ಸು ಫ್ರಮ್ ಸೋ ಚಿತ್ರದಿಂದ ಎಲ್ಲೆಡೆ ಕನ್ನಡದ ಕೀರ್ತಿ ಪತಾಕೆಯನ್ನ ಹಾರಿಸಿದಂತಹ ರಾಜ್ ಬಿ ಶೆಟ್ಟಿ, ಅದ್ರ ಬೆನ್ನಲ್ಲೀಗ ಮತ್ತೊಂದು ಮಹತ್ವದ ಪ್ರಾಜೆಕ್ಟ್ಗೆ ಕೈ ಹಾಕಿದ್ದಾರೆ. ಅದೇ ತೇಜಸ್ವಿ ಕಾದಂಬರಿ ಆಧಾರಿತ ಜುಗಾರಿ ಕ್ರಾಸ್. ಅರೇ.. ರಾಜೇಂದ್ರ ಸಿಂಗ್ ಬಾಬು, ನಾಗಾಭರಣ, ಶಿವಣ್ಣ ಮಾಡಲಾಗದ್ದನ್ನ ಶೆಟ್ರು ಮಾಡ್ತಾರಾ..? ಇಷ್ಟಕ್ಕೂ ಡೈರೆಕ್ಟರ್ ಯಾರು..? ಯಾವಾಗ ಕಿಕ್ಸ್ಟಾರ್ಟ್ ಅನ್ನೋ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಪೂರ್ಣಚಂದ್ರ ತೇಜಸ್ವಿಯವರ ಕೆಂಪು ರತ್ನಗಳ ಹಿಂದೆ ಬಿದ್ದಿದ್ದಾರೆ ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್ ರಾಜ್ ಬಿ ಶೆಟ್ಟಿ. ಯೆಸ್.. ಇತ್ತೀಚಿನ ದಿನಗಳಲ್ಲಿ ಕಾದಂಬರಿ ಆಧಾರಿತ ಸಿನಿಮಾಗಳ ಸಂಖ್ಯೆ ತುಂಬಾ ಕಡಿಮೆಯಾಗಿದೆ. ಜನಪ್ರಿಯ ಕಾದಂಬರಿಗಳನ್ನು ತೆರೆಮೇಲೆ ತರುವ ಸಾಹಸಕ್ಕೆ ಯಾರೂ ಕೈ ಹಾಕುತ್ತಿಲ್ಲ. ಆದ್ರೀಗ ತೇಜಸ್ವಿಯ ಫೇಮಸ್ ಕಾದಂಬರಿ ಜುಗಾರಿ ಕ್ರಾಸ್ ಬೆಳ್ಳಿಪರದೆ ಬೆಳಗುತ್ತಿದೆ. ಜುಗಾರಿ ಕ್ರಾಸ್ಗೆ ಸಿನಿಮಾ ರೂಪ ಕೊಡುವ ಸಾಹಸಕ್ಕೆ ಕೈ ಹಾಕಿರೋದು ನಿರ್ದೇಶಕ ಗುರುದತ್ ಗಾಣಿಗ.
ತೇಜಸ್ವಿ ‘ಜುಗಾರಿ ಕ್ರಾಸ್’ಗೆ ಜೀವ.. ರಾಜ್ ಬಿ ಶೆಟ್ಟಿ ರಂಗು
ಕೆಂಪು ರತ್ನಗಳ ರಾಬರಿಗೆ ರಾಜ್ ಶೆಟ್ರ ನಾಯಕತ್ವ ಗುರು..!!
ಈಗಾಗಲೇ ಕರಾವಳಿ ಸಿನಿಮಾದ ಮೂಲಕ ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತಿರೋ ನಿರ್ದೇಶಕ ಗುರುದತ್, ಸದ್ಯ ಜುಗಾರಿ ಕ್ರಾಸ್ ಅನ್ನು ಬಿಗ್ಸ್ಕ್ರೀನ್ಗೆ ತರೋಕೆ ಸಜ್ಜಾಗಿದ್ದಾರೆ. ಅಂಬರೀಶ್ ಹಾಗೂ ಸುದೀಪ್ ಜೊತೆ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ ಬಳಿಕ ಕರಾವಳಿ ಚಿತ್ರವನ್ನು ಬಿಗ್ ಸ್ಕೇಲ್ನಲ್ಲಿ ಮಾಡಿರೋ ಗುರುದತ್, ಅದರ ರಿಲೀಸ್ಗೂ ಮೊದಲೇ ಜುಗಾರಿ ಕ್ರಾಸ್ ಅನೌನ್ಸ್ ಮಾಡಿದ್ದಾರೆ.
ಇಂಟರೆಸ್ಟಿಂಗ್ ವಿಷಯ ಏನಪ್ಪಾಂದ್ರೆ, ರಾಜ್ ಬಿ ಶೆಟ್ಟಿ ಪ್ರಜ್ವಲ್ ದೇವರಾಜ್ ನಟನೆಯ ಗುರುದತ್ ನಿರ್ದೇಶನದ ಕರಾವಳಿ ಚಿತ್ರದಲ್ಲಿ ಮಾವೀರ ಅನ್ನೋ ಮಾಸ್ ಪಾತ್ರ ಮಾಡಿದ್ದಾರೆ. ಕೋಣಗಳನ್ನ ಪಳಗಿಸೋ ಮಾವೀರನಾಗಿ ಅಬ್ಬರಿಸೋದು ಪಕ್ಕಾ ಆಗಿದೆ. ಅಲ್ಲಿ ಅವರಿಬ್ಬರ ನಡುವೆ ಉಂಟಾದ ಒಂದೊಳ್ಳೆ ಬಾಂಧವ್ಯ, ಸಿನಿಮಾ ಪ್ರೀತಿಗಳು ಮಗದೊಮ್ಮೆ ಜುಗಾರಿ ಕ್ರಾಸ್ ಮೂಲದ ಒಂದಾಗುವಂತೆ ಮಾಡಿದೆ. ಈ ಸಿನಿಮಾ ಮಾಡೋದಾಗಿ ಮೊದಲೇ ಅನೌನ್ಸ್ ಆಗಿತ್ತು. ಇದೀಗ ಟೀಸರ್ ರಿಲೀಸ್ ಆಗಿದೆ. ಸಖತ್ ಪ್ರಾಮಿಸಿಂಗ್ ಕೂಡ ಆಗಿದೆ.
ರಿಪೀಟ್ ಆಗ್ತಿದೆ ಕರಾವಳಿ ಡೈರೆಕ್ಟರ್-ಮಾವೀರ ಕಾಂಬೋ
ಘಟಾನುಘಟಿಗಳೆಲ್ಲಾ ಫೇಲ್.. ಕೊನೆಗೂ ಸಿಕ್ತು ಆ ಭರವಸೆ
ಟೀಸರ್ನಲ್ಲಿ ತಲೆಬುರುಡೆ, ಹರಿಯುತ್ತಿರುವ ರಕ್ತ, ಕೆಂಪು ರತ್ನ, ಆ ರತ್ನವನ್ನು ಕೋಳಿಮರಿಯಂತೆ ಕದ್ದೊಯ್ಯಲು ಸಜ್ಜಾಗಿರೋ ಗರುಡ.. ಇವೆಲ್ಲವೂ ಕುತೂಹಲವನ್ನು ದುಪ್ಪಟ್ಟು ಮಾಡಿವೆ. ಬ್ಯಾಗ್ರೌಂಡ್ ಮ್ಯೂಸಿಕ್, ಪವರ್ ಪ್ಯಾಕ್ಡ್ ಟೀಸರ್ ನೋಡ್ತಿದ್ರೆ ಸಿನಿಮಾ ಮೇಲಿನ ನಿರೀಕ್ಷೆ ಮತ್ತು ಕುತೂಹಲ ಇಮ್ಮಡಿ ಆಗ್ತಿದೆ. ಸು ಫ್ರಮ್ ಸೋ ಚಿತ್ರದಿಂದ 120 ಕೋಟಿ ಬ್ಯುಸಿನೆಸ್ ಮಾಡಿ, ಎಲ್ಲರ ಹುಬ್ಬೇರಿಸಿದ ಬಹುಮುಖ ಪ್ರತಿಭೆ ರಾಜ್ ಶೆಟ್ಟಿಯ ಸಿನಿಮೋತ್ಸಾಹದ ಕೈಗನ್ನಡಿ ಈ ಜುಗಾರಿ ಕ್ರಾಸ್.
ಅಂದಹಾಗೆ ನಮ್ಮ ಚಿತ್ರರಂಗದ ಮಂದಿಗೆ ಜುಗಾರಿ ಕ್ರಾಸ್ ಕಾದಂಬರಿಗೆ ದೃಶ್ಯರೂಪ ನೀಡುವ ಆಶಯ ನಿನ್ನೆ ಮೊನ್ನೆಯದ್ದಲ್ಲ. ದಶಕಗಳ ಹಿಂದಿನಿಂದಲೂ ಇದನ್ನ ಸಿನಿಮಾ ಆಗಿಸೋಕೆ ಘಟಾನುಘಟಿ ನಿರ್ದೇಶಕರುಗಳೇ ಕೈ ಹಾಕಿ, ಕಾರಣಾಂತರಗಳಿಂದ ಅದನ್ನ ಕೈ ಬಿಟ್ಟಿದ್ದರು. ಎಸ್ ವಿ ರಾಜೇಂದ್ರ ಸಿಂಗ್ ಬಾಬು, ಟಿ ಎಸ್ ನಾಗಾಭರಣ ಅಂತಹ ಲೆಜೆಂಡ್ ಡೈರೆಕ್ಟರ್ಗಳು ಶಿವಣ್ಣನನ್ನ ಇಟ್ಕೊಂಡು ಈ ಚಿತ್ರ ಮಾಡ್ಬೇಕು ಅಂದುಕೊಂಡಿದ್ದರು. ಅವೆಲ್ಲಾ ವಿಫಲವಾಗಿತ್ತು. ಇದೀಗ ರಾಜ್ ಬಿ ಶೆಟ್ಟಿ ಹಾಗೂ ಗುರುದತ್ ಆ ಆಶಯಕ್ಕೆ ನೀರೆರೆಯುವ ಕಾರ್ಯ ಮಾಡ್ತಿದ್ದಾರೆ. ಸಿನಿಮಾ 2026ರ ಜನವರಿಯಿಂದ ಶೂಟಿಂಗ್ ಶುರುವಾಗಲಿದ್ದು, ಸದ್ಯದಲ್ಲೇ ಹೆಚ್ಚಿನ ಮಾಹಿತಿಯನ್ನ ಟೀಂ ಅಧಿಕೃತವಾಗಿ ನೀಡಲಿದೆ.
