ಚಿತ್ರದುರ್ಗ: ಶಾಲಾ ಆವರಣದಲ್ಲಿ ಆಟವಾಡುತ್ತಿದ್ದ ವಿದ್ಯಾರ್ಥಿನಿಗೆ ನಾಗರಹಾವು ಕಚ್ಚಿದ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ತಕ್ಷಣ ಶಿಕ್ಷಕೊಬ್ಬರು ಸಮಯಪ್ರಜ್ಞೆಯಿಂದ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಬಾಲಕಿಯ ಜೀವ ಉಳಿಸಿದ್ದಾರೆ.
ಈ ಘಟನೆ ಚಿತ್ರದುರ್ಗ ತಾಲೂಕಿನ ಹುಣಸೆಕಟ್ಟೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಎಂದಿನಂತೆ ಮುಂಜಾನೆ ವೇಳೆ ವಿದ್ಯಾರ್ಥಿನಿ ಸೃಷ್ಠಿ ಶಾಲಾ ಆವರಣದಲ್ಲಿ ಆಟವಾಡುತ್ತಿದ್ದಳು. ಈ ವೇಳೆ ಅಚಾನಕ್ ವಿಷಕಾರಿ ನಾಗರಹಾವು ಬಾಲಕಿಗೆ ಕಚ್ಚಿದೆ. ಹಾವು ಕಚ್ಚಿದ ಕ್ಷಣದಲ್ಲೇ ಬಾಲಕಿ ತೀವ್ರ ನೋವಿನಿಂದ ಅಳುತ್ತಾ ಚೀರಾಡಲು ಆರಂಭಿಸಿದ್ದಾಳೆ.
ಬಾಲಕಿಯ ಕಿರುಚಾಟ ಕೇಳಿ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಬಾಲಕಿಯ ಕಾಲಿನಲ್ಲಿ ಹಾವು ಕಚ್ಚಿದ ಗುರುತು ಕಂಡು ಬಂದಿದೆ. ಈ ವೇಳೆ ಶಾಲೆಯ ಶಿಕ್ಷಕ ರವಿಶಂಕರ್ ಅವರು ಬಾಲಕಿಗೆ ತಕ್ಷಣ ಪ್ರಥಮ ಚಿಕಿತ್ಸೆ ನೀಡಲು ಮುಂದಾದರು. ಹಾವು ಕಚ್ಚಿದ ಭಾಗವನ್ನು ಬಾಯಿಯಿಂದ ಹೀರಿಕೊಂಡು ವಿಷವನ್ನು ಹೊರತೆಗೆದು ಬಾಲಕಿಯ ಪ್ರಾಣ ಉಳಿಸಿದ್ದಾರೆ.
ನಂತರ ಬಾಲಕಿಯನ್ನು ತಕ್ಷಣ ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಯಲ್ಲಿ ವೈದ್ಯರು ಬಾಲಕಿಗೆ ತಕ್ಷಣ ಚಿಕಿತ್ಸೆ ನೀಡಿದ್ದು, ಸದ್ಯ ಆಕೆ ಆರೋಗ್ಯವಾಗಿದ್ದು ಅಪಾಯದಿಂದ ಪಾರಾಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.
ಇನ್ನೊಂದೆಡೆ, ವಿಷವನ್ನು ಬಾಯಿಯಿಂದ ಹೀರಿಕೊಂಡ ಕಾರಣ ಶಿಕ್ಷಕ ರವಿಶಂಕರ್ ಅವರಿಗೂ ಅಪಾಯ ಉಂಟಾಗುವ ಸಾಧ್ಯತೆ ಇರುವುದರಿಂದ ಅವರನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಿ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ವೈದ್ಯರು ಮುಂಜಾಗ್ರತಾ ಕ್ರಮವಾಗಿ ಅವರಿಗೆ ಚಿಕಿತ್ಸೆ ನೀಡಿದ್ದು, ಅವರ ಆರೋಗ್ಯವೂ ಈಗ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.





