ಎಣ್ಣೆ ಕೊಡಿಸಿಲ್ಲ ಎಂದು ಸಣ್ಣ ವಿಷಯಕ್ಕೆ ಮಚ್ಚು ಹಿಡಿದು ನಡುರಸ್ತೆಯಲ್ಲೇ ಪುಂಡಾಟ ಮೆರೆದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಗೌರೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಬಸವರಾಜ್ ಎಂಬಾತ ಜನವರಿ 17ರಂದು ಮಧ್ಯಾಹ್ನದ ವೇಳೆ ಕುಡಿದ ಅಮಲಿನಲ್ಲಿ ಪರಿಚಯಸ್ಥ ಪ್ರಕಾಶ್ ಅವರ ಮೇಲೆ ಕೋಪಗೊಂಡಿದ್ದಾನೆ. ಎಣ್ಣೆ ಕೊಡಿಸಿಲ್ಲ ಎಂಬ ಸಣ್ಣ ಕಾರಣಕ್ಕೆ ಮಚ್ಚು ಹಿಡಿದ ಬಸವರಾಜ್, ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ರಸ್ತೆಯಲ್ಲೇ ದಾಂದಲೆ ಮಾಡಿದ್ದಾನೆ. ತನ್ನ ದೇಹದಿಂದ ಬಟ್ಟೆ ತೆಗೆದು ಪುಂಡಾಟಕ್ಕೆ ಇಳಿದು ಓಡಾಡುತ್ತಿದ್ದ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಸ್ಥಳಕ್ಕೆ ಸುದ್ದಿ ತಿಳಿದು ಆನೇಕಲ್ ಪೊಲೀಸ್ ಠಾಣೆಯ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬಸವರಾಜ್ ವಿರುದ್ಧ ಸಾರ್ವಜನಿಕ ಸ್ಥಳದಲ್ಲಿ ಅನುಚಿತ ವರ್ತನೆ ಮತ್ತು ದಾಂದಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆದರೆ, ಗ್ರಾಮದಲ್ಲಿ ಪುಂಡರ ಹಾವಳಿ ಹೆಚ್ಚಾಗುತ್ತಿದ್ದರೂ ಪೊಲೀಸರು ಸಮಯಕ್ಕೆ ಸರಿಯಾಗಿ ಕ್ರಮ ಕೈಗೊಳ್ಳದೇ ಇರುವುದಕ್ಕೆ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿವೆ, ಆದರೆ ಪೊಲೀಸರು ಕಡಿವಾಣ ಹಾಕುತ್ತಿಲ್ಲ” ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಘಟನೆಯಿಂದಾಗಿ ಗ್ರಾಮದಲ್ಲಿ ಮಹಿಳೆಯರು ಮತ್ತು ಮಕ್ಕಳು ಭಯದ ವಾತಾವರಣದಲ್ಲಿ ಇರುವಂತಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.





