ಕಾನೂನು ಸಮರದಲ್ಲಿ ‘ಬಾಸ್’ ಸಿನಿಮಾಗೆ ಭರ್ಜರಿ ಜಯ..!

ಜ್ಞಾನಪೀಠ ಪ್ರಶಸ್ತಿ (11)

ಸ್ಯಾಂಡಲ್‌ವುಡ್ ಅಂಗಳದಲ್ಲಿ ಕಳೆದ ಮೂರು ತಿಂಗಳಿನಿಂದ ಸಂಚಲನ ಮೂಡಿಸಿದ್ದ ಬಾಸ್ ಸಿನಿಮಾ ರಿಲೀಸ್ ಕಾದಾಟಕ್ಕೆ ಕೊನೆಗೂ ತೆರೆಬಿದ್ದಿದೆ. ಹೈಕೋರ್ಟ್ ಮಹತ್ವದ ತೀರ್ಪು ನೀಡುವ ಮೂಲಕ ಚಿತ್ರತಂಡಕ್ಕೆ ಭರ್ಜರಿ ಗ್ರೀನ್ ಸಿಗ್ನಲ್ ನೀಡಿದೆ. ಆದರೆ, ಈ ತೀರ್ಪಿನ ಹಿಂದಿನ ಕಾನೂನು ಸಮರ ಎಂತಹದ್ದು. ? ದರ್ಶನ್ ಆಂಡ್ ಫ್ಯಾಮಿಲಿಯ ಮೇಲ್ಮನವಿ ವಜಾಗೊಳಿಸಲು ಹೈಕೋರ್ಟ್ ಹೇಳಿದ್ದೇನು..? ಇಲ್ಲಿದೆ ಸಂಪೂರ್ಣ ವರದಿ.

ತನುಷ್ ಶಿವಣ್ಣ ನಾಯಕನಾಗಿ ನಟಿಸಿ, ಲವಾ ವಿ ನಿರ್ದೇಶನದಲ್ಲಿ ಮೂಡಿಬಂದಿರುವ ‘ಬಾಸ್’ ಸಿನಿಮಾ ಬಿಡುಗಡೆಗೂ ಮುನ್ನವೇ ಭಾರಿ ಸದ್ದು ಮಾಡಿತ್ತು. ಈ ಚಿತ್ರದ ಟೀಸರ್ ಬಿಡುಗಡೆಯಾದ ದಿನದಿಂದಲೇ ನಟ ದರ್ಶನ್ ಮತ್ತು ವಿಜಯಲಕ್ಷ್ಮಿ ದರ್ಶನ್ ಅವರು ಚಿತ್ರತಂಡದ ವಿರುದ್ಧ ಕಾನೂನು ಸಮರ ಸಾರಿದ್ದರು. ಚಿತ್ರದ ಕಥಾಹಂದರವು ದರ್ಶನ್ ಅವರ ವೈಯಕ್ತಿಕ ಜೀವನ ಮತ್ತು ಇತ್ತೀಚಿನ ರೇಣುಕಾಸ್ವಾಮಿ ಪ್ರಕರಣಕ್ಕೆ ಹತ್ತಿರವಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು. ಇದರಿಂದಾಗಿ ಬಿಡುಗಡೆಗೆ ಸಿದ್ಧವಾಗಿದ್ದ ಸಿನಿಮಾ ಸುಮಾರು ಮೂರು ತಿಂಗಳ ಕಾಲ ನ್ಯಾಯಾಲಯದ ಮೆಟ್ಟಿಲೇರಬೇಕಾಯಿತು.

ಕಳೆದ ಒಂದೂವರೆ ತಿಂಗಳಿನಿಂದ ಕಾನೂನು ಹೋರಾಟದಲ್ಲಿ ಸಿಲುಕಿದ್ದ ‘ಬಾಸ್’ ಚಿತ್ರದ ಬಿಡುಗಡೆಗೆ ಕರ್ನಾಟಕ ಹೈಕೋರ್ಟ್ ಅಂತಿಮವಾಗಿ ಗ್ರೀನ್ ಸಿಗ್ನಲ್ ನೀಡಿದೆ. ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿರುವ ಹೈಕೋರ್ಟ್, ದರ್ಶನ್ ಹಾಗೂ ವಿಜಯಲಕ್ಷ್ಮಿ ದರ್ಶನ್ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದೆ. ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಯಾವುದೇ ಅಕ್ರಮ ಅಥವಾ ಕಾನೂನುಬಾಹಿರ ದೋಷಗಳಿಲ್ಲ ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್, ಈ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ಕಾರಣವಿಲ್ಲ ಎಂದು ಹೇಳುವ ಮೂಲಕ ಚಿತ್ರತಂಡದ ಕಾನೂನು ಅಡೆತಡೆಗಳನ್ನು ಸಂಪೂರ್ಣವಾಗಿ ನಿವಾರಿಸಿದೆ.

ವಿಚಾರಣಾ ನ್ಯಾಯಾಲಯದ ಆದೇಶದ ನಂತರವೂ, ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಒಂದು ವಾರ ಕಾಲಾವಕಾಶ ಬೇಕೆಂದು ದರ್ಶನ್ ಪರ ವಕೀಲರು ಹೈಕೋರ್ಟ್‌ಗೆ ಮನವಿ ಮಾಡಿದರು. ಆದರೆ, ಇದಕ್ಕೆ ಹೈಕೋರ್ಟ್ ನೀಡಿರುವ ಉತ್ತರ ತುಂಬಾ ಖಡಕ್ ಆಗಿತ್ತು. “ವಿಚಾರಣಾ ನ್ಯಾಯಾಲಯ ಮಧ್ಯಂತರ ತಡೆ ತೆರವುಗೊಳಿಸಿದ್ದ ಆದೇಶವನ್ನು ನಾವು ಎತ್ತಿಹಿಡಿದಿರುವುದೇ ಚಿತ್ರದ ಬಿಡುಗಡೆಗಾಗಿ, ಹೀಗಿರುವಾಗ ಮತ್ತೊಮ್ಮೆ ತಡೆ ನೀಡುವ ಪ್ರಶ್ನೆಯೇ ಇಲ್ಲ” ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ.

ಚಿತ್ರ ಬಿಡುಗಡೆಗೆ ಅವಕಾಶ ನೀಡಿದರೂ, ಸಿರಿ ಪ್ರೊಡಕ್ಷನ್ಸ್‌ಗೆ ಹೈಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಚಿತ್ರದ ಆರಂಭದಲ್ಲಿ 30 ಸೆಕೆಂಡುಗಳ Disclaimer ಅನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ಈ ಚಿತ್ರದಲ್ಲಿರುವ ಯಾವುದೇ ಘಟನೆಗಳು ದರ್ಶನ್, ಅವರ ಕುಟುಂಬ, ವೈಯಕ್ತಿಕ ಜೀವನ ಅಥವಾ ನಟನ ವ್ಯಕ್ತಿತ್ವಕ್ಕೆ ಸಂಬಂಧಪಟ್ಟ ನೈಜ ಘಟನೆಗಳಲ್ಲ ಎಂಬುದನ್ನು ಡಿಸ್ಕ್ಲೈಮರ್‌ನಲ್ಲಿ ಸ್ಪಷ್ಟಪಡಿಸಬೇಕು. ಈ ಬಗ್ಗೆ ನೀವು ನ್ಯಾಯಾಲಯಕ್ಕೆ ನೀಡಿದ ಭರವಸೆಯನ್ನು ಆದೇಶದಲ್ಲೂ ದಾಖಲಿಸಲಾಗಿದ್ದು, ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಕೋರ್ಟ್ ಎಚ್ಚರಿಸಿದೆ.

ಹೈಕೋರ್ಟ್ ಆದೇಶದ ಬೆನ್ನಲ್ಲೇ ತುರ್ತು ಸುದ್ದಿಗೋಷ್ಠಿ ನಡೆಸಿದ ನಾಯಕ-ನಿರ್ಮಾಪಕ ತನುಷ್ ಶಿವಣ್ಣ ಮತ್ತು ನಿರ್ದೇಶಕ ಲವಾ ವಿ, ತಮಗೆ ದೊರೆತ ಗೆಲುವಿನ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಈ ಸುದೀರ್ಘ ಕಾನೂನು ಹೋರಾಟದಿಂದ ಸಮಯ ಹಾಗೂ ಕೋಟ್ಯಂತರ ರೂಪಾಯಿಗಳ ಆರ್ಥಿಕ ನಷ್ಟವಾಗಿದೆ ಎಂದು ಲವಾ ಬೇಸರ ವ್ಯಕ್ತಪಡಿಸಿದರೂ, “ಯಾರ ಮೇಲೂ ನಮಗೆ ದ್ವೇಷವಿಲ್ಲ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಶೀಘ್ರವೇ ಎಲ್ಲ ಸಂಕಷ್ಟಗಳಿಂದ ಹೊರ ಬರಲಿ” ಎಂದು ಹಾರೈಸಿದ್ದಾರೆ. ತನುಷ್ ಶಿವಣ್ಣ ಅವರು ಪ್ರೇಕ್ಷಕರು ಸಿನಿಮಾವನ್ನು ಪ್ರೀತಿಯಿಂದ ಸ್ವೀಕರಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇತ್ತ ವಿಜಯಲಕ್ಷ್ಮಿ ಈ ಚಿತ್ರವನ್ನು ತಡೆಯಲು ತಮ್ಮದೇ ಆದ ರೀತಿಯಲ್ಲಿ ದೇವರ ಮೊರೆ ಹೋಗಿದ್ದರು, ವಿಶೇಷ ಪೂಜೆಗಳನ್ನು ಸಲ್ಲಿಸಿದ್ದರು ಎಂಬ ಮಾತುಗಳು ಹರಿದಾಡಿದ್ದವು. ಆದರೆ, ನ್ಯಾಯಾಲಯದ ತೀರ್ಪು ಚಿತ್ರತಂಡದ ಪರವಾಗಿ ಬಂದಿರುವುದು, ವಿಜಯಲಕ್ಷ್ಮಿ ಅವರ ಪೂಜಾಪಲ ಫಲಿಸಲಿಲ್ಲವೇ ಅಥವಾ ಚಾಮುಂಡಿ ತಾಯಿ ಈ ವಿಚಾರದಲ್ಲಿ ಮುನಿಸಿಕೊಂಡಿದ್ದಾಳೆಯೇ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ನಡೆಯುತ್ತಿವೆ. ದೈವಭಕ್ತಿಯ ಮೂಲಕ ನ್ಯಾಯಾಲಯದಲ್ಲಿ ಗೆಲುವು ಸಾಧಿಸಲು ಹೊರಟಿದ್ದ ದರ್ಶನ್ ದಂಪತಿಗೆ ಕೊನೆಗೂ ನಿರಾಶೆಯೇ ದಕ್ಕಿದೆ.

ಕೋರ್ಟ್ ಆದೇಶದ ಬೆನ್ನಲ್ಲೇ ಬಾಸ್ ಸಿನಿಮಾದ ಟ್ರೈಲರ್ ಕೂಡ ಬಿಡುಗಡೆಯಾಗಿದೆ. ಆದರೆ, ಈ ಟ್ರೈಲರ್ ದೃಶ್ಯಗಳು ರೇಣುಕಾಸ್ವಾಮಿ ಪ್ರಕರಣದ ಘಟನೆಗಳನ್ನು ಹೋಲುತ್ತಿವೆಯೇ ಎಂಬ ಅನುಮಾನ ಈಗಲೂ ಪ್ರೇಕ್ಷಕರಲ್ಲಿ ಮುಂದುವರೆದಿದೆ. ಹೈಕೋರ್ಟ್‌ನಲ್ಲಿ ಸೋತಿರುವ ದರ್ಶನ್ ಹಾಗೂ ಅವರ ಟೀಮ್ ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತಾರಾ ಅಥವಾ ಈ ವಿಷಯಕ್ಕೆ ಕಾಂಪ್ರಮೈಸ್ ಮೂಲಕ ತೆರೆ ಎಳೆಯುತ್ತಾರಾ ಎಂಬುದು ಸದ್ಯದ ಕುತೂಹಲ. ಏನಾಗುತ್ತದೋ ಕಾದು ನೋಡಬೇಕಿದೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

Exit mobile version