ನಟ ವಿಕ್ಕಿ ಕೌಶಲ್, ರಶ್ಮಿಕಾ ಅಭಿಯನದ ಛಾವ ಸಿನಿಮಾ, ಬಾಲಿವುಡ್ ಸಿನಿ ದುನಿಯಾದಲ್ಲಿ ಹೊಸ ದಾಖಲೆ ಬರೆದಿದೆ. ಹಿಂದೂ ಸಾಮ್ರಾಟ್ ಛತ್ರಪತಿ ಸಂಭಾಜಿ ಮಹಾರಾಜರ ಜೀವನ ಆಧಾರಿತ ಚಿತ್ರಕ್ಕೆ ಎಲ್ಲರೂ ಮನಸೋತಿದ್ದಾರೆ. ಐತಿಹಾಸಿಕ ಕಥೆಯ ಚಿತ್ರವನ್ನ ಕಣ್ತುಂಬಿಕೊಂಡು ಪ್ರೇಕ್ಷಕರು ಹಾಡಿ ಹೊಗಳುತ್ತಿದ್ದಾರೆ. ಇದರ ಮಧ್ಯೆ ಛಾವ ಸಿನಿಮಾದ ಎಳೆಯನ್ನ ಆಧಾರಿಸಿ ಜನರು ಚಿನ್ನದ ಹುಡುಕಾಟ ನಡೆಸುತ್ತಿದ್ದಾರೆ. ಬುರ್ಹಾನ್ಪುರದ ಅಸಿರ್ಗಢ ಪ್ರದೇಶದಲ್ಲಿ ಹಗಲು-ರಾತ್ರಿ ಎಂದು ನೋಡದೆ ನಿಧಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ. ಅದು ಯಾಕೆ ಆಂತೀರಾ..? ಮುಂದಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ.
ಲಕ್ಷ್ಮಣ್ ಉಟೇಕರ್ ನಿರ್ದೇಶನದ ಛಾವ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಹೊಸ ಛಾಪು ಮೂಡಿಸಿದೆ. ಹಿಂದೂ ಸಾಮ್ರಾಟ್ ಛತ್ರಪತಿ ಶಿವಾಜಿ ಮಹಾರಾಜ್ರ ಪುತ್ರ ಸಂಭಾಜಿ ಮಹಾರಾಜ್ರ ಜೀವನಾಧಾರಿತ ಚಿತ್ರಕ್ಕೆ ಪ್ರೇಕ್ಷಕರು ಪುಲ್ಮಾರ್ಕ್ಸ್ ಕೊಟ್ಟಿದ್ದಾರೆ.
ಪ್ರತಿಯೊಬ್ಬ ಹಿಂದೂ ಕೂಡ ಇಂತಹ ಸಿನಿಮಾ ನೋಡಬೇಕು ಎಂದು ಚಿತ್ರ ಪ್ರೇಮಿಗಳೇ ಪ್ರಚಾರ ಮಾಡುತ್ತಿದ್ದಾರೆ. ಅಷ್ಟರ ಮಟ್ಟಿಗೆ ಛಾವ ಚಿತ್ರ ಸಿನಿ ಮಂದಿಯ ಮನಸ್ಸು ಗೆದ್ದಿದೆ. ಈ ಚಿತ್ರದಲ್ಲಿ ಬರುವ ಆ ಒಂದು ಸನ್ನಿವೇಶ ಸಾವಿರಾರು ಜನರು ಹಗಲು- ರಾತ್ರಿ ಎಂತಲೂ ನೋಡದೆ ಭೂಮಿ ಅಗೆಯುವಂತೆ ಮಾಡಿದೆ.
ಛಾವಾ ಚಿತ್ರದಲ್ಲಿ ಮೊಘಲರ ಕಥೆಯಿದೆ. ಮರಾಠರಿಂದ ಅಪಾರ ಪ್ರಮಾಣದ ಚಿನ್ನ, ವಜ್ರ, ವೈಡ್ಯೂರಗಳನ್ನ ಲೂಟಿ ಮಾಡಿದ ಮೊಘಲರು ಆಸಿರ್ಗಢದ ಕೋಟೆಯಲ್ಲಿ ಬಚ್ಚಿಟ್ಟಿದ್ದಾರೆ ಎಂದು ಹೇಳಲಾಗಿದೆ. ಇದನ್ನ ನಿಜವೆಂದು ನಂಬಿದ ಬುರ್ಹಾನಪುರದ ಜನರು ಆಸಿರ್ಗಢದ ಕೋಟೆಯಲ್ಲಿ ನಿಧಿ ಶೋಧಕ್ಕಾಗಿ ಮುಗಿಬಿದ್ದಿದ್ದಾರೆ.
ಕೆಲ ತಿಂಗಳ ಹಿಂದೆ ಮಧ್ಯಪ್ರದೇಶ ಬುರ್ಹಾನ್ಪುರ, ಅಸಿರ್ಗಢದಲ್ಲಿ ಮಣ್ಣು ಅಗೆದಾಗ ಕೆಲವರಿಗೆ ನಾಣ್ಯಗಳು ಸಿಕ್ಕಿದ್ದವು. ಅದು ಮೊಘಲರ ಕಾಲದ ನಾಣ್ಯಗಳಾಗಿದ್ದವು. ಬೆಳೆ ಹಾಳಾದ ಕಾರಣ ಪೊಲೀಸರು ಹಾಗೂ ಆಡಳಿತ ಮಂಡಳಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿತ್ತು. ಮಣ್ಣು ಅಗೆಯುವುದಕ್ಕೆ ಬ್ರೇಕ್ ಹಾಕಲಾಗಿತ್ತು.
ಛಾವ ಸಿನಿಮಾ ತೆರೆಗೆ ಬಂದ ನಂತರ ಅಸಿರ್ಗಢದಲ್ಲಿ ನಾಣ್ಯಗಳು ಪತ್ತೆಯಾಗಿವೆ ಎನ್ನುವ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಈ ಸುದ್ದಿ ಕೇಳಿದವರೆಲ್ಲಾ ಗುದ್ದಲಿ, ಆರೆ, ಪಿಕಾಸಿ ಹಿಡಿದು ಮಣ್ಣು ಅಗೆಯುತ್ತಿದ್ದಾರೆ. ಚಿಕ್ಕವರಿಂದ ಹಿಡಿದು ಹಿರಿಯರವರೆಗೆ, ಊಟ-ತಿಂಡಿ ಬಿಟ್ಟು ಕತ್ತಲೆಯಲ್ಲೂ ಟಾರ್ಚ್ ಹಾಕಿಕೊಂಡು ನಾಣ್ಯಗಳ ಪತ್ತೆಗೆ ಮುಂದಾಗಿದ್ದಾರೆ.
ಅಸಿರ್ಗಢದಲ್ಲಿ ನಾಣ್ಯಗಳು ಪತ್ತೆಯಾಗಿದ್ದು, ನಾಣ್ಯಕ್ಕಾಗಿ ಹುಡುಕಾಟ ನಡೆಸುತ್ತಿರೋದು ಇದೇ ಮೊದಲೇನಲ್ಲ. ಈ ಹಿಂದೆಯೂ ಸಾಕಷ್ಟು ಬಾರಿ ಇಂತಹ ಘಟನೆಗಳು ನಡೆದಿವೆ. ಇದಕ್ಕೆ ಒಂದು ಕಾರಣವೂ ಇದೆ. ಇತಿಹಾಸದ ಪ್ರಕಾರ ಆಸಿರ್ಗಢ ಐತಿಹಾಸಿಕ ನಗರವಾಗಿತ್ತು. ಸುಮಾರು 7-8 ಲಕ್ಷ ಜನಸಂಖ್ಯೆ ಹೊಂದಿದ್ದ ಆಸಿರ್ಗಢ, ಮೊಘಲರ ಆಳ್ವಿಕೆಯಲ್ಲಿತ್ತು. ಈ ಭಾಗದಲ್ಲಿ ಮೊಘಲರ ಸೈನಿಕರ ಠಾಣೆಗಳು, ಕುದರೆ ಲಾಯಗಳು, ಸೈನಿಕರ ತಂಗುದಾಣಗಳಿದ್ದವಂತೆ. ಯುದ್ಧದ ನಂತರ ಸೈನಿಕರು ತಾವು ಲೂಟಿ ಮಾಡಿದ ಚಿನ್ನ, ವಜ್ರ, ನಾಣ್ಯಗಳನ್ನ ಆಸಿರ್ಗಢದ ಕೋಟೆಯಲ್ಲಿ ಗುಂಡಿ ತೆಗೆದು ಬಚ್ಚಿಡುತ್ತಿದ್ದರಂತೆ. ಈ ಹಿಂದೆ ಇಲ್ಲಿ ಕೆಲವರಿಗೆ ಚಿನ್ನದ ನಾಣ್ಯಗಳು ಸಿಕ್ಕಿದ್ದವಂತೆ. ಈಗ ಛಾವ ಚಿತ್ರ ನೋಡಿದ ನಂತರ ರಾಜರು ಇಲ್ಲಿ ಚಿನ್ನ, ನಾಣ್ಯಗಳನ್ನ ಹೂತು ಹಾಕಿದ್ದಾರೆ ಎಂದು ನಂಬಿ ಶೋಧಕಾರ್ಯಕ್ಕೆ ಮುಂದಾಗಿದ್ದಾರೆ.
ಪ್ರಶಾಂತ್ ಎಸ್ , ಸ್ಪೇಷಲ್ ಡೆಸ್ಕ್, ಗ್ಯಾರಂಟಿ ನ್ಯೂಸ್