ಧುರಂಧರ್.. ಧುರಂಧರ್.. ಧುರಂಧರ್.. ಸದ್ಯ ಎಲ್ಲೆಡೆ ರಣ್ವೀರ್ ಸಿಂಗ್ ನಟನೆಯ ಈ ಸಿನಿಮಾ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಸಾವಿರ ಕೋಟಿ ಕ್ಲಬ್ ಅಂಚಿನಲ್ಲಿರೋ ಈ ಬಿಗ್ಗೆಸ್ಟ್ ಬ್ಲಾಕ್ಬಸ್ಟರ್ಗೆ ಬಾಲಿವುಡ್ನ ಒಬ್ಬೇ ಒಬ್ಬ ಸ್ಟಾರ್ ಪ್ರಶಂಸಿಸಿಲ್ಲ. ಓ ಮೈ ಗಾಡ್ ಬಿಟೌನ್ ಸ್ಟಾರ್ಸ್ಗೆ ಅದೆಷ್ಟು ಹೊಟ್ಟೆ ಉರಿ..? ಪತ್ನಿ ದೀಪಿಕಾ ಪಡುಕೋಣೆ ಸಿಕ್ಕಾಪಟ್ಟೆ ಟ್ರೋಲ್ ಆಗ್ತಿರೋದ್ಯಾಕೆ..? ತಮಿಳುನಾಡಲ್ಲಿ ಈ ಸಿನಿಮಾ ಬ್ಯಾನ್ ಆಯ್ತಾ ಅನ್ನೋದ್ರ ಕಂಪ್ಲೀಟ್ ಕಹಾನಿ ಇಲ್ಲಿದೆ ನೋಡಿ.
ಧುರಂಧರ್ಗಿಲ್ಲ ಸಪೋರ್ಟ್..
ಬಿಟೌನ್ ಸ್ಟಾರ್ಸ್ಗೆ ಅದೆಷ್ಟು ಹೊಟ್ಟೆ ಉರಿ..?
ರಜನಿ, NTR, ಚರಣ್ರಿಂದ ಸೌತ್ ಸ್ಟಾರ್ಸ್ ಶಹಬ್ಬಾಸ್ಗಿರಿ..!
ಸುನಾಮಿ ಸುಂಟರಗಾಳಿ ರೀತಿ ಬಾಕ್ಸ್ ಆಫೀಸ್ನಲ್ಲಿ ಅಲೆ ಎಬ್ಬಿಸಿರೋ ಧುರಂಧರ್ ದಿ ರಿವೆಂಜ್ ಮೂವಿಗೆ ವಿಶ್ವದ ಮೂಲೆ ಮೂಲೆಯಿಂದ ಪ್ರಶಂಸೆ, ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬರ್ತಿದೆ. ರಣ್ವೀರ್ ಸಿಂಗ್ ನಟನೆಯ ಈ ಸಿನಿಮಾಗೆ ಆಲ್ಮೋಸ್ಟ್ ಆಲ್ ನಮ್ಮ ಸೌತ್ ಸೂಪರ್ ಸ್ಟಾರ್ಗಳೆಲ್ಲಾ ಫಿದಾ ಆಗಿದ್ದಾರೆ. ಅದಕ್ಕೆ ರಜನೀಕಾಂತ್, ಜೂ ಎನ್ಟಿಆರ್, ರಾಮ್ ಚರಣ್, ಅಲ್ಲು ಅರ್ಜುನ್, ವಿಜಯ್ ದೇವರಕೊಂಡ, ಸಂದೀಪ್ ರೆದ್ದಿ ವಂಗಾ, ಆರ್ಜಿವಿ, ಸುಕುಮಾರ್, ರಾಜಮೌಳಿ, ನಾಗಾರ್ಜುನ್ ಅಂತಹ ಲೆಜೆಂಡ್ಸ್ ಮಾಡಿರೋ ಪೋಸ್ಟ್ಗಳೇ ಸಾಕ್ಷಿ.
ಆದ್ರೆ ಬಾಲಿವುಡ್ ಮಂದಿ ಮಾತ್ರ ತಮ್ಮದೇ ಚಿತ್ರರಂಗದ ಸ್ಟಾರ್ಗೆ ಸಣ್ಣದೊಂದು ಅಪ್ರೆಸಿಯೇಷನ್ ಮಾಡದೇ ಇರೋದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಯೆಸ್.. ಆಮೀರ್ ಖಾನ್, ಸಲ್ಮಾನ್ ಖಾನ್, ಶಾರೂಖ್ ಖಾನ್, ರಣ್ಬೀರ್ ಕಪೂರ್, ಅಮಿತಾಬ್ ಬಚ್ಚನ್ ಸೇರಿದಂತೆ ಬಿಟೌನ್ನ ಯಾವೊಬ್ಬ ಸ್ಟಾರ್ ಕೂಡ ರಣ್ವೀರ್ಗೆ ಬೆನ್ನು ತಟ್ಟುವ ಕಾರ್ಯ ಮಾಡಿಲ್ಲ. ಇದನ್ನ ನೋಡಿದ್ರೆ ಓ ಮೈ ಗಾಡ್ ಈ ಬಿಟೌನ್ ಸ್ಟಾರ್ಸ್ಗೆ ಅದೆಷ್ಟು ಹೊಟ್ಟೆ ಉರಿ ಇದೆ ಗುರು ಅನಿಸದೇ ಇರದು.
ಗಂಡನಿಗಿಲ್ಲ ಪ್ರಶಂಸೆ.. ದೀಪಿಕಾ ಪಡುಕೋಣೆ ಸಖತ್ ಟ್ರೋಲ್
ಪರ್ಸನಲ್ ಪೇಜ್ಗಳಿಂದ ಮದುವೆ ಫೋಟೋಸ್ ಡಿಲೀಟ್..?
ಧುರಂಧರ್ ಸೀಕ್ವೆಲ್ ಸಿನಿಮಾಗೆ ಬಾಲಿವುಡ್ ಸ್ಟಾರ್ಗಳ ಸಪೋರ್ಟ್ ಇಲ್ಲ ಓಕೆ. ಆದ್ರೆ ರಣ್ವೀರ್ ಸಿಂಗ್ಗೆ ತನ್ನ ಸ್ವಂತ ಮಡದಿಯ ಬೆನ್ನೆಲುಬು ಕೂಡ ಇಲ್ಲದೇ ಇರೋದು ದುರಂತ. ದೀಪಿಕಾ ಪಡುಕೋಣೆ ಅದ್ಯಾಕೋ ಧುರಂಧರ್ ಸಿನಿಮಾ ಬಗ್ಗೆ ಎಲ್ಲಿಯೂ ಒಂದು ಪೋಸ್ಟ್ ಹಾಕಿಲ್ಲ. ಯಾವಾಗ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗೋಕೆ ಶುರುವಾದ್ರೋ ಆಗ ನೆಟ್ಟಿಗರ ಬಾಯಿ ಮುಚ್ಚಿಸೋಕೆ ಅಂತ ಇನ್ಸ್ಟಾ ಸ್ಟೋರೀಸ್ನಲ್ಲಿ ಸಿಂಪಲ್ ಆಗಿ ಒಂದು ಪೋಸ್ಟ್ ಹಾಕಿ ಕೈ ತೊಳೆದುಕೊಂಡಿದ್ದಾರೆ ಪತ್ನಿ ದೀಪಿಕಾ.
ಅಂದಹಾಗೆ ಇತ್ತೀಚೆಗೆ ರಣ್ವೀರ್ ಹಾಗೂ ದೀಪಿಕಾ ಎಲ್ಲೂ ಒಟ್ಟೊಟ್ಟಿಗೆ ಕಾಣಿಸಿಕೊಂಡಿಲ್ಲ. ಅವ್ರ ಬಾಳಲ್ಲಿ ಮಗಳ ಆಗಮನದ ಬಳಿಕ ಎಲ್ಲವೂ ಬದಲಾಗಿಬಿಟ್ಟಂತಿದೆ. ಯಾಕಂದ್ರೆ ಅವರುಗಳ ಪರ್ಸನಲ್ ಪೇಜ್ಗಳಲ್ಲಿ ಮದುವೆಯ ಫೋಟೋಗಳೆಲ್ಲಾ ಡಿಲೀಟ್ ಆಗಿವೆ. ಇದೇ ಚಾನ್ಸ್ ಅಂತ ಹೇಳಿ ಒಂದಷ್ಟು ಮಂದಿ ಸೋಶಿಯಲ್ ಮೀಡಿಯಾದಲ್ಲಿ ರಣ್ವೀರ್-ದೀಪಿಕಾ ಸೆಪರೇಟ್ ಆಗ್ತಿದ್ದಾರಾ ಅಂತೆಲ್ಲಾ ಪ್ರಶ್ನೆ ಮಾಡ್ತಿದ್ದಾರೆ.
ತಮಿಳುನಾಡಲ್ಲಿ ಧುರಂಧರ್ ಬ್ಯಾನ್..? ಎಷ್ಟು ಕೋಟಿ ಲಾಸ್..?
ಪ್ರೊಪಗಾಂಡ ಡಿಫೆಕ್ಟ್.. ಎಲೆಕ್ಷನ್ ಎಫೆಕ್ಟ್.. ಹೈಕೋರ್ಟ್ ಶಾಕ್
ಧುರಂಧರ್ ರಾಜಕೀಯ ವಿಷಯಗಳನ್ನ ಒಳಗೊಂಡಿರೋ ಪ್ರೊಪಗಾಂಡ ಸಿನಿಮಾ. ಹಾಗಾಗಿ ಏಪ್ರಿಲ್ 23ರಂದು ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ಇರೋದ್ರಿಂದ ಅದರ ಮೇಲೆ ಇದು ಪ್ರಭಾವ ಬೀರಲಿದೆ. ಚುನಾವಣಾ ನೀತಿ ಸಂಹಿತೆ ಪ್ರಕಾರ ಇಂತಹ ಚಿತ್ರಗಳ ಪ್ರದರ್ಶನ ರದ್ದುಗೊಳಿಸಬೇಕು ಅಂತ ಮದ್ರಾಸ್ ಹೈ ಕೋರ್ಟ್ ಮೆಟ್ಟಿಲೇರಿದ್ದಾರೆ ವಕೀಲರೊಬ್ಬರು. ಅವ್ರ ಮೌಖಿಕ ಮನವಿ ಆಲಿಸಿರೋ ಕೋರ್ಟ್, ರಿಟ್ ಅರ್ಜಿ ಸಲ್ಲಿಸಲು ಸೂಚಿಸಿದೆ. ಒಂದು ವೇಳೆ ರಿಟ್ ಅರ್ಜಿ ಕೋರ್ಟ್ನಿಂದ ಪುರಸ್ಕರಿಸಲ್ಪಟ್ಟರೆ ತಮಿಳುನಾಡಲ್ಲಿ ಧುರಂಧರ್-2 ಪ್ರದರ್ಶನಕ್ಕೆ ಬ್ರೇಕ್ ಬೀಳಲಿದೆ.
ಅಂದಹಾಗೆ ತಮಿಳುನಾಡಿನಲ್ಲಿ ಇಲ್ಲಿಯ ತನಕ ಧುರಂಧರ್ ಗಳಿಕೆ ಜಸ್ಟ್ ಒಂದು ಕೋಟಿ ರೂಪಾಯಿ ಅಷ್ಟೇ. ಅಬ್ಬರಿಸಿ, ಬೊಬ್ಬಿರಿಯೋ ರೇಂಜ್ಗೆ ಏನೂ ಅಲ್ಲಿ ಬಾಕ್ಸ್ ಆಫೀಸ್ ಕಲೆಕ್ಷನ್ ಆಗ್ತಿಲ್ಲ. ಹೀಗಾಗಿ, ತಮಿಳುನಾಡಲ್ಲಿ ಬ್ಯಾನ್ ಆದ್ರೂ ಅಂತಹ ದೊಡ್ಡ ಎಫೆಕ್ಟ್ ನಿರ್ಮಾಪಕರಿಗೆ ಅಗಲ್ಲ ಅನ್ನೋದು ಸ್ಪಷ್ಟ.
ಸಿನಿಮಾ ನೋಡಲು ದುಬೈನಿಂದ ಫ್ಲೈಟ್ ಏರಿ ಬರ್ತಿದ್ದಾರೆ
ಟೈಮ್ ಸ್ಕ್ವೇರ್ ಮೇಲೆ ಪ್ಯಾನ್ ವರ್ಲ್ಡ್ ಧುರಂಧರ್ ಮಿಂಚು
ದುಬೈ ಸೇರಿದಂತೆ ಗಲ್ಫ್ ಕಂಟ್ರಿಗಳಲ್ಲಿ ಧುರಂಧರ್ ಸಿನಿಮಾದ ಪ್ರದರ್ಶನಕ್ಕೆ ನಿಷೇಧ ಹೇರಲಾಗಿದ್ದು, ಸಿನಿಮಾ ನೋಡೋಕೆ ಅಂತಲೇ ಫ್ಯಾನ್ಸ್ ಅಲ್ಲಿಂದ ಫ್ಲೈಟ್ ಏರಿ ಇಂಡಿಯಾಗೆ ಬರ್ತಿದ್ದಾರಂತೆ. ಇದನ್ನ ಸ್ವತಃ ಅಜಿತ್ ದೋವಲ್ ಪಾತ್ರಧಾರಿ ಆರ್ ಮಾಧವನ್ ಸ್ಪಷ್ಟ ಪಡಿಸಿದ್ದಾರೆ.
ಸಾಮಾನ್ಯವಾಗಿ ನಮ್ಮ ಇಂಡಿಯನ್ ಚಿತ್ರಗಳು ಪ್ಯಾನ್ ಇಂಡಿಯಾ ಸಿನಿಮಾಗಳಾಗಿ ತಯಾರಾಗುತ್ತವೆ. ಆದ್ರೆ ಈ ಧುರಂಧರ್ ಪಾತ್ರ ಪ್ಯಾನ್ ವರ್ಲ್ಡ್ ಮೂವಿ. ಯಾಕಂದ್ರೆ ಪ್ರತಿಷ್ಟಿತ ನ್ಯೂಯಾರ್ಕ್ ಟೈಮ್ ಸ್ಕ್ವೇರ್ ಮೇಲೆ ಧುರಂಧರ್ ಪೋಸ್ಟರ್ಗಳು ರಾರಾಜಿಸ್ತಿವೆ.
ಚಾಮುಂಡಿ ಬೆಟ್ಟಕ್ಕೆ ಧುರಂಧರ್ ಸ್ಟಾರ್ ರಣ್ವೀರ್ ಕಮಿಂಗ್
ಕಾಂತಾರ ಮಿಮಿಕ್ರಿ.. ತಾಯಿಗೆ ಕ್ಷಮೆ ಯಾಚಿಸಲಿರೋ ನಟ
ಗೋವಾ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ನಲ್ಲಿ ನಟ ರಿಷಬ್ನ ಕಂಡಾಗ ಕಾಂತಾರ ಚಿತ್ರದ ಚಾವುಂಡಿ ಬಗ್ಗೆ ಹೆಣ್ಣು ದೆವ್ವ ಅಂತ ಮಿಮಿಕ್ರಿ ಮಾಡಿ ವಿವಾದಕ್ಕೆ ಗುರಿಯಾಗಿದ್ರು ರಣ್ವೀರ್ ಸಿಂಗ್. ಆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆ ಯಾಚಿಸಿದರಾದ್ರೂ, ಕೋರ್ಟ್ಗೆ ಲಿಖಿತ ರೂಪದಲ್ಲಿ ಕ್ಷಮಾಪಣಾ ಪತ್ರ ಬರೆದುಕೊಡುವುದಾಗಿ ಹೇಳಿದ್ದಾರೆ.
ಆದ್ರೆ ದೂರುದಾರ, ನೇರವಾಗಿ ಚಾಮುಂಡಿ ತಾಯಿಯ ಆಲಯಕ್ಕೇ ಬಂದು ಕ್ಷಮೆ ಯಾಚಿಸಬೇಕು ಎಂಬ ಒತ್ತಾಯಕ್ಕೆ ರಣ್ವೀರ್ ಪರ ವಕೀಲರು ಓಕೆ ಎಂದಿದ್ದಾರೆ. ಸೋ.. ಸದ್ಯದಲ್ಲೇ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಧುರಂಧರ್ ಸ್ಟಾರ್ ವಿಸಿಟ್ ಮಾಡಲಿದ್ದಾರೆ. ಅಲ್ಲಿ ತಾಯಿ ಚಾಮುಂಡೇಶ್ವರಿ ಬಳಿ ಕ್ಷಮೆ ಕೋರಿ, ಪಶ್ಚಾತ್ತಾಪ ವ್ಯಕ್ತಪಡಿಸಲಿದ್ದಾರೆ.





