ನವದೆಹಲಿ: ದೇಶದ ಆರ್ಥಿಕ ಭವಿಷ್ಯವನ್ನು ನಿರ್ಧರಿಸುವ ಕೇಂದ್ರ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ. ನಾಳೆ, ಫೆಬ್ರವರಿ 1 ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ ಎಂಟನೇ ಬಾರಿಗೆ ಬಜೆಟ್ ಮಂಡಿಸಲಿದ್ದಾರೆ. ಈ ವರ್ಷ ಪಂಚ ರಾಜ್ಯಗಳ ಚುನಾವಣೆ ಇರುವುದರಿಂದ ಸಹಜವಾಗಿಯೇ ಜನಪ್ರಿಯ ಘೋಷಣೆಗಳ ನಿರೀಕ್ಷೆ ಇದೆ. ಆದರೆ, ಕರ್ನಾಟಕಕ್ಕೆ ಈ ಬಾರಿ ಕೇಂದ್ರದ ಬಜೆಟ್ನಲ್ಲಿ ಎಷ್ಟು ಪಾಲು ಸಿಗಲಿದೆ ಎಂಬುದು ಇಡೀ ರಾಜ್ಯದ ಕುತೂಹಲಕ್ಕೆ ಕಾರಣವಾಗಿದೆ.
ದಶಕಗಳಿಂದ ಬಾಕಿ ಉಳಿದಿರುವ ಕೃಷ್ಣಾ ಮೇಲ್ದಂಡೆ, ಎತ್ತಿನಹೊಳೆ ಹಾಗೂ ಮಹದಾಯಿ ಯೋಜನೆಗಳಿಗೆ ರಾಷ್ಟ್ರೀಯ ಯೋಜನೆ ಸ್ಥಾನಮಾನ ಸಿಗಬೇಕೆಂಬುದು ಕನ್ನಡಿಗರ ಬಹುದಿನದ ಬೇಡಿಕೆ. ಒಂದು ವೇಳೆ ಈ ಮಾನ್ಯತೆ ದೊರೆತರೆ, ಯೋಜನಾ ವೆಚ್ಚದ ಶೇ. 90 ರಷ್ಟು ಅನುದಾನ ಕೇಂದ್ರದಿಂದಲೇ ಲಭ್ಯವಾಗಲಿದೆ. ಇನ್ನು 2023ರ ಬಜೆಟ್ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಲಾಗಿದ್ದ 5,300 ಕೋಟಿ ರೂ. ಅನುದಾನ ಈವರೆಗೂ ಹಂತ-ಹಂತವಾಗಿ ಬಿಡುಗಡೆಯಾಗಿಲ್ಲ. ಈ ಬಾರಿ ಆ ಹಣ ಕೈಸೇರುವ ಭರವಸೆಯಲ್ಲಿ ರೈತರಿದ್ದಾರೆ.
ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಸಂಜೀವಿನಿಯಾಗಿರುವ ನಮ್ಮ ಮೆಟ್ರೋ 3ನೇ ಹಂತದ ವಿಸ್ತರಣೆಗೆ ಕೇಂದ್ರದ ಗ್ರೀನ್ ಸಿಗ್ನಲ್ ಮತ್ತು ಹೆಚ್ಚಿನ ಅನುದಾನದ ಅವಶ್ಯಕತೆಯಿದೆ. ಇದರೊಂದಿಗೆ ಬೆಂಗಳೂರು ಸಬ್-ಅರ್ಬನ್ ರೈಲು ಯೋಜನೆಗೆ ವೇಗ ನೀಡುವ ನಿರೀಕ್ಷೆಯಿದೆ. ಉತ್ತರ ಕರ್ನಾಟಕದ ಜನರ ದಶಕಗಳ ಬೇಡಿಕೆಯಾದ ಕಲಬುರಗಿ ರೈಲ್ವೆ ವಿಭಾಗ ಸ್ಥಾಪನೆ ಮತ್ತು ಧಾರವಾಡ-ಕಿತ್ತೂರು-ಬೆಳಗಾವಿ ಹೊಸ ರೈಲು ಮಾರ್ಗಕ್ಕೆ ಈ ಬಾರಿ ಬಜೆಟ್ನಲ್ಲಿ ಸ್ಪಷ್ಟನೆ ಸಿಗಲಿದೆಯೇ ಎಂಬುದು ಕಾದು ನೋಡಬೇಕಿದೆ. ಚೆನ್ನೈ-ಬೆಂಗಳೂರು-ಮೈಸೂರು ಹೈ-ಸ್ಪೀಡ್ ರೈಲು ಯೋಜನೆಗೂ ಚಾಲನೆ ಸಿಗುವ ಸಾಧ್ಯತೆ ದಟ್ಟವಾಗಿದೆ.
ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕರ್ನಾಟಕ ಅಭಿವೃದ್ದಿಗೊಳ್ಳಬೇಕು ಎಂಬ ದೃಷ್ಟಿಯಿಂದ ಹಾಸನಕ್ಕೆ ಐಐಟಿ (IIT) ಮತ್ತು ರಾಯಚೂರಿಗೆ ಏಮ್ಸ್ (AIIMS) ಮಂಜೂರಾತಿಗಾಗಿ ರಾಜ್ಯ ಸರ್ಕಾರ ಒತ್ತಡ ಹೇರುತ್ತಿದೆ. ಅಷ್ಟೇ ಅಲ್ಲದೆ, ಸೊರಗುತ್ತಿರುವ ಭದ್ರಾವತಿಯ ವಿಶ್ವೇಶ್ವರಯ್ಯ ಉಕ್ಕು ಕಾರ್ಖಾನೆಗೆ ಕಾಯಕಲ್ಪ ನೀಡುವ ನಿರೀಕ್ಷೆಯಿದೆ. ಪಶ್ಚಿಮ ಕರಾವಳಿಯ ಬಂದರುಗಳ ಅಭಿವೃದ್ಧಿಗೆ ಸಾಗರಮಾಲಾ ಯೋಜನೆಯಡಿ ವಿಶೇಷ ಪ್ಯಾಕೇಜ್ ಘೋಷಣೆಯಾಗುವ ಸಾಧ್ಯತೆಯಿದೆ.
ರೈತರ ಸಾಲದ ಹೊರೆ ಇಳಿಸಲು ವಿಶೇಷ ಪ್ಯಾಕೇಜ್ ಹಾಗೂ ಕೃಷಿ ಉಪಕರಣಗಳ ಮೇಲೆ ರಿಯಾಯಿತಿ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಸಲ್ಲಿಸಿದೆ. ಗುಜರಾತ್ ಮತ್ತು ಉತ್ತರ ಪ್ರದೇಶದ ಮಾದರಿಯಲ್ಲಿ ಕರ್ನಾಟಕಕ್ಕೂ ಬೃಹತ್ ತಾಂತ್ರಿಕ ಹಾಗೂ ಕೈಗಾರಿಕಾ ಹಬ್ಗಳನ್ನು ನೀಡಬೇಕೆಂಬುದು ಉದ್ಯಮಿಗಳ ಆಶಯವಾಗಿದೆ.
ಒಟ್ಟಾರೆಯಾಗಿ, ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಬುಟ್ಟಿಯಿಂದ ಕರ್ನಾಟಕಕ್ಕೆ ಎಷ್ಟು ಸಿಹಿ ಸಿಗಲಿದೆ ಎಂಬುದನ್ನ ತಿಳಿಯಲು ನಾಳೆವರೆಗೆಕಾದು ನೋಡಬೇಕಿದೆ.





