ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಇದೀಗ ಅಂತಿಮ ಹಂತದತ್ತ ಸಾಗುತ್ತಿದ್ದು, ಫಿನಾಲೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಫಿನಾಲೆ ಹತ್ತಿರವಾಗುತ್ತಿದ್ದಂತೆ ಮನೆ ಒಳಗಿನ ಆಟಗಳು ಇನ್ನಷ್ಟು ಕಠಿಣವಾಗಿದೆ.. ‘ಟಿಕೆಟ್ ಟು ಟಾಪ್ 6’ ಎಂಬ ಪ್ರಮುಖ ಟಾಸ್ಕ್ ಈ ವಾರ ಸ್ಪರ್ಧಿಗಳ ಧೈರ್ಯ ಮತ್ತು ಶಾರೀರಿಕ ಸಾಮರ್ಥ್ಯಕ್ಕೆ ನಿಜವಾದ ಪರೀಕ್ಷೆಯಾಗಿದೆ..
ಈ ಭಾರೀ ಟಾಸ್ಕ್ನಲ್ಲಿ ರಘು, ಅಶ್ವಿನಿ, ಕಾವ್ಯಾ ಮತ್ತು ಧನುಷ್ ಗೌಡ ಭಾಗವಹಿಸಿದ್ದರು. ಈ ಟಾಸ್ಕ್ನ ವಿಶೇಷತೆ ಎಂದರೆ, ಸ್ವಿಮ್ಮಿಂಗ್ ಪೂಲ್ನೊಳಗೆ ಇಟ್ಟಿರುವ ಕಬ್ಬಿಣದ ಸರಕುಗಳನ್ನು ಬಳಸಿ ಹಂತ ಹಂತವಾಗಿ ಟವರ್ ನಿರ್ಮಿಸಿ, ಅದರ ಶಿಖರಕ್ಕೆ ಏರಬೇಕು. ಕೊನೆಗೆ ಟವರ್ ಮೇಲಿಂದ ‘ಜೈ ಬಿಗ್ ಬಾಸ್’ ಎಂದು ಘೋಷಿಸುವ ಸ್ಪರ್ಧಿಗೆ ಗ್ರ್ಯಾಂಡ್ ಫಿನಾಲೆಯ ಮೊದಲ ಟಿಕೆಟ್ ಸಿಗಲಿದೆ ಎಂಬುದು ನಿಯಮವಾಗಿತ್ತು.
ಟವರ್ ಟಾಸ್ಕ್ನಲ್ಲಿ ಭಯಾನಕ ಕ್ಷಣ
ಟಾಸ್ಕ್ ನಡೆಯುವ ವೇಳೆ ಮನೆಯೊಳಗೆ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿತ್ತು. ಸ್ಪರ್ಧಿಗಳು ಟವರ್ ಏರಲು ಹರಸಾಹಸ ಪಟ್ಟರು. ಆದರೆ ಈ ನಡುವೆ ಅಶ್ವಿನಿ ಗೌಡ ಅವರು ಕಾಲು ಜಾರಿ ಟವರ್ನಿಂದ ಕೆಳಗೆ ಬಿದ್ದಿದ್ದು ಎಲ್ಲರನ್ನು ಬೆಚ್ಚಿಬೀಳಿಸಿದೆ. ಅದೇ ರೀತಿ ಧನುಷ್ ಗೌಡ ಕೂಡ ಆಟದ ಮಧ್ಯೆ ಬಿದ್ದು ಶಾಕ್ ಕೊಟ್ಟಿದ್ದಾರೆ.
ಈ ಘಟನೆಗಳನ್ನು ನೋಡಿ ಮನೆಯಲ್ಲಿದ್ದ ಗಿಲ್ಲಿ ನಟ, ಧ್ರುವಂತ್, ರಕ್ಷಿತಾ ಹಾಗೂ ರಾಶಿಕಾ ಅವರುಗಳು ಆತಂಕಕ್ಕೊಳಗಾಗಿದ್ದಾರೆ. “ಇದು ಆಟವಲ್ಲ, ಜೀವದ ಪ್ರಶ್ನೆ” ಎನ್ನುವ ಮಟ್ಟಿಗೆ ಎಲ್ಲರೂ ಹೆದರಿದ ಕ್ಷಣಗಳು ಕಂಡುಬಂದವು. ಬಿಗ್ ಬಾಸ್ ಮನೆ ಕೆಲ ಕ್ಷಣಗಳ ಕಾಲ ಸಂಪೂರ್ಣ ಮೌನಕ್ಕೆ ಜಾರಿತ್ತು.
ಮೊದಲ ಟಿಕೆಟ್ ಯಾರ ಕೈ ಸೇರಿತು?
ಸೋಷಿಯಲ್ ಮೀಡಿಯಾ ವರದಿಗಳ ಪ್ರಕಾರ, ಈ ಕಠಿಣ ಟಾಸ್ಕ್ನಲ್ಲಿ ಧನುಷ್ ಗೌಡ ಅವರು ಗೆಲುವು ಸಾಧಿಸಿದ್ದಾರೆ ಎನ್ನಲಾಗಿದೆ. ಅವರು ಯಶಸ್ವಿಯಾಗಿ ಟವರ್ ನಿರ್ಮಿಸಿ ಶಿಖರ ತಲುಪಿದ್ದು, ‘ಟಿಕೆಟ್ ಟು ಟಾಪ್ 6’ ಗೆ ಮೊದಲ ಸ್ಪರ್ಧಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ಸಂಭ್ರಮ ತಂದಿದೆ. ಅಧಿಕೃತ ಘೋಷಣೆಗಾಗಿ ಎಲ್ಲರೂ ಕಾದು ನೋಡುತ್ತಿದ್ದಾರೆ.
ಟಿಕೆಟ್ ಟು ಟಾಪ್ 6: ಪೈಪೋಟಿ ಜೋರಾಗಿದೆ
ಈ ಟಾಸ್ಕ್ನಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ಎಂದರೆ ರಕ್ಷಿತಾ ಶೆಟ್ಟಿ ಅವರು ಆಟದಿಂದ ಔಟ್ ಆಗಿದ್ದು, ರಘು ಅವರಿಗೆ ಅವಕಾಶ ಕಲ್ಪಿಸಿದ್ದರು. ಇದರಿಂದ ರಕ್ಷಿತಾ ಅವರಿಗೆ ಟಾಪ್ 6 ರೇಸ್ನಿಂದ ಹೊರಗುಳಿಯಬೇಕಾದ ಪರಿಸ್ಥಿತಿ ಎದುರಾಯಿತು. ಅಶ್ವಿನಿ ಮತ್ತು ಧ್ರುವಂತ್ ಅವರುಗಳು ಎರಡನೇ ಸುತ್ತಿನಲ್ಲಿ ಗೆದ್ದು ಮುಂದಿನ ಹಂತಕ್ಕೆ ಆಯ್ಕೆಯಾಗಿದ್ದಾರೆ.
ಅಶ್ವಿನಿ-ಧ್ರುವಂತ್ ನಡುವೆ ಬಿರುಕು
ಇನ್ನೊಂದೆಡೆ, ಅಶ್ವಿನಿ ಮತ್ತು ಧ್ರುವಂತ್ ಅವರಿಗೆ ಟಾಸ್ಕ್ ವೇಳೆ ಉಂಟಾದ ಸಣ್ಣ ವಿಚಾರ ದೊಡ್ಡ ಜಗಳಕ್ಕೆ ತಿರುಗಿದ್ದು, ಮನೆಮಂದಿಯೆಲ್ಲರ ಗಮನ ಸೆಳೆದಿದೆ. ಈ ವಿಚಾರವನ್ನು ನೋಡಿ ಗಿಲ್ಲಿ “ಇದು ನೋಡಿದ್ರೆ ಬೇಜಾರ್ ಆಗುತ್ತೆ” ಎಂದು ಪ್ರತಿಕ್ರಿಯಿಸಿದ್ದಾರೆ.
ಧ್ರುವಂತ್ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಾ, “ಕಣ್ಣು ಮುಂದೆ ಆಗ್ತಿರೋ ಅನ್ಯಾಯ ನೋಡಿಕೊಂಡು ಸುಮ್ಮನೆ ಇರೋಕೆ ಆಗಲ್ಲ” ಎಂದು ಹೇಳಿದ್ದಾರೆ. ಇದಕ್ಕೆ ಗಿಲ್ಲಿ ಹಾಗೂ ರಘು ಸಹ ಬೆಂಬಲ ಸೂಚಿಸಿದ್ದಾರೆ. ಧ್ರುವಂತ್, “ಎಲ್ಲವೂ ಒಳ್ಳೆಯದಕ್ಕೇ ಆಗ್ತಿದೆ” ಎಂದು ಉತ್ತರಿಸಿದ್ದಾರೆ.
ಈ ಜಗಳವೇ ಮನೆಯೊಳಗೆ ಹೊಸ ಗುಂಪುಗಾರಿಕೆ, ರಾಜಕೀಯ ಹಾಗೂ ತಂತ್ರಗಳಿಗೆ ವೇದಿಕೆಯಾಗಿದ್ದು, ವೀಕ್ಷಕರಿಗೆ ಎಂಟರ್ಟೈನ್ಮೆಂಟ್ ಡೋಸ್ ಹೆಚ್ಚಿಸಿದೆ.





