ಕನ್ನಡ ಚಿತ್ರರಂಗದ ಅತ್ಯಂತ ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ‘ಕಾಂತಾರ: ಚಾಪ್ಟರ್-1’ ಚಿತ್ರದ ಶೂಟಿಂಗ್ ಸಮಯದಲ್ಲಿ ಸಾಲು ಸಾಲು ದುರಂತಗಳು ನಡೆಯುತ್ತಿದೆ. ಈ ಹಿಂದೆ 2022ರಲ್ಲಿ ಬಿಡುಗಡೆಯಾದ ಕಾಂತಾರ ಸಿನಿಮಾ ವಿಶ್ವಾದ್ಯಂತ ಯಶಸ್ಸನ್ನು ಕಂಡಿತ್ತು. ಆದರೆ, ಅದರ ಪ್ರೀಕ್ವೆಲ್ ಚಿತ್ರೀಕರಣದಲ್ಲಿ ಈಗ ಮೂವರು ಕಲಾವಿದರು ದುರ್ಘಟನೆಗಳಲ್ಲಿ ಸಾವನ್ನಪ್ಪಿದ್ದಾರೆ. ಇದು ಸಿನಿಮಾ ತಂಡಕ್ಕೆ ಮತ್ತಷ್ಟು ಆತಂಕ ಹೆಚ್ಚಿಸಿದೆ.
ಮೊದಲನೇ ದುರಂತ: ಜೂನಿಯರ್ ಆರ್ಟಿಸ್ಟ್ ಕಪಿಲ್ ನದಿಯಲ್ಲಿ ಮುಳುಗಿದ ಸಾವು
ಮೇ 6, 2025ರಂದು, ಕಾಂತಾರ ಚಾಪ್ಟರ್-1ನ ಶೂಟಿಂಗ್ ಸಮಯದಲ್ಲಿ ಕೇರಳದ ಕಪಿಲ್ ಎಂಬ ಜೂನಿಯರ್ ಆರ್ಟಿಸ್ಟ್ ಕೊಲ್ಲೂರಿನ ಸೌಪರ್ಣಿಕಾ ನದಿಯಲ್ಲಿ ಈಜಲು ಹೋಗಿ ಮುಳುಗಿ ಮೃತಪಟ್ಟಿದ್ದರು. ಅವರು ತಂಡದ ಸದಸ್ಯರೊಂದಿಗೆ ನೀರಿನ ಆಳ ತಿಳಿಯದೆ ಇಳಿದಿದ್ದರು. ಈ ಘಟನೆಗೆ ಮುನ್ನವೇ, ಸಿನಿಮಾ ತಂಡಕ್ಕೆ ದೈವದ ಎಚ್ಚರಿಕೆ ಬಂದಿತ್ತು.
ಎರಡನೇ ದುರಂತ: ಕಾಮಿಡಿ ಕಿಲಾಡಿಗಳ ರಾಕೇಶ್ ಪೂಜಾರಿಯ ಹೃದಯಾಘಾತ
ಕೇವಲ 6 ದಿನಗಳ ನಂತರ, ಮೇ 12ರಂದು, ಕಾಮಿಡಿ ಕಿಲಾಡಿಗಳ ಶೋದ ವಿಜೇತ ಮತ್ತು ಕಾಂತಾರ ಚಾಪ್ಟರ್-1ನ ನಟ ರಾಕೇಶ್ ಪೂಜಾರಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಅವರು ತಮ್ಮ ಗೆಳೆಯನ ಮದುವೆ ಸಮಾರಂಭ ಮುಗಿಸಿ ಮನೆಗೆ ಮರಳಿದ್ದರು. ರಾತ್ರಿಯ ವೇಳೆ ಹಠಾತ್ ಎದೆನೋವು ಕಾಣಿಸಿಕೊಂಡು ಹೃದಯಾಘಾತದಿಂದ ಮೃತಪಟ್ಟಿದ್ದರು. ರಿಷಬ್ ಶೆಟ್ಟಿ ಅವರು ರಾಕೇಶ್ ಅವರಿಗೆ ಸಂತಾಪ ಸೂಚಿಸಿ, “ನೀನು ನನ್ನ ಮನಸ್ಸಿನಲ್ಲಿ ಎಂದೆಂದಿಗೂ ಅದ್ಭುತ ಕಲಾವಿದ” ಎಂದು ಹೇಳಿದ್ದಾರೆ.
ಮೂರನೇ ದುರಂತ: ಮಿಮಿಕ್ರಿ ಕಲಾವಿದ ವಿಜು ವಿ.ಕೆ ಯ ಹಠಾತ್ ಸಾವು
ಇನ್ನೂ ಈ ಆಘಾತದಿಂದ ಸಿಲುಕಿದ್ದ ಸಿನಿಮಾ ತಂಡಕ್ಕೆ ಜೂನ್ 12ರಂದು ಮತ್ತೊಂದು ದುಃಖದ ಸುದ್ದಿಬಂದಿದ್ದು, ಕೇರಳದ ತ್ರಿಶೂರ್ ಮೂಲದ ಮಿಮಿಕ್ರಿ ಕಲಾವಿದ ವಿಜು ವಿ.ಕೆ ತೀರ್ಥಹಳ್ಳಿ ತಾಲೂಕಿನ ಯಡೂರಿನ ಹೋಂ ಸ್ಟೇಯಲ್ಲಿ ತಂಗಿದ್ದರು. ರಾತ್ರಿ ಹಠಾತ್ ಎದೆನೋವು ಕಾಣಿಸಿಕೊಂಡು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಇದು ಕಾಂತಾರ ಸೆಟ್ನಲ್ಲಿ 36 ದಿನಗಳಲ್ಲಿ ಮೂರನೇಯ ದುಃಖದ ಸಂಗತಿಯಾಗಿದೆ.
ದೈವದ ಎಚ್ಚರಿಕೆ
ಈ ಹಿಂದೆ ದೈವವು ರಿಷಬ್ ಶೆಟ್ಟಿಗೆ “ಸಂಕಷ್ಟಗಳು ಬರಲಿವೆ, ನಿಮ್ಮ ಸುತ್ತಲೂ ಕೇಡು ಬಯಸುವವರು ಇದ್ದಾರೆ” ಎಂದು ಎಚ್ಚರಿಕೆ ನೀಡಿತ್ತು.
ಕಾಂತಾರ ಚಾಪ್ಟರ್-1 ಚಿತ್ರವು ದೊಡ್ಡ ಬಜೆಟ್ ಮತ್ತು ಅಪಾರ ನಿರೀಕ್ಷೆಗಳೊಂದಿಗೆ ನಿರ್ಮಾಣವಾಗುತ್ತಿದೆ. ಆದರೆ, ಸಾಲು ಸಾಲು ದುರಂತಗಳು ತಂಡವನ್ನು ಇನ್ನಷ್ಟು ಕುಗ್ಗಿಸಿವೆ. ರಿಷಬ್ ಶೆಟ್ಟಿ ಮತ್ತು ತಂಡವು ಈಗ 150 ದಿನಗಳ ಗಡುವಿನಲ್ಲಿ ಸಂಕಷ್ಟ ನಿವಾರಣೆಗೆ ಪ್ರಯತ್ನಿಸುತ್ತಿದ್ದಾರೆ