ಹಿರಿತೆರೆ ಹಾಗೂ ಕಿರುತೆರೆಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಜಯರಾಮ್ ಕಾರ್ತಿಕ್ (ಜೆ.ಕೆ) ನಾಯಕನಾಗಿ ನಟಿಸಿರುವ, ಅಮಿತ್ ಕುಮಾರ್ ಸಕ್ಸೇನ ನಿರ್ಮಾಣದ ಹಾಗೂ ರಾಜ್ಯ ಪ್ರಶಸ್ತಿ ವಿಜೇತ ನಟ ವಿಶೃತ್ ನಾಯಕ್ ನಿರ್ದೇಶಿಸಿರುವ ಸೈಕೊ ಥ್ರಿಲ್ಲರ್ ಜಾನರ್ ನ “ಕಾಡ” ಚಿತ್ರ ಇದೇ ಏಪ್ರಿಲ್ 10 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಕುರಿತು ಮಾಹಿತಿ ನೀಡಲು ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು.
“ಕಾಡ”, ನನ್ನ ನಿರ್ದೇಶನದ ಮೂರನೇ ಚಿತ್ರ. ಸೈಕೋ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಕಥೆ ಸ್ವಲ್ಪ ವಿಭಿನ್ನವಾಗಿದೆ. ಇದೊಂದು ಸೈಕೋ ಪಾತ್ ಗಳ ಕುರಿತಾದ ಸಿನಿಮಾ.. ನಾನು ಇದರ ಕುರಿತು ಸಾಕಷ್ಟು ಅಧ್ಯಯನ ಮಾಡಿ, ಕೆಲವರಿಂದ ವಿಷಯ ತಿಳಿದುಕೊಂಡು ಕಥೆ ಬರೆದಿದ್ದೇನೆ. ಒಂದು ಅಧ್ಯಯನದ ಪ್ರಕಾರ ಶೇಕಡಾ 2ರಷ್ಟು ಜನರು ಯಾವುದೊ ಕಾರಣಕ್ಕಾಗಿ ಸೈಕೋಗಳಾಗುವುದಿಲ್ಲ. ಹುಟ್ಟತ್ತಲೇ ಅವರು ಸೈಕೋಪಾತ್ ಗಳಾಗಿರುತ್ತಾರೆ. ಇದನ್ನೇ ಕೇಂದ್ರವಾಗಿಟ್ಟುಕೊಂಡು ಕಥೆ ಬರೆದಿದ್ದೇನೆ. ಎರಡು ಕಥೆಯಿಂದ ಶುರುವಾಗುವ ಈ ಚಿತ್ರ ಹೋಗುತ್ತಾ ಹೋಗುತ್ತಾ ಒಂದೇ ಕಥೆ ಆಗುತ್ತದೆ. ಜೆ.ಕೆ ಅವರಂತೂ ಬಹಳ ಅದ್ಭುತವಾಗಿ ನಟಿಸಿದ್ದಾರೆ. ಅವರು ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಕಾವ್ಯಶೆಟ್ಟಿ, ಅಚ್ಯುತಕುಮಾರ್, ಉಗ್ರಂ ಮಂಜು, ಶ್ರೀರಾಮ್ ಮುಂತಾದ ಕಲಾವಿದರ ಅಭಿನಯ ಉತ್ತಮವಾಗಿದೆ. ಇಂದು ನಮ್ಮ ಜೊತೆಗೆ ಇರದ ಸತೀಶ್ ಬಾಬು ಅವರ ಸಂಗೀತ ನಿರ್ದೇಶನ, ಅರುಣ್ ಸುರೇಶ್ ಛಾಯಾಗ್ರಹಣ, ವಿಕಾಸ್ ಚಂದ್ರ ಸಂಕಲನವಿರುವ ಈ ಚಿತ್ರಕ್ಕೆ ನಾನು ಹಾಗೂ ರಮೇಶ್ ಸಾಹಸ ನಿರ್ದೇಶನ ಮಾಡಿದ್ದೇವೆ. ಅಮೇರಿಕಾದಲ್ಲಿರುವ ನಮ್ಮ ನಿರ್ಮಾಪಕರಾದ ಅಮಿತ್ ಕುಮಾರ್ ಅವರು ಯಾವುದೇ ಕೊರತೆ ಬಾರದ ಹಾಗೆ ಚಿತ್ರ ನಿರ್ಮಾಣ ಮಾಡಿದ್ದಾರೆ. ಸೈಕೋ ಥ್ರಿಲ್ಲರ್ ಕಥಾಹಂದರ ಇಷ್ಟಪಡುವವರಿಗೆ ನಮ್ಮ ಸಿನಿಮಾ ಬಹಳ ಪ್ರಿಯವಾಗಲಿದೆ ಎಂದರು.
ನಾನು ಚಿತ್ರರಂಗಕ್ಕೆ ಬಂದ ದಿನದಿಂದಲೂ ತಾವೆಲ್ಲಾ ನೀಡುತ್ತಿರುವ ಪ್ರೋತ್ಸಾಹಕ್ಕೆ ನಾನು ಚಿರ ಋಣಿ. ವಿಶೃತ್ ನಾಯಕ್ ಅವರು ಈ ಚಿತ್ರದ ಕಥೆ ಹೇಳಿದಾಗ ಬಹಳ ಇಷ್ಟವಾಯಿತು. ಸಾಕಷ್ಟು ಶ್ರಮವಹಿಸಿ ನಿರ್ದೇಶಕರು ಈ ಚಿತ್ರದ ಕಥೆ ಮಾಡಿಕೊಂಡಿದ್ದಾರೆ. ವಿಶೃತ್ ಅವರೆ ಹೇಳಿದ ಹಾಗೆ ಇದೊಂದು ಸೈಕೋ ಥ್ರಿಲ್ಲರ್ ಕಥಾಹಂದರ ಹೊಂದಿರುವ ಸಿನಿಮಾ. ನಾನು ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನನ್ನ ಪಾತ್ರ ಹಾಗೂ ಚಿತ್ರ ಅಭಿಮಾನಿಗಳಿಗೆ ಇಷ್ಟವಾಗುತ್ತದೆ ಎಂಬ ಭರವಸೆ ಇದೆ. ಸಕಲೇಶಪುರದಲ್ಲೇ ಹೆಚ್ಚಿನ ಚಿತ್ರೀಕರಣವಾಗಿದೆ. ತಂತ್ರಜ್ಞರ ಕಾರ್ಯ ವೈಖರಿ ಹಾಗೂ ಸಹ ಕಲಾವಿದರ ಅಭಿನಯ ಚೆನ್ನಾಗಿದೆ. ದಯವಿಟ್ಟು ಎಲ್ಲರೂ ನಮ್ಮ ಚಿತ್ರ ನೋಡಿ. ಪ್ರೋತ್ಸಾಹ ನೀಡಿ ಎಂದು ನಾಯಕ ಜಯರಾಮ್ ಕಾರ್ತಿಕ್ (ಜೆ.ಕೆ) ಹೇಳಿದರು.
ಸಂಕಲನಕಾರ ವಿಕಾಸ್ ಚಂದ್ರ ಹಾಗೂ ನಟ ಶ್ರೀರಾಮ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
