ಢಾಕಾ / ನವದೆಹಲಿ, ಮಾ.28: ಐಪಿಎಲ್ 2026 ಆರಂಭಕ್ಕೂ ಮುನ್ನವೇ ಕ್ರಿಕೆಟ್ ಹಾಗೂ ರಾಜಕೀಯ ವಲಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಹಿಂದಿನ ನಿರ್ಬಂಧವನ್ನು ಹಿಂತೆಗೆದುಕೊಂಡಿರುವ ಬಾಂಗ್ಲಾದೇಶ ಸರ್ಕಾರ, ಇದೀಗ ಐಪಿಎಲ್ ಪ್ರಸಾರಕ್ಕೆ ಅನುಮತಿ ನೀಡಿದೆ.
ಈ ಹಿಂದೆ, ಬಾಂಗ್ಲಾದೇಶದ ವೇಗದ ಬೌಲರ್ ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್ನಿಂದ ಹೊರಗಿಡಲಾಗಿತ್ತು ಎಂಬ ವಿಚಾರ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಈ ಬೆಳವಣಿಗೆಗೆ ಆಕ್ರೋಶಗೊಂಡಿದ್ದ ಅಂದಿನ ಬಾಂಗ್ಲಾದೇಶ ಮಧ್ಯಂತರ ಸರ್ಕಾರ, ದೇಶದಲ್ಲಿ ಐಪಿಎಲ್ ಪ್ರಸಾರವನ್ನು ನಿಷೇಧಿಸುವ ನಿರ್ಧಾರ ತೆಗೆದುಕೊಂಡಿತ್ತು. ಇದರಿಂದ ಕ್ರಿಕೆಟ್ ಅಭಿಮಾನಿಗಳಿಗೆ ಐಪಿಎಲ್ ವೀಕ್ಷಣೆ ಅಸಾಧ್ಯವಾಗಿತ್ತು.
ಆದರೆ ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಬಾಂಗ್ಲಾದೇಶದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಭಾರತ ಜೊತೆಗಿನ ಸಂಬಂಧವನ್ನು ಸುಧಾರಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಂಡಿದೆ. ಈ ಹಿನ್ನೆಲೆ, ಐಪಿಎಲ್ ಪ್ರಸಾರಕ್ಕೆ ಇರುವ ನಿಷೇಧವನ್ನು ಅಧಿಕೃತವಾಗಿ ತೆರವುಗೊಳಿಸಲಾಗಿದೆ.
ಬಾಂಗ್ಲಾದೇಶದ ಮಾಹಿತಿ ಮತ್ತು ಪ್ರಸಾರ ಸಚಿವ ಜಹೀರ್ ಉದ್ದೀನ್ ಸ್ವಪನ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, “ಐಪಿಎಲ್ ಪ್ರಸಾರದ ಮೇಲೆ ಯಾವುದೇ ನಿಷೇಧವಿಲ್ಲ. ಯಾವುದೇ ಪ್ರಸಾರ ಸಂಸ್ಥೆ ಅರ್ಜಿ ಸಲ್ಲಿಸಿದರೆ, ಸರ್ಕಾರವು ನಿಯಮಾನುಸಾರ ಅನುಮತಿ ನೀಡುತ್ತದೆ” ಎಂದು ತಿಳಿಸಿದ್ದಾರೆ. ಈ ಹೇಳಿಕೆಯಿಂದಾಗಿ, ಬಾಂಗ್ಲಾದೇಶದಲ್ಲಿ ಮತ್ತೆ ಐಪಿಎಲ್ ಹಬ್ಬದ ಸಂಭ್ರಮ ಮನೆಮಾಡುವ ಸಾಧ್ಯತೆ ಹೆಚ್ಚಾಗಿದೆ.
ಇದರಿಂದಾಗಿ ಐಪಿಎಲ್ ಅಧಿಕೃತ ಪ್ರಸಾರಕರಾದ Star Sports ಸೇರಿದಂತೆ ವಿವಿಧ ಚಾನೆಲ್ಗಳು ಬಾಂಗ್ಲಾದೇಶದಲ್ಲಿ ಪಂದ್ಯಾವಳಿಯನ್ನು ಪ್ರಸಾರ ಮಾಡಲು ಅವಕಾಶ ಪಡೆಯಬಹುದು. ಪ್ರಸಾರ ಮಾಡಲು ಬಯಸುವ ಸಂಸ್ಥೆಗಳು ಬಾಂಗ್ಲಾದೇಶದ ಮಾಹಿತಿ ಮತ್ತು ಪ್ರಸಾರ ಇಲಾಖೆಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕಾಗಿದೆ.
ಇನ್ನು 2026ರ IPL ಮಾರ್ಚ್ 28ರಿಂದ ಆರಂಭವಾಗುತ್ತಿದ್ದು, ವಿಶ್ವದಾದ್ಯಂತ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ವೇಳೆಯಲ್ಲೇ ಬಾಂಗ್ಲಾದೇಶ ಸರ್ಕಾರ ಈ ನಿರ್ಧಾರ ಕೈಗೊಂಡಿರುವುದು ವಿಶೇಷವಾಗಿ ಗಮನ ಸೆಳೆಯುತ್ತಿದೆ.
ಹಿಂದಿನ ವಿವಾದದ ವೇಳೆ, ಬಾಂಗ್ಲಾದೇಶ ಸರ್ಕಾರ ಕೇವಲ ಐಪಿಎಲ್ ಪ್ರಸಾರವನ್ನು ಮಾತ್ರ ನಿಷೇಧಿಸದೇ, ಅಂತಾರಾಷ್ಟ್ರೀಯ ಮಟ್ಟದಲ್ಲೂ ತನ್ನ ಅಸಮಾಧಾನ ವ್ಯಕ್ತಪಡಿಸಿತ್ತು. ಟಿ20 ವಿಶ್ವಕಪ್ ಪಂದ್ಯಗಳನ್ನು ಭಾರತ ಹೊರತುಪಡಿಸಿ ಬೇರೆಡೆ ಆಯೋಜಿಸುವಂತೆ International Cricket Council (ಐಸಿಸಿ) ಬಳಿ ಮನವಿ ಮಾಡಿತ್ತು. ಆದರೆ ಐಸಿಸಿ ಈ ಮನವಿಯನ್ನು ತಿರಸ್ಕರಿಸಿತ್ತು.
ಈ ಹಿನ್ನೆಲೆಯಲ್ಲಿ, ಬಾಂಗ್ಲಾದೇಶ ಕ್ರಿಕೆಟ್ ತಂಡವು ಟಿ20 ವಿಶ್ವಕಪ್ನಿಂದ ಹಿಂದೆ ಸರಿಯುವ ತೀರ್ಮಾನಕ್ಕೂ ಬಂದಿತ್ತು ಎಂಬ ವರದಿಗಳು ಚರ್ಚೆಗೆ ಕಾರಣವಾಗಿದ್ದವು. ಇಂತಹ ಬೆಳವಣಿಗೆಗಳು ಕ್ರಿಕೆಟ್ ಮತ್ತು ರಾಜಕೀಯದ ನಡುವಿನ ಸಂಬಂಧವನ್ನು ಮತ್ತಷ್ಟು ಗೊಂದಲಮಯವಾಗಿಸಿದ್ದವು.
ಆದರೆ ಹೊಸ ಸರ್ಕಾರದ ಆಗಮನದೊಂದಿಗೆ ಬಾಂಗ್ಲಾದೇಶದ ನಿಲುವಿನಲ್ಲಿ ಸ್ಪಷ್ಟ ಬದಲಾವಣೆ ಕಂಡುಬಂದಿದೆ. ಈಗ ಕ್ರಿಕೆಟ್ ಮೂಲಕ ಸ್ನೇಹದ ಸೇತುವೆ ನಿರ್ಮಿಸಲು ಮುಂದಾಗಿರುವುದು ಸ್ಪಷ್ಟವಾಗಿದೆ.





