ಬೆಂಗಳೂರು: ನರೇಗಾ (MGNREGA) ಯೋಜನೆಯ ಹೆಸರು ಬದಲಾವಣೆ ವಿರೋಧಿಸಿ ರಾಜ್ಯ ಕಾಂಗ್ರೆಸ್ ಸರ್ಕಾರ ಕರೆದಿದ್ದ ವಿಶೇಷ ಜಂಟಿ ಅಧಿವೇಶನವು ಮೊದಲ ದಿನವೇ ಗದ್ದಲದ ಗೂಡಾಗಿದೆ. ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಅವರು ಸರ್ಕಾರ ಸಿದ್ಧಪಡಿಸಿದ್ದ ಭಾಷಣವನ್ನು ಪೂರ್ಣ ಪ್ರಮಾಣದಲ್ಲಿ ಓದಲು ನಿರಾಕರಿಸಿ, ಕೇವಲ ಎರಡೇ ಸಾಲುಗಳಲ್ಲಿ ಮಾತು ಮುಗಿಸಿ ಸದನದಿಂದ ಹೊರನಡೆದಿದ್ದಾರೆ ಈ ವೇಳೆ ವಿಧಾನ ಪರಿಷತ್ ಹಿರಿಯ ಸದಸ್ಯ ಬಿ.ಕೆ. ಹರಿಪ್ರಸಾದ್ ರಾಜ್ಯಪಾಲರನ್ನು ಅಡ್ಡಗಟ್ಟಿದ್ದಾರೆ.
ಬೆಳಿಗ್ಗೆ 11 ಗಂಟೆಗೆ ಅಧಿವೇಶನ ಆರಂಭವಾಗುವ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ, ಸ್ಪೀಕರ್ ಯು.ಟಿ. ಖಾದರ್ ಹಾಗೂ ಸಭಾಪತಿ ಬಸವರಾಜ್ ಹೊರಟ್ಟಿ ಅವರು ರಾಜ್ಯಪಾಲರನ್ನು ಬರಮಾಡಿಕೊಂಡರು. ಮಾರ್ಷಲ್ಗಳ ಭದ್ರತೆ ಹಾಗೂ ಬ್ಯಾಂಡ್ ವಾದ್ಯಗಳ ನಡುವೆ ರಾಜ್ಯಪಾಲರು ಸದನ ಪ್ರವೇಶಿಸಿದರು. ಆದರೆ, ಭಾಷಣ ಆರಂಭಿಸುತ್ತಿದ್ದಂತೆಯೇ ಸರ್ಕಾರ ನೀಡಿದ್ದ ಭಾಷಣದ ಪ್ರತಿಯನ್ನು ಬದಿಗಿಟ್ಟ ರಾಜ್ಯಪಾಲರು, ಔಪಚಾರಿಕವಾಗಿ ಎರಡು ಸಾಲುಗಳನ್ನು ಹೇಳಿ ಭಾಷಣವನ್ನು ಮುಗಿಸಿ ಆಸನದಿಂದ ಎದ್ದು ನಿಂತರು.
ರಾಜ್ಯಪಾಲರನ್ನು ಅಡ್ಡಗಟ್ಟಿದ ಬಿ.ಕೆ. ಹರಿಪ್ರಸಾದ್:
ರಾಜ್ಯಪಾಲರ ಈ ನಡೆಯಿಂದ ಆಕ್ರೋಶಗೊಂಡ ಕಾಂಗ್ರೆಸ್ ಸದಸ್ಯರು ತಕ್ಷಣವೇ ಘೋಷಣೆಗಳನ್ನು ಕೂಗಲು ಆರಂಭಿಸಿದರು. ರಾಜ್ಯಪಾಲರು ಸದನದಿಂದ ಹೊರನಡೆಯುತ್ತಿದ್ದಾಗ ವಿಧಾನ ಪರಿಷತ್ ಹಿರಿಯ ಸದಸ್ಯ ಬಿ.ಕೆ. ಹರಿಪ್ರಸಾದ್ ಸದನದ ಬಾಗಿಲ ಬಳಿಯೇ ರಾಜ್ಯಪಾಲರನ್ನು ಅಡ್ಡಗಟ್ಟಿದರು. ನೀವು ಭಾಷಣ ಓದಲೇಬೇಕು, ಇದು ಸಾಂವಿಧಾನಿಕ ಕರ್ತವ್ಯ. ಹೀಗೆ ಅರ್ಧಕ್ಕೆ ಹೋಗುವುದು ಸಂವಿಧಾನಕ್ಕೆ ಮಾಡುವ ಅವಮಾನ ಎಂದು ರಾಜ್ಯಪಾಲರನ್ನೇ ಪ್ರಶ್ನಿಸಿದರು ಈ ವೇಳೆ ಅಲ್ಲಿ ಮಾತಿನ ಚಕಮಕಿ ನಡೆಯಿತು. ಬಳಿಕ ಭದ್ರತಾ ಸಿಬ್ಬಂದಿ ಹರಿಪ್ರಸಾದ್ ಅವರನ್ನು ಪಕ್ಕಕ್ಕೆ ಸರಿಸಿ ರಾಜ್ಯಪಾಲರನ್ನು ಸುರಕ್ಷಿತವಾಗಿ ಹೊರಗೆ ಕರೆತಂದರು.
ಇತಿಹಾಸದಲ್ಲಿ ಇದೇ ಮೊದಲು:
ಕರ್ನಾಟಕದ ಸಂಸದೀಯ ಇತಿಹಾಸದಲ್ಲಿ ರಾಜ್ಯಪಾಲರೊಬ್ಬರು ಜಂಟಿ ಅಧಿವೇಶನಕ್ಕೆ ಆಗಮಿಸಿ, ಭಾಷಣ ಓದದೆ ಹೊರನಡೆದ ಘಟನೆ ಇದೇ ಮೊದಲು. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ರಾಜ್ಯಪಾಲರು ಕೇಂದ್ರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಸರ್ಕಾರದ ನೀತಿಗಳನ್ನು ಓದದೇ ಇರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ದ್ರೋಹ ಎಂದು ಕಿಡಿಕಾರಿದ್ದಾರೆ.
ನರೇಗಾ ಹೆಸರು ಬದಲಾವಣೆ ಹಾಗೂ ರಾಜ್ಯಕ್ಕೆ ಕೇಂದ್ರದ ಅನುದಾನ ಕಡಿತದ ವಿಚಾರವಾಗಿ ಸರ್ಕಾರ ಸಿದ್ಧಪಡಿಸಿದ್ದ ಭಾಷಣದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ತೀಕ್ಷ್ಣವಾದ ಟೀಕೆಗಳಿದ್ದವು ಎನ್ನಲಾಗಿದೆ. ಈ ಸಾಲುಗಳನ್ನು ಓದಲು ರಾಜ್ಯಪಾಲರು ಒಪ್ಪದಿದ್ದದ್ದೇ ಈ ಗದ್ದಲವಾಗಿದೆ.





