ಕನ್ನಡದ ಖ್ಯಾತ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮತ್ತೊಮ್ಮೆ ಹಿಂದಿ ಚಿತ್ರರಂಗಕ್ಕೆ ದೊಡ್ಡ ಮಟ್ಟದಲ್ಲಿ
ಕಾಲಿಟ್ಟಿದ್ದಾರೆ. ಅವರು ಇದೀಗ ‘ಜೈ ಹಿಂದ್ ಜೈ ಸಿಂಧ್’ ಎಂಬ ಹಿಂದಿ ಚಿತ್ರವನ್ನು ಸದ್ದಿಲ್ಲದೆ ನಿರ್ದೇಶಿಸುತ್ತಿದ್ದು, ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿದಿದೆ. ಚಿತ್ರದ ಕೊನೆಯ ಹಂತದ ಚಿತ್ರೀಕರಣ ಇದೀಗ ಉತ್ತರಾಖಂಡದಲ್ಲಿ ಭರದಿಂದ ಸಾಗಿದೆ.
ಶನಿವಾರ, ಡೆಹ್ರಾಡೂನ್ ನಲ್ಲಿ ‘ಜೈ ಹಿಂದ್ ಜೈ ಸಿಂಧ್’ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಸಮಾರಂಭದ ಜೊತೆಗೆ, ಚಿತ್ರದ ಮೊದಲ ಪತ್ರಿಕಾಗೋಷ್ಠಿ ಅದ್ದೂರಿಯಾಗಿ ನಡೆಯಿತು. ಈ ಪತ್ರಿಕಾಗೋಷ್ಠಿಯಲ್ಲಿ ಭಾರತದ ಮೂಲೆಮೂಲೆಗಳಿಂದ ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದ ಪತ್ರಕರ್ತರು ಹಾಜರಿದ್ದರು. ಈ ಕಿಕ್ಕಿರಿದ ಪತ್ರಿಕಾಗೋಷ್ಠಿಯಲ್ಲಿ ಇಂದ್ರಜಿತ್ ಜೊತೆಗೆ ನಿರ್ಮಾಪಕ ಸ್ಯಾಮಿ ನನ್ವಾನಿ, ಆಕಾಶಾ ವತ್ಸ್, ವಿಕ್ರಂ ಕೊಚ್ಚರ್ ಮುಂತಾದವರು ಹಾಜರಿದ್ದರು.
‘ಜೈ ಹಿಂದ್ ಜೈ ಸಿಂಧ್” ಚಿತ್ರವನ್ನು ಸ್ಯಾಮೀಸ್ ಎಂಟರ್ಟೈನ್ಮೆಂಟ್ ಸಂಸ್ಥೆಯಡಿ ಸ್ಯಾಮಿ ನನ್ವಾನಿ ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ಮಹೇಶ್ ಮಂಜ್ರೇಕರ್, ವಿಕ್ರಂ ಕೋಚಾರ್, ಜರೀನಾ ವಹಾಬ್, ಜಯಪ್ರದ, ಉಪಾಸನಾ ಸಿಂಗ್, ಅಮಿತ್ ಬಹಲ್ ಮುಂತಾದ ಪ್ರತಿಭಾವಂತ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಮೂಲಕ ಇಂದ್ರಜಿತ್ ಲಂಕೇಶ್, ನಾಲ್ವರು ಹೊಸ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಕಲಾವಿದರಾಗಿ ಪರಿಚಯಿಸುತ್ತಿದ್ದಾರೆ
ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ಇಂದ್ರಜಿತ್ ಲಂಕೇಶ್, ‘ಇದೊಂದು ಪ್ರೇಮಕಥೆಯಾಗಿದ್ದು, ದೇಶ ವಿಭಜನೆ ಪ್ರಮುಖ ಪಾತ್ರ ವಹಿಸುತ್ತದೆ. ಅನೇಕತೆಯಲ್ಲಿ ಏಕತೆ ಎಂಬ ವಿಷಯವನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇನೆ. ದೇಶ ವಿಭಜನೆಯಾದಾಗ ಸಿಂಧ್ ಪ್ರಾಂತ್ಯದ ಜನ ಹೇಗೆ ನರಳಿದರು, ಅದರಿಂದ ಹೊರಬಂದು, ಈಗ ತಮ್ಮ ಬದುಕನ್ನು ಹೇಗೆ ಕಟ್ಟಿಕೊಂಡಿದ್ದಾರೆ ಎಂಬುದನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇನೆ’ ಎಂದರು.
ನನ್ನ ಮೊದಲ ಚಿತ್ರದಿಂದ ಹಲವು ನಟ-ನಟಿಯರನ್ನು ಪರಿಚಯಿಸುವ ಪ್ರಯತ್ನ ಮಾಡುತ್ತಲೇ ಬಂದಿದ್ದೇನೆ ಎಂದ ಇಂದ್ರಜಿತ್, ‘ಗಾಯಕಿ ವಸುಂದರಾ ದಾಸ್ ಅವರನ್ನು ‘ಲಂಕೇಶ್ ಪತ್ರಿಕೆ’ ಚಿತ್ರದ ಮೂಲಕ ನಾಯಕಿಯಾಗಿ ಪರಿಚಯಿಸಿದರೆ, ದೀಪಿಕಾ ಪಡುಕೋಣೆ ಅವರನ್ನು ‘ಐಶ್ವರ್ಯ’ ಚಿತ್ರದ ಮೂಲಕ ಪರಿಚಯಿಸದ್ದೆ. ಈಗ ಈ ಚಿತ್ರದ ಮೂಲಕ ನಾಲ್ವರು ಹೊಸ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದೇನೆ’ ಎಂದರು.
‘ಜೈ ಹಿಂದ್ ಜೈ ಸಿಂಧ್’ ಸದ್ಯದಲ್ಲೇ ಚಿತ್ತೀಕರಣ ಮುಗಿಯಲಿದ್ದು, ಈ ವರ್ಷದ ಮಧ್ಯಭಾಗದ ಹೊತ್ತಿಗೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.





