ಜಾನಿ ಮಾಸ್ಟರ್-ಶೇಖರ್ ನಡುವೆ ಜಟಾಪಟಿ..ಮೆಗಾ ಸಂಧಾನ ಸಫಲ

ಬೆಳಗ್ಗೆ ಗುದ್ದಾಟ.. ಮಧ್ಯಾಹ್ನ ಊಟ.. ಏನಿದು ಮಾಸ್ಟರ್ಸ್..?!

ಇರ್ತೀರಾ (19)

ಟಾಲಿವುಡ್‌‌ನ ಇಬ್ಬರು ಸ್ಟಾರ್ ಕೊರಿಯೋಗ್ರಾಫರ್‌‌ಗಳ ಜಗಳ ಬೀದಿಗೆ ಬಂದು ನಿಂತಿದೆ. ಬೆಳಗ್ಗೆ ಬಡಿದಾಡಿಕೊಂಡಿರೋ ಇವ್ರು ಮಧ್ಯಾಹ್ನ ಒಟ್ಟಿಗೆ ಊಟ ಸವಿದಿದ್ದಾರೆ. ಅದಕ್ಕೆ ಮೆಗಾಸ್ಟಾರ್ ಚಿರಂಜೀವಿ ಆರ್ಗನೈಸ್ ಮಾಡಿದ್ದ ಕೂಟ ಕಾರಣವಾಗಿದೆ. ಇಷ್ಟಕ್ಕೂ ಇಬ್ಬರ ನಡುವೆ ಏನಾಗಿತ್ತು ಅನ್ನೋದ್ರ ಜೊತೆಗೆ ನಮ್ಮ ಸ್ಯಾಂಡಲ್‌ವುಡ್ ಸೆಲೆಬ್ರಿಟಿ ಜೊತೆ ಮೇಲುಕೋಟೆಯಲ್ಲಿ ಮಸ್ತ್ ಸ್ಟೆಪ್ ಹಾಕಿದ ಅಪ್ಪು ಫೇವರಿಟ್ ಜಾನಿ ಮಾಸ್ಟರ್ ಕಹಾನಿ ಇಲ್ಲಿದೆ.

ಜಾನಿ ಹಾಗೂ ಶೇಖರ್.. ಟಾಲಿವುಡ್‌ನ ಸ್ಟಾರ್ ಕೊರಿಯೋಗ್ರಾಫರ್ಸ್. ಡ್ಯಾನ್ಸರ್ಸ್ ಅಸೋಸಿಯೇಷನ್‌‌ನಲ್ಲಿನ ಕೆಲವು ಆಂತರಿಕ ಭಿನ್ನಾಭಿಪ್ರಾಯಗಳು ಹಾಗೂ ಸಂಘಟದ ಕಾರ್ಯಚಟುವಟಿಕೆಗಳ ವಿಚಾರ ಇವರುಗಳ ನಡುವೆ ವಾಗ್ವಾದ ನಡೆದಿದೆ. ಆ ಕುರಿತ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸಂಚಲನ ಮೂಡಿಸಿದ್ದವು. ಪರಸ್ಪರ ಕೈ ಕೈ ಮಿಲಾಯಿಸಿ ಫೈಟ್ ಮಾಸ್ಟರ್‌‌ಗಳು ಆಗೋ ರೇಂಜ್‌ಗೆ ಹೋಗಿದ್ದ ಡ್ಯಾನ್ಸ್ ಮಾಸ್ಟರ್ಸ್, ಕೊನೆಗೆ ತಣ್ಣಗಾಗಿದ್ದಾರೆ.

ಬೆಳಗ್ಗೆಯಷ್ಟೇ ಗುದ್ದಾಡಿದ ಇವರುಗಳು, ಮಧ್ಯಾಹ್ನದ ವೇಳೆಗೆ ಒಟ್ಟಿಗೆ ಊಟ ಸವಿದಿದ್ದಾರೆ. ಅದಕ್ಕೆ ಟಾಲಿವುಡ್‌‌ ಹಿರಿಜೀವ ಮೆಗಾಸ್ಟಾರ್ ಚಿರಂಜೀವಿ ಕಾರಣಕರ್ತರಾಗಿದ್ದಾರೆ. ಇಬ್ಬರನ್ನೂ ಕರೆಸಿ, ಬುದ್ದಿ ಹೇಳಿ ಕಳಿಸಿದ್ದಾರೆ. ನಂತ್ರ ಜಾನಿ ಮಾಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿ, ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ. ಶೇಖರ್ ಅಣ್ಣ ನನ್ನ ಮಧ್ಯೆ ಭಿನ್ನಾಭಿಪ್ರಾಯಗಳಿಲ್ಲ. ಹರಿದಾಡ್ತಿರೋ ವಿಡಿಯೋಗಳಿಗೆ ಕಿವಿಗೊಡಬೇಡಿ ಎಂದಿದ್ದಾರೆ.

ಇದು ಸೆಲೆಬ್ರಿಟಿ ಚಿತ್ರದ ಮೆಲೋಡಿ ಸಾಂಗ್‌‌ ಮೇಕಿಂಗ್ ಝಲಕ್. ನೂರಾರು ಡ್ಯಾನ್ಸರ್ಸ್ ಜೊತೆ ಸೆಲೆಬ್ರಿಟಿ ಚಿತ್ರದ ನಾಯಕನಟ ಅಶ್ವಿನ್ ಹಾಗೂ ನಾಯಕಿ ಪ್ರಿಯಾಂಕಾ ಸ್ಟೆಪ್ ಹಾಕಿದ್ದು ವಿಶೇಷ. ಹೈಲೆಟ್ ಅಂದ್ರೆ ಈ ಹಾಡಿಗೆ ಜಾನಿ ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದಾರೆ. ಮೇಲುಕೋಟೆಯ ಹೆರಿಟೇಜ್‌‌ ಆಲಯ, ಕಲ್ಯಾಣಿಯಲ್ಲಿ ಈ ಹಾಡನ್ನ ಚಿತ್ರಿಸಲಾಯಿತು. ಒಂದೂವರೆ ವರ್ಷ ಜಾನಿ ಮಾಸ್ಟರ್‌‌ಗಾಗಿಯೇ ಕಾದಿದ್ದ ಅಶ್ವಿನ್, 4 ದಿನಗಳ ಕಾಲ ರಿಹರ್ಸಲ್ ಮಾಡಿ ಈ ಹಾಡಿನ ಅಡ್ಡಾಗೆ ಬಂದ ವಿಷಯವನ್ನ ಜಾನಿ ಹಂಚಿಕೊಂಡರು.

ಹೀರೋಯಿನ್‌ನ ಹೊಗಳುವ ಈ ಹಾಡಿಗಾಗಿ ಜಾನಿ ಮಾಸ್ಟರ್ ಫಸ್ ಟೈಂ ಮೇಲುಕೋಟೆಗೆ ಬಂದಿದ್ದಾರೆ ಎಂದ ಹೀರೋ, ನಂಗೆ ಅವ್ರಂದ್ರೆ ತುಂಬಾ ಇಷ್ಟ. ಸುಲಭವಾದ ಸ್ಟೆಪ್ಸ್ ಹೇಳಿಕೊಡಲ್ಲ. ಇದರಲ್ಲಿ ಹುಕ್ ಸ್ಟೆಪ್ಸ್ ನಿರೀಕ್ಷಿಸಬಹುದು ಎಂದರು.

ಇನ್ನೂ ಗೌರಿ ಆರ್ಟ್ಸ್‌ ಬ್ಯಾನರ್‌ನಡಿ ಜೆಡಿಎಸ್ ಮುಖಂಡ ಸಾರಾ ಮಹೇಶ್ ಹಾಗೂ ಸುಷ್ಮಾ ಅಶ್ವಿನ್ ನಿರ್ಮಾಣದ ಈ ಸಿನಿಮಾದ ಫಸ್ಟ್‌ಲುಕ್ ಟೀಸರ್‌‌ನ ಬಾದ್‌ಷಾ ಕಿಚ್ಚ ಸುದೀಪ್ ಲಾಂಚ್ ಮಾಡಿದ್ರು. ಈಗ ಜಾನಿ ಮಾಸ್ಟರ್ ಎಂಟ್ರಿ ತಂಡಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. ಯಾಕಂದ್ರೆ ಜಾನಿ ಮಾಸ್ಟರ್ ಅಪ್ಪು ಫೇವರಿಟ್ ಕೊರಿಯೋಗ್ರಾಫರ್ ಆಗಿದ್ದು, ಸಾಕಷ್ಟು ಹಿಟ್ ಸಾಂಗ್ಸ್ ನೀಡಿದ್ದಾರೆ.

ಕಿರಣ್ ವಿಶ್ವನಾಥ್ ನಿರ್ದೇಶನದ ಸೆಲೆಬ್ರಿಟಿ ಚಿತ್ರಕ್ಕೆ ಗುಮ್ಮಿನೇನಿ ವಿಜಯ್ ಸಂಗೀತ, ರವಿವರ್ಮಾ ಸಾಹಸ, ಗುಣ ಆರ್ಟ್, ಅನಿರುದ್ದ್ ಶಾಸ್ತ್ರಿ ಸಾಹಿತ್ಯ ಇರಲಿದೆ. ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೂಡ ಬೇಗ ಮುಗಿಸಿ, ಆದಷ್ಟು ಬೇಗ ಥಿಯೇಟರ್‌ಗೆ ಎಂಟ್ರಿ ಕೊಡಲಿದ್ದಾರೆ ಸೆಲೆಬ್ರಿಟಿ ಅಶ್ವಿನ್.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version