ಶಿವಮೊಗ್ಗ: ಕನ್ನಡ ಸಿನಿಮಾ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಚಿತ್ರಗಳಲ್ಲೊಂದಾದ ‘ಕಾಂತಾರ’ ಚಿತ್ರದ ಕಲಾವಿದರಿಗೆ ಸಾಲು ಸಾಲು ದುರಂತಗಳು ಸಂಭವಿಸುತ್ತಿವೆ. ಈ ಬಾರಿ ಮಿಮಿಕ್ರಿ ಕಲಾವಿದ ವಿಜು ವಿಕೆ (Viju Vike) ಹೃದಯಾಘಾತದಿಂದ ಅಕಾಲ ಮರಣ ಹೊಂದಿದ್ದಾರೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಬಳಿ ಬುಧವಾರ ರಾತ್ರಿ ಈ ದುರಂತ ನಡೆದಿದೆ.
ವಿಜು ವಿಕೆ ಕೇರಳದ ತ್ರಿಶೂರ್ ಮೂಲದ ಪ್ರತಿಭಾವಂತ ಮಿಮಿಕ್ರಿ ಕಲಾವಿದ. ಅವರು ಕಾಂತಾರ ಚಿತ್ರದ ಶೂಟಿಂಗ್ಗಾಗಿ ತೀರ್ಥಹಳ್ಳಿಗೆ ಬಂದಿದ್ದರು. ಆಗುಂಬೆ ಬಳಿ ಹೋಂ ಸ್ಟೇ ಒಂದರಲ್ಲಿ ತಂಗಿದ್ದ ಅವರಿಗೆ ಬುಧವಾರ ರಾತ್ರಿ ಹಠಾತ್ ಎದೆ ನೋವು ಕಾಣಿಸಿಕೊಂಡಿತು. ತಕ್ಷಣ ಅವರನ್ನು ತೀರ್ಥಹಳ್ಳಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಮಾರ್ಗದಲ್ಲೇ ಅವರು ಪ್ರಾಣ ಬಿಟ್ಟಿದ್ದಾರೆ.
ವಿಜು ವಿಕೆ ಅವರ ದೇಹವನ್ನು ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಯಲ್ಲಿ ಇಡಲಾಗಿದೆ. ಅವರ ಕುಟುಂಬದವರು ಕೇರಳದಿಂದ ತೀರ್ಥಹಳ್ಳಿಗೆ ತೆರಳುತ್ತಿದ್ದಾರೆಂದು ತಿಳಿದುಬಂದಿದೆ. ಅವರ ಅಕಾಲ ಮರಣ ಕುಟುಂಬ, ಸಿನಿಮಾ ಮತ್ತು ಅಭಿಮಾನಿಗಳಿಗೆ ಆಘಾತವನ್ನು ನೀಡಿದೆ.
ಇದು ಕಾಂತಾರ ಚಿತ್ರದೊಂದಿಗೆ ಸಂಬಂಧಿಸಿದ ಮೂರನೇ ದುರಂತ. ಕಳೆದ ತಿಂಗಳು, ಚಿತ್ರದ ಟೆಕ್ನಿಷಿಯನ್ ಕಪಿಲ್ ಎಂಬುವವರು ಕೊಲ್ಲೂರಿನ ಸೌಪರ್ಣಿಕ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಇದೇ ಸಿನಿಮಾದ ಹಾಸ್ಯನಟ ರಾಕೇಶ್ ಪೂಜಾರಿ ಕೂಡ ಕಾರ್ಕಳದ ಮದುವೆ ಕಾರ್ಯಕ್ರಮದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು.
ಮೊದಲ ಪಾರ್ಟ್ನಲ್ಲಿ ಗುರುವ ಪಾತ್ರದಲ್ಲಿ ನಟಿಸಿದ್ದ ಸ್ವರಾಜ್ ಶೆಟ್ಟಿ ಅವರ ‘ನೆತ್ತರೆಕೆರೆ’ ಸಿನಿಮಾ ಸೆಟ್ಗೆ ಬೆಂಕಿ ಹೊತ್ತಿಕೊಂಡಿತ್ತು. ಹೀಗೆ, ಕಾಂತಾರ ಚಿತ್ರದ ಸಾಮೂಹಿಕ ದುರಂತಗಳು ಚಿತ್ರರಂಗ ಮತ್ತು ಅಭಿಮಾನಿಗಳಲ್ಲಿ ಆತಂಕ ಮೂಡಿಸಿವೆ.