ಬೆಂಗಳೂರು: ದೇಶದ ಆರ್ಥಿಕತೆಯ ದಿಕ್ಸೂಚಿ ಎಂದೇ ಕರೆಯಲ್ಪಡುವ ಕೇಂದ್ರ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಾಳೆ (ಫೆಬ್ರವರಿ 1) ಮಂಡಿಸಲಿದ್ದಾರೆ. ಈ ಬಾರಿಯ ಬಜೆಟ್ 2026-27 ಸಾಲಿನ ನಿರೀಕ್ಷೆಗಳ ನಡುವೆ, ಸಾಮಾನ್ಯ ಜನರ ಜೇಬಿಗೆ ನೇರವಾಗಿ ಕತ್ತರಿ ಹಾಕುವ ಹಲವು ಬದಲಾವಣೆಗಳು ನಾಳೆಯಿಂದಲೇ ಜಾರಿಗೆ ಬರುತ್ತಿವೆ. ಮುಖ್ಯವಾಗಿ ತಂಬಾಕು ಉತ್ಪನ್ನಗಳು, ಸಿಗರೇಟ್ ಮತ್ತು ಪಾನ್ ಮಸಾಲಾ ಪ್ರಿಯರಿಗೆ ಈ ಬಜೆಟ್ ಬಿಸಿ ಮುಟ್ಟಿಸುವುದು ಖಚಿತವಾಗಿದೆ.
ಹೊಸ ತೆರಿಗೆ ನೀತಿಯ ಅನ್ವಯ, ಸಿಗರೇಟ್ ಮೇಲಿನ ಜಿಎಸ್ಟಿ ಜೊತೆಗೆ ಹೆಚ್ಚುವರಿ ಅಬಕಾರಿ ಸುಂಕವನ್ನು ವಿಧಿಸಲಾಗಿದೆ. ಇದು ಸಿಗರೇಟ್ನ ಉದ್ದದ ಆಧಾರದ ಮೇಲೆ ವ್ಯತ್ಯಾಸವಾಗಲಿದೆ:
-
ಸಣ್ಣ ಸಿಗರೇಟ್ (65 ಮಿ.ಮೀ ವರೆಗೆ): ಫಿಲ್ಟರ್ ಇಲ್ಲದ ಪ್ರತಿ ಕಡ್ಡಿಗೆ ₹2.05 ಹಾಗೂ ಸಣ್ಣ ಫಿಲ್ಟರ್ ಹೊಂದಿರುವ ಕಡ್ಡಿಗೆ ₹2.10 ಹೆಚ್ಚುವರಿ ಸುಂಕ ವಿಧಿಸಲಾಗಿದೆ.
-
ಮಧ್ಯಮ ಗಾತ್ರ (65-70 ಮಿ.ಮೀ): ಪ್ರತಿ ಕಡ್ಡಿಯ ಮೇಲೆ ₹3.6 ರಿಂದ ₹4 ರವರೆಗೆ ಬೆಲೆ ಏರಿಕೆಯಾಗಲಿದೆ.
-
ಪ್ರೀಮಿಯಂ ಸಿಗರೇಟ್ (70-75 ಮಿ.ಮೀ): ಪ್ರತಿ ಕಡ್ಡಿಗೆ ₹5.4 ರಷ್ಟು ತೆರಿಗೆ ಹೆಚ್ಚಳವಾಗಲಿದ್ದು, ಅಸಹಜ ವಿನ್ಯಾಸದ ಕಡ್ಡಿಗಳ ಮೇಲೆ ₹8.50 ರವರೆಗೆ ಸುಂಕ ಬೀಳಲಿದೆ.
ಬೀಡಿ ಮತ್ತು ಪಾನ್ ಮಸಾಲಾ ಕೂಡ ದುಬಾರಿ
ಕೇವಲ ಸಿಗರೇಟ್ ಮಾತ್ರವಲ್ಲದೆ, ಬೀಡಿ ಮೇಲೂ ಸರ್ಕಾರ ಹೆಚ್ಚುವರಿ ಸುಂಕ ವಿಧಿಸಲು ಮುಂದಾಗಿದೆ. ಇದು ಗ್ರಾಮೀಣ ಭಾಗದ ಗ್ರಾಹಕರಿಗೆ ಹೊರೆಯಾಗಲಿದೆ. ಇನ್ನು ಪಾನ್ ಮಸಾಲಾ ಮೇಲೆ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ವಿಧಿಸಲಾಗುತ್ತಿದೆ. ಪಾನ್ ಮಸಾಲಾ ಘಟಕಗಳಿಗೆ ಶೇ. 40 ರಷ್ಟು ಜಿಎಸ್ಟಿ ಅನ್ವಯವಾಗಲಿದ್ದು, ಜರ್ದಾ ಮತ್ತು ಸುವಾಸನೆ ಭರಿತ ತಂಬಾಕಿನ ಮೇಲೆ ಕ್ರಮವಾಗಿ ಶೇ. 82 ಮತ್ತು ಶೇ. 91 ರಷ್ಟು ಭಾರಿ ಅಬಕಾರಿ ಸುಂಕ ವಿಧಿಸಲಾಗಿದೆ. ಇದು ಗುಟ್ಕಾ ಮತ್ತು ಖೈನಿ ಪ್ರಿಯರ ಜೇಬಿಗೆ ಭಾರಿ ಹೊಡೆತ ನೀಡಲಿದೆ.
ಇತರ ಪ್ರಮುಖ ಬದಲಾವಣೆಗಳು
ಫೆಬ್ರವರಿ 1ರಿಂದ ಕೇವಲ ತಂಬಾಕು ಉತ್ಪನ್ನಗಳ ಬೆಲೆಯಷ್ಟೇ ಅಲ್ಲದೆ, ಎಲ್ಪಿಜಿ ಸಿಲಿಂಡರ್ ದರಗಳ ಪರಿಷ್ಕರಣೆ, ಹೆದ್ದಾರಿ ಟೋಲ್ಗಳಲ್ಲಿ ಫಾಸ್ಟಾಗ್ ನಿಯಮಗಳ ಬದಲಾವಣೆ ಮತ್ತು ಬ್ಯಾಂಕ್ ರಜೆಗಳ ಪಟ್ಟಿಯೂ ಬಿಡುಗಡೆಯಾಗಲಿದೆ. ಬಜೆಟ್ ಘೋಷಣೆಗಳ ಬೆನ್ನಲ್ಲೇ ಈ ಎಲ್ಲಾ ಬದಲಾವಣೆಗಳು ಏಕಕಾಲಕ್ಕೆ ಜಾರಿಗೆ ಬರುತ್ತಿರುವುದು ಜನಸಾಮಾನ್ಯರಲ್ಲಿ ಕುತೂಹಲ ಮತ್ತು ಆತಂಕ ಎರಡನ್ನೂ ಸೃಷ್ಟಿಸಿದೆ.
ಸರ್ಕಾರವು ತಂಬಾಕು ಬಳಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ತೆರಿಗೆ ಹೆಚ್ಚಿಸುತ್ತಿದೆಯೋ ಅಥವಾ ಆದಾಯ ಕ್ರೋಢೀಕರಣಕ್ಕೆ ಮುಂದಾಗಿದೆಯೋ ಎಂಬ ಚರ್ಚೆಗಳು ಈಗ ಆರಂಭವಾಗಿವೆ. ಒಟ್ಟಾರೆಯಾಗಿ, ನಾಳೆಯಿಂದ ಜಾರಿಯಾಗುವ ಈ ನೂತನ ದರಗಳು ಮಧ್ಯಮ ಮತ್ತು ಕೆಳವರ್ಗದ ಜನರ ಮಾಸಿಕ ಬಜೆಟ್ ಮೇಲೆ ಖಂಡಿತಾ ಪ್ರಭಾವ ಬೀರಲಿವೆ.





