ಕನ್ನಡ ಚಿತ್ರರಂಗದಲ್ಲಿ ‘ಅಂದೊಂದಿತ್ತು ಕಾಲ’ ಚಿತ್ರವು ತನ್ನ ಮೊದಲ ಹಾಡಾದ ‘ಮುಂಗಾರು ಮಳೆಯಲ್ಲಿ’ ಮೂಲಕ ಈಗಾಗಲೇ 36.4 ಮಿಲಿಯನ್ ವೀಕ್ಷಣೆಗಳೊಂದಿಗೆ ಯೂಟ್ಯೂಬ್ನಲ್ಲಿ ಸಂಚಲನ ಸೃಷ್ಟಿಸಿದೆ. ಈ ಹಾಡಿನ ರೀಲ್ಸ್ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಈ ಯಶಸ್ಸಿನ ಸಂಭ್ರಮದಲ್ಲಿರುವ ಚಿತ್ರತಂಡವು ಇದೀಗ ಎರಡನೇ ಹಾಡಾದ ‘ಅರೇರೇ ಯಾರೋ ಇವಳು’ವನ್ನು ಬಿಡುಗಡೆ ಮಾಡಿದ್ದು, ಬೆಂಗಳೂರಿನ ಮಲ್ಲಸಂದ್ರದ ಬಿ.ಎನ್.ಆರ್. ಪಬ್ಲಿಕ್ ಸ್ಕೂಲ್ನ 10ನೇ ತರಗತಿಯ ಫಸ್ಟ್ ರ್ಯಾಂಕ್ ವಿದ್ಯಾರ್ಥಿಗಳಿಂದ ಈ ಹಾಡನ್ನು ರಿಲೀಸ್ ಮಾಡಿಸಿದ್ದಾರೆ.
ನಿರ್ದೇಶಕ ಕೀರ್ತಿ ಕೃಷ್ಣಪ್ಪ ತಮ್ಮ ಮೊದಲ ಚಿತ್ರದ ಬಗ್ಗೆ ಮಾತನಾಡುತ್ತಾ, “‘ಮುಂಗಾರು ಮಳೆಯಲ್ಲಿ’ ಹಾಡಿನ ಯಶಸ್ಸು ನಮ್ಮ ತಂಡಕ್ಕೆ ದೊಡ್ಡ ಉತ್ಸಾಹ ತಂದಿದೆ. ಈ ಚಿತ್ರವನ್ನು ಕೊರೋನಾ ಸಮಯದಲ್ಲಿ, ಯುಗಾದಿಯ ಸಂದರ್ಭದಲ್ಲಿ ಭಾರೀ ಮಳೆಯ ನಡುವೆ ಚಿತ್ರೀಕರಿಸಿದ್ದೇವೆ. ನಿರ್ಮಾಪಕ ಭುವನ್ ಸುರೇಶ್ ಎಲ್ಲಾ ರೀತಿಯ ಬೆಂಬಲ ನೀಡಿದ್ದಾರೆ. ವಿನಯ್ ರಾಜಕುಮಾರ್ ತಮ್ಮ ಸೈಲೆಂಟ್ ವ್ಯಕ್ತಿತ್ವದೊಂದಿಗೆ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ. ಎರಡನೇ ಹಾಡಿನ ಸಾಹಿತ್ಯವನ್ನು ಅರಸು ಅಂತಾರೆ ಬರೆದಿದ್ದು, ವಿನಯ್ ಮತ್ತು ನಿಶಾ ರವಿಕೃಷ್ಣನ್ ಸೊಗಸಾಗಿ ಅಭಿನಯಿಸಿದ್ದಾರೆ. ಈ ಚಿತ್ರವು ಆಗಸ್ಟ್ 29ರಂದು ರಿಲೀಸ್ ಆಗಲಿದ್ದು, ಪ್ರೀತಿ ಮತ್ತು ಗೆಳೆತನದ ಕಥೆಯಾಗಿ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವ ಭರವಸೆ ಇದೆ,” ಎಂದರು.
ನಿರ್ಮಾಪಕ ಭುವನ್ ಸುರೇಶ್, ಭುವನ್ ಮ್ಯೂವಿಸ್ ಬ್ಯಾನರ್ನಡಿ ಈ ಚಿತ್ರವನ್ನು ನಿರ್ಮಿಸಿದ್ದು, “ನಮ್ಮ ತಂಡದ ಶ್ರಮಕ್ಕೆ ಒಳ್ಳೆಯ ಫಲಿತಾಂಶ ಸಿಗುತ್ತಿದೆ. ‘ಮುಂಗಾರು ಮಳೆಯಲ್ಲಿ’ ಹಾಡು ಈಗಾಗಲೇ ಸೂಪರ್ಹಿಟ್ ಆಗಿದ್ದು, ನನ್ನ ರಾಜಕೀಯ ಸ್ನೇಹಿತರು ಮತ್ತು ಊರಿನ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಎರಡನೇ ಹಾಡು ಕೂಡ ಜನರಿಗೆ ಇಷ್ಟವಾಗಲಿ. ಈ ಚಿತ್ರವನ್ನು ಚಿತ್ರಮಂದಿರದಲ್ಲಿ ಎಲ್ಲರೂ ವೀಕ್ಷಿಸಿ, ಹರಸಿ,” ಎಂದು ಕೋರಿದರು.
ಸಂಗೀತ ನಿರ್ದೇಶಕ ರಾಘವೇಂದ್ರ ವಿ. ಮಾತನಾಡಿ, “‘ಮುಂಗಾರು ಮಳೆಯಲ್ಲಿ’ ಹಾಡಿನ ಯಶಸ್ಸಿಗೆ ಪ್ರೇಕ್ಷಕರ ಪ್ರೋತ್ಸಾಹವೇ ಕಾರಣ. ಎರಡನೇ ಹಾಡು ‘ಅರೇರೇ ಯಾರೋ ಇವಳು’ ಎ2 ಮ್ಯೂಸಿಕ್ನಲ್ಲಿ ಬಿಡುಗಡೆಯಾಗಿದ್ದು, ವಿನಯ್ರ ಇನ್ನೊಸೆಂಟ್ ಲುಕ್ ಮತ್ತು ನಿಶಾಳ ಸೌಂದರ್ಯ ಈ ಹಾಡಿನ ಹೈಲೈಟ್. ಚಿತ್ರದಲ್ಲಿ ಇನ್ನೂ ಮೂರು ಹಾಡುಗಳಿವೆ, ಅವು ಕೂಡ ಶೀಘ್ರದಲ್ಲಿ ಬಿಡುಗಡೆಯಾಗಲಿವೆ,” ಎಂದರು. ಛಾಯಾಗ್ರಾಹಕ ಅಭಿಷೇಕ್ ಕಾಸರಗೋಡು, ಸಂಕಲನಕಾರ ಕೀರ್ತಿ, ಮತ್ತು ನೃತ್ಯ ನಿರ್ದೇಶಕ ರಘು ಆರ್.ಜೆ ಕೂಡ ಚಿತ್ರದ ಗುಣಮಟ್ಟದ ಬಗ್ಗೆ ತಮ್ಮ ತೃಪ್ತಿಯನ್ನು ವ್ಯಕ್ತಪಡಿಸಿದರು.
‘ಅರೇರೇ ಯಾರೋ ಇವಳು’ ಹಾಡು 90ರ ದಶಕದ ಶಾಲಾ ಜೀವನದ ಒಂದು ಮಧುರ ಕ್ಷಣವನ್ನು ಚಿತ್ರಿಸುತ್ತದೆ, ಇದರಲ್ಲಿ ವಿನಯ್ ರಾಜಕುಮಾರ್ ಮತ್ತು ನಿಶಾ ರವಿಕೃಷ್ಣನ್ 10ನೇ ತರಗತಿಯ ವಿದ್ಯಾರ್ಥಿಗಳಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ವಿನಯ್ ರಾಜಕುಮಾರ್, ಅದಿತಿ, ನಿಶಾ ರವಿಕೃಷ್ಣನ್, ಜಗ್ಗಪ್ಪ, ಅರುಣಾ ಬಾಲರಾಜ್, ಮತ್ತು ಅತಿಥಿ ಪಾತ್ರದಲ್ಲಿ ರವಿಚಂದ್ರನ್ ನಟಿಸಿದ್ದಾರೆ. ಬೆಂಗಳೂರು ಮತ್ತು ತೀರ್ಥಹಳ್ಳಿಯಂತಹ ಸ್ಥಳಗಳಲ್ಲಿ ಚಿತ್ರೀಕರಣ ನಡೆದಿದ್ದು, ಆಗಸ್ಟ್ 29ರಂದು ಚಿತ್ರ ಬಿಡುಗಡೆಯಾಗಲಿದೆ.
ನಟ ವಿನಯ್ ರಾಜಕುಮಾರ್ ಮಾತನಾಡಿ, “ಮೊದಲ ಹಾಡಿನ ಯಶಸ್ಸು ನಮಗೆ ದೊಡ್ಡ ಖುಷಿ ತಂದಿದೆ. ಈ ಎರಡನೇ ಹಾಡು ನನ್ನ ಫೇವರಿಟ್. 16 ವರ್ಷದ ಹುಡುಗನ ಪಾತ್ರಕ್ಕೆ ತೂಕ ಕಡಿಮೆ ಮಾಡುವುದು ಒಂದು ಸವಾಲಾಗಿತ್ತು. ಶಾಲಾ ದಿನಗಳಲ್ಲಿ ಇಷ್ಟವಾದ ಹುಡುಗಿಯ ಹಿಂದೆ ಓಡಾಡಿದ ಜೀವನವನ್ನು ಈ ಹಾಡು ನೆನಪಿಸಿತು. ಈ ಚಿತ್ರದಲ್ಲಿ ನನ್ನ ಪಾತ್ರಕ್ಕೆ ಮೂರು ಶೇಡ್ಗಳಿವೆ, ಇದು ಎಲ್ಲರಿಗೂ ಇಷ್ಟವಾಗುವ ಭರವಸೆ ಇದೆ,” ಎಂದರು.