ಮುಂಬೈ: ವಿಮಾನ ನಿಲ್ದಾಣದಲ್ಲಿ ಒಂದು ಕಪ್ ಚಹಾಕ್ಕೆ 200 ರಿಂದ 250 ರೂಪಾಯಿ ನೀಡುವುದು ಸಾಮಾನ್ಯ ಪ್ರಯಾಣಿಕರಿಗೆ ಅಸಾಧ್ಯದ ಮಾತಾಗಿತ್ತು. ಆದರೆ, ಈಗ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Mumbai Airport) ಕ್ರಾಂತಿಕಾರಿ ಬದಲಾವಣೆಯೊಂದು ನಡೆದಿದೆ. ಈಗ ಇಲ್ಲಿ ಕೇವಲ 10 ರೂಪಾಯಿಗೆ ಚಹಾ ಮತ್ತು ಕಾಫಿ ಲಭ್ಯವಿದೆ.
ಆಮ್ ಆದ್ಮಿ ಪಕ್ಷದ (AAP) ಸಂಸದ ರಾಘವ್ ಚಡ್ಡಾ ಅವರು ಈ ಹಿಂದೆ ರಾಜ್ಯಸಭೆಯಲ್ಲಿ ವಿಮಾನ ನಿಲ್ದಾಣಗಳಲ್ಲಿನ ದುಬಾರಿ ಆಹಾರದ ದರಗಳ ಬಗ್ಗೆ ಧ್ವನಿ ಎತ್ತಿದ್ದರು. ಸಾಮಾನ್ಯ ಮನುಷ್ಯ ಏರ್ಪೋರ್ಟ್ನಲ್ಲಿ ಒಂದು ಕಪ್ ಟೀ ಕುಡಿಯಬೇಕಾದರೂ 250 ರೂಪಾಯಿ ಕೊಡಬೇಕಾದ ಪರಿಸ್ಥಿತಿ ಇದೆ. ಇದು ಲೂಟಿಯಲ್ಲವೇ ? ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಈ ವಿಷಯದ ಕುರಿತು ನಾಗರಿಕ ವಿಮಾನಯಾನ ಸಚಿವಾಲಯದ ಗಮನ ಸೆಳೆದಿದ್ದರು.
Visited the Udaan Yatri café at Mumbai Airport and had chai for just ₹10.
Was flying to Delhi and wanted chai before the flight. Spoke to several travellers while I was there. All of them happy, all of them saying the same thing: Easy on the pocket, good service, value for… pic.twitter.com/wOelXZ2iZS
— Raghav Chadha (@raghav_chadha) March 30, 2026
ಇದೀಗ ತಮ್ಮ ಹೋರಾಟಕ್ಕೆ ಫಲ ಸಿಕ್ಕಿರುವ ಬೆನ್ನಲ್ಲೇ ರಾಘವ್ ಚಡ್ಡಾ ಅವರು ಮುಂಬೈ ಏರ್ಪೋರ್ಟ್ಗೆ ಭೇಟಿ ನೀಡಿ, ಅಲ್ಲಿನ ಕಡಿಮೆ ದರದ ಆಹಾರದ ಮಳಿಗೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಮುಂಬೈ ವಿಮಾನ ನಿಲ್ದಾಣದಲ್ಲಿ ಸ್ಥಾಪಿಸಲಾಗಿರುವ ಈ ವಿಶೇಷ ಮಳಿಗೆಯಲ್ಲಿ ದರಪಟ್ಟಿ ನೋಡಿ ಪ್ರಯಾಣಿಕರು ಅಚ್ಚರಿಗೊಳ್ಳುತ್ತಿದ್ದಾರೆ.
-
ಚಹಾ ಅಥವಾ ಕಾಫಿ: ಕೇವಲ 10 ರೂಪಾಯಿ.
-
ಸ್ನ್ಯಾಕ್ಸ್ (ಸಮೋಸಾ ಅಥವಾ ವಡಾಪಾವ್): ಕೇವಲ 10 ರೂಪಾಯಿ.
-
ಕಾಂಬೋ: ನೀವು ಒಂದು ಚಹಾ ಮತ್ತು ಒಂದು ಸಮೋಸಾ ಅಥವಾ ವಡಾಪಾವ್ ಖರೀದಿಸಿದರೆ ಕೇವಲ 20 ರೂಪಾಯಿಯಲ್ಲಿ ನಿಮ್ಮ ಉಪಹಾರ ಮುಗಿಸಬಹುದು.
ಈ ದರಗಳು ವಿಮಾನ ನಿಲ್ದಾಣದ ಹೊರಗಿನ ಸಾಮಾನ್ಯ ಹೋಟೆಲ್ಗಳ ದರಕ್ಕಿಂತಲೂ ಕಡಿಮೆಯಾಗಿರುವುದು ವಿಶೇಷ.ರಾಜ್ಯಸಭೆಯಲ್ಲಿ ನಡೆದ ಚರ್ಚೆಯ ನಂತರ, ನಾಗರಿಕ ವಿಮಾನಯಾನ ಸಚಿವಾಲಯವು ಎಲ್ಲಾ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಸಾಮಾನ್ಯ ಜನರಿಗೆ ಕೈಗೆಟಕುವ ದರದಲ್ಲಿ ಆಹಾರ ಸಿಗುವಂತಾಗಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿತ್ತು. ಇದರ ಭಾಗವಾಗಿ ಮುಂಬೈನಲ್ಲಿ ಈ ವ್ಯವಸ್ಥೆ ಜಾರಿಗೆ ಬಂದಿದೆ. ಕೇವಲ ಶ್ರೀಮಂತರಿಗೆ ಮಾತ್ರವಲ್ಲದೆ, ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವ ಸಿಬ್ಬಂದಿ, ಟ್ಯಾಕ್ಸಿ ಚಾಲಕರು ಮತ್ತು ಮಧ್ಯಮ ವರ್ಗದ ಪ್ರಯಾಣಿಕರಿಗೂ ಇದು ವರದಾನವಾಗಿದೆ.
ರಾಘವ್ ಚಡ್ಡಾ ಹಂಚಿಕೊಂಡಿರುವ ವಿಡಿಯೋ ಈಗ ಇಂಟರ್ನೆಟ್ನಲ್ಲಿ ಭಾರಿ ಸದ್ದು ಮಾಡುತ್ತಿದೆ. ನೆಟ್ಟಿಗರು ಈ ಕ್ರಮವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ. ವಿಮಾನ ನಿಲ್ದಾಣಗಳಲ್ಲಿ ಇಂತಹ ಜನಪರ ಮಳಿಗೆಗಳು ದೇಶದ ಎಲ್ಲಾ ಏರ್ಪೋರ್ಟ್ಗಳಲ್ಲೂ ಆರಂಭವಾಗಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.





