ಅಪ್ಪನ ಆಸೆ ಈಡೇರಿಸಲು 101 ಜನರಿಗೆ ಕಾಶಿಯಾತ್ರೆ ಮಾಡಿಸುತ್ತಿರುವ ಜಿಮ್ ರವಿ

ಹೃದಯಸ್ಪರ್ಶಿ ಕಾರ್ಯದ ಮೂಲಕ ಎಲ್ಲರಿಗೂ ಆದರ್ಶವಾಗುತ್ತಿದ್ದಾರೆ "ಪುರುಷೋತ್ತಮ" ಖ್ಯಾತಿಯ ನಟ

Web 2025 06 28t203839.863

ಕೋಲಾರ ಮೂಲದ ಎ.ಕೆ‌.ರವಿ ಜಿಮ್ ರವಿ ಎಂದೇ ಖ್ಯಾತಿ ಪಡೆದವರು. ದೇಹದಾರ್ಢ್ಯ ಪಟುವಾಗಿ ದೇಶ ಹಾಗೂ ವಿದೇಶಗಳಲ್ಲೂ ಪ್ರಸಿದ್ದರಾಗಿರುವ ಜಿಮ್ ರವಿ, ಇತ್ತೀಚೆಗೆ “ಪುರುಷೋತ್ತಮ” ಎಂಬ ಚಿತ್ರದಲ್ಲಿ ನಾಯಕನಾಗೂ ನಟಿಸಿದ್ದರು. ಇದೆಲ್ಲಾ ಒಂದು ಕಡೆಯಾದರೆ, ರವಿ ಅವರು ಸಾಮಾಜಿಕ ಕಾರ್ಯಗಳ ಮೂಲಕವೂ ಹೆಸರುವಾಸಿ. ಆದರೆ ತಾವು ಮಾಡುವ ಸಾಮಾಜಿಕ ಕೆಲಸದ ಬಗ್ಗೆ ಒಂದು ದಿನವೂ ಪ್ರಚಾರ ಬಯಸಿದವರಲ್ಲಾ.‌

ಅಂತಹ ಜಿಮ್ ರವಿ ಅವರು ಈಗ ಮತ್ತೊಂದು ಮಹತ್ತರವಾದ ಕಾರ್ಯಕ್ಕೆ ಮುಂದಾಗಿದ್ದಾರೆ. ಇದೊಂದು ನಿಜಕ್ಕೂ ಮಹತ್ತರ ಕಾರ್ಯವೇ. ಹಾಗಾಗಿ ಕೆಲವು ಸ್ನೇಹಿತರ ಒತ್ತಾಯಕ್ಕೆ ಮಣಿದ ರವಿ ಅವರು ಈ ಕಾರ್ಯ ಇತ್ತರರಿಗೂ ಮಾದರಿಯಾಗಲಿ ಎಂಬ ಉದ್ದೇಶದಿಂದ ಪತ್ರಿಕಾಗೋಷ್ಠಿಯಲ್ಲಿ ಈ ಆಯೋಜಿಸಿದ್ದರು. ಪತ್ರಿಕಾಗೋಷ್ಠಿಯಲ್ಲಿ ರವಿ ಅವರು ತಿಳಿಸಿದ ವಿಷಯ ಭಾವನಜೀವಿಗಳ ಕಣ್ಣಲ್ಲಿ ನೀರು ತರಿಸಿತ್ತು.

ADVERTISEMENT
ADVERTISEMENT

ಕೋಲಾರದಿಂದ ಬೆಂಗಳೂರಿಗೆ ಬಂದು ಟೌನ್ ಹಾಲ್ ನಲ್ಲಿ ನಡೆದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಗಳಿಸಿದ ವಿಷಯದೊಂದಿಗೆ ಮಾತು ಆರಂಭಿಸಿದ ರವಿ ಅವರು, ನಮ್ಮದು ಕೋಲಾರದಲ್ಲಿ ಮಧ್ಯಮವರ್ಗದ ಕುಟುಂಬ‌‌. ದಿನ ಮುದ್ದೆ ತಿನ್ನುತ್ತಿದ್ದ ನಾವು ಹಬ್ಬಗಳಲ್ಲೇ ಅನ್ನ ಉಣ್ಣುತ್ತಿದ್ದದ್ದು. ಆದರೆ ನನ್ನ ತಾಯಿ ನನಗೆ ತುಂಬಾ ಆದರ್ಶ. ಜೀವನದ ಪಾಠ ಕಲಿಸಿದ ಮಹಾತಾಯಿ‌ ಅವರು. ಒಬ್ಬರ ಸುಖಕ್ಕೆ ನೀನು ಆಗದಿದ್ದರೂ ‌ಪರವಾಗಿಲ್ಲ. ಕಷ್ಟದಲ್ಲಿ ಅವರ ಜೊತೆಗಿರು.

ಹಿರಿಯರ ಮುಂದೆ ಕೈ ಕಟ್ಟಿ ನಿಲ್ಲು‌ ಅಂತ‌ ಅಮ್ಮ ಹೇಳಿಕೊಟ್ಟಿದ್ದು. ಹೀಗೆ ಜೀವನ ಸಾಗುತ್ತಿದ್ದಾಗ ಅಮ್ಮ ನಮ್ಮನ್ನು ಬಿಟ್ಟು ಹೋಗುತ್ತಾರೆ. ಅಮ್ಮನ ನಿಧನದ ಕೆಲವು ತಿಂಗಳ ನಂತರ ಅಪ್ಪ, ನನ್ನ ಹತ್ತಿರ ಬಂದು ನಿಮ್ಮ ಅಮ್ಮನ ಸಾವಿನಿಂದ ಬಹಳ ದುಖವಾಗಿದೆ. ಹಾಗಾಗಿ ನನ್ನನ್ನು ಕಾಶಿ‌ಯಾತ್ರೆಗೆ ಕರೆದುಕೊಂಡು ಹೋಗು ಎನ್ನುತ್ತಾರೆ. ನನ್ನ ಹತ್ತಿರ ಆಗ ದುಡ್ಡು ಇರಲ್ಲ. ಅಪ್ಪನಿಗೆ ಏರು ದ್ವನಿಯಲ್ಲಿ ಈಗ ಅದೆಲಾ ಆಗಲ್ಲ ಅಂದು ಬಿಡುತ್ತೇನೆ. ಅದಾದ ಕೆಲವು ತಿಂಗಳ ನಂತರ ಮತ್ತೆ ಕೇಳುತ್ತಾರೆ.

ನಾನು ಅವರಿಗೆ ವಿಮಾನದಲ್ಲಿ ಕರೆದುಕೊಂಡು ಹೋಗುತ್ತೇನೆ ಅಂತ ಹೇಳಿ ಸಮಾಧಾನ ಮಾಡುತ್ತೇನೆ.‌ ಕೆಲವು ದಿನಗಳ ನಂತರ ಗೆಳೆಯರ ಹತ್ತಿರ ಸಾಲ ಮಾಡಿ ಅಪ್ಪನ ಕಾಶಿಯಾತ್ರೆಗೆ ವಿಮಾನದ ಟಿಕೇಟ್ ಬುಕ್ ಮಾಡುತ್ತೇನೆ.‌ ಆ ವಿಷಯ ಅಪ್ಪನಿಗೆ ಫೋನ್ ಮಾಡು ಹೇಳುತ್ತೇನೆ.

ಅವರು ಖುಷಿಯಾಗುತ್ತಾರೆ‌. ಆದರೆ ವಿಧಿಯೇ ಬೇರೆ ಆಗಿರುತ್ತದೆ‌. ನಾನು ಈ ವಿಷಯ ತಿಳಿಸಿದ ಕೆಲವೇ ಗಂಟೆಗಳಲ್ಲೇ ಅಪ್ಪನ್ನು ನಮ್ಮನ್ನು ಬಿಟ್ಟು ಹೋಗಿ ಬಿಡುತ್ತಾರೆ. ಅವರ ಕಾಶಿಯಾತ್ರೆಯ ಆಸೆಯೂ ಅವರ ಜೊತೆಗೆ ಹೋಗಿ ಬಿಡುತ್ತದೆ. ಅದೇ ದಿನ ನಾನು ನಿರ್ಧಾರ ಮಾಡುತ್ತೇನೆ. ನಮ್ಮ ಅಪ್ಪನ ಆಸೆ ಈಡೇರಿಸಲು, ಕಾಶಿಯಾತ್ರೆ ಮಾಡಲು ಸಾಧ್ಯವಿಲ್ಲದ್ದ ಕೆಲವು ಅಶಕ್ತರಿಗೆ ನಮ್ಮ ಅಪ್ಪನ ಹೆಸರಿನಲ್ಲಿ ಕಾಶಿಯಾತ್ರೆ ಮಾಡಿಸಬೇಕು ಎಂದು.

ನಮ್ಮ ಅಪ್ಪ ನಿಧನರಾಗಿ ಹದಿನಾಲ್ಕು ವರ್ಷಗಳಾಯಿತು ಅಂದಿನಿಂದ ಇಂದಿನವರೆಗೂ ಅದಕೋಸ್ಕರ ಹುಂಡಿ ಇಟ್ಟು ದುಡ್ಡು ಕೂಡಿ ಹಾಕುತ್ತಿದ್ದ. ಯಾವುದೇ ದುಂದು ವೆಚ್ವ‌‌ ಮಾಡದೇ ಹತ್ತು, ಇಪ್ಪತ್ತು ರೂಪಾಯಿಯಿಂದ ಹಿಡಿದು ಸಾವಿರ ರೂಪಾಯಿಗಳವರೆಗೂ ಹುಂಡಿಯಲ್ಲಿ ಹಾಕುತ್ತಿದ್ದೆ. ಈಗ ಅದಕ್ಕೆ ಕಾಲ ಕೂಡಿ ಬಂದಿದೆ. ವಾಣಿಜ್ಯ ತೆರೆಗೆ ಅಧಿಕಾರಿಗಳಾದ ಜಗನ್ನಾಥ್ ಹಾಗೂ ಕುಟುಂಬದವರ ಮಾರ್ಗದರ್ಶನದಲ್ಲಿ ಈಗ ಜುಲೈ 2 ನೇ ತಾರೀಖು ರಾಜ್ಯದ ವಿವಿಧ ಕಡೆಗಳಿಂದ ಸುಮಾರು 80 ಜನ ಅಶಕ್ತರನ್ನು ನಾನೇ ಖುದ್ದಾಗಿ ಭೇಟಿ ಮಾಡಿ ಅವರ ಜೊತೆ 101 ಜನರ ತಂಡ ಪಯಣ ಬೆಳೆಸುತ್ತಿದ್ದೇವೆ.

ಅವರ ಊರಿನಿಂದ ಬರುವ ಪ್ರಯಾಣದ ವೆಚ್ಚದಿಂದ ಹಿಡಿದು ಎಲ್ಲಾ ವ್ಯವಸ್ಥೆಯನ್ನು ನಾವೇ ಮಾಡುತ್ತಿದ್ದೇವೆ‌. ಜುಲೈ 2 ರ ಬೆಳಗ್ಗೆ ಬೆಂಗಳೂರು ವಿಮಾನ ನಿಲ್ದಾಣದಿಂದ ರಾಮ ಜನ್ಮಭೂಮಿ ಅಯೋಧ್ಯೆಗೆ ಪಯಣ. ಅಲ್ಲಿಂದ ಪ್ರಯಾಗರಾಜ. ಅಲ್ಲಿಂದ ಕಾಶಿ. ಒಟ್ಟು ಮೂರು ದಿನಗಳ ಯಾತ್ರೆ ಇದು. ಎಲ್ಲಾ ಕಡೆ ಎಸಿ ವಾಹನ ಹಾಗೂ ಎಸಿ ಕೊಠಡಿ ವ್ಯವಸ್ಥೆ ಮಾಡಲಾಗಿದೆ‌.

ನಮ್ಮ ಜೊತೆಗೆ ವೈದ್ಯೆರು ಹಾಗು ಸ್ವಯಸೇವಕರು ಇರುತ್ತಾರೆ. ಆಹ್ವಾನಿಸಿದ ಅತಿಥಿಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು. ನನಗೆ ಈ ವಿಚಾರ‌ ಪ್ರಚಾರ ಮಾಡುವ ಉದ್ದೇಶವಿರಲಿಲ್ಲ. ಸ್ನೇಹಿತರು, ಹಿರಿಯರಾದ ಪತ್ರಕರ್ತ ಕೆ.ಎಸ್.ವಾಸು ಅವರು, ನೀವು ಈ ವಿಷಯ ಜನರಿಗೆ ತಿಳಿಸಿ, ಅದು ಎಷ್ಟೋ ಜನರಿಗೆ ಆದರ್ಶವಾಗಬಹುದು ಎಂದರು.

ಶ್ರೀರಾಘವೇಂದ್ರ ಚಿತ್ರವಾಣಿಯ ಸುಧೀಂದ್ರ ವೆಂಕಟೇಶ್ ಅವರು ನಮ್ಮ ಸಂಸ್ಥೆಯಿಂದ ಪತ್ರಿಕಾಗೋಷ್ಠಿ ಆಯೋಜಿಸುತ್ತೇವೆ. ನೀವು ಅಲ್ಲಿ ಈ ವಿಷಯ ಹೇಳಿ ಎಂದರು. ಹಾಗಾಗಿ ನಿಮ್ಮ ಮುಂದೆ ಈ ವಿಷಯ ತಿಳಿಸಿದ್ದೇನೆ ಎಂದು ಹೇಳಿದ ಜಿಮ್ ರವಿ ದೇವರು ಅನುಕೂಲ ಮಾಡಿಕೊಟ್ಟರೆ ಮುಂದೆ ಕೂಡ ಇದೇ ರೀತಿ ಕಾರ್ಯಕ್ರಮ ಹಮ್ಮಿಕೊಳ್ಳುವ ಯೋಜನೆ ಇದೆ ಎಂದರು.

Exit mobile version