ಹಿಮಾಚಲ ಪ್ರದೇಶ: ರಾಜ್ಯದ ಬೊಕ್ಕಸ ಖಾಲಿಯಾಗುತ್ತಿರುವುದನ್ನು ಮನಗಂಡಿರುವ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು, ಅನಿವಾರ್ಯವಾಗಿ ಆರು ತಿಂಗಳ ಕಾಲ ಸಚಿವರು, ಶಾಸಕರು ಮತ್ತು ಉನ್ನತ ಅಧಿಕಾರಿಗಳ ವೇತನವನ್ನು ಮುಂದೂಡುವುದಾಗಿ ಘೋಷಿಸಿದ್ದಾರೆ. 2026-27ನೇ ಸಾಲಿನ ಬಜೆಟ್ ಮಂಡನೆ ವೇಳೆ ಈ ಕಠಿಣ ನಿರ್ಧಾರ ಪ್ರಕಟವಾಗಿದ್ದು, ರಾಜ್ಯದ ಇತಿಹಾಸದಲ್ಲೇ ಇದು ಅತ್ಯಂತ ಕೆಳಮಟ್ಟದ ಆರ್ಥಿಕ ಪರಿಸ್ಥಿತಿಯಾಗಿದೆ.
ಯಾರಿಗೆ ಎಷ್ಟು ವೇತನ ಕಡಿತ ?
ರಾಜ್ಯದ ಆರ್ಥಿಕ ಶಿಸ್ತನ್ನು ಕಾಪಾಡಲು ಸಿಎಂ ಸುಖು ತಮ್ಮಿಂದಲೇ ಈ ಕಡಿತ ಪ್ರಕ್ರಿಯೆ ಆರಂಭಿಸಿದ್ದಾರೆ:
-
ಮುಖ್ಯಮಂತ್ರಿ: 50% ವೇತನ ಮುಂದೂಡಿಕೆ.
-
ಸಚಿವರು: 30% ವೇತನ ಕಡಿತ.
-
ಶಾಸಕರು: 20% ವೇತನ ಕಡಿತ.
-
ಉನ್ನತ ಅಧಿಕಾರಿಗಳು (CS, DGP ಮಟ್ಟದವರು): 30% ವೇತನ ಕಡಿತ.
-
ಪೊಲೀಸ್ ಇಲಾಖೆ: ಎಡಿಜಿಪಿಯಿಂದ ಡಿಐಜಿವರೆಗೆ 30% ಮತ್ತು ಎಸ್ಪಿ ಮಟ್ಟದವರಿಗೆ 20% ಕಡಿತ.
-
ಇತರ ಸಿಬ್ಬಂದಿ: 20% ವೇತನ ಮುಂದೂಡಿಕೆ ಹಾಗೂ ಈ ಬಾರಿ ನೀಡಬೇಕಿದ್ದ 3% ವೇತನ ಹೆಚ್ಚಳವನ್ನೂ ಸ್ಥಗಿತಗೊಳಿಸಲಾಗಿದೆ.
ಬಜೆಟ್ ಗಾತ್ರದಲ್ಲಿ ಭಾರಿ ಇಳಿಕೆ
ಕಳೆದ ವರ್ಷ ₹58,514 ಕೋಟಿ ಇದ್ದ ಬಜೆಟ್ ಗಾತ್ರವನ್ನು ಈ ಬಾರಿ ₹54,928 ಕೋಟಿಗೆ ಇಳಿಸಲಾಗಿದೆ. ಅಂದರೆ ಸುಮಾರು ₹3,586 ಕೋಟಿಗಳಷ್ಟು ವೆಚ್ಚವನ್ನು ಸರ್ಕಾರ ಕಡಿತಗೊಳಿಸಿದೆ. ಕೇಂದ್ರ ಸರ್ಕಾರದಿಂದ ಬರಬೇಕಿದ್ದ ಆದಾಯ ಕೊರತೆ ಅನುದಾನ (Revenue Deficit Grant) ಸ್ಥಗಿತಗೊಂಡಿರುವುದು ಮತ್ತು ಜಿಎಸ್ಟಿ ಪರಿಹಾರ ನಿಂತುಹೋಗಿರುವುದು ಈ ಬಿಕ್ಕಟ್ಟಿಗೆ ಪ್ರಮುಖ ಕಾರಣ ಎಂದು ಸಿಎಂ ವಿವರಿಸಿದ್ದಾರೆ. ಸುಮಾರು ₹7,000 ಕೋಟಿ ಬಾಕಿ ಹಣ ಕೇಂದ್ರದಿಂದ ಬರಬೇಕಿದೆ ಎಂದು ಅವರು ಸದನದಲ್ಲಿ ತಿಳಿಸಿದರು.
ಸಂಕಷ್ಟದ ನಡುವೆಯೂ ಕಲ್ಯಾಣ ಯೋಜನೆಗಳ ಆಶಾವಾದ
ಆರ್ಥಿಕ ಶಿಸ್ತಿಗೆ ಆದ್ಯತೆ ನೀಡಿದರೂ, ಬಡ ವರ್ಗದ ಜನರಿಗೆ ತೊಂದರೆಯಾಗದಂತೆ ಕೆಲವು ಯೋಜನೆಗಳನ್ನು ಘೋಷಿಸಲಾಗಿದೆ:
-
ಅಪ್ನಾ ಸುಖಿ ಪರಿವಾರ ಯೋಜನೆ: ಒಂದು ಲಕ್ಷ ಬಡ ಕುಟುಂಬಗಳಿಗೆ ಆರ್ಥಿಕ ನೆರವು.
-
ಪಿಂಚಣಿ ಏರಿಕೆ: ದೃಷ್ಟಿಹೀನರಿಗೆ ನೀಡುವ ಮಾಸಿಕ ಪಿಂಚಣಿಯನ್ನು ₹3,000ಕ್ಕೆ ಏರಿಸಲಾಗಿದೆ.
-
ಕೃಷಿ ಮತ್ತು ಪಶುಸಂಗೋಪನೆ: ಪಶುಸಂಗೋಪನೆಗೆ ₹734 ಕೋಟಿ ಮತ್ತು ‘ರಾಜ್ಯ ಕಿಸಾನ್ ಆಯೋಗ’ ಸ್ಥಾಪನೆಯ ಭರವಸೆ ನೀಡಲಾಗಿದೆ.
-
ಆರೋಗ್ಯ ಕ್ಷೇತ್ರ: ವೈದ್ಯಕೀಯ ಕಾಲೇಜುಗಳ ಆಧುನೀಕರಣ ಮತ್ತು ರೋಬೋಟಿಕ್ ಶಸ್ತ್ರಚಿಕಿತ್ಸೆಗೆ ಒತ್ತು ನೀಡಲು ₹2,868 ಕೋಟಿ ಮೀಸಲಿಡಲಾಗಿದೆ.
ಬಜೆಟ್ ಮಂಡನೆ ವೇಳೆ ವಿರೋಧ ಪಕ್ಷದ ಸದಸ್ಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸದನದ ಬಾವಿಗಿಳಿದು ಪ್ರತಿಭಟಿಸಿದರು. ಗದ್ದಲದ ನಡುವೆಯೂ ನಾಲ್ಕು ಗಂಟೆಗಳ ಕಾಲ ಭಾಷಣ ಮಾಡಿದ ಸಿಎಂ, ರಾಜ್ಯದಲ್ಲಿ ಉದ್ಯೋಗ ಸೃಷ್ಟಿಗಾಗಿ 500 ಕ್ಯಾಂಪಸ್ ನೇಮಕಾತಿ ಮತ್ತು ‘ಸೈಬರ್ ಸಿಟಿ’ ನಿರ್ಮಾಣದಂತಹ ಯೋಜನೆಗಳನ್ನು ಘೋಷಿಸಿದರು. ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಶಾಲೆಗಳಲ್ಲಿ ಮೊಬೈಲ್ ಫೋನ್ ಬಳಕೆಯನ್ನು ನಿಷೇಧಿಸಲಾಗಿದೆ.
ಸಿಎಂ ಕಿವಿಮಾತು
ನಾವು ಕೇವಲ ಚುನಾವಣೆ ಗೆಲ್ಲಲು ಈ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ, ಬದಲಾಗಿ ಹಿಮಾಚಲವನ್ನು ಸ್ವಾವಲಂಬಿ ರಾಜ್ಯವನ್ನಾಗಿ ಮಾಡಲು ಕಠಿಣ ಹಾದಿ ತುಳಿಯುತ್ತಿದ್ದೇವೆ. ಹಿಮಾಚಲದ ಜನರು ಬಲಿಷ್ಠರು, ಈ ಸಂಕಷ್ಟವನ್ನು ನಾವೆಲ್ಲರೂ ಒಟ್ಟಾಗಿ ಎದುರಿಸೋಣ ಎಂದು ಸುಖ್ವಿಂದರ್ ಸಿಂಗ್ ಸುಖು ಭಾವನಾತ್ಮಕವಾಗಿ ಕರೆ ನೀಡಿದರು.





