ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಸಂಘರ್ಷದ ಪರಿಣಾಮವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ದರ ಗಗನಕ್ಕೇರುತ್ತಿದೆ. ಈ ಏರಿಕೆಯ ಬಿಸಿಯಿಂದ ದೇಶೀಯ ತೈಲ ಕಂಪನಿಗಳನ್ನು ರಕ್ಷಿಸಲು ಮತ್ತು ಸಾಮಾನ್ಯ ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಬೀಳದಂತೆ ತಡೆಯಲು ಕೇಂದ್ರ ಸರ್ಕಾರ ಒಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು ಪ್ರತಿ ಲೀಟರ್ಗೆ ₹10 ರಷ್ಟು ಕಡಿತಗೊಳಿಸಿದೆ. ಆದರೆ, ಇದರಿಂದ ಗ್ರಾಹಕರಿಗೆ ಯಾವುದೇ ಬದಲಾವಣೆಗಳಿಲ್ಲ.
ಏನಿದು ವಿಶೇಷ ಹೆಚ್ಚುವರಿ ಅಬಕಾರಿ ಸುಂಕ ?
ಸಾಮಾನ್ಯವಾಗಿ ಅಬಕಾರಿ ಸುಂಕ ಕಡಿತವಾದಾಗ ಪೆಟ್ರೋಲ್ ಬಂಕ್ಗಳಲ್ಲಿ ದರ ಇಳಿಕೆಯಾಗುತ್ತದೆ. ಆದರೆ, ಈ ಬಾರಿ ಕಡಿತಗೊಳಿಸಿರುವುದು ವಿಶೇಷ ಹೆಚ್ಚುವರಿ ಅಬಕಾರಿ ಸುಂಕ. ಇದು ತೈಲ ಮಾರುಕಟ್ಟೆ ಕಂಪನಿಗಳು (OMC) ಸರ್ಕಾರಕ್ಕೆ ಪಾವತಿಸುವ ತೆರಿಗೆಯಾಗಿದೆ. ಪ್ರಸ್ತುತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಕಳೆದ ಒಂದು ತಿಂಗಳಲ್ಲಿ ಬರೋಬ್ಬರಿ 30 ಡಾಲರ್ನಷ್ಟು ಏರಿಕೆಯಾಗಿದೆ. ಇಷ್ಟು ಬೆಲೆ ಏರಿಕೆಯಾದರೂ ಭಾರತದಲ್ಲಿ ತೈಲ ಕಂಪನಿಗಳು ಮಾರಾಟ ದರವನ್ನು ಹೆಚ್ಚಿಸಿಲ್ಲ. ಇದರಿಂದಾಗಿ ಕಂಪನಿಗಳಿಗೆ ಉಂಟಾಗುತ್ತಿರುವ ಭಾರಿ ನಷ್ಟವನ್ನು ಸರಿದೂಗಿಸಲು ಸರ್ಕಾರ ತಾನು ಪಡೆಯುವ ತೆರಿಗೆಯನ್ನು ಕಡಿಮೆ ಮಾಡಿದೆ.
ಸರ್ಕಾರ ಸುಂಕ ಇಳಿಸಿದರೂ ತೈಲ ಕಂಪನಿಗಳು ಬಂಕ್ಗಳಲ್ಲಿ ಮಾರಾಟ ದರವನ್ನು ಇಳಿಸುವುದಿಲ್ಲ. ಬದಲಾಗಿ, ಇಳಿಕೆಯಾದ ಸುಂಕದ ಮೊತ್ತವನ್ನು ಕಂಪನಿಗಳು ತಮ್ಮ ನಷ್ಟವನ್ನು ಸರಿದೂಗಿಸಲು ಬಳಸಿಕೊಳ್ಳುತ್ತವೆ. ಅಂದರೆ, ಒಂದು ವೇಳೆ ಸರ್ಕಾರ ಸುಂಕ ಇಳಿಸದಿದ್ದರೆ, ತೈಲ ಕಂಪನಿಗಳು ನಷ್ಟ ತಡೆಯಲು ಪೆಟ್ರೋಲ್ ದರವನ್ನು ಏರಿಸಬೇಕಾಗುತ್ತಿತ್ತು. ಈಗ ಸುಂಕ ಇಳಿಕೆಯಾಗಿರುವುದರಿಂದ ಬೆಲೆ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ.
ಸರ್ಕಾರಕ್ಕೆ ಆಗುವ ನಷ್ಟದ ಲೆಕ್ಕಾಚಾರ
ಭಾರತದಲ್ಲಿ ವರ್ಷಕ್ಕೆ ಸುಮಾರು 17,500 ಕೋಟಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟವಾಗುತ್ತಿದೆ. ಈಗ ಮಾಡಲಾದ ₹10 ರ ಸುಂಕ ಕಡಿತದಿಂದ ಕೇಂದ್ರ ಸರ್ಕಾರದ ಖಜಾನೆಗೆ ವಾರ್ಷಿಕ ಸುಮಾರು ₹1.75 ಲಕ್ಷ ಕೋಟಿ ಆದಾಯ ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದೆ.
ಈ ನಿರ್ಧಾರದ ನಂತರ ಪೆಟ್ರೋಲ್ ಮೇಲಿನ ಒಟ್ಟಾರೆ ಅಬಕಾರಿ ಸುಂಕ ₹21.90 ರಿಂದ ₹11.9 ಕ್ಕೆ ಇಳಿಯಲಿದೆ. ಇದರಲ್ಲಿ ಮೂಲ ಅಬಕಾರಿ ಸುಂಕ, ಕೃಷಿ ಮೂಲಸೌಲಭ್ಯ ಸುಂಕ ಹಾಗೂ ರಸ್ತೆ ಅಭಿವೃದ್ಧಿ ಸುಂಕಗಳು ಸೇರಿವೆ. ಡೀಸೆಲ್ ಮೇಲಿನ ಸುಂಕ ₹17.80 ರಿಂದ ₹7.80 ಕ್ಕೆ ಇಳಿಕೆಯಾಗಲಿದ್ದು, ವಿಶೇಷ ಹೆಚ್ಚುವರಿ ಅಬಕಾರಿ ಸುಂಕ ಶೂನ್ಯಕ್ಕಿಳಿಯಲಿದೆ.





