ಬದ್ಧ ಶತ್ರುಗಳಂತಿದ್ದ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಸದ್ಯ ಕಾಂಪ್ರಮೈಸ್ ಆಗಿಬಿಟ್ಟಿದ್ದಾರೆ. ಒಡಹುಟ್ಟಿದ ಸಹೋದರರಂತೆ ಎಲ್ಲೆಡೆ ಮಿಂಚು ಹರಿಸುತ್ತಿದ್ದಾರೆ. ಅದರ ಜೊತೆ ಲೋಕೇಶ್ ಕನಕರಾಜ್ ಮುಂದಿನ ಚಿತ್ರದಲ್ಲಿ ಖಾಕಿ ಖದರ್ ತೋರಲಿರೋ ಅಲ್ಲು ಪವರ್ಫುಲ್ ಸ್ಟೋರಿ ಇಲ್ಲಿದೆ ನೋಡಿ..
- ಅಲ್ಲು-ರೇವಂತ್ ಫ್ರೆಂಡ್ಸ್.. ಮಾ-12ಕ್ಕೆ ಅಲ್ಲು ಸಿನಿಮಾಸ್ ಓಪನ್
- ಕೋಕಾಪೇಟ್ ಮಲ್ಟಿಪ್ಲೆಕ್ಸ್ ಉದ್ಘಾಟಿಸ್ತಾರೆ ಸಿಎಂ ರೇವಂತ್ ರೆಡ್ಡಿ
- ಕನಕರಾಜ್ ನೆಕ್ಸ್ಟ್ ವೆಂಚರ್ನಲ್ಲಿ ಅಲ್ಲು ಖಾಕಿ ಖದರ್..!
ಪುಷ್ಪ-2 ಸಿನಿಮಾದ ರಿಲೀಸ್ ವೇಳೆ ಸಂಧ್ಯಾ ಥಿಯೇಟರ್ನಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಒಂದಲ್ಲ ಎರಡು ಜೀವಹಾನಿ ಆಗಿದ್ದು ಗೊತ್ತೇಯಿದೆ. ಅದ್ರಿಂದ ಅಲ್ಲು ಅರ್ಜುನ್ ಎದುರಿಸಿದ ಸಂಕಷ್ಟದ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅಸೆಂಬ್ಲಿಯಲ್ಲಿ ಕೂಡ ಗುಡುಗಿದ್ರು ತೆಲಂಗಾಣ ಸಿಎಂ ರೇವಂತ್ ರೆಡ್ಡಿ. ಅಲ್ಲು ಅರ್ಜುನ್ ನಿಜಕ್ಕೂ ಮನುಷ್ಯನೇ ಅಂತೆಲ್ಲಾ ಮಾತಾಡಿದ್ರು. ಅಲ್ಲು ಮನೆ ಮೇಲೆ ಅಟ್ಯಾಕ್ ಆಗಿತ್ತು. ಮನೆಯಲ್ಲೇ ಅರೆಸ್ಟ್ ಮಾಡಿ ಜೈಲಿಗಟ್ಟಿ, ನಂತ್ರ ಬೇಲ್ ಪಡೆದು ಹೊರಬಂದಿದ್ರು ಪುಷ್ಪರಾಜ್ ಅಲ್ಲು ಅರ್ಜುನ್. ಈ ವಿಚಾರ ಇಬ್ಬರೂ ಪರಸ್ಪರ ಉರಿದುರಿದು ಬೀಳುವಂತಾಗಿತ್ತು.
ಆದ್ರೆ ಅದೇ ಪುಷ್ಪ-2 ಚಿತ್ರದ ನಟನೆಗಾಗಿ ನಟ ಅಲ್ಲು ಅರ್ಜುನ್ಗೆ ತೆಲಂಗಾಣ ಸ್ಟೇಟ್ ಫಿಲ್ಮ್ ಗದ್ದರ್ ಅವಾರ್ಡ್ ನೀಡುವ ಮೂಲಕ ಒಂದಾಗಿದ್ರು ಐಕಾನ್ ಸ್ಟಾರ್ ಹಾಗೂ ಸಿಎಂ ರೇವಂತ್ ರೆಡ್ಡಿ. ಅಲ್ಲದೆ, ಇತ್ತೀಚೆಗೆ ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರೀಶ್ ಮದ್ವೆಗೂ ರೇವಂತ್ ರೆಡ್ಡಿ ಬಂದು ಶುಭ ಕೋರಿದ್ರು. ಆಗ ಅಲ್ಲು ಜೊತೆ ಉಭಯ ಕುಶಲೋಪರಿ ಹಂಚಿಕೊಂಡಿದ್ರು. ಇದೀಗ ಮತ್ತೊಂದು ಹೆಜ್ಜೆ ಮುಂದೆ ಇಟ್ಟು, ಇದೇ ಮಾರ್ಚ್ 12ಕ್ಕೆ ಕೋಕಾಪೇಟ್ನಲ್ಲಿ ಲಾಂಚ್ ಆಗ್ತಿರೋ ಅಲ್ಲು ಸಿನಿಮಾಸ್ ಮಲ್ಟಿಪ್ಲೆಕ್ಸ್ನ ಖುದ್ದು ಸಿಎಂ ರೇವಂತ್ ರೆಡ್ಡಿ ಅವರೇ ಉದ್ಘಾಟನೆ ಮಾಡ್ತಿರೋದು ಅಚ್ಚರಿ. ಈ ಮೂಲಕ ಬದ್ಧ ಶತ್ರುಗಳಾಗಿದ್ದ ಅಲ್ಲು ಅರ್ಜುನ್-ರೇವಂತ್ ರೆಡ್ಡಿ ಕುಚಿಕುಗಳ ರೀತಿ ಒಂದಾಗಿದ್ದಾರೆ.
ಸದ್ಯ ಅಟ್ಲೀ ಜೊತೆ ಸೈನ್ಸ್ ಫಿಕ್ಷನ್ AA22 ಸಿನಿಮಾನ ಮಾಡ್ತಿದ್ದಾರೆ ಅಲ್ಲು ಅರ್ಜುನ್. ಅದಾದ ಬಳಿಕ 23ನೇ ಪ್ರಾಜೆಕ್ಟ್ನ ಲೋಕೇಶ್ ಕನಕರಾಜ್ ಜೊತೆ ಮಾಡಲಿದ್ದಾರೆ. ರೇಸು ಗುರ್ರಂ ಬಳಿಕ ಮತ್ತೊಮ್ಮೆ ಪೊಲೀಸ್ ಕಾಪ್ ರೋಲ್ನಲ್ಲಿ ಮಿಂಚಲಿದ್ದು, ಖಾಕಿ ಖದರ್ನಲ್ಲಿ ಅಸಲಿ ಪವರ್ ತೋರಲಿದ್ದಾರಂತೆ ಐಕಾನ್ ಸ್ಟಾರ್ ಅನ್ನೋದು ಲೇಟೆಸ್ಟ್ ಖಬರ್.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





