ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಕಾರ್ಮೋಡಗಳು ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದ ಮೇಲೂ ಕವಿದಿವೆ. ಜಾಗತಿಕ ಇಂಧನ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯದಿಂದಾಗಿ ದೇಶಾದ್ಯಂತ ಎಲ್ಪಿಜಿ (LPG) ಸಿಲಿಂಡರ್ ಅಭಾವ ತಲೆದೋರಿದೆ. ಇದರ ನೇರ ಪರಿಣಾಮ ಈಗ ಮಾದಪ್ಪನ ಸನ್ನಿಧಿಯ ಅನ್ನದಾಸೋಹ ಮತ್ತು ಪ್ರಸಿದ್ಧ ಲಾಡು ಪ್ರಸಾದದ ಮೇಲೆ ಬೀರುವ ಭೀತಿ ಎದುರಾಗಿದೆ.
ದಾಸೋಹ ಮತ್ತು ಲಾಡು ತಯಾರಿಕೆಗೆ ಸಂಚಕಾರ
ಏಳು ಮಲೆಯ ಒಡೆಯ ಮಾದಪ್ಪನ ದರ್ಶನಕ್ಕೆ ದಿನನಿತ್ಯ ಸಾವಿರಾರು ಭಕ್ತರು ಬರುತ್ತಾರೆ. ಇಲ್ಲಿನ ದಾಸೋಹ ಭವನದಲ್ಲಿ ಪ್ರತಿದಿನ ಸಾವಿರಾರು ಜನರಿಗೆ ಅನ್ನಪ್ರಸಾದ ನೀಡಲಾಗುತ್ತದೆ. ಇದಕ್ಕೆ ದಿನವೊಂದಕ್ಕೆ ಸರಾಸರಿ 12ಕ್ಕೂ ಹೆಚ್ಚು ವಾಣಿಜ್ಯ ಸಿಲಿಂಡರ್ಗಳನ್ನು ಬಳಸಲಾಗುತ್ತದೆ. ಅದೇ ರೀತಿ, ಭಕ್ತರ ನೆಚ್ಚಿನ ಲಾಡು ಪ್ರಸಾದ ತಯಾರಿಕೆಗೂ ಹೆಚ್ಚಿನ ಪ್ರಮಾಣದ ಗ್ಯಾಸ್ ಅವಶ್ಯಕತೆಯಿದೆ. ಪ್ರಸ್ತುತ ಪ್ರಾಧಿಕಾರದ ಬಳಿ ಒಂದು ವಾರಕ್ಕೆ ಆಗುವಷ್ಟು ಮಾತ್ರ ದಾಸ್ತಾನು ಇದ್ದು, ಪರಿಸ್ಥಿತಿ ಹೀಗೆಯೇ ಮುಂದುವರಿದರೆ ದಾಸೋಹ ಮತ್ತು ಲಾಡು ತಯಾರಿಕೆಯನ್ನು ಸ್ಥಗಿತಗೊಳಿಸಬೇಕಾದ ಅನಿವಾರ್ಯತೆ ಎದುರಾಗಲಿದೆ.
ಮಲೆ ಮಹದೇಶ್ವರ ಬೆಟ್ಟದಲ್ಲಿ ವರ್ಷಕ್ಕೆ ಮೂರು ಬಾರಿ ಬೃಹತ್ ಜಾತ್ರೆಗಳು ನಡೆಯುತ್ತವೆ. ಸದ್ಯ ಯುಗಾದಿ ಜಾತ್ರೆ ಹತ್ತಿರ ಬರುತ್ತಿದ್ದು, ಲಕ್ಷಾಂತರ ಭಕ್ತರು ಪಾದಯಾತ್ರೆಯ ಮೂಲಕ ಬೆಟ್ಟಕ್ಕೆ ಆಗಮಿಸುತ್ತಾರೆ. ಜಾತ್ರೆಯ ಸಂದರ್ಭದಲ್ಲಿ ಅನ್ನದಾಸೋಹಕ್ಕೆ ದಿನವೊಂದಕ್ಕೆ 15 ಸಿಲಿಂಡರ್ ಹಾಗೂ ಸುಮಾರು 2.50 ಲಕ್ಷ ಲಾಡುಗಳ ತಯಾರಿಕೆಗೆ 20ಕ್ಕೂ ಹೆಚ್ಚು ಸಿಲಿಂಡರ್ಗಳು ಬೇಕಾಗುತ್ತವೆ. ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ಸುಧಾರಣೆಯಾಗದಿದ್ದರೆ, ಜಾತ್ರೆಗೆ ಬರುವ ಲಕ್ಷಾಂತರ ಭಕ್ತರು ಪ್ರಸಾದವಿಲ್ಲದೆ ಹಸಿವಿನಿಂದ ಕಂಗೆಡಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು.
ಈಗಾಗಲೇ ಉಂಟಾಗಿರುವ ಗಂಭೀರ ಪರಿಸ್ಥಿತಿಯ ಕುರಿತು ಮಲೆ ಮಹದೇಶ್ವರ ಪ್ರಾಧಿಕಾರದ ಕಾರ್ಯದರ್ಶಿ ರಘು ಅವರು ಜಿಲ್ಲಾಡಳಿತಕ್ಕೆ ತುರ್ತು ಮಾಹಿತಿ ರವಾನಿಸಿದ್ದಾರೆ. ಯುಗಾದಿ ಜಾತ್ರೆಯ ದೃಷ್ಟಿಯಿಂದ ಸಿಲಿಂಡರ್ ಪೂರೈಕೆಗೆ ವಿಶೇಷ ಆದ್ಯತೆ ನೀಡುವಂತೆ ಮಾನವಿ ಮಾಡಿದ್ದಾರೆ. ಈ ಈಶಾನ್ಯ ಭಾಗದ ಯುದ್ಧದಿಂದ ದೇಶದ ಧಾರ್ಮಿಕ ಶ್ರದ್ಧಾಕೇಂದ್ರಗಳ ಮೇಲೂ ಜಾಗತಿಕ ಸಂಘರ್ಷ ಇಷ್ಟೊಂದು ಪ್ರಭಾವ ಬೀರುತ್ತಿರುವುದು ನಿಜಕ್ಕೂ ಕಳವಳಕಾರಿ ಸಂಗತಿಯಾಗಿದೆ.





