ಬೆಂಗಳೂರು: ಕನ್ನಡದ ಖ್ಯಾತ ನಟಿ ಮತ್ತು ಬಿಗ್ ಬಾಸ್ ಸೀಸನ್ 5ರ ಸ್ಪರ್ಧಿಯೊಬ್ಬರ ಮೇಲೆ ಲೈಂಗಿಕ ಕಿರುಕುಳ ಹಾಗೂ ಬೆದರಿಕೆ ಹಾಕಿದ ಆರೋಪದ ಮೇಲೆ ಶ್ರೀಲಂಕಾದಿಂದ ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIAL) ಉದ್ಯಮಿ ಅರವಿಂದ ವೆಂಕಟೇಶ ರೆಡ್ಡಿ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆರೋಪಿಯ ಬಂಧನಕ್ಕಾಗಿ ಪೊಲೀಸರು ಲುಕ್ ಔಟ್ ನೋಟಿಸ್ ಕೂಡ ಜಾರಿ ಮಾಡಿದ್ದರು.
ಈ ಪ್ರಕರಣವನ್ನು ಆರಂಭದಲ್ಲಿ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆ ದಾಖಲಿಸಿಕೊಂಡಿತ್ತು. ನಂತರ, ತನಿಖೆಯ ಸುಲಭಕ್ಕಾಗಿ ಇದನ್ನು ಗೋವಿಂದರಾಜನಗರ ಠಾಣೆಗೆ ಕೇವಲ 5 ದಿನಗಳ ಹಿಂದೆ ವರ್ಗಾಯಿಸಲಾಗಿತ್ತು. ಆರೋಪಿ ಅರವಿಂದ ರೆಡ್ಡಿ ಶ್ರೀಲಂಕಾದಲ್ಲಿದ್ದನೆಂದು ತಿಳಿದು, ಪೊಲೀಸರು ಅವರ ಬಂಧನಕ್ಕೆ ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದರು. ಶ್ರೀಲಂಕಾದಿಂದ ಬೆಂಗಳೂರಿಗೆ ಶುಕ್ರವಾರ ಬೆಳಗ್ಗೆ ವಿಮಾನದಿಂದ ಕೆಂಪೇಗೌಡ ವಿಮಾನ ನಿಲ್ದಾನದಲ್ಲಿ ಇಳಿದಿದ್ದರು. ತಕ್ಷಣ ಸಿಬಿಐ ಚಂದನ್ ಮತ್ತು ಸುಬ್ರಹ್ಮಣಿ ನೇತೃತ್ವದ ತಂಡವು ಆರೋಪಿಯನ್ನ ಬಂಧಿಸಿದ್ದಾರೆ
ಆರೋಪಿ ಅರವಿಂದ ರೆಡ್ಡಿಗೆ ನಟಿಯ ಪರಿಚಯ 2021ರಲ್ಲೇ ಆಗಿತ್ತು. ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ರೆಡ್ಡಿ ಬಳ್ಳಾರಿ ಟಸ್ಕರ್ಸ್ ಕ್ರಿಕೆಟ್ ತಂಡದ ನಾಯಕ ಮತ್ತು ಚಲನಚಿತ್ರ ನಿರ್ಮಾಪಕ ಕೂಡ ಆಗಿದ್ದಾರೆ. ಅವರು ನಟ-ನಟಿಯರಿಗಾಗಿ ದುಬೈ ಮತ್ತು ಶ್ರೀಲಂಕಾ ಸೇರಿದಂತೆ ಹಲವೆಡೆ ಕ್ರಿಕೆಟ್ ಟೂರ್ನಮೆಂಟ್ಗಳನ್ನು ಆಯೋಜಿಸುತ್ತಿದ್ದರು. ಈ ಕ್ರಿಕೆಟ್ ಟೂರ್ನಮೆಂಟ್ಗಳ ಹೆಸರಿನಲ್ಲಿ ರೆಡ್ಡಿ ನಟಿಯೊಂದಿಗೆ ಅನುಚಿತ ವರ್ತನೆಗೆ ಒತ್ತಾಯಿಸಿದ ಆರೋಪವಿದೆ. ‘ಫೋರ್’, ‘ಸಿಕ್ಸ್’, ‘ವೈಡ್’, ‘ನೋ ಬಾಲ್’ ಮುಂತಾದ ಕ್ರಿಕೆಟ್ ಪದಗಳನ್ನು ಬಳಸಿ ಅಶ್ಲೀಲವಾಗಿ ಮಾತನಾಡಿದ ಆರೋಪವೂ ಇದೆ.
ನಟಿಯೊಂದಿಗೆ ತನ್ನ ಸಂಬಂಧವನ್ನು ಆತ್ಮೀಯತೆಯಿಂದ ಆರಂಭಿಸಿದ ರೆಡ್ಡಿ, ನಂತರ ಅದನ್ನು ಕಾಮದಾಸೆಗೆ ತಿರುಗಿಸಲು ಒತ್ತಾಯಿಸಿದನಂತೆ. ನಟಿಯು ಅವನಿಂದ ದೂರವಾಗಲು ಪ್ರಯತ್ನಿಸಿದಾಗ, ರೆಡ್ಡಿ ಅವಳನ್ನು ಬೆನ್ನಟ್ಟಲು ಆರಂಭಿಸಿದನಂತೆ. ಅವಳು ಎಲ್ಲಿಗೆ ಹೋದರೂ ಬೆನ್ನಟ್ಟಿ ಬರುತ್ತಿದ್ದನೆಂದೂ, ನಿನ್ನನ್ನು ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದನೆಂದೂ ದೂರಿನಲ್ಲಿ ಹೇಳಲಾಗಿದೆ.
ಈ ನಿರಂತರ ಮಾನಸಿಕ ಕಿರುಕುಳ ಮತ್ತು ಬೆದರಿಕೆಗಳಿಗೆ ಬೇಸತ್ತ ನಟಿ, ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಜೆಪಿ ನಗರದ ತನ್ನ ನಿವಾಸದಲ್ಲಿ 100 ಕ್ಕೂ ಹೆಚ್ಚು ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಅದೃಷ್ಟವಶಾತ್ ಅವರನ್ನು ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ.
ಉದ್ಯಮಿ ಅರವಿಂದ ರೆಡ್ಡಿಯನ್ನು ಈಗ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಅವರ ಮೇಲೆ ಭಾರತೀಯ ದಂಡ ಸಂಹಿತೆಯ (IPC) ಅಡಿಯಲ್ಲಿ ಅತ್ಯಾಚಾರಕ್ಕೆ ಉತ್ತೇಜನ, ಬೆದರಿಕೆ, ಮಾನಸಿಕ ಕಿರುಕುಳ ಸೇರಿದಂತೆ ಗಂಭೀರ ವಿಧಿಗಳನ್ನು ಲಗತ್ತಿಸಲಾಗುವ ಸಾಧ್ಯತೆ ಇದೆ. ಪೊಲೀಸರು ನಟಿಯ ವಿವರಣೆ ಮತ್ತು ಇತರ ಸಾಕ್ಷ್ಯ-ಪುರಾವೆಗಳನ್ನು ಸಂಗ್ರಹಿಸುತ್ತಿದ್ದಾರೆ.
