ಕಟ್ಟಡದಿಂದ ಬಿದ್ದು 13 ವರ್ಷಗಳಿಂದ ಕೋಮಾದಲ್ಲಿರುವ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಅನುಮತಿ ನೀಡಿದೆ. ಈ ಮೂಲಕ ಭಾರತದಲ್ಲಿ ‘ಗೌರವಯುತವಾಗಿ ಸಾಯುವ ಹಕ್ಕು’ ಮತ್ತು ‘ಯೂಥನೇಷಿಯಾ’ ಕುರಿತ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಯೂಥನೇಷಿಯಾ ಎಂದೊಡನೆ ನೆನಪಾಗುವುದು ಅರುಣಾ ರಾಮಚಂದ್ರ ಶಾನ್ಬಾಗ್ ಪ್ರಕರಣ. ಭಾರತದಲ್ಲಿ ‘ರೈಟ್ ಟು ಡೈ’ ಅಥವಾ ಘನತೆಯಿಂದ ಸಾಯುವ ಹಕ್ಕಿಗೆ ಅಡಿಪಾಯ ಹಾಕಿದ್ದ ಅವರ ಮನಕಲುಕುವ ಕಥೆ ಇಲ್ಲಿದೆ ನೋಡಿ.
ಏನಿದು ಯೂಥನೇಷಿಯಾ?
ಗುಣಪಡಿಸಲಾಗದ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಅಥವಾ ದೀರ್ಘಕಾಲದಿಂದ ತೀವ್ರ ಯಾತನೆ ಅನುಭವಿಸುತ್ತಿರುವ ವ್ಯಕ್ತಿಗೆ ಅವರ ಇಚ್ಛೆಯ ಮೇರೆಗೆ ಅಥವಾ ಕುಟುಂಬದವರ ಕೋರಿಕೆ ಮೇರೆಗೆ ಗೌರವಯುತವಾಗಿ ಸಾವಿಗೆ ಅವಕಾಶ ನೀಡುವ ವೈದ್ಯಕೀಯ ಕ್ರಮವೇ ಯೂಥನೇಷಿಯಾ.
ಯೂಥನೇಷಿಯಾದಲ್ಲಿ ಎರಡು ವಿಧ
-
ಪ್ಯಾಸಿವ್ ಯೂಥನೇಷಿಯಾ: ರೋಗಿಯ ಜೀವ ಉಳಿಸಬಹುದಾದ ಚಿಕಿತ್ಸೆಯನ್ನು (ಔಷಧಿ, ವೆಂಟಿಲೇಟರ್, ಲೈಫ್ ಸಪೋರ್ಟ್) ನಿಲ್ಲಿಸುವುದು
-
ಆಕ್ಟಿವ್ ಯೂಥನೇಷಿಯಾ: ವೈದ್ಯರು ಔಷಧಿ ನೀಡಿ ನೇರವಾಗಿ ಮರಣಕ್ಕೆ ಕಾರಣವಾಗುವುದು
ಭಾರತದಲ್ಲಿ ಪ್ಯಾಸಿವ್ ಯೂಥನೇಷಿಯಾ ಮಾತ್ರ ಕಾನೂನುಬದ್ಧ. 2018ರಲ್ಲಿ ಸುಪ್ರೀಂ ಕೋರ್ಟ್ ಘನತೆಯಿಂದ ಬದುಕುವ ಹಕ್ಕಿನ ಜೊತೆಗೆ ಘನತೆಯಿಂದ ಸಾಯುವ ಹಕ್ಕನ್ನೂ ಮೂಲಭೂತ ಹಕ್ಕಿನ ಭಾಗವಾಗಿ ಪರಿಗಣಿಸಿದೆ.
ಅರುಣಾ ಶಾನ್ಬಾಗ್ರ ನಾಲ್ಕು ದಶಕಗಳ ದುರಂತ ಕಥೆ
1973ರ ನವೆಂಬರ್ 27ರಂದು ಮುಂಬೈನ ಕಿಂಗ್ ಎಡ್ವರ್ಡ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ 25 ವರ್ಷದ ಅರುಣಾ ಶಾನ್ಬಾಗ್ಗೆ ಆ ದಿನ ಮರೆಯಲಾಗದ ದಿನ. ಶಿಫ್ಟ್ ಮುಗಿಸಿ ಮನೆಗೆ ತೆರಳಲು ಸಿದ್ಧರಾಗಿದ್ದ ಅರುಣಾ ಅವರಿಗೆ ಆಸ್ಪತ್ರೆಯ ವಾರ್ಡ್ ಬಾಯ್ ಸೋಹನ್ಲಾಲ್ ವಾಲ್ಮೀಕಿಯೊಂದಿಗೆ ಜಗಳವಾಯಿತು. ರಜೆ ಕೊಡದ ಕಾರಣಕ್ಕೆ ಆಕೆಯ ಮೇಲೆ ಹಲ್ಲೆ ನಡೆಸಿದ ಸೋಹನ್ಲಾಲ್, ನಾಯಿಯ ಸರಪಳಿಯಿಂದ ಕುತ್ತಿಗೆ ಬಿಗಿದು, ಭೀಕರವಾಗಿ ಹಲ್ಲೆ ನಡೆಸಿ, ಅತ್ಯಾಚಾರವೆಸಗಿದ್ದ.
ಈ ಪೈಶಾಚಿಕ ಕೃತ್ಯದಿಂದ ಅರುಣಾ ಅವರ ಮೆದುಳಿಗೆ ತೀವ್ರ ಹಾನಿಯುಂಟಾಯಿತು. ಕುತ್ತಿಗೆ ಬಿಗಿದಿದ್ದರಿಂದ ಮೆದುಳಿಗೆ ಆಕ್ಸಿಜನ್ ಸರಬರಾಜು ನಿಂತುಹೋಗಿ, ಅವರು ಶಾಶ್ವತ ವೆಜಿಟೇಟಿವ್ ಸ್ಥಿತಿಗೆ (ಜೀವಂತವಾಗಿದ್ದರೂ ಜಾಗೃತಿಯ ಅರಿವಿಲ್ಲದ ಸ್ಥಿತಿ) ಜಾರಿದರು. ಮಾತು, ಕೈಕಾಲು ಚಲನೆ, ಗ್ರಹಿಕೆ, ಭಾವನೆಗಳ ಪ್ರದರ್ಶನ ಸಂಪೂರ್ಣ ನಿಂತುಹೋಯ್ತು.
ವಿಚಿತ್ರವೆಂದರೆ, ಸೋಹನ್ಲಾಲ್ಗೆ ಕೊಲೆಯತ್ನ ಮತ್ತು ಕಳ್ಳತನದ ಆರೋಪದಡಿ ಶಿಕ್ಷೆಯಾಯಿತೇ ಹೊರತು, ಅತ್ಯಾಚಾರ ಆರೋಪದಡಿ ಶಿಕ್ಷೆಯಾಗಲಿಲ್ಲ. ಕಾರಣ, ಅತ್ಯಾಚಾರ ಯೋನಿಮಾರ್ಗದ ಮೂಲಕ ನಡೆದಿರಲಿಲ್ಲ, ಗುದದ್ವಾರದ ಮೂಲಕ ನಡೆದಿತ್ತು.
ಜೀವನೋಪಾಯಕ್ಕಾಗಿ ಆಸ್ಪತ್ರೆ ಸೇರಿದ ಅರುಣಾ, ಆ ಭೀಕರ ಘಟನೆಯಿಂದಾಗಿ ತಮ್ಮ ಉಳಿದ ಜೀವನವನ್ನೇ ಆಸ್ಪತ್ರೆಯಲ್ಲೇ ಕಳೆಯುವಂತಾಯಿತು. ಅವರಿಗೆ 8 ಜನ ಒಡಹುಟ್ಟಿದವರಿದ್ದರೂ, ಕಾಲಕ್ರಮೇಣ ಯಾರೂ ಆಸ್ಪತ್ರೆಗೆ ಭೇಟಿ ನೀಡುವುದನ್ನೇ ನಿಲ್ಲಿಸಿದರು. ನಾಲ್ಕು ದಶಕಗಳ ಕಾಲ ಅರುಣಾ ಅವರನ್ನು ನೋಡಿಕೊಂಡಿದ್ದು ಆಸ್ಪತ್ರೆಯ ಸಿಬ್ಬಂದಿಗಳೇ.
ಆಸ್ಪತ್ರೆಯಲ್ಲೇ ಕೆಲಸ ಮಾಡುತ್ತಿದ್ದ ಡಾ. ಪ್ರತಾಪ್ ದೇಸಾಯಿ ಅವರನ್ನು ಅರುಣಾ ಪ್ರೀತಿಸುತ್ತಿದ್ದರು. ಮದುವೆಯಾಗಬೇಕಿತ್ತು. ಆದರೆ ಈ ಘಟನೆಯ ಬಳಿಕ ಅರುಣಾ ಅವರ ಆರೋಗ್ಯ ಸುಧಾರಿಸದೇ ಹೋದಾಗ, 1977ರಲ್ಲಿ ಡಾ. ದೇಸಾಯಿ ಬೇರೊಬ್ಬರನ್ನು ಮದುವೆಯಾದರು.
ನ್ಯಾಯಾಲಯದ ಮೆಟ್ಟಿಲೇರಿದ ‘ಅರುಣಾ ಕಥೆ’
2009ರಲ್ಲಿ ಪತ್ರಕರ್ತೆ ಪಿಂಕಿ ವಿರಾನಿ ಅರುಣಾ ಪರವಾಗಿ ಸುಪ್ರೀಂ ಕೋರ್ಟ್ನಲ್ಲಿ ಯೂಥನೇಷಿಯಾ ಅರ್ಜಿ ಸಲ್ಲಿಸಿದರು. 36 ವರ್ಷಗಳಿಂದ ಕೋಮಾದಲ್ಲಿದ್ದ ಅರುಣಾ ಅವರ ಸ್ಥಿತಿಯನ್ನು ವೈದ್ಯಕೀಯ ತಂಡ ‘ಶಾಶ್ವತ ವೆಜಿಟೇಟಿವ್ ಸ್ಥಿತಿ’ ಎಂದು ವರದಿ ನೀಡಿತು. ಈ ಪ್ರಕರಣವನ್ನಾಧರಿಸಿ 2011ರ ಮಾರ್ಚ್ 7ರಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿ, ಪ್ಯಾಸಿವ್ ಯೂಥನೇಷಿಯಾಗೆ ಮಾರ್ಗಸೂಚಿಗಳನ್ನು ರೂಪಿಸಿತು. ಆದರೆ ಅರುಣಾ ಅವರ ಪ್ರಕರಣದಲ್ಲಿ ಆಸ್ಪತ್ರೆಯ ಸಿಬ್ಬಂದಿ ಅವರ ಜೀವ ಉಳಿಸಲು ಬಯಸಿದ ಕಾರಣ ಯೂಥನೇಷಿಯಾ ಅರ್ಜಿ ತಿರಸ್ಕೃತವಾಯಿತು.
2015ರಲ್ಲಿ ನ್ಯುಮೋನಿಯಾದಿಂದ ಅರುಣಾ ಕೊನೆಯುಸಿರೆಳೆದರು. ದಶಕಗಳಿಂದ ಅವರನ್ನು ಶುಶ್ರೂಷೆ ಮಾಡಿದ ಆಸ್ಪತ್ರೆಯ ಸಿಬ್ಬಂದಿಗಳೇ ಅಂತಿಮ ವಿಧಿವಿಧಾನಗಳನ್ನೂ ನೆರವೇರಿಸಿದರು.
ಹರೀಶ್ ರಾಣಾ ಪ್ರಕರಣ ಮತ್ತು ಮಹತ್ವದ ತೀರ್ಪು
2018ರಲ್ಲಿ ಸುಪ್ರೀಂ ಕೋರ್ಟ್ ಸಂವಿಧಾನ ಪೀಠ ‘ಗೌರವಯುತ ಮರಣ’ದ ಹಕ್ಕು ಕುರಿತು ಮಹತ್ವದ ತೀರ್ಪು ನೀಡಿ, ಪ್ಯಾಸಿವ್ ಯೂಥನೇಷಿಯಾಗೆ ಸಂಪೂರ್ಣ ಮಾನ್ಯತೆ ನೀಡಿತು. ‘ಲಿವಿಂಗ್ ವಿಲ್’ (ಮುಂಚಿತವಾಗಿಯೇ ತನ್ನ ಜೀವನಾವಧಿ ಚಿಕಿತ್ಸೆಗಳ ಬಗ್ಗೆ ನಿರ್ಧಾರ ಮಾಡುವುದು) ವ್ಯವಸ್ಥೆಗೂ ಅನುಮತಿ ನೀಡಿತು.
ಇದೀಗ 31 ವರ್ಷದ ಹರೀಶ್ ರಾಣಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಪ್ಯಾಸಿವ್ ಯೂಥನೇಷಿಯಾಗೆ ಅನುಮತಿ ನೀಡಿದೆ. 2013ರಲ್ಲಿ ಪಂಜಾಬ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದ ಹರೀಶ್ ನಾಲ್ಕನೇ ಮಹಡಿಯಿಂದ ಬಿದ್ದು 13 ವರ್ಷಗಳಿಂದ ವೆಜಿಟೇಟಿವ್ ಸ್ಥಿತಿಯಲ್ಲಿದ್ದಾರೆ. ಅವರ ಪೋಷಕರ ಕೋರಿಕೆಯನ್ನಿಟ್ಟುಕೊಂಡು ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಕೆವಿ ವಿಶ್ವನಾಥನ್ ಅವರ ಪೀಠ ಚೇತರಿಕೆಯ ಸಾಧ್ಯತೆ ಇಲ್ಲದ ಸಂದರ್ಭದಲ್ಲಿ ವೈದ್ಯರ ಕರ್ತವ್ಯವೂ ಮಿತಿಯೊಳಗೆ ಬರುತ್ತದೆ ಎಂದು ಹೇಳಿ ಪ್ಯಾಸಿವ್ ಯೂಥನೇಷಿಯಾಗೆ ಅನುಮತಿ ನೀಡಿದೆ.





