವತಃ ವಾಹಿನಿಯೇ ಚಕಾರ ಎತ್ತಿದೆ. ಇದು ಭವ್ಯ ಗೌಡ, ಕರ್ಣ ಸೀರಿಯರ್ ಮಂದಿ ಹಾಗೂ ವಾಹಿನಿ ಎಲ್ಲರಿಗೂ ಅಫೆಕ್ಟ್ ಆಗಿದೆ.
ಸಿನಿಮಾ ಹಾಗೂ ಸೀರಿಯಲ್ ಖ್ಯಾತಿಯ ಡೇರ್ ಡೆವಿಲ್ ನಿರ್ಮಾಪಕಿ ಶ್ರುತಿ ನಾಯ್ಡು ಅವರು ಈಗಾಗ್ಲೇ ಕರ್ಣ ಸೀರಿಯಲ್ಗಾಗಿ ಸಾಕಷ್ಟು ಹಣ ಸುರಿದಿದ್ದರು. ಕಲಾವಿದರ ರೆಡಮ್ಯೂನರೇಷನ್, ಲೊಕೇಷನ್ಸ್ ಸೇರಿದಂತೆ 45ಕ್ಕೂ ಅಧಿಕ ದಿನಗಳ ಕಾಲ ಶೂಟಿಂಗ್ ನಡೆಸಿದ್ದರು. ಏಳೆಂಟು ಎಪಿಸೋಡ್ಗಳನ್ನ ಬ್ಯಾಂಕಿಂಗ್ ಕೂಡ ಮಾಡಿದ್ದರು. ಆದ್ರೀಗ ಏಕಾಏಕಿ ಕೋರ್ಟ್ನಿಂದ ಚೆಕ್ಮೇಟ್ ಇಡಲಾಗಿದೆ. ಇದು ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿಕೊಂಡ್ರೆ ಇಬ್ಬರಿಗೂ ಒಳಿತಾಗಲಿದೆ. ಇಲ್ಲದಿದ್ರೆ ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಅಂದಂತೆ ಇಡೀ ಕರ್ಣ ಸೀರಿಯಲ್ ತಂಡಕ್ಕೆ ಬಹುದೊಡ್ಡ ನಷ್ಟವಾಗಲಿದೆ.
ಒಟ್ಟಾರೆ ಕರ್ಣ ಸೀರಿಯಲ್ ನಿರ್ಮಾಪಕಿ ಶ್ರುತಿ ನಾಯ್ಡು ಕೂಡ ಇದ್ರಿಂದ ಸಂಕಷ್ಟದಲ್ಲಿದ್ದು, ಟೆಲಿವಿಷನ್ ಅಸೋಸಿಯೇಷನ್ ಈ ಸಮಸ್ಯೆಯನ್ನು ಬಗೆಹರಿಸಿ, ಆದಷ್ಟು ಬೇಗ ಇಬ್ಬರಿಗೂ ನ್ಯಾಯ ಕೊಡಿಸಬೇಕಿದೆ.