ಗದಗ: ಜಿಲ್ಲೆಯ ಲಕ್ಕುಂಡಿಯಲ್ಲಿ ಮನೆಯ ಅಡಿಪಾಯ ಅಗೆಯುವಾಗ ಪತ್ತೆಯಾದ ಚಿನ್ನದ ನಿಧಿಯ ಪ್ರಕರಣವು ಹೊಸ ತಿರುವು ಪಡೆದಿದೆ. ಆರಂಭದಲ್ಲಿ ಇದನ್ನು ಸರ್ಕಾರಿ ನಿಧಿ ಎಂದು ಭಾವಿಸಿ ಪ್ರಾಮಾಣಿಕವಾಗಿ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದ್ದ ಕುಟುಂಬವು, ಇದೀಗ ಇದು ನಮ್ಮ ಪೂರ್ವಜರ ಆಸ್ತಿ, ನಮಗೇ ವಾಪಸ್ ನೀಡಿ ಎಂದು ಆಗ್ರಹಿಸುತ್ತಿದೆ.
ಲಕ್ಕುಂಡಿ ಗ್ರಾಮವು ಚಾಲುಕ್ಯರ ಕಾಲದ ಇತಿಹಾಸಕ್ಕೆ ಹೆಸರುವಾಸಿ. ಇಲ್ಲಿ ಬಂಗಾರದ ನಾಣ್ಯಗಳನ್ನು ತಯಾರಿಸುವ ಟಂಕಸಾಲೆ ಇತ್ತು ಎಂಬುದು ಇತಿಹಾಸದ ದಾಖಲೆಗಳಲ್ಲಿದೆ. ಇಂತಹ ಐತಿಹಾಸಿಕ ಭೂಮಿಯಲ್ಲಿ ಗಂಗಮ್ಮ ರಿತ್ತಿ ಎಂಬುವವರ ಹಳೆಯ ಮನೆಯನ್ನು ಕೆಡವಿ ಹೊಸ ಮನೆ ನಿರ್ಮಿಸಲು ಅಡಿಪಾಯ ಅಗೆಯುತ್ತಿದ್ದಾಗ ಸುಮಾರು 470 ಗ್ರಾಂ ಚಿನ್ನಾಭರಣ ಪತ್ತೆಯಾಗಿತ್ತು. ಮೂಲತಃ ಬಡ ಕುಟುಂಬದವರಾದ ಗಂಗ̧ಮ್ಮ ಆ ಸಮಯದಲ್ಲಿ ಸಿಕ್ಕ ನಿದಿಯನ್ನ ಜಿಲ್ಲಾಡಳಿತಕ್ಕೆ ಒಪ್ಪಿಸುವ ಮೂಲಕ ನಾಡಿನಾದ್ಯಂತ ಪ್ರಾಮಾಣಿಕತೆಗೆ ಮಾದರಿಯಾಗಿದ್ದರು.
ಪುರಾತತ್ವ ಇಲಾಖೆಯ ಪರಿಶೀಲನೆಯ ನಂತರ ಈ ಪ್ರಕರಣಕ್ಕೆ ಹೊಸ ಆಯಾಮ ಸಿಕ್ಕಿದೆ. ಇಲಾಖೆಯ ಹಿರಿಯ ಅಧಿಕಾರಿ ರಮೇಶ್ ಮೂಲಿಮನಿ ಮತ್ತು ಅವರ ತಂಡ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಸ್ಫೋಟಕ ಮಾಹಿತಿ ನೀಡಿದ್ದಾರೆ. ಆಭರಣಗಳ ಸ್ಥಿತಿಗತಿ ಮತ್ತು ವಿನ್ಯಾಸವನ್ನು ಗಮನಿಸಿದ ಅಧಿಕಾರಿಗಳು, ಇದು ಮೇಲ್ನೋಟಕ್ಕೆ ಐತಿಹಾಸಿಕ ನಿಧಿಯಂತೆ ಕಾಣುತ್ತಿಲ್ಲ, ಬದಲಿಗೆ ಕುಟುಂಬದವರು ಸಂಗ್ರಹಿಸಿಟ್ಟಿದ್ದ ಬಂಗಾರವಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಆಭರಣಗಳು ಸಾಕಷ್ಟು ಹಾನಿಗೀಡಾಗಿದ್ದು (Damage), ಅವು ಪ್ರಾಚೀನ ಕಾಲದ ನಾಣ್ಯಗಳಿಗಿಂತ ಹೆಚ್ಚಾಗಿ ಕುಟುಂಬದವರು ಬಳಸುವ ಒಡವೆಗಳಂತೆ ಕಾಣುತ್ತಿವೆ ಎನ್ನಲಾಗಿದೆ.
ಅಧಿಕಾರಿಗಳ ಈ ಹೇಳಿಕೆ ಹೊರಬರುತ್ತಿದ್ದಂತೆ ರಿತ್ತಿ ಕುಟುಂಬವು ತಮ್ಮ ನಿಲುವನ್ನು ಬದಲಿಸಿದೆ. ಒಂದು ವೇಳೆ ಇದು ಸರ್ಕಾರಿ ನಿಧಿ ಅಥವಾ ಐತಿಹಾಸಿಕ ಪುರಾತನ ವಸ್ತು ಅಲ್ಲ ಎಂದಾದರೆ, ಇದು ಖಂಡಿತವಾಗಿಯೂ ನಮ್ಮ ಪೂರ್ವಜರು ಕಷ್ಟಪಟ್ಟು ದುಡಿದು ಮಣ್ಣಿನಲ್ಲಿ ಬಚ್ಚಿಟ್ಟಿದ್ದ ಚಿನ್ನವೇ ಇರಬೇಕು. ಆದ್ದರಿಂದ ಸುಮಾರು 60 ರಿಂದ 70 ಲಕ್ಷ ರೂ. ಮೌಲ್ಯದ ಈ ಚಿನ್ನಾಭರಣಗಳನ್ನು ನಮಗೆ ವಾಪಸ್ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಪ್ರಸ್ತುತ ಗಂಗಮ್ಮ ಅವರ ಕುಟುಂಬ ಅತ್ಯಂತ ಕಷ್ಟದಲ್ಲಿದೆ. ಮನೆ ಕಟ್ಟುವ ಕೆಲಸ ಅರ್ಧಕ್ಕೆ ನಿಂತಿದೆ, ಇರುವ ಹಳೇ ಮನೆಯೂ ಇಲ್ಲದೆ ಬಾಡಿಗೆ ಮನೆಯಲ್ಲಿ ದಿನ ಕಳೆಯುತ್ತಿದ್ದಾರೆ. ಅಧಿಕಾರಿಗಳು ಸನ್ಮಾನ ಮಾಡಿ ಮೆಚ್ಚುಗೆ ಸೂಚಿಸಿದರೂ, ಜೀವನ ನಡೆಸಲು ದಾರಿ ಕಾಣದಂತಾಗಿದೆ.
ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿದವರಿಗೆ ಈಗ ತಮ್ಮದೇ ಆಸ್ತಿಗಾಗಿ ಕಾಯುವ ಸ್ಥಿತಿ ಬಂದಿರುವುದು ವಿಪರ್ಯಾಸವೇ ಸರಿ. ಸರ್ಕಾರ ಮತ್ತು ಜಿಲ್ಲಾಡಳಿತವು ಮಾನವೀಯ ನೆಲೆಯಲ್ಲಿ ಹಾಗೂ ಕಾನೂನು ಚೌಕಟ್ಟಿನಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದು ಈಗ ಕಾದು ನೋಡಬೇಕಿದೆ.





