ನವದೆಹಲಿ: ಐಸಿಸಿ ಆಯೋಜಿಸುತ್ತಿರುವ 2026ರ ಪುರುಷರ ಟಿ20 ವಿಶ್ವಕಪ್ (ICC Men’s T20 World Cup) ಟೂರ್ನಿಯಲ್ಲಿ ಭಾರತ (India) ವಿರುದ್ಧ ಪಂದ್ಯವಾಡದೇ ಇರಲು ಪಾಕಿಸ್ತಾನ (Pakistan) ಮುಂದಾಗಿರುವ ನಿರ್ಧಾರ ಕ್ರಿಕೆಟ್ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಈ ನಿರ್ಧಾರ ಜಾರಿಯಾದರೆ ಕೇವಲ ಪಾಕಿಸ್ತಾನವಷ್ಟೇ ಅಲ್ಲ, ಭಾರತ ಹಾಗೂ ಐಸಿಸಿ ಕೂಡ ಭಾರೀ ಆರ್ಥಿಕ ನಷ್ಟವನ್ನು ಎದುರಿಸಬೇಕಾಗುತ್ತದೆ. ಮಾಧ್ಯಮ ವರದಿಗಳ ಪ್ರಕಾರ, ಭಾರತ–ಪಾಕಿಸ್ತಾನ ಪಂದ್ಯ ನಡೆಯದಿದ್ದರೆ ಎರಡೂ ತಂಡಗಳಿಗೆ ಒಟ್ಟಾರೆ ಸುಮಾರು ₹200 ಕೋಟಿ ಆದಾಯ ನಷ್ಟ ಸಂಭವಿಸುವ ಸಾಧ್ಯತೆಯಿದೆ.
ಶ್ರೀಲಂಕಾದಲ್ಲಿ (Sri Lanka) ಟೂರ್ನಿಗೆ ಸಂಬಂಧಿಸಿದ ಸಿದ್ಧತೆಗಳು ನಡೆಯುತ್ತಿದ್ದರೂ, ಭಾರತದ ವಿರುದ್ಧ ಪಂದ್ಯ ಆಡುವುದಿಲ್ಲ ಎಂದು ಪಾಕಿಸ್ತಾನ ಸರ್ಕಾರ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ. ಇದು ಪಾಕಿಸ್ತಾನ ಸರ್ಕಾರದ ರಾಜಕೀಯ ನಿರ್ಧಾರವಾಗಿದ್ದು, ಈ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಇನ್ನೂ ಅಧಿಕೃತವಾಗಿ ಐಸಿಸಿಗೆ ಮಾಹಿತಿ ನೀಡಿಲ್ಲ. ಆ
ಪಾಕಿಸ್ತಾನಕ್ಕೆ ಏನು ನಷ್ಟ?
ಭಾರತ–ಪಾಕಿಸ್ತಾನ ಪಂದ್ಯವೆಂದರೆ ಕೇವಲ ಒಂದು ಕ್ರಿಕೆಟ್ ಪಂದ್ಯವಲ್ಲ. ಅದು ಜಾಗತಿಕ ಮಟ್ಟದಲ್ಲಿ ಅತಿಹೆಚ್ಚು ವೀಕ್ಷಣೆ ಪಡೆಯುವ ಕ್ರೀಡಾಕೂಟ. ಟಿಕೆಟ್ ಮಾರಾಟ, ಪ್ರಸಾರ ಹಕ್ಕು, ಜಾಹೀರಾತು ಮತ್ತು ಪ್ರಾಯೋಜಕತ್ವದ ಮೂಲಕ ಭಾರೀ ಆದಾಯ ಬರುತ್ತದೆ. ಈ ಪಂದ್ಯ ನಡೆಯದೇ ಇದ್ದರೆ ಪಾಕಿಸ್ತಾನಕ್ಕೆ ಆರ್ಥಿಕ ನಷ್ಟದ ಜೊತೆಗೆ ಕ್ರೀಡಾ ಮತ್ತು ಆಡಳಿತಾತ್ಮಕ ನಷ್ಟವೂ ಎದುರಾಗಲಿದೆ.
ಅಷ್ಟೇ ಅಲ್ಲ, ಗ್ರೂಪ್ ಹಂತದ ಪ್ರಮುಖ ಪಂದ್ಯವನ್ನು ಕೈಬಿಟ್ಟರೆ ಪಾಕಿಸ್ತಾನ ತಂಡವು ಟೂರ್ನಿಯಲ್ಲೇ ಹಿನ್ನಡೆಯನ್ನು ಎದುರಿಸುವ ಸಾಧ್ಯತೆಯಿದೆ. ಅಂಕಪಟ್ಟಿಯಲ್ಲೂ ಪರಿಣಾಮ ಬೀರಬಹುದು.
ಐಸಿಸಿಯ ಕಠಿಣ ಪ್ರತಿಕ್ರಿಯೆ
ಈ ವಿಚಾರವಾಗಿ ಐಸಿಸಿ (ICC) ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಪಾಕಿಸ್ತಾನ ಸರ್ಕಾರದ ನಿಲುವಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. “2026ರ ಐಸಿಸಿ ಪುರುಷರ ಟಿ20 ವಿಶ್ವಕಪ್ನಲ್ಲಿ ಆಯ್ದ ಪಂದ್ಯಗಳಲ್ಲಿ ಮಾತ್ರ ಭಾಗವಹಿಸುವ ಬಗ್ಗೆ ಪಾಕಿಸ್ತಾನ ಸರ್ಕಾರ ಮಾಡಿದ ಹೇಳಿಕೆಯನ್ನು ನಾವು ಗಮನಿಸಿದ್ದೇವೆ. ಈ ಕುರಿತು ಪಿಸಿಬಿಯಿಂದ ಅಧಿಕೃತ ಸಂವಹನಕ್ಕಾಗಿ ಐಸಿಸಿ ಕಾಯುತ್ತಿದೆ,” ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಐಸಿಸಿ ಪ್ರಕಾರ, ಆಯ್ಕೆಮಾಡಿ ಪಂದ್ಯಗಳಲ್ಲಿ ಭಾಗವಹಿಸುವ ನಿಲುವು ಜಾಗತಿಕ ಕ್ರೀಡಾಕೂಟದ ಮೂಲ ತತ್ವಗಳಿಗೆ ವಿರುದ್ಧವಾಗಿದೆ. ಎಲ್ಲಾ ಅರ್ಹ ತಂಡಗಳು ನಿಗದಿತ ವೇಳಾಪಟ್ಟಿಯಂತೆ ಸಮಾನವಾಗಿ ಸ್ಪರ್ಧಿಸುವುದೇ ವಿಶ್ವಕಪ್ನ ಆತ್ಮ ಎಂದು ಐಸಿಸಿ ಸ್ಪಷ್ಟಪಡಿಸಿದೆ.
‘ಕ್ರೀಡಾ ಸಮಗ್ರತೆಗೆ ಧಕ್ಕೆ’
ಐಸಿಸಿ ತನ್ನ ಹೇಳಿಕೆಯಲ್ಲಿ ಕ್ರೀಡಾ ಸಮಗ್ರತೆ, ಸ್ಪರ್ಧಾತ್ಮಕತೆ ಮತ್ತು ನ್ಯಾಯಸಮ್ಮತತೆಯ ಮಹತ್ವವನ್ನು ಒತ್ತಿ ಹೇಳಿದೆ. “ಆಯ್ದ ಭಾಗವಹಿಸುವಿಕೆ ಸ್ಪರ್ಧೆಯ ಉತ್ಸಾಹ ಮತ್ತು ಪವಿತ್ರತೆಯನ್ನು ಹಾಳು ಮಾಡುತ್ತದೆ. ಇದರಿಂದ ಕ್ರೀಡಾ ಮೌಲ್ಯಗಳಿಗೆ ಧಕ್ಕೆ ಉಂಟಾಗುತ್ತದೆ,” ಎಂದು ಎಚ್ಚರಿಸಿದೆ.
ಪಿಸಿಬಿಗೆ ಐಸಿಸಿ ಸಂದೇಶ
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕೈಗೊಳ್ಳುವ ನಿರ್ಧಾರ ಜಾಗತಿಕ ಕ್ರಿಕೆಟ್ ಪರಿಸರ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಐಸಿಸಿ ಎಚ್ಚರಿಕೆ ನೀಡಿದೆ. “ಪುರುಷರ ಟಿ20 ವಿಶ್ವಕಪ್ ಯಶಸ್ವಿಯಾಗಿ ನಡೆಸುವುದು ಐಸಿಸಿಯ ಆದ್ಯತೆಯಾಗಿದೆ. ಇದು ಪಿಸಿಬಿ ಸೇರಿದಂತೆ ಎಲ್ಲಾ ಸದಸ್ಯರ ಜವಾಬ್ದಾರಿಯೂ ಹೌದು,” ಎಂದು ಹೇಳಿದೆ.





