ಬಿಗ್ಬಾಸ್ ಕನ್ನಡ ಸೀಸನ್ 12ರ ಅಂತಿಮ ಘಟ್ಟದ ರೋಚಕತೆ ಈಗ ‘ಟಿಕೆಟ್ ಟು ಫಿನಾಲೆ’ (Ticket to Finale) ಟಾಸ್ಕ್ ಮೂಲಕ ಮತ್ತೆ ಎಲ್ಲರ ಗಮನ ಸೆಳೆದಿದೆ. ಈ ಟಾಸ್ಕ್ನಲ್ಲಿ ಗೆಲ್ಲುವವರು ನೇರವಾಗಿ ಫಿನಾಲೆಗೆ ಎಂಟ್ರಿ ಪಡೆಯುವ ಅವಕಾಶವಿತ್ತು. ಆದರೆ, ಆಟದ ಆರಂಭದಲ್ಲೇ ಒಂದು ಟ್ವಿಸ್ಟ್ ನೀಡಲಾಗಿತ್ತು. ಅದರ ಅನುಸಾರ ಗಿಲ್ಲಿ ಈ ಟಾಸ್ಕ್ನಿಂದ ಹೊರಗುಳಿದಿದ್ದಾರೆ.
ಧನುಷ್ ನೀಡಿದ ಶಾಕ್, ಧ್ರುವಂತ್ ಪರಾಕ್ರಮ !
ವಾರದ ಕ್ಯಾಪ್ಟನ್ ಆಗಿರುವ ಧನುಷ್ ಅವರಿಗೆ ‘ಟಿಕೆಟ್ ಟು ಟಾಪ್ 6’ ಆಟದಿಂದ ಒಬ್ಬರನ್ನು ಹೊರಗಿಡುವ ಅಧಿಕಾರ ನೀಡಲಾಗಿತ್ತು. ಧನುಷ್ ಅವರು ಧ್ರುವಂತ್ ಹೆಸರನ್ನು ಸೂಚಿಸಿದರು. ಆದರೆ, ಬಿಗ್ಬಾಸ್ ಧ್ರುವಂತ್ ಅವರಿಗೆ ತಮ್ಮ ಅರ್ಹತೆಯನ್ನು ಸಾಬೀತುಪಡಿಸಲು ಒಂದು ಸುವರ್ಣಾವಕಾಶ ನೀಡಿದರು. ಅದರಂತೆ ಧ್ರುವಂತ್ ತಮಗಿಷ್ಟ ಬಂದ ಎದುರಾಳಿಯನ್ನು ಆಟಕ್ಕೆ ಆಹ್ವಾನಿಸಿ, ಅವರನ್ನು ಸೋಲಿಸಿದರೆ ಮಾತ್ರ ಆಟದಲ್ಲಿ ಮುಂದುವರಿಯಬಹುದು ಎಂಬ ಸವಾಲು ಎದುರಾಯಿತು.
ಧ್ರುವಂತ್ ಯಾರನ್ನೂ ನಿರೀಕ್ಷಿಸದ ರೀತಿಯಲ್ಲಿ, ಮನೆಯ ಗಿಲ್ಲಿ ನಟರನ್ನ ಎದುರಾಳಿಯಾಗಿ ಆಯ್ಕೆ ಮಾಡಿಕೊಂಡರು. ಇಬ್ಬರ ನಡುವೆ ನಡೆದ ತೀವ್ರ ಹಣಾಹಣಿಯಲ್ಲಿ ಧ್ರುವಂತ್ ಜಯಭೇರಿ ಬಾರಿಸಿದರು. ಈ ಗೆಲುವಿನೊಂದಿಗೆ ಧ್ರುವಂತ್ ಆಟದಲ್ಲಿ ಮುಂದುವರಿದರೆ, ಗಿಲ್ಲಿ ನಟ ಅವರು ‘ಟಿಕೆಟ್ ಟು ಟಾಪ್ 6’ ರೇಸ್ನಿಂದ ಅಧಿಕೃತವಾಗಿ ಹೊರಬಿದ್ದರು.
ಸೇಡು ತೀರಿಸಿಕೊಂಡ ಧ್ರುವಂತ್?
ಮನೆಯೊಳಗೆ ಮೊದಲಿನಿಂದಲೂ ಧ್ರುವಂತ್ ಮತ್ತು ಗಿಲ್ಲಿ ನಟ ನಡುವೆ ಆಗಾಗ ಜಗಳವಾಗುತ್ತಲೇ ಇತ್ತು. ಅಶ್ವಿನಿ ಗೌಡ ಅವರೊಂದಿಗೆ ಧ್ರುವಂತ್ ಹೆಚ್ಚು ಕ್ಲೋಸ್ ಆಗಿದ್ದಾರೆ ಎನ್ನುವ ಕಾರಣಕ್ಕೆ ಗಿಲ್ಲಿ ಪದೇ ಪದೇ ಧ್ರುವಂತ್ ಅವರನ್ನು ಹೀಯಾಳಿಸುತ್ತಿದ್ದರು ಮತ್ತು ಟಾರ್ಗೆಟ್ ಮಾಡುತ್ತಿದ್ದರು. ಆದರೆ ಈಗ ಸರಿಯಾದ ಸಮಯದಲ್ಲಿ ಗಿಲ್ಲಿಯನ್ನೇ ಸೋಲಿಸುವ ಮೂಲಕ ಧ್ರುವಂತ್ ತಮ್ಮ ಮೇಲಿದ್ದ ಟೀಕೆಗಳಿಗೆ ಆಟದ ಮೂಲಕ ಉತ್ತರ ನೀಡಿದ್ದಾರೆ.
ಗಿಲ್ಲಿ ನಟ ಆರಂಭದಲ್ಲೇ ಫಿನಾಲೆ ರೇಸ್ನಿಂದ ಹೊರಬಿದ್ದಿರುವುದರಿಂದ ಮನೆಯ ಉಳಿದ ಸದಸ್ಯರಾದ ಕಾವ್ಯಾ, ರಘು, ರಾಶಿಕಾ ಮತ್ತು ರಕ್ಷಿತಾ ಶಾಕ್ ಆಗಿದ್ದಾರೆ. ಇದರಿಂದ ಗಿಲ್ಲಿ ಅಭಿಮಾನಿಗಳೂ ಸಹ ಬೇಸರ ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ, ಧ್ರುವಂತ್ ಅವರ ಈ ಪವರ್ಫುಲ್ ಕಮ್ಬ್ಯಾಕ್ ಇಡೀ ಮನೆಯ ಲೆಕ್ಕಾಚಾರವನ್ನು ಉಲ್ಟಾ ಮಾಡಿದೆ. ‘ಟಿಕೆಟ್ ಟು ಫಿನಾಲೆ’ಯ ಮುಂದಿನ ಹಂತಗಳಲ್ಲಿ ಇನ್ಯಾವ ತಿರುವುಗಳು ಕಾದಿವೆಯೋ ಕಾದು ನೋಡಬೇಕಿದೆ.





