ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ 18 ವರ್ಷಗಳ ನಂತರದ ಐಪಿಎಲ್ 2025 ಟ್ರೋಫಿ ಗೆಲುವಿನ ಸಂಭ್ರಮಾಚರಣೆಯನ್ನು ಕಣ್ತುಂಬಿಕೊಳ್ಳಲು ನಟ ಮತ್ತು ರ್ಯಾಪರ್ ಚಂದನ್ ಶೆಟ್ಟಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ತೆರಳಿದ್ದರು. ಆದರೆ, ಈ ಸಂಭ್ರಮದ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಅವರಿಗೆ ಆತಂಕಕಾರಿ ಅನುಭವವಾಗಿದ್ದು, ಇದರ ಬಗ್ಗೆ ಚಂದನ್ ಶೆಟ್ಟಿ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.
“18 ವರ್ಷಗಳ ನಂತರ ಆರ್ಸಿಬಿ ಟ್ರೋಫಿ ಗೆದ್ದಿದ್ದಕ್ಕೆ ಬೆಳಗ್ಗೆಯಿಂದ ತುಂಬಾ ಖುಷಿಯಾಗಿತ್ತು. ನಾನು ಆ ಜನಸಾಗರದ ಮಧ್ಯೆ ಇದ್ದೆ. ಗೇಟ್ ನಂಬರ್ 3ಕ್ಕೆ ಹೋಗಲು ನನಗೆ ಪಾಸ್ ಸಿಕ್ಕಿತ್ತು, ಆದರೆ ಗೇಟ್ಗೆ ಹೋಗುವುದು ಬಿಟ್ಟು, ಅದರ ಹತ್ತಿರಕ್ಕೂ ತಲುಪಲಾಗಲಿಲ್ಲ,” ಎಂದು ಚಂದನ್ ಶೆಟ್ಟಿ ಹೇಳಿದರು.
“ಗೇಟ್ ನಂಬರ್ 3ಕ್ಕೆ ಹೋಗಲಾಗದೇ, ಹೇಗೋ ಗೇಟ್ ನಂಬರ್ 10ರ ಬಳಿಗೆ ತಲುಪಿದೆ. ಆದರೆ ಅಲ್ಲಿ ಇನ್ನೂ ದೊಡ್ಡ ಜನಸಂದಣಿ ಇತ್ತು. ಒಂದು ಕ್ಷಣ, ಉಸಿರಾಡಲು ನನಗೇ ತುಂಬಾ ಕಷ್ಟವಾಯಿತು. ಆ 11 ಜೀವಗಳಿಗೆ ಎಷ್ಟು ಕಷ್ಟವಾಗಿರಬಹುದು ಎಂದು ಊಹಿಸಿಕೊಳ್ಳಲು ಆಗುತ್ತಿಲ್ಲ. ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡವರ ಆತ್ಮಕ್ಕೆ ಶಾಂತಿ ಸಿಗಲಿ. ಈ ಘಟನೆ ನಿಜಕ್ಕೂ ತುಂಬಾ ಬೇಸರವನ್ನುಂಟುಮಾಡಿದೆ,” ಎಂದು ಚಂದನ್ ಭಾವುಕರಾಗಿ ಹೇಳಿದರು.
ಈ ದುರಂತಕ್ಕೆ ಯಾರನ್ನು ದೂಷಿಸುವುದು ಎಂಬುದರ ಬಗ್ಗೆ ಚಂದನ್ ಶೆಟ್ಟಿ ಮಾತನಾಡಿದರು. “ಈ ಘಟನೆಗೆ ಯಾರನ್ನು ಹೊಣೆಗಾರರನ್ನಾಗಿ ಮಾಡುವುದು ಎಂದು ಹೇಳಲು ಕಷ್ಟ. ಸರಿಯಾದ ವ್ಯವಸ್ಥೆಯನ್ನು ಮಾಡಿರಲಿಲ್ಲವೇ? 18 ವರ್ಷಗಳ ನಂತರ ಟ್ರೋಫಿ ಗೆದ್ದ ಖುಷಿಯ ತೀವ್ರತೆ ಯಾರಿಗೂ ಗೊತ್ತಾಗಿರಲಿಲ್ಲ. ಎರಡು ದಿನ ಬಿಟ್ಟು ಕಾರ್ಯಕ್ರಮ ಆಯೋಜಿಸಿದ್ದರೆ ಒಳ್ಳೆಯದಿತ್ತು. ಪಾಸ್ಗಳನ್ನು ಸರಿಯಾಗಿ ಹಂಚಿಕೆ ಮಾಡಿ, ಜನಸಂದಣಿಯನ್ನು ನಿಯಂತ್ರಿಸಬಹುದಿತ್ತು,” ಎಂದು ಅವರು ತಿಳಿಸಿದರು.