ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ವಿಡಿಯೋ ಪ್ರಕರಣ ಇದೀಗ ರಾಜ್ಯ ರಾಜಕೀಯ ಹಾಗೂ ಪೊಲೀಸ್ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಲು ಗೃಹಸಚಿವ ಡಾ. ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಲು ಡಿಜಿಪಿ ರಾಮಚಂದ್ರ ರಾವ್ ಅವರೇ ಗೃಹಸಚಿವರ ನಿವಾಸಕ್ಕೆ ದೌಡಾಯಿಸಿದ್ದು, ಆದರೆ ಗೃಹಸಚಿವರು ಭೇಟಿಗೆ ನಿರಾಕರಿಸಿದ್ದಾರೆ..
ಡಿಜಿಪಿ ರಾಮಚಂದ್ರ ರಾವ್ ಈ ಕುರಿತು ಮಾತನಾಡಿದ್ದು, “ಆ ವಿಡಿಯೋದಲ್ಲಿ ಇರುವವರು ನಾನು ಅಲ್ಲ. ಇದು ಸುಳ್ಳು, ವಿಡಿಯೋ ನೋಡಿ ನನಗೂ ಶಾಕ್ ಆಗಿದೆ. ಈ ಕಾಲದಲ್ಲಿ ಏನು ಬೇಕಾದರೂ ಮಾಡಬಹುದು. ತಂತ್ರಜ್ಞಾನ ಬಳಸಿ ಯಾರನ್ನಾದರೂ ಸಿಲುಕಿಸುವುದು ಸುಲಭವಾಗಿದೆ” ಎಂದು ಹೇಳಿದರು.
ವಿಡಿಯೋದಲ್ಲಿ ಕಾಣಿಸುವ ಘಟನೆಗಳು ಸುಮಾರು 8 ವರ್ಷಗಳ ಹಿಂದಿನವು ಎಂದು ಹೇಳಿಕೊಂಡಿರುವ ರಾಮಚಂದ್ರ ರಾವ್, ಆ ಅವಧಿಯಲ್ಲಿ ತಾವು ಬೆಳಗಾವಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮ ವಿರುದ್ಧ ಸಂಚು ರೂಪಿಸಿ ಇಂತಹ ವಿಡಿಯೋವನ್ನು ಹರಿಬಿಟ್ಟಿರುವ ಸಾಧ್ಯತೆ ಇದೆ ಎಂದು ಅವರು ಶಂಕಿಸಿದ್ದಾರೆ.
ಇನ್ನೂ, “ಈ ವಿಚಾರವಾಗಿ ನಾನು ನನ್ನ ವಕೀಲರೊಂದಿಗೆ ಚರ್ಚೆ ಮಾಡುತ್ತೇನೆ. ಈ ವಿಡಿಯೋ ಯಾರು ತಯಾರಿಸಿದ್ದಾರೆ, ಹೇಗೆ ಲೀಕ್ ಮಾಡಲಾಗಿದೆ ಎಂಬುದರ ಬಗ್ಗೆ ಸಂಪೂರ್ಣ ತನಿಖೆ ನಡೆಯಬೇಕು” ಎಂದು ಡಿಜಿಪಿ ಆಗ್ರಹಿಸಿದ್ದಾರೆ.
ವಿಡಿಯೋದಲ್ಲಿರುವ ವ್ಯಕ್ತಿ ತಾವಲ್ಲ ಎಂದು ರಾಮಚಂದ್ರ ರಾವ್ ಸ್ಪಷ್ಟನೆ ನೀಡಿದ್ದು, ಈ ವಿಚಾರವಾಗಿ ಗೃಹಸಚಿವರಿಗೆ ಸಂಪೂರ್ಣ ಮಾಹಿತಿ ನೀಡಲು ಮುಂದಾಗಿದ್ದರು. ಆದರೆ ವಿಡಿಯೋ ವಿಷಯ ತಿಳಿದ ಗೃಹಸಚಿವರು ತೀವ್ರವಾಗಿ ಕೋಪಗೊಂಡು, ಡಿಜಿಪಿಯನ್ನು ಭೇಟಿ ಮಾಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ.
https://youtu.be/QRVtMWcYUSA?si=doctmhT5oINCQrXw
ಮಹಿಳೆಯರ ಜೊತೆಗಿನ ಹಗ್..ಕಿಸ್ ದೃಶ್ಯಕ್ಕೆ ಡಿಜಿಪಿ ರಾಮಚಂದ್ರ ರಾವ್ ಪ್ರತಿಕ್ರಿಯೆ
ಕರ್ನಾಟಕ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಯೊಬ್ಬರ ಅಸಭ್ಯ ವರ್ತನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಡಿಜಿಪಿ ಕೆ. ರಾಮಚಂದ್ರ ರಾವ್ ಅವರದ್ದು ಎನ್ನಲಾದ ಈ ವಿಡಿಯೋಗಳು, ಭಾರೀ ಚರ್ಚೆಗೆ ಗ್ರಾಸವಾಗಿವೆ. ಆದರೆ ಈ ವಿಡಿಯೋದ ಬಗ್ಗೆ ರಾಮಚಂದ್ರ ರಾವ್ ಅವರು ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
“ಆ ದೃಶ್ಯದಲ್ಲಿರುವುದು ನಾನಲ್ಲ. ಇದು ನನ್ನನ್ನು ಟಾರ್ಗೆಟ್ ಮಾಡಿ ಸಿಲುಕಿಸಲು ಮಾಡಿರುವ ದುರುದ್ದೇಶಪೂರ್ವಕ ಕೃತ್ಯ. ಗೊತ್ತಿರುವವರೇ ನನ್ನನ್ನು ಸಿಲುಕಿಸಲು ಷಡ್ಯಂತ್ರ ನಡೆಸಿದ್ದಾರೆ” ಎಂದು ರಾಮಚಂದ್ರ ರಾವ್ ಅವರು ಗ್ಯಾರಂಟಿ ನ್ಯೂಸ್ಗೆ ಪ್ರತಿಕ್ರಿಯಿಸಿದ್ದಾರೆ.
“ಈ ವಿಡಿಯೋ ಬಹಳ ಹಳೆಯದ್ದು ಸುಮಾರು 10 ವರ್ಷಗಳ ಹಿಂದಿನದ್ದು. ಅದು ಬೆಳಗಾವಿಯಲ್ಲಿ ಇದ್ದಾಗ ತೆಗೆದಿರುವುದು ಎಂಬ ಮಾಹಿತಿ ನನಗೆ ದೊರಕಿದೆ. ಇದನ್ನು ಈಗ ಬಿಡುಗಡೆ ಮಾಡಿ ನನ್ನ ಖ್ಯಾತಿಗೆ ಧಕ್ಕೆತರುವ ಪ್ರಯತ್ನ ನಡೆದಿದೆ. ನಾನು ಇದಕ್ಕೆ ಕಾನೂನು ಕ್ರಮ ಕೈಗೊಳ್ಳುತ್ತೇನೆ.”
ರಾಮಚಂದ್ರ ರಾವ್ ತಮ್ಮ ಕಚೇರಿಯಲ್ಲೇ ಸಮವಸ್ತ್ರ ಧರಿಸಿರುವಾಗಲೇ ಹಲವು ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎನ್ನಲಾದ ಈ ವಿಡಿಯೋಗಳು ಭಾರೀ ವೈರಲ್ ಆಗಿವೆ. ಜೊತೆಯಲ್ಲೇ ಈ ‘ಕಾಮಕಾಂಡ’ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಘಟನೆಯು ಪೊಲೀಸ್ ಇಲಾಖೆಯ ನೈತಿಕತೆ ಮತ್ತು ಮಹಿಳಾ ಸುರಕ್ಷತೆಯ ಬಗ್ಗೆ ದೊಡ್ಡ ಪ್ರಶ್ನೆಗಳನ್ನು ಎಬ್ಬಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವಿಷಯದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಡಿಜಿಪಿ ಶ್ರೇಣಿಯ ಅಧಿಕಾರಿಯೇ ಇಂತಹ ಅಸಭ್ಯ ಕೃತ್ಯಗಳಲ್ಲಿ ತೊಡಗಿರುವುದು ಇಲಾಖೆಯ ವಿಶ್ವಾಸಾರ್ಹತೆಯ ಮೇಲೆ ದೊಡ್ಡ ಪ್ರಭಾವ ಬೀರುತ್ತಿದೆ.
ಈ ವಿಚಾರವಾಗಿ ಕರ್ನಾಟಕ ರಾಜ್ಯ ಸರ್ಕಾರ & ಪೊಲೀಸ್ ಇಲಾಖೆ ತಕ್ಷಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ರಾಮಚಂದ್ರ ರಾವ್ ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) ಸಂಬಂಧಿತ ಸೆಕ್ಷನ್ಗಳ ಅಡಿ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ. ಈ ಪ್ರಕರಣದ ತನಿಖೆ ಆರಂಭವಾದ ಬಳಿಕ, ಹೆಚ್ಚಿನ ಸಾಕ್ಷ್ಯಗಳ ಸಂಗ್ರಹ ಮತ್ತು ದೂರುದಾರರ ಹೇಳಿಕೆ ದಾಖಲಾದ ಮೇಲೆ ಈ ವಿಚಾರ ಸಂಬಂಧ ಇನ್ನಷ್ಟು ಮಾಹಿತಿ ಲಭ್ಯವಾಗಲಿದೆ. ಒಟ್ಟಿನಲ್ಲಿ ಈ ಪ್ರಕರಣ ಪೊಲೀಸ್ ಇಲಾಖೆಯ ಒಳಗಿನ ನೈತಿಕತೆಯ ಬಗ್ಗೆ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.





