ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆದ ವಸಂತ ನಾಯ್ಕ ಹತ್ಯೆ ಪ್ರಕರಣ ದಿನೇ ದಿನೇ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಜ್ಯೋತಿಷಿ ಕಮಲಾಕರ ಭಟ್ ಹಾಗೂ ಆರೋಪಿ ಸುಚಿತ್ರಾ ನಡುವಿನ ಸಂಬಂಧಕ್ಕೆ ಸಂಬಂಧಿಸಿದ ಮತ್ತೊಂದು ಆಡಿಯೋ ವೈರಲ್ ಆಗಿದೆ.
ವಸಂತ ನಾಯ್ಕ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸುಚಿತ್ರಾ, ಜ್ಯೋತಿಷಿ ಕಮಲಾಕರ ಭಟ್ಗೆ ಹನಿಟ್ರ್ಯಾಪ್ ಮಾಡಿ ಖಾಸಗಿ ಕ್ಷಣಗಳ ವಿಡಿಯೋಗಳನ್ನು ಸೆರೆಹಿಡಿದು ಬ್ಲ್ಯಾಕ್ಮೇಲ್ ಮಾಡುತ್ತಿದ್ದಳು ಎಂಬ ಆರೋಪ ಈಗಾಗಲೇ ಕೇಳಿಬಂದಿತ್ತು. ಇದೀಗ ಕಮಲಾಕರ ಭಟ್ ಅವರದ್ದೆ ಎನ್ನಲಾಗಿರುವ ಹೊಸ ಆಡಿಯೋ ವೈರಲ್ ಆಗಿದ್ದು, ಅದರಲ್ಲಿ ಸುಚಿತ್ರಾ ಬಗ್ಗೆ ಅವರು ಮಾತನಾಡಿರುವ ಮಾತುಗಳು ಸಾಕಷ್ಟು ವಿವಾದ ಹುಟ್ಟುಹಾಕಿವೆ.
ವೈರಲ್ ಆದ ಆಡಿಯೋದಲ್ಲಿ ಕಮಲಾಕರ ಭಟ್, “ನಾನು ನಾಳೆ ಸತ್ತರೂ ಪರವಾಗಿಲ್ಲ, ಇವತ್ತು ಸತ್ತರೂ ಚಿಂತೆ ಇಲ್ಲ. ಸುಚಿತ್ರಾಳ ಜೀವನ ಸೆಟಲ್ ಆಗಬೇಕು ಅಂತ 50 ರಿಂದ 100 ಕೋಟಿ ರೂಪಾಯಿ ಆಸ್ತಿ ಮಾಡಿಟ್ಟಿದ್ದೀನಿ. ನನ್ನ ಮಗಳಿಗೆ 3 ಕೋಟಿ ರೂಪಾಯಿ ಆಸ್ತಿ ಮಾಡಿದ್ದೀನಿ. ಎಲ್ಲವನ್ನೂ ನಿಷ್ಕಲ್ಮಷ ಮನಸ್ಸಿನಿಂದ ಮಾಡಿದ್ದೇನೆ” ಎಂದು ಹೇಳಿದ್ದಾರೆ ಎನ್ನಲಾಗಿದೆ.
ಇದಕ್ಕೂ ಮುನ್ನ ವೈರಲ್ ಆಗಿದ್ದ ಆಡಿಯೋ ಭಾಗದಲ್ಲಿ, “ನಾನು ನಾಲ್ಕು ತಿಂಗಳ ಪರಿಶ್ರಮದಿಂದ ಅವಳನ್ನು ಪಡೆದುಕೊಂಡಿದ್ದೇನೆ. ಅವಳು ಚಿಟಿಕಿ ಹೊಡೆದರೆ ಜನರು ಕ್ಯೂ ನಿಲ್ಲುತ್ತಾರೆ. ನಾನು ಅವಳನ್ನು ಯಾವ ಕಾರಣಕ್ಕೂ ಬಿಡೋದಿಲ್ಲ” ಎಂದು ಕಮಲಾಕರ ಭಟ್ ಹೇಳಿರುವುದು ಕೇಳಿಬಂದಿತ್ತು.
ಆದರೆ, ಇದಕ್ಕೆ ವಿರುದ್ಧವಾಗಿ ಸುಚಿತ್ರಾ ಸಂಬಂಧಿಸಿದ ಮತ್ತೊಂದು ಗಂಭೀರ ಸಂಗತಿಯೂ ಇದೀಗ ಬೆಳಕಿಗೆ ಬಂದಿದೆ. ಸುಚಿತ್ರಾ ಎಂಬುದು ಆಕೆಯ ನಿಜ ಹೆಸರು ಅಲ್ಲ, ಮೊದಲ ಹೆಸರು ಸುರೇಖಾ ಎಂದು ಹೇಳಲಾಗುತ್ತಿದೆ. ಮದುವೆಯಾದ ಬಳಿಕ ಆಕೆ ತನ್ನ ಹೆಸರನ್ನು ಸುಚಿತ್ರಾ ಎಂದು ಬದಲಾಯಿಸಿಕೊಂಡಿದ್ದಾಳೆ ಎಂಬ ಆರೋಪ ಇದೆ. ಅಲ್ಲದೆ, “ಸುರೇಖಾ ನನ್ನ ಅಕ್ಕ. ಆಕೆಯ ಮಕ್ಕಳನ್ನು ನಾನೇ ಸಾಕುತ್ತಿದ್ದೇನೆ. ನನಗೆ ಮದುವೆಯಾಗಿಲ್ಲ ಎಂದು ಸುಳ್ಳು ಹೇಳಿ, ಬೇರೆ ಬೇರೆ ವ್ಯಕ್ತಿಗಳೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು” ಎಂಬ ಆರೋಪವೂ ಹೊರಬಿದ್ದಿದೆ.
ಇತ್ತ, ಸುಚಿತ್ರಾ ಈ ಹಿಂದೆ ಮಾತನಾಡಿದ್ದ ಅಶ್ಲೀಲ ಆಡಿಯೋ ಕೂಡ ವೈರಲ್ ಆಗಿದ್ದು, ಸಾರ್ವಜನಿಕವಾಗಿ ಕೇಳಲು ಅಸಹ್ಯವಾಗುವಂತಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಆಡಿಯೋಗಳು ಕೇಸ್ನ ತನಿಖೆಗೆ ಹೊಸ ಆಯಾಮ ನೀಡಿದ್ದು, ತನಿಖಾಧಿಕಾರಿಗಳು ತಾಂತ್ರಿಕ ಸಾಕ್ಷ್ಯಗಳ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ.
ಕಮಲಾಕರ ಭಟ್ ಆಡಿಯೋದಲ್ಲಿ, “ಸಾವಿರಾರು ಜನರು ಏನೇ ಹೇಳಲಿ, ನಾನು ಅವಳನ್ನು ಮರೆಯೋದಿಲ್ಲ. ಕಾನೂನು ಏನು ಹೇಳುತ್ತದೆ ಎಂಬುದು ನನಗೆ ಗೊತ್ತಿದೆ. ಅವಳ ಜೀವನ, ಅವಳ ಮಗಳ ಜೀವನ ಈಗಾಗಲೇ ಸೆಟಲ್ ಆಗಿದೆ. ನನ್ನ ಅಂತ್ಯವಾದರೂ ನನಗೆ ಚಿಂತೆ ಇಲ್ಲ. ನಾನು ಅವಳನ್ನು ಮದುವೆಯಾಗಿದ್ದೇನೆ” ಎಂಬ ಮಾತುಗಳು ಕೂಡ ಸೇರಿವೆ ಎನ್ನಲಾಗಿದೆ.
ವಸಂತ ನಾಯ್ಕ ಹತ್ಯೆ ಪ್ರಕರಣ ಈಗ ಕೇವಲ ಕೊಲೆ ಪ್ರಕರಣವಲ್ಲದೆ, ಹನಿಟ್ರ್ಯಾಪ್, ಬ್ಲ್ಯಾಕ್ಮೇಲ್, ಅಕ್ರಮ ಸಂಬಂಧ ಮತ್ತು ಕೋಟಿ ಕೋಟಿ ಆಸ್ತಿ ಆರೋಪಗಳೊಂದಿಗೆ ರಾಜ್ಯ ಮಟ್ಟದ ಸಂಚಲನ ಸೃಷ್ಟಿಸಿದೆ.





