ಬೆಂಗಳೂರು: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಹಾಗೂ ಎನ್ಸಿಪಿ ನಾಯಕ ಅಜಿತ್ ಪವಾರ್ ಅವರು ಬುಧವಾರ ಬೆಳಿಗ್ಗೆ ಬಾರಾಮತಿ ಬಳಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ನಿಧನರಾಗಿದ್ದಾರೆ. ಜ್ಯೋತಿಷಿಯೊಬ್ಬರು ಮೂರು ತಿಂಗಳ ಹಿಂದೆಯೇ ನುಡಿದಿದ್ದ ಭವಿಷ್ಯವಾಣಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
2025ರ ನವೆಂಬರ್ 8ರಂದು ಟ್ವಿಟರ್ನಲ್ಲಿ ಪ್ರಶಾಂತ್ ಕಿಣಿ ಎಂಬ ಜ್ಯೋತಿಷಿ ಮಾಡಿದ್ದ ಟ್ವೀಟ್ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಆ ಟ್ವೀಟ್ನಲ್ಲಿ ಅವರು, “ಒಂದು ಕಾಲದಲ್ಲಿ ಮುಖ್ಯಮಂತ್ರಿ ಅಥವಾ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದ ಕೆಲವು ಹಿರಿಯ ಭಾರತೀಯ ರಾಜಕಾರಣಿಗಳು ಡಿಸೆಂಬರ್ 2025 ರಿಂದ ಫೆಬ್ರವರಿ 2026ರ ನಡುವೆ ನಿಧನರಾಗಬಹುದು” ಎಂದು ಭವಿಷ್ಯ ನುಡಿದಿದ್ದರು. ಈ ಟ್ವೀಟ್ ಇದೀಗ ನಿಜವಾದಂತಿದ್ದು, ಅಜಿತ್ ಪವಾರ್ ಅವರು ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದಾರೆ..
ಅಜಿತ್ ಪವಾರ್ ಅವರ ನಿಧನದ ನಂತರ ಮತ್ತೊಮ್ಮೆ ಟ್ವೀಟ್ ಮಾಡಿರುವ ಪ್ರಶಾಂತ್ ಕಿಣಿ, “ಡಿಸೆಂಬರ್ 2025 ರಿಂದ ಫೆಬ್ರವರಿ 2026ರ ನಡುವೆ ಒಬ್ಬ ಹಿರಿಯ ರಾಜಕಾರಣಿ ಸಾವಿಗೀಡಾಗುತ್ತಾರೆ ಎಂದು ನಾನು ಊಹಿಸಿದ್ದೆ. ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ವಿಮಾನ ಅಪಘಾತದಲ್ಲಿ ನಿಧನರಾಗಿದ್ದಾರೆ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು” ಎಂದು ಬರೆದಿದ್ದಾರೆ.
Some Indian veteran Politicians who once served as Chief Minister or Central Minister may perish in between December 2025 to February 2026…!!
— Prashanth Kini (@AstroPrashanth9) November 8, 2025
ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಕೆಲವರು ಇದನ್ನು ‘ಅಚ್ಚರಿ ಹುಟ್ಟಿಸುವ ನಿಖರ ಭವಿಷ್ಯವಾಣಿ’ ಎಂದು ಬಣ್ಣಿಸುತ್ತಿದ್ದರೆ, ಮತ್ತೊಂದೆಡೆ ಅನೇಕರು ಇದನ್ನು ‘ಸಾವಿನ ಮೇಲೆ ರಾಜಕೀಯ ಹಾಗೂ ಜನಪ್ರಿಯತೆ ಗಳಿಸುವ ಪ್ರಯತ್ನ’ ಎಂದು ಕಿಡಿಕಾರಿದ್ದಾರೆ.
ಇದಕ್ಕೆ ಜೊತೆಯಾಗಿ, ಪ್ರಶಾಂತ್ ಕಿಣಿ ಇನ್ನೂ ಹಲವು ಭವಿಷ್ಯವಾಣಿಗಳನ್ನು ಮುಂದಿಟ್ಟಿದ್ದಾರೆ. “ಏಪ್ರಿಲ್ 2026ರಲ್ಲಿ ಪಶ್ಚಿಮ ಬಂಗಾಳ ಅಥವಾ ಬಾಂಗ್ಲಾದೇಶದಲ್ಲಿ ಪ್ರಯಾಣಿಕ ಫೆರ್ರಿ ಮುಳುಗುವ ಸಂಭವ ಇದೆ. ಫೆಬ್ರವರಿ ಅಥವಾ ಮಾರ್ಚ್ 2026ರಲ್ಲಿ ದೊಡ್ಡ ವಿಮಾನ ಅಪಘಾತ ಸಂಭವಿಸಬಹುದು. ಅಲ್ಲದೆ ಮಾರ್ಚ್, ಆಗಸ್ಟ್ ಅಥವಾ ನವೆಂಬರ್ 2026ರಲ್ಲಿ ಭೀಕರ ರೈಲು ಅಪಘಾತ ಸಂಭವಿಸುವ ಸಾಧ್ಯತೆ ಇದೆ” ಎಂದು ಅವರು ಹೇಳಿದ್ದಾರೆ..
ಇನ್ನೊಂದೆಡೆ, ಸ್ಪೀಕಿಂಗ್ ಟ್ರೀ ಪಾಡ್ಕಾಸ್ಟ್ನಲ್ಲಿ ಮಾತನಾಡಿದ್ದ ಸುಮಿತಾಚಾರ್ಯ ಮಹಾರಾಜ್ ಅವರ ಭವಿಷ್ಯವಾಣಿಯೂ ಇದೀಗ ವೈರಲ್ ಆಗಿದೆ. ಅವರು, “ಜನವರಿ 28ರಿಂದ ಫೆಬ್ರವರಿ 23ರವರೆಗೆ ವಿಮಾನ ಪ್ರಯಾಣ ಮಾಡುವವರು ವಿಶೇಷ ಎಚ್ಚರಿಕೆ ವಹಿಸಬೇಕು. ಸಾಧ್ಯವಾದರೆ ಈ ಅವಧಿಯಲ್ಲಿ ವಿಮಾನ ಟಿಕೆಟ್ಗಳನ್ನು ರದ್ದುಗೊಳಿಸುವುದು ಒಳಿತು. ಈ ಸಮಯದಲ್ಲಿ ಈಶಾನ್ಯ ದಿಕ್ಕಿಗೆ ಹಾರುವ ವಿಮಾನಗಳಿಗೆ ಅಪಾಯ ಎದುರಾಗುವ ಸಾಧ್ಯತೆಗಳಿವೆ” ಎಂದು ಎಚ್ಚರಿಸಿದ್ದರು.
ಅಜಿತ್ ಪವಾರ್ ಅವರ ವಿಮಾನ ಅಪಘಾತವು ನಿಖರವಾಗಿ ಜನವರಿ 28ರಂದು ಸಂಭವಿಸಿದ್ದರಿಂದ, ಈ ಭವಿಷ್ಯವಾಣಿ ಕೂಡ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದರ ಪೂರ್ಣ ವಿಡಿಯೋ ಸ್ಪೀಕಿಂಗ್ ಟ್ರೀ ಯೂಟ್ಯೂಬ್ ಚಾನೆಲ್ನಲ್ಲಿ ಲಭ್ಯವಿದ್ದು, ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಎಲ್ಲ ಭವಿಷ್ಯವಾಣಿಗಳ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಕೆಲವರು ಜ್ಯೋತಿಷ್ಯಶಾಸ್ತ್ರದ ಮೇಲೆ ನಂಬಿಕೆ ವ್ಯಕ್ತಪಡಿಸುತ್ತಿದ್ದರೆ, ಇನ್ನೂ ಹಲವರು “ದುರಂತಗಳನ್ನು ಬಳಸಿ ಪ್ರಚಾರ ಪಡೆಯುವುದು ಅನೈತಿಕ” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.





