ಅಹಮದಾಬಾದ್: 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಅಂತಿಮ ಹಂತ ತಲುಪಿದ್ದು, ಇಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿರುವ ಈ ಪಂದ್ಯ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಟೂರ್ನಿಯಲ್ಲೆಲ್ಲಾ ಉತ್ತಮ ಪ್ರದರ್ಶನ ನೀಡಿರುವ ಟೀಂ ಇಂಡಿಯಾ ಮತ್ತೊಮ್ಮೆ ವಿಶ್ವಕಪ್ ಟ್ರೋಫಿ ಎತ್ತುವ ಕನಸಿನಲ್ಲಿ ಮೈದಾನಕ್ಕಿಳಿಯಲಿದೆ.
ನ್ಯೂಜಿಲೆಂಡ್ ತಂಡಕ್ಕೆ ಇದು ಚೊಚ್ಚಲ ಟಿ20 ವಿಶ್ವಕಪ್ ಗೆಲ್ಲುವ ದೊಡ್ಡ ಅವಕಾಶವಾಗಿದ್ದರೆ, ಭಾರತಕ್ಕೆ ಸತತ ಎರಡನೇ ಬಾರಿ ಟ್ರೋಫಿ ಗೆಲ್ಲುವ ಅವಕಾಶ ದೊರಕಿದೆ. ಈ ಹಿನ್ನೆಲೆಯಲ್ಲಿ ಇಂದಿನ ಪಂದ್ಯ ಎರಡೂ ತಂಡಗಳಿಗೆ ಪ್ರತಿಷ್ಠೆಯ ಕಣವಾಗಿದೆ.
ಈ ಟೂರ್ನಿಯಲ್ಲಿ ಭಾರತ ತಂಡದ ಬ್ಯಾಟಿಂಗ್ ವಿಭಾಗ ಅತ್ಯಂತ ಬಲಿಷ್ಠವಾಗಿ ಕಾಣಿಸಿಕೊಂಡಿದೆ. ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ ಉತ್ತಮ ಫಾರ್ಮ್ನಲ್ಲಿ ಇದ್ದು, ಹಲವು ಪಂದ್ಯಗಳಲ್ಲಿ ತಂಡಕ್ಕೆ ಭರ್ಜರಿ ಆರಂಭ ಒದಗಿಸಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಇಶಾನ್ ಕಿಶನ್ ಕೂಡ ತಂಡದ ಪರ ಈ ಟೂರ್ನಿಯಲ್ಲಿ ಅತ್ಯಧಿಕ ರನ್ ಗಳಿಸಿರುವ ಆಟಗಾರರಾಗಿದ್ದಾರೆ.
ನಾಯಕ ಸೂರ್ಯಕುಮಾರ್ ಯಾದವ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಹಲವು ಸಂದರ್ಭಗಳಲ್ಲಿ ತಂಡವನ್ನು ಸಂಕಷ್ಟದಿಂದ ಹೊರತೆಗೆದಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ತಿಲಕ್ ವರ್ಮಾ ಕೂಡ ಸಮರ್ಥವಾಗಿ ಆಟವಾಡಿ ತಂಡಕ್ಕೆ ಬಲ ನೀಡುತ್ತಿದ್ದಾರೆ. ಆಲ್ರೌಂಡರ್ಗಳಾದ ಶಿವಂ ದುಬೆ, ಅಕ್ಷರ್ ಪಟೇಲ್ ಹಾಗೂ ಹಾರ್ದಿಕ್ ಪಾಂಡ್ಯ ಕೂಡ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗಿದ್ದಾರೆ.
ಇನ್ನು ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆಯನ್ನು ಮನಗಂಡು ಐಸಿಸಿ ಮೀಸಲು ದಿನವನ್ನು ಘೋಷಿಸಿದೆ. ಮಾರ್ಚ್ 9 ಅನ್ನು ರಿಸರ್ವ್ ಡೇ ಆಗಿ ಮೀಸಲಿಡಲಾಗಿದೆ. ಪಂದ್ಯದಲ್ಲಿ ಫಲಿತಾಂಶ ಬರಲು ಕನಿಷ್ಠ 10 ಓವರ್ ಆಟ ನಡೆಯಬೇಕು. ನಿಗದಿತ ದಿನದಂದು ಪಂದ್ಯ ಪೂರ್ಣಗೊಳ್ಳದಿದ್ದರೆ ಹೆಚ್ಚುವರಿ 120 ನಿಮಿಷಗಳ ಕಾಲ ಪಂದ್ಯವನ್ನು ಮುಂದುವರಿಸುವ ಅವಕಾಶ ಕಲ್ಪಿಸಲಾಗಿದೆ.
ಆದರೂ ಪಂದ್ಯ ಪೂರ್ಣಗೊಳ್ಳದಿದ್ದರೆ ಸೋಮವಾರಕ್ಕೆ ಮುಂದೂಡಲಾಗುತ್ತದೆ. ಮೀಸಲು ದಿನದಂದು ಪಂದ್ಯವನ್ನು ಮತ್ತೆ ಆರಂಭದಿಂದ ಆರಂಭಿಸುವುದಿಲ್ಲ. ಬದಲಾಗಿ, ರವಿವಾರ ಯಾವ ಹಂತದಲ್ಲಿ ಪಂದ್ಯ ನಿಂತಿದೆಯೋ ಅಲ್ಲಿಂದಲೇ ಆಟ ಮುಂದುವರಿಯಲಿದೆ. ಮೀಸಲು ದಿನದಂದು ಕೂಡ ರಾತ್ರಿ 7 ಗಂಟೆಗೆ ಪಂದ್ಯ ಆರಂಭವಾಗಲಿದೆ. ಒಂದು ವೇಳೆ ಆ ದಿನವೂ ಪಂದ್ಯ ನಡೆಯದೇ ಹೋದರೆ ಎರಡೂ ತಂಡಗಳನ್ನು ಜಂಟಿ ವಿಜೇತರಾಗಿ ಘೋಷಿಸಲಾಗುತ್ತದೆ.





